ತುಮಕೂರು: ಚಿರತೆಯ (Leopard) ಬಾಲ ಹಿಡಿದು ವ್ಯಕ್ತಿಯೋರ್ವ ಬೋನಿಗೆ ಹಾಕಿರುವ ಘಟನೆ ತುಮಕೂರು (Tumakuru) ಜಿಲ್ಲೆ ತಿಪಟೂರು (Tiptur) ತಾಲೂಕಿನ ರಂಗಾಪುರ ಗ್ರಾಮದಲ್ಲಿ ನಡೆದಿದೆ.
ಚಿರತೆಯೊಂದು ಹಲವು ದಿನಗಳಿಂದ ರಂಗಾಪುರ ಗ್ರಾಮದ ಸುತ್ತಮುತ್ತ ಕಾಣಿಸಿಕೊಳ್ಳುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿತ್ತು. ಅರಣ್ಯ ಇಲಾಖೆ(Forest Department)ಗೆ ಈ ಕುರಿತು ಗ್ರಾಮಸ್ಥರು ಮನವಿ ಮಾಡಿದ್ದರು. ಆದರೆ, ಅವರಿಗೂ ಚಿರತೆ ಸೆರೆ ಹಿಡಿಯಲು ಆಗಿರಲಿಲ್ಲ.
ಈ ಮಧ್ಯೆ ಪುರಲೇಹಳ್ಳಿ ರಸ್ತೆಯಲ್ಲಿರುವ ಕುಮಾರ್ ಎಂಬವರ ಮನೆ ಬಳಿ ಚಿರತೆ ಕಾಣಿಸಿಕೊಂಡಿದೆ. ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಬಿಟ್ಟು ಚಿರತೆ ಹಿಡಿಯಲು ಮುಂದಾಗಿದ್ದರು. ಆದರೂ ಅದು ಬೋನಿಗೆ ಬಿದ್ದಿರಲಿಲ್ಲ.
ಈ ಸಂದರ್ಭದಲ್ಲಿ ಗ್ರಾಮದ ಆನಂದ್ ಎಂಬ ಯುವಕ ಚಿರತೆ ಬಾಲ ಹಿಡಿದು ಬೋನಿಗೆ ಹಾಕಿದ್ದಾರೆ. 5 ವರ್ಷದ ಚಿರತೆಯನ್ನು ಯುವಕ ಸೆರೆಹಿಡಿದಿದ್ದನ್ನು ಕಂಡು ಅರಣ್ಯ ಇಲಾಖೆ ಸಿಬ್ಬಂದಿ ಶಾಕ್ ಆಗಿದ್ದಾರೆ. ಆನಂದ್ ಸಾಹಸಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.








