ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಎಂದರೆ ಎಲ್ಲರಿಗೂ ಥಟ್ಟನೆ ನೆನಪಾಗುವುದು ಭದ್ರಾವತಿ. ದಶಕಗಳಿಂದ ಈ ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಗ್ರಹಣ ಹಿಡಿದಿತ್ತು. ಆದರೆ, ಈಗ ನೂತನ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಂದಾಗಿ ಆಶಾಕಿರಣ ಮೂಡಿದಂತಾಗಿದೆ.
ಭಾನುವಾರ ಕುಮಾರಸ್ವಾಮಿ ಅವರು ಭದ್ರಾವತಿಯ ವಿಐಎಸ್ಎಲ್ಗೆ ಭೇಟಿ ನೀಡಿ ಕಾರ್ಖಾನೆಯ ಪರಿಸ್ಥಿತಿ ಅವಲೋಕಿಸಿದರು.ಈ ವೇಳೆ ಮಾತನಾಡಿದ ಅವರು, ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಎರಡು ಬಾರೀ ರಾಘವೇಂದ್ರ ಜೊತೆ ಪ್ರಚಾರಕ್ಕೆ ಬಂದಿದ್ದೆ. ವಿಐಎಸ್ಎಲ್ ಕಾರ್ಖಾನೆ ಉಳಿಸುವುದು ಹಲವಾರು ವರ್ಷಗಳ ಬೇಡಿಕೆ ಇದೆ ಎಂದು ಅವರು ಹೇಳಿದ್ದರು. ಈ ಕಾರ್ಖಾನೆಯನ್ನು ಸರ್.ಎಂ. ವಿಶ್ವೇಶ್ವರಯ್ಯ ಅವರು ಸ್ಥಾಪಿಸಿದ್ದರು. ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿದ್ದ ವಿಶ್ವೇಶ್ವರಯ್ಯರವರು, ಹಲವಾರು ರೀತಿಯ ಏಳು-ಬಿಳಿನ ನಡುವೆ ಕಾರ್ಖಾನೆ ಉಸಿರು ಹಿಡಿದುಕೊಂಡಿದೆ. ಸಂಸದ ರಾಘವೇಂದ್ರ ಅವರು ಕಾರ್ಖಾನೆ ಉಳಿಸಲು ಸಾಕಷ್ಟು ಶ್ರಮಿಸಿದ್ದಾರೆ ಎಂದು ತಿಳಿಸಿದ್ದಾರೆ.
ಅಪ್ಪಾಜಿಗೌಡರು ಸಹ ಕಾರ್ಖಾನೆ ಉಳಿವಿಗೆ ಹೋರಾಟ ಮಾಡಿರುವುದು ಕಣ್ಣ ಮುಂದೆಯೇ ಇದೆ. ನಾಡಿನ ಜನತೆಯ ಆಶೀರ್ವಾದಿಂದ ದೇವರ ಆಶೀರ್ವಾದದಿಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಸಚಿವ ಸ್ಥಾನ ನಿರ್ವಹಣೆ ಮಾಡುತ್ತಿದ್ದೇನೆ. ವಿಎಸ್ಎಲ್ ಉಳಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಬಂದಿದ್ದೆ. ಸೆಲ್ ಅಧ್ಯಕ್ಷ ಅಮರೇಂದ್ರ ಪ್ರಕಾಶ್ ಜೊತೆ ಬಂದು ಅಧಿಕಾರಿಗಳು, ಕಾರ್ಮಿಕರಿಂದ ಸಾಕಷ್ಟು ಮಾಹಿತಿ ತೆಗೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಕಾರ್ಖಾನೆ ಹೇಗೆ ಪುನಶ್ಚೇತನಗೊಳಿಸುವ ಕುರಿತು ಕಾರ್ಯ ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ.
ಸಾರ್ವಜನಿಕವಾಗಿ ನಾನು ಕೆಲವು ನಿರ್ಧಾರಗಳನ್ನು ಪ್ರಕಟಿಸಲು ಸಾಧ್ಯವಿಲ್ಲ. ಮಂದಿನ ದಿನಗಳಲ್ಲಿ ಕಾರ್ಖಾನೆ ವಿಷಯದಲ್ಲಿ ಸಾಧಕ ಬಾಧಕಗಳ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ. ವಿಶ್ವೇಶ್ವರಯ್ಯ ಹೆಸರಿನ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಮಾಹಿತಿ ಪಡೆದಿದ್ದೇನೆ. ಸ್ಟಿಲ್ ಅಥಾರಿಟಿ ಆಡಳಿತಕ್ಕೆ ಒಳ ಪಟ್ಟ ಕಾರ್ಖಾನೆ ಇದು, ಉಕ್ಕು ತಯಾರಿಕೆಯಲ್ಲಿ 2030ಕ್ಕೆ ನಮ್ಮ ದೇಶದಲ್ಲಿ 300 ಮಿಲಿಯನ್ ಕಬ್ಬಿಣ ತಯಾರಿಸುವ ಗುರಿ ಇದೆ. ಕಾರ್ಮಿಕರು 13 ದಿನದಿಂದ 26 ದಿನ ಕೆಲಸ ಕೊಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ನಾನಂತೂ ಉಕ್ಕಿನ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.