ಬೈರತಿ ಬಸವರಾಜು ರಾಜೀನಾಮೆಗೆ ಆಗ್ರಹಿಸಿ ಎಎಪಿ ಪ್ರತಿಭಟನೆ Birathi Basavaraju saaksha tv
ಬೆಂಗಳೂರು : ಭೂಹಗರಣಕ್ಕೆ ಸಂಬಂಧಿಸಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ತಕ್ಷಣವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿತು.
ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಎಎಪಿಯ ನಗರಾಧ್ಯಕ್ಷ ಮೋಹನ್ ದಾಸರಿ, “35 ಎಕರೆ ಜಮೀನನ್ನು ಕಬಳಿಕೆ ಮಾಡಿರುವ ಪ್ರಕರಣದಲ್ಲಿ ಸಚಿವ ಬೈರತಿ ಬಸವರಾಜುರವರಿಗೆ 42ನೇ ಎಸಿಎಂಎಂ ನ್ಯಾಯಾಲಯವು ನವೆಂಬರ್ 25ರಂದು ಸಮನ್ಸ್ ಜಾರಿ ಮಾಡಿದೆ.
ಕ್ರಿಮಿನಲ್ ಕೇಸ್ ದಾಖಲಿಸಿಕೊಂಡು ವಿಚಾರಣೆ ನಡೆಸಬೇಕೆಂದು ಪೊಲೀಸರಿಗೆ ನ್ಯಾಯಾಲಯ ಸೂಚನೆ ನೀಡಿದೆ. ಬೈರತಿ ವಿರುದ್ಧ ನಕಲಿ ದಾಖಲೆ ಸೃಷ್ಟಿ, ವಂಚನೆ ಮುಂತಾದ ಗಂಭೀರ ಆರೋಪಗಳಿದ್ದರೂ ಅವರು ಸಚಿವ ಸ್ಥಾನದಲ್ಲಿ ಮುಂದುವರೆಯುವುದು ಖಂಡನೀಯ” ಎಂದು ಹೇಳಿದರು.
ಬೆಂಗಳೂರು ನಗರದ ಎಎಪಿ ಉಪಾಧ್ಯಕ್ಷ ಬಿ.ಟಿ.ನಾಗಣ್ಣ ಮಾತನಾಡಿ, “ಸಚಿವ ಬೈರತಿ ಬಸವರಾಜು ರಾಜೀನಾಮೆ ನೀಡದ ಹೊರತು ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. ಅವರು ತನಿಖೆ ಮೇಲೆ ಪ್ರಭಾವ ಬೀರಿ ಪ್ರಕರಣದ ದಿಕ್ಕು ತಪ್ಪಿಸುವ ಸಾಧ್ಯತೆ ದಟ್ಟವಾಗಿದೆ.
ಆರೋಪಿ ಸಚಿವರು ತಕ್ಷಣವೇ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು. ಅವರು ರಾಜೀನಾಮೆ ನೀಡಲು ಒಪ್ಪದಿದ್ದರೆ, ಸಿಎಂ ಬಸವರಾಜು ಬೊಮ್ಮಾಯಿಯವರು ಬೈರತಿಯವರನ್ನು ಸಚಿವ ಸಂಪುಟದಿಂದ ಹೊರಹಾಕಬೇಕು.
ಅಧಿಕಾರ ದುರ್ಬಳಕೆ ಮಾಡಿಕೊಂಡು ಕೋಟ್ಯಂತರ ಮೊತ್ತದ ಅಕ್ರಮ ಆಸ್ತಿ ಸಂಪಾದನೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು” ಎಂದು ಆಗ್ರಹಿಸಿದರು.
ಬೆಂಗಳೂರು ನಗರದ ಎಎಪಿ ಉಪಾಧ್ಯಕ್ಷ ಸುರೇಶ್ ರಾಥೋಡ್ ಮಾತನಾಡಿ, “ಅಕ್ರಮ ಎಸಗುವ ಶಾಸಕರನ್ನೆಲ್ಲ ಖರೀದಿಸಿ ರಚಿಸಲ್ಪಟ್ಟ ಸರ್ಕಾರವಿದು. ಅಧಿಕಾರದಲ್ಲಿ ಇರುವಷ್ಟು ದಿನ ಲೂಟಿ ಮಾಡುವುದೇ ಸಚಿವ ಸಂಪುಟದ ಉದ್ದೇಶವಾಗಿದೆ.
ಕಡು ಭ್ರಷ್ಟರಿಗೆ ಪ್ರಮುಖ ಸಚಿವ ಸ್ಥಾನಗಳನ್ನು ನೀಡಲಾಗಿದೆ. ಈಗ ಒಂದೊಂದೇ ಸಚಿವರ ಹಗರಣಗಳು ಹೊರಬರಲು ಆರಂಭವಾಗಿದೆ.
ಗುತ್ತಿಗೆ ಕಾಮಗಾರಿಗಳಲ್ಲಿ ಶೇ. 40ರಷ್ಟು ಭ್ರಷ್ಟಾಚಾರ ನಡೆದಿರುವುದನ್ನು ಹಾಗೂ ಬೈರತಿ ಬಸವರಾಜುರವರ ಭೂಕಬಳಿಕೆ ಹಗರಣವನ್ನು ಮುಚ್ಚಿಹಾಕಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದ್ದು, ಇದಕ್ಕೆ ಆಮ್ ಆದ್ಮಿ ಪಾರ್ಟಿ ಅವಕಾಶ ನೀಡುವುದಿಲ್ಲ” ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿಯ ಮುಖಂಡರಾದ ಸುಹಾಸಿನಿ, ಜಗದೀಶ್ ವಿ ಸದಂ, ಕೇಶವ್ ಕುಮಾರ್, ರಾಜಶೇಖರ್ ದೊಡ್ಡಣ್ಣ, ಸತೀಶ್ ಗೌಡ, ಅಶೋಕ್ ಮೃತ್ಯುಂಜಯ, ಪದ್ಮಾ ಗಿರೀಶ್, ಉಷಾ ಮೋಹನ್, ಸುಮನ್ ಪ್ರಶಾಂತ್, ಜಗದೀಶ್ ಚಂದ್ರ, ಗೋಪಿನಾಥ್ ಹಾಗೂ ಇನ್ನಿತರೆ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.