ಆನೆಗೊಂದಿಯ ನವಬೃಂದಾವನ ಗಡ್ಡೆಯ ಮುಗಿಯದ ಸಂಘರ್ಷ; ಎರಡು ಶ್ರೀಮಂತ ಮಾಧ್ವ ಮಠಗಳು ಜಿದ್ದಿಗೆ ಬಿದ್ದು ಪ್ರತಿಷ್ಟೆ ಸಾಧಿಸಿಕೊಳ್ಳಲು ಹೊರಟಿರುವುದೇತಕ್ಕೆ? Marjala manthana Aanegondi navabrundavana
ಕೊಪ್ಪಳ ಜಿಲ್ಲೆಯ ಆನೆಗೊಂದಿಯ ನವವೃಂದಾವನದ ವಿವಾದಗಳು ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಸುಮಾರು ೨೩ ಎಕರೆ ವಿಸ್ತಾರದಲ್ಲಿ ಹರಡಿಕೊಂಡಿರುವ ಮಾಧ್ವ ಪರಂಪರೆಯ ೯ ಯತಿಗಳ ಐತಿಹಾಸಿಕ ವೃಂದಾವನ ಸ್ಥಳದ ಆರಾಧನೆಯ ಹಕ್ಕಿಗಾಗಿ ಮಂತ್ರಾಲಯದ ರಾಯರ ಮಠಕ್ಕೂ ಮತ್ತು ಉತ್ತಾರಧಿ ಮಠಕ್ಕೂ ನಡುವಣ ನಡೆಯುತ್ತಿರುವ ಕಲಹ ಇಂದು ನಿನ್ನೆಯ ಕಥೆಯಲ್ಲ. ಈಗಾಗಲೇ ಕೋರ್ಟು ಕಚೇರಿ ಅಂತೆಲ್ಲಾ ಅಲೆದಾಡಿರುವ ಈ ವಿವಾದ ಸುಪ್ರೀಂ ಕೋರ್ಟ್ನಿಂದ ತೀರ್ಪು ಹೊರಬಿದ್ದರೂ ಮುಂದುವರೆದಿದೆ. ತೀರಾ ಮೊನ್ನೆ ಮೊನ್ನೆ ಉತ್ತರಾಧಿಮಠದ ಅರ್ಚಕ ಆನಂದಾಚಾರ್ ಮತ್ತು ರಾಯರ ಮಠದ ಸುಮಂತ್ ಕುಲಕರ್ಣಿ ಎಂಬ ಅರ್ಚಕರ ನಡುವೆ ನಡೆದ ಸುಧಾಮಂಗಳ ಬಯ್ದಾಟಗಳು ಹಳೆಯ ಬೆಂಕಿಯನ್ನು ಮತ್ತೆ ಹೊತ್ತಿ ಉರಿಸುವಂತೆ ಎರಡೂ ಮಠಗಳ ಭಕ್ತಾದಿಗಳ ನಡುವೆ ಸಂಘರ್ಷ ಹುಟ್ಟುಹಾಕಿದೆ. Marjala manthana Aanegondi navabrundavana

ಇಷ್ಟಕ್ಕೂ ನಡೆದಿದ್ದಿಷ್ಟೆ. ಈವರೆಗೆ ಪದ್ಮನಾಭ ತೀರ್ಥರ ವೃಂದಾವನದ ಆರಾಧನೆಯ ಹಕ್ಕಿಗಾಗಿ ಕಿತ್ತಾಟ ನಡೆಯುತ್ತಿತ್ತಲ್ಲ, ಆ ಜಗಳ ಈಗ ಜಯತೀರ್ಥ ಶ್ರೀಗಳ ಮೂಲಬೃಂದಾವನವೆನ್ನಲಾದ ಸ್ಥಳಕ್ಕೂ ಮುಂದುವರೆದಿದೆ. ಅದು ಜಯತೀರ್ಥರ ಮೂಲ ಬೃಂದಾವನವೇ ಅನ್ನುವುದು ರಾಯರ ಮಠದ ವಾದವಾದರೆ, ಅಲ್ಲ ಜಯತೀರ್ಥರ ಮೂಲಬೃಂದಾವನ ಮುಳಖೇಡದಲ್ಲಿದ್ದೆ, ಇದು ರಘುವೀರ ತೀರ್ಥರ ಶ್ರೀಗಳ ಬೃಂದಾವನ ಅನ್ನುವುದು ಉತ್ತರಾಧಿ ಮಠದ ವಾದ. ಈ ಹಿನ್ನಲೆಯಲ್ಲಿ ಪರಸ್ಪರ ಬಯ್ದಾಡಿಕೊಂಡು ರಾಡಿ ಮಾಡಿಕೊಂಡಿದ್ದ ವೀಡಿಯೋ ಎಲ್ಲಡೆಯೂ ಹರಿದಾಡಿ ರಂಪಾಟವಾಗಿದೆ. ಇಲ್ಲಿ ಮಾಧ್ವ ಬ್ರಾಹ್ಮಣರ ಒಂದು ವರ್ಗ ಜಯತೀರ್ಥರ ಮೂಲಬೃಂದಾವನ ಮಳಖೇಡದಲ್ಲಿದೆ ಎನ್ನುತ್ತಿದ್ದಾರೆ, ಇನ್ನೊಂದು ವರ್ಗ ಜಯತೀರ್ಥರ ಬೃಂದಾವನವನ್ನು ರಘುವೀರತೀರ್ಥರದ್ದು ಎಂದು ತಪ್ಪಾಗಿ ಭಾವಿಸಲಾಗಿದೆ ಎನ್ನುತ್ತಿದೆ. ಮಾಧ್ವ ಬ್ರಾಹ್ಮಣರ ಎರಡು ಪ್ರಭಾವಿ ಮಠಗಳಾದ ಮಂತ್ರಾಲಯದ ರಾಯರ ಮಠ ಮತ್ತು ಉತ್ತರಾಧಿಮಠಗಳ ಶ್ರೀಗಳ ನಡುವೆಯೇ ಈ ವಿಚಾರದಲ್ಲಿ ಪರಸ್ಪರ ಮನಸ್ತಾಪವಿದೆ.
ಈಗ ಸ್ವಲ್ಪ ಹಿಂದಕವ್ಕೆ ಹೋಗೋಣ, ಆನೇಗೊಂದಿಯ ತುಂಗಭದ್ರಾ ನಡುಗಡ್ಡೆಯ ನವಬೃಂದಾವನದಲ್ಲಿ ಉತ್ತರಾಧಿಮಠಕ್ಕೂ ರಾಯರ ಮಠಕ್ಕೂ ನಡುವೆ ಹೀಗೆ ಬೇರೆ ಬೇರೆ ವಿಚಾರಗಳಿಗೆ ಈ ಹಿಂದಿನಿಂದಲೂ ವಾಗ್ವಾದ ನಡೆಯುತ್ತಲೇ ಬಂದಿದೆ. ಕೆಲವೇ ಕಾಲದ ಹಿಂದೆ ಇಲ್ಲಿ ವ್ಯಾಸರಾಜರದ್ದೆನ್ನಲಾದ ಬೃಂದಾವನ್ನು ನಿಧಿ ಆಸೆಗೆ ದುಷ್ಕರ್ಮಿಗಳು ಒಡೆದು ಹಾಕಿದ್ದರು. ನಂತರ ಅದರ ಮರುನಿರ್ಮಾಣ ಕಾರ್ಯವೂ ನಡೆದಿತ್ತು. ಈಗ ಅಲ್ಲಿ 16 ಸಿಸಿಟಿವಿಗಳ ಕಣ್ಗಾವಲಿದೆ. ಇಲ್ಲಿ ಮಾಧ್ವ ಪರಂಪರೆಯನ್ನು ಪ್ರತಿನಿಧಿಸುವ ಯತಿಗಳ ಸ್ಮಾರಕಗಳನ್ನು ಪೂಜಿಸುವ ವಿಚಾರದಲ್ಲಿ ಮಾಧ್ವ ಮಠಗಳಲ್ಲೇ ಒಮ್ಮತವಿಲ್ಲ. ಈ ಕುರಿತಾದ ಹಲವು ಪ್ರಕರಣಗಳು ರಾಜ್ಯ ಹೈಕೋರ್ಟ್ನಲ್ಲಿ ವಿಚಾರಣೆಯಾಗಿವೆ. ಪ್ರತೀ ವರ್ಷ ಆರಾಧನೆಯ ಸಂದರ್ಭದಲ್ಲಿ ಮಾಧ್ವ ಮಠಗಳ ನಡುವಿನ ಅಂತಃಕಲಹ ಬುಗಿಲೇಳುತ್ತದೆ. ಉತ್ತರಾಧಿಮಠ ಮತ್ತು ರಾಯರ ಮಠದ ನಡುವಣ ಭೂವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ೨೦೧೬ರಲ್ಲಿ ಹೈಕೋರ್ಟ್ ಆದೇಶ ಹೊರಡಿಸಿ, ಜಮೀನು ಉತ್ತರಾಧಿ ಮಠಕ್ಕೆ ಸೇರಿದ್ದು ಎಂದು ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ಮಂತ್ರಾಲಯದ ರಾಯರ ಮಠ ಮೇಲ್ಮನವಿ ಸಲ್ಲಿಸಿದೆ. Marjala manthana Aanegondi navabrundavana
ಇದು ಭೂವಿವಾದದ ಸಂಗತಿಯಾದರೆ, ಇನ್ನು ಪ್ರತಿವರ್ಷ ನಡೆಸಲಾಗುವ ಆರಾಧನೆಗಳಿಗೂ ವಿವಾದ ತಳುಕು ಹಾಕಿಕೊಂಡಿದೆ. ಮೂರು ದಿನಗಳ ಆರಾಧನೆಯ ಕಾಲವನ್ನು ಮುರಿದು, ಒಂದೂವರೆ ದಿನ ಉತ್ತರಾಧಿಮಠಕ್ಕೂ ಇನ್ನೊಂದೂವರೆ ದಿನ ರಾಯರ ಮಠಕ್ಕೂ ಮಧ್ಯಸ್ತಿಕೆಯಲ್ಲಿ ತೀರ್ಮಾನ ಮಾಡಲಾಗಿದೆ. ಎರಡೂ ಮಠಗಳು ಬೃಂದಾವನವನ್ನು ಶುದ್ಧೀಕರಿಸಿ ಗೊಣಗುತ್ತಲೇ ಆರಾಧನೆ ನಡೆಸಿಕೊಂಡು ಬರುತ್ತಿವೆ. ಇಲ್ಲಿ ಆರಾಧನೆ ಸಂದರ್ಭದಲ್ಲಿ ಪರಸ್ಪರ ಬೈದಾಟ, ನಿಂದನೆ ಜಗಳ ಸರ್ವೇ ಸಾಮಾನ್ಯ ಎನ್ನುವ ಪರಿಸ್ಥಿತಿಯಿದೆ. ಹೀಗಾಗಿ ಪೊಲೀಸ್ ಭದ್ರತೆಯಲ್ಲಿ ಆರಾಧನೆಯ ಕಾರ್ಯಕ್ರಮಗಳು ನಡೆಯುತ್ತಾ ಬಂದಿವೆ.

೨೦೧೫ರಲ್ಲಿ ನವಬೃಂದಾವನ ಗಡ್ಡೆಯಲ್ಲಿ ಆರಾಧನೆ ನಡೆಯುತ್ತಿದ್ದಾಗ ನಡೆದ ಒಂದು ಘಟನೆ ಈ ಎರಡೂ ಮಠಗಳ ನಡುವಿನ ಮನಸ್ತಾಪದ ತೀವ್ರತೆಯನ್ನು ಹೇಳುತ್ತದೆ. ಅಂದು ಪದ್ಮನಾಭ ತೀರ್ಥರ ಬೃಂದಾವನದಲ್ಲಿ ಉತ್ತರಾಧಿಮಠದವರ ಆರಾಧನೆ ಸಿದ್ಧತೆ ನಡೆಯುತ್ತಿದ್ದಾಗ ಮಂತ್ರಾಲಯದ ಸುಬುದೇಂದ್ರ ಶ್ರೀಗಳು ತಮ್ಮ ದೊಡ್ಡ ಶಿಷ್ಯ ಬಳಗದ ಜೊತೆ ಬಂದು ಪೂಜೆ ಸಲ್ಲಿಸಿದ್ದರು, ಇದರಿಂದ ಕುಪಿತರಾಗಿದ್ದ ಉತ್ತರಾಧಿಮಠದ ಸತ್ಯಾತ್ಮತೀರ್ಥರು ತಮ್ಮ ಶಿಷ್ಯರೊಂದಿಗೆ ಅಸಮಧಾನದಿಂದ ನಿರ್ಗಮಿಸಿದ್ದು ಆಗ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು.
ಮಾತುಕಥೆಯ ಮೂಲಕ ಎರಡೂ ಮಠಗಳು ರಾಜೀಸಂಧಾನಕ್ಕೆ ಮುಂದಾಗದ ಕಾರಣ ಈ ಹಿಂದೆ ಗಂಗಾವತಿ ನ್ಯಾಯಾಲಯಕ್ಕೆ ಎರಡೂ ಮಠಗಳ ಶ್ರೀಗಳು, ತಮಗೆ ನವಬೃಂದಾವನ ಗಡ್ಡೆಯಲ್ಲಿ ಆರಾಧನೆ ಪೂಜೆಗೆ ಅವಕಾಶ ಕಲ್ಪಿಸಬೇಕು ಮತ್ತು ಸೂಕ್ತ ಪೊಲೀಸ್ ರಕ್ಷಣೆ ನೀಡಬೇಕು ಎಂದು ಅರ್ಜಿ ಗುಜಾಯಿಸಿದ್ದರು. ಇದೇ ಪ್ರಕರಣ ನಂತರ ಹೈಕೋರ್ಟ್ ಮೆಟ್ಟಿಲೇರಿ, ಎರಡೂ ಮಠಗಳಿಗೆ ಒಂದೂವರೆ ದಿನಗಳ ಆರಾಧನೆ ಪೂಜೆ ನಡೆಸಲು ಅನುಮತಿ ನೀಡಿ ಆದೇಶ ಹೊರಡಿಸಲಾಗಿತ್ತು.
ಮಂತ್ರಾಲಯದ ರಾಯರ ಮಠ ಮತ್ತು ಉತ್ತರಾಧಿಮಠಗಳೆಂಬ ಅತ್ಯಂತ ಶ್ರೀಮಂತ ಮಾಧ್ವ ಶ್ರೀಪೀಠಗಳು ಈ ವಿಚಾರವನ್ನು ಪ್ರತಿಷ್ಟೆಯಾಗಿ ತೆಗೆದುಕೊಂಡ ಕಾರಣದಿಂದಲೇ ಈ ವಿವಾದ ಬಗೆಹರಿಯದೆ ತೊಡಕಾಗಿ ಪರಿಣಮಿಸಿದೆ. ಈ ಹಿಂದೆ ಸೌರಮಾನ ಯುಗಾದಿಯ ಸಂದರ್ಭದಲ್ಲಿ ಕವೀಂದ್ರ ತೀರ್ಥರ ಆರಾಧನಾ ಮಹೋತ್ಸವಕ್ಕೆ ಅವಕಾಶ ಕೊಡಬೇಕೆಂದು ಮಂತ್ರಾಲಯ ಮಠ ಕೋರ್ಟ್ ಮೊರೆ ಹೋಗಿತ್ತು. ಆದರೆ ಮಂತ್ರಾಲಯದ ಮನವಿಯನ್ನು ಗಂಗಾವತಿಯ ನ್ಯಾಯಾಲಯ ಪುರಸ್ಕರಿಸದ ಕಾರಣ ತನ್ನ ಪೂರ್ವಿಕ ಯತಿಗಳಾದ ಕವೀಂದ್ರ ತೀರ್ಥರ ಆರಾಧನೆಯನ್ನು ಮಂತ್ರಾಲಯದ ಆವರಣದಲ್ಲೇ ಮೂಲರಾಮನ ವಿಗ್ರಹಕ್ಕೆ ಮಹಾಭಿಷೇಕದ ಜೊತೆಗೆ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಮಂತ್ರಾಲಯ ಮಠದ ವಿರುದ್ಧ ತೀರ್ಪು ಬಂದ ಸಂಗತಿ ಕೇಳಿ ಸುಬುದೇಂದ್ರ ತೀರ್ಥರು ಕಣ್ಣೀರಿಟ್ಟಿದ್ದು ದೊಡ್ಡ ಸುದ್ದಿಯಾಗಿತ್ತು. ಜೊತೆಗೆ ಸುಬುದೇಂದ್ರ ತೀರ್ಥರು ಈ ತೀರ್ಪನ್ನು ಪರಾಮರ್ಶಿಸಲು ಮನವಿ ಮಾಡಿಕೊಂಡು ಮೂರು ದಿನಗಳ ಉಪವಾಸ ನಡೆಸುತ್ತಾರೆ ಎಂದು ಮಠ ಪ್ರಕಟಣೆ ಹೊರಡಿಸಿತ್ತು.
ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ನವಬೃಂದಾವನ ಗಡೆಯ 23 ಎಕರೆ ಜಮೀನಿನ ಕಂದಾಯ ದಾಖಲಾತಿಗಳು ಉತ್ತರಾಧಿಮಠದ ಹೆಸರಿನಲ್ಲಿವೆ. ಹೀಗಾಗಿಯೇ ಸಹಜವಾಗಿ ಹೈಕೋರ್ಟ್ ಮತ್ತು ನಂತರ ಸುಪ್ರೀಂ ಕೋರ್ಟ್ನಲ್ಲಿಯೂ ಉತ್ತರಾಧಿಮಠದ ಪರವಾಗಿಯೇ ತೀರ್ಪು ನೀಡಲಾಗಿತ್ತು. ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥರು ಬದುಕಿದ್ದಾಗ ಎರಡು ಮಠಗಳ ನಡುವಿನ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ತೀವ್ರ ಪ್ರಯತ್ನಪಟ್ಟಿದ್ದರು. ನ್ಯಾಯಾಲಯದ ಮಧ್ಯಪ್ರವೇಶದ ನಂತರವೂ ಎರಡೂ ಮಠಗಳ ಬೆಂಬಲಿತ ಮಾಧ್ವ ಮಠದ ಮಾಣಿಗಳು ಹೊಡೆದಾಟ ಬಡಿದಾಟ ನಡೆಸಿದ್ದೂ ಒಂದೆರಡು ಬಾರಿಯಲ್ಲ.
ಈಗಲೂ ಮಂತ್ರಾಲಯದ ಪರವಾಗಿರುವ ಮಾಧ್ವರ ಒಂದು ವರ್ಗ ಆನೆಗೊಂದಿಯ ಮೂಲಬೃಂದಾವನ ಗಡ್ಡೆ ಉತ್ತರಾಧಿಮಠದ ಆಸ್ತಿಯೇನಲ್ಲ, ಅದು ಸಮಸ್ತ ಮಾಧ್ವ ಪರಂಪರೆಯ ಆಸ್ತಿ. ಅದರ ಉಸ್ತುವಾರಿಯ ಹೊಣೆ ಮಾತ್ರ ಉತ್ತರಾಧಿಮಠದ್ದು ಎನ್ನುವ ತರ್ಕ ಮಂಡಿಸುತ್ತದೆ. ಹೇಗೆ ಮಧ್ವಾಚಾರ್ಯರ ಪಾಜಕ, ಕಾಣಿಯೂರು ಮಠದ ನಿರ್ವಹಣೆಯಲ್ಲಿದೆಯೋ, ಹೇಗೆ ಕುಂಜಾರುಗಿರಿ ಅದಮಾರು ಮಠದ ಹೊಣೆಯಾಗಿದೆಯೋ ಹಾಗೆಯೇ ನವಬೃಂದಾವನವೂ ಉತ್ತರಾಧಿಮಠದ ನಿರ್ವಹಣೆಯ ಜವಾಬ್ದಾರಿ ಮಾತ್ರ. ಮಂತ್ರಾಲಯದಂತೆ, ಕುಂಬಕೋಣದಲ್ಲಿರುವಂತೆ ಮತ್ತು ನಂಜನಗೂಡಿನಲ್ಲಿ ಬೃಂದಾವನವಿರುವಂತೆ, ಘಟ್ಟದ ಕೆಳಗಿನ ಭಂಡಾರಕೇರಿ, ಭೀಮನಕಟ್ಟೆ, ಸುಭ್ರಹ್ಮಣ್ಯಗಳೂ ಸೇರಿ ಸಮಸ್ತವೂ ಮಾಧ್ವ ಪರಂಪರೆಯ ಸ್ವತ್ತೇ ಹೊರತು ಒಂದು ಮಠದ ಜಾಗೀರಲ್ಲ ಅನ್ನುವ ವಾದವಿದೆ. ನವಬೃಂದಾವನದ 23 ಎಕರೆ ಪ್ರದೇಶದ ಭೂಮಿ ಮಾತ್ರ ಉತ್ತರಾಧಿಮಠದ ಆಸ್ತಿ. ಪದ್ಮನಾಭತೀರ್ಥರು ಉತ್ತರಾಧಿಮಠ, ರಾಯರಮಠ ಮತ್ತು ವ್ಯಾಸರಾಜಮಠಗಳ ಮೂಲಪುರುಷರು ಎನ್ನುವ ಕಾರಣಕ್ಕೆ ಉತ್ತರಾಧಿಮಠದವರು ಹಕ್ಕು ಚಲಾಯಿಸುವುದು ಸರಿಯಲ್ಲ. ಪದ್ಮನಾಭತೀರ್ಥರಾಗಲೀ, ಕವೀಂದ್ರ ತೀರ್ಥರಾಗಲೀ ಅಥವಾ ವಾಗೀಶತೀರ್ಥರಾಗಲೀ ಒಂದು ಮಠಕ್ಕೆ ಮಾತ್ರ ಸೀಮಿತರಲ್ಲ, ಅವರು ಪೂರ್ಣ ಮಾಧ್ವ ಸಂಪ್ರದಾಯವನ್ನು ಪ್ರತಿನಿಧಿಸುವವರು. ಇಲ್ಲಿ ಪೂಜೆ, ಪುನಸ್ಕಾರ, ಆರಾಧನೆಗೆ ಎಲ್ಲಾ ಮಠಗಳಿಗೂ ಸಮಾನ ಹಕ್ಕಿದೆ ಅನ್ನುವುದು ಅವರ ನಿಲುವು.

ಹೀಗೆ ಉತ್ತರಾಧಿಮಠ ಮತ್ತು ಮಂತ್ರಾಲಯ ಮಠಗಳ ಶ್ರೀಗಳು, ಅನುಯಾಯಿಗಳು ಮತ್ತು ಭಕ್ತರ ನಡುವಿನ ತಿಕ್ಕಾಟ ಕಾಲಕಾಲಕ್ಕೆ ಹೊಸ ಸ್ವರೂಪ ಪಡೆದುಕೊಂಡು ಸಂಘರ್ಷ ಮುಂದುವರೆಸಿಕೊಂಡಿದೆ. ಅಲ್ಲಿರುವ ಬೃಂದಾವನಗಳು ಜಯತೀರ್ಥರದ್ದಾದರೂ ರಘುವೀರತೀರ್ಥರದ್ದಾದರೂ ವ್ಯತ್ಯಾಸವಾಗುವುದೇನು. ಅವರವರ ಶ್ರದ್ಧೆ-ನಂಬಿಕೆ ಅವರವರದು, ಕೊನೆಗೆ ಅದೊಂದು ಚಾರಿತ್ರಿಕ ಸ್ಮಾರಕವಷ್ಟೆ. ಪರಂಪರೆಯನ್ನು ಮುಂದುವರೆಸಿಖೋಂಡು ಹೋಗುವ ಭಕ್ತರಿಗೆ ಮೂಲಶ್ರೀಗಳ ಕುರಿತಾಗಿ ಬೇಧವಿದ್ದರೆ ಮಾತ್ರ ಇಲ್ಲಿ ವಿವಾಧ ಸೃಷ್ಟಿಯಾಗಬೇಕು. ಆದರೆ ಮೂಲಯತಿಗಳೆಲ್ಲವೂ ಮಾಧ್ವ ಸಮುದಾಯವನ್ನೇ ಪ್ರತಿನಿಧಿಸುತ್ತಾರೆಂದಾಗ ವಿವಾದದ ಮಾತೆಲ್ಲಿ. ಒಟ್ಟಾರೆ ನೋಡುವುದಾದರೇ ನವಬೃಂದಾವನಗಡ್ಡೆಯ ವಿವಾದಕ್ಕೆ ಇರುವ ಎರಡು ಪ್ರಮುಖ ಕಾರಣ ಒಂದು ಆಸ್ತಿ ಮತ್ತೊಂದು ಪ್ರತಿಷ್ಟೆ. ಅರಿಷಡ್ವರ್ಗಗಳನ್ನು ಮೀರಿದವರು ಮಾತ್ರ ಗುರುಸ್ಥಾನವನ್ನು ಅಲಂಕರಿಸಬೇಕು ಅನ್ನುವುದಾದರೇ ಎರಡೂ ಮಠಗಳ ಶ್ರೀಗಳು ಆಸ್ತಿಯ ಮೇಲಿನ ಆಸೆಯನ್ನೂ ಪ್ರತಿಷ್ಟೆ ಸಾಧಿಸುವ ಅಹಂಕಾರವನ್ನೂ ತ್ಯೆಜಿಸಬೇಕಲ್ಲವೆ. ಭಕ್ತರ ವಿಷಯ ಬಿಟ್ಟುಬಿಡಿ; ಹೇಳಿಕೇಳಿ ಭಕ್ತರು. ಕಣ್ಣುಮುಚ್ಚಿ ಗುಂಡಿಗೆ ನೆಗೆ ಎಂದರೂ ನೆಗೆಯುತ್ತಾರೆ. ಆದರೆ ಸಮಾಜವನ್ನು ತಿದ್ದುವ ಮಹತ್ತರ ಹೊಣೆಗಾರಿಕೆಯುರುವ ಮಠಗಳೇ ತಮ್ಮ ಪ್ರತಿಷ್ಟೆ ಸಾಧಿಸಲು ಹೊರಟರೆ ಅದರಿಂದಾಗುವ ಅಪಾಯ ಮಾತ್ರ ಕಲ್ಪನೆಗೆ ಮೀರಿದ್ದು. ಸುಬುದೇಂದ್ರ ತೀರ್ಥರಾಗಲೀ ಅಥವಾ ಸತ್ಯಾತ್ಮ ತೀರ್ಥರಾಗಲಿ ಈ ದೃಷ್ಟಿಯಲ್ಲಿ ಒಂದು ವೇದಿಕೆಯಲ್ಲಿ ಕುಳಿತು ಪರಸ್ಪರ ಸೌಹಾರ್ಧಯುತವಾಗಿ ವಿವಾದವನ್ನು ಶಾಶ್ವತವಾಗಿ ಬಗೆಹರಿಸಿಕೊಳ್ಳಬೇಕಷ್ಟೆ.
-ವಿಭಾ
***








