ಭಾರತ್ ಬಂದ್ ಯಾಕೆ | ಅಂಬೇಡ್ಕರ್ ಸಂವಿಧಾನ ಮತ್ತು ಅನ್ನದಾತರ ಕಗ್ಗೊಲೆ
ವ್ಯವಸ್ಥಿತ ಪಿತೂರಿ ಜೊತೆಗೆ ಅಧಿಕಾರ ಶಾಹಿ ಆಗಮನದ ನಿರೀಕ್ಷೆಗೆ ಜನರು ಬೃಹತ್ ಕೊಡಲಿ ಏಟು ನೀಡುತ್ತಿರುವುದೇ ಈ ಭಾರತ್ ಬಂದ್ನ ಒಂದು ಭಾಗ.. ಹಾಗೂ ತಿರುಳು. ಹೇಗೆ ಅಂತೀರಾ? ಮುಂದಿದೆ ನೋಡಿ..
ಯೆಸ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಮಾಯಕರ ಮೇಲೆ ಮಂದಗತಿಯ ಹತ್ತಿಕ್ಕುವಿಕೆ ಪ್ರಸ್ತುತ ಪಡೆಯುತ್ತಿರುವುದೇ ಈ ಆಕ್ರೋಶದ ಕಿಚ್ಚು ಹೆಚ್ಚಲು ಕಾರಣವಾಗಿರೋದು. ದುರಂತವೆಂದರೆ ನಿಜವಾದ ಮಣ್ಣಿನ ಮಕ್ಕಳಿಗೆ ಕೇಂದ್ರ ಸರ್ಕಾರ ತಂದಿರೋ ಯೋಜನೆಗಳ ಬಗ್ಗೆ ಅರಿವೇ ಇಲ್ಲ. ಇಲ್ಲಿ ಬಹುತೇಕರು ನಮ್ಮ ಬೇಳೆ ಬೇಯಿಸಿಕೊಳ್ಳೋಕೆ ಬಂದ್ಗೆ ಬೆಂಬಲ ಕೊಟ್ಟಿದ್ದಾರೆ ಅಷ್ಟೇ. ಮಾಧ್ಯಮಗಳ ಮುಂದೆ, ಸಾಮಾಜಿಕ ಜಾಲತಾಣಗಳ ಮುಂದೆ ಬಡಾಯಿ ಕೊಚ್ಚಿಕೊಳ್ಳೋಕೆ ಬೆಂಬಲಿಸಿದ್ದಾರೆ ಅಷ್ಟೇ. ನಿಜವಾದ ರೈತರು ಇಂದೂ ಕೂಡ ಹೊಲದಲ್ಲಿ ಕ್ಯಾಮೆ ಮಾಡುತ್ತಿದ್ದಾರೆ. ಅಂಬೇಡ್ಕರ್ ಬರೆದ ಸಂವಿಧಾನದಲ್ಲಿ ತಿದ್ದುಪಡಿ ತರಬೇಕು, ಅದು ಯಾವ ತರ ಇರಬೇಕು ಅಂದ್ರೆ, ಆರ್ಥಿಕ ಮಟ್ಟದಲ್ಲಿ ಹಿಂದೆ ಉಳಿದಿರುವವರಿಗೆ ನ್ಯಾಯ ಒದಗಿಸಿಕೊಡುವಂತಿರಬೇಕು.. ಆಗ ಮಾತ್ರ ಆ ತಿದ್ದುಪಡಿ ಕಾಯ್ದೆಗೆ ಒಂದು ಅರ್ಥ ಇರುತ್ತೆ. ಆದ್ರೆ ಇಲ್ಲಿ ಕೇಂದ್ರ ಸರ್ಕಾರ ಮಾಡಲು ಹೊರಟಿರೋದೇ ಬೇರೆ. ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಅನ್ನೋದು ಬಿಟ್ಟು.
ಕಾರ್ಪೊರೇಟ್, ಬಂಡವಾಳ ಶಾಹಿ, ಅಧಿಕಾರ ಶಾಹಿ ನೀತಿ ಎಂದು ಅದರ ಹಿಂದೆ ಜೋತು ಬಿದ್ದಿದೆ. ಈ ಮೂಲಕ ಉಳ್ಳವನಿಗೆ ಮತ್ತಷ್ಟು ಉಳಿಸಿಕೊಡುವ ತಂತ್ರಗಾರಿಕೆ ಮಾಡುತ್ತಿದೆ. ಈಗ ಜಾರಿಗೆ ತರುತ್ತಿರುವ ಹೊಸ ಕೃಷಿ ಮಸೂದೆಯಲ್ಲಿ ಕುದುರೆ ಮತ್ತು ಎತ್ತುಗಳನ್ನ ಒಟ್ಟಿಗೆ ಹೊಲಕ್ಕೆ ಉಳಿಮೆ ಮಾಡಲು ಬಿಟ್ಟಂತಿದೆ. ಅದರಲ್ಲಿ ಯಾವುದು ಮುಂದೆ ಬರುತ್ತೆ ಅಂತ ಸರ್ಕಾರ ಆಟ ನೋಡುತ್ತಿದೆ. ಅಂದ್ರೆ ಬಂಡವಾಳ ಶಾಹಿ ಮಧ್ಯೆ ಬಡಪಾಯಿ ಅನ್ನದಾತನನ್ನು ರೇಸ್ಗೆ ನಿಲ್ಲಿಸಿದರೆ ಏನಾಗಬೇಡ ಹೇಳಿ ಹಾಗಾಗಿದೆ ಈಗಿನ ಪರಿಸ್ಥಿತಿ..? ಇದರ ಜೊತೆ ಇಲ್ಲಿ ನಿಜವಾದ ಪಿತೂರಿ ಏನು ಗೊತ್ತಾ?
ಎಪಿಎಂಸಿ ಕಾಯಿದೆ ತಿದ್ದುಪಡಿಯಿಂದ ರೈತರನ್ನ ದಲ್ಲಾಳಿಗಳಿಂದ ರಕ್ಷಣೆ ಮಾಡುತ್ತೇನೆ ಎಂದು ಕೇಂದ್ರ ಸರ್ಕಾರ ಬಡಾಯಿ ಕೊಚ್ಚಿಕೊಳ್ಳುತ್ತಿದೆ. ನಿಜ ಇದನ್ನ ಒಪ್ಪಿಕೊಳ್ಳೋಣ. ಯಾಕಂದ್ರೆ ಮಧ್ಯವರ್ತಿಗಳಿಂದ ಸರ್ಕಾರದ ಖಜಾನೆ ತುಂಬುವ ಟ್ಯಾಕ್ಸ್ ವ್ಯರ್ಥವಾಗುತ್ತಿದೆ ಅನ್ನೋದಕ್ಕೆ ಈ ಮಾಯಾ ಜಾಲ ಎಣೆದಿದ್ದಾರೆ. ಆದ್ರೆ ಆರಂಭದಲ್ಲಿ ಇದು ಚನ್ನಾಗಿಯೇ ಇರುತ್ತೆ. ಕಾಲ ಕ್ರಮೇಣ ಸರ್ಕಾರ ರೈತರಿಗೆ ಬೆಂಬಲ ಬೆಲೆ ನೀಡುತ್ತೆ ಅನ್ನೋ ನಂಬಿಕೆ ನಿಜಕ್ಕೂ ಇಲ್ಲ. ಕಾರ್ಪೊರೇಟ್ ಕಂಪನಿಗಳು ರೈತರಿಗೆ ಬೆಂಬಲ ಬೆಲೆ ನೀಡುತ್ತವೆ ಅನ್ನೋದು ಕನಸಿನ ಮಾತು. ಒಂದು ವೇಳೆ ರೈತರಿಗೆ ಆರಂಭದಲ್ಲಿ ಹಣ ನೀಡಿ ಆಮೆಲೆ ಕೈ ಕೊಟ್ಟರೆ ಯಾರು ಹೊಣೆ? ಆಗ ಕೇಂದ್ರ ಸರ್ಕಾರ ಬಂದು ಬಂಡವಾಳಶಾಹಿಗಳನ್ನ ಪ್ರಶ್ನಿಸುತ್ತಾ? ಇಡೀ ದೇಶದ ರೈತರಿಗೆ ಪರಿಹಾರ ನೀಡುತ್ತಾ ಕೂರುತ್ತಾ..? ಅದು ಎಷ್ಟು ದಿನ..? ಇಲ್ಲಿ ಹೆಚ್ಚು ಅಧಿಕಾರಶಾಹಿಗಳೇ ಬಂಡವಾಳದಾರರರಾಗಿದ್ದಾರೆ. ಆ ಅಧಿಕಾರದಿಂದ ಸರ್ಕಾರವನ್ನ ಹೇಗೆ ಬೇಕಾದ್ರೂ ಕಟ್ಟಿ ಹಾಕಬಹುದು. ಪ್ರಶ್ನಿಸದಂತೆಯೂ ಮಾಡಬಹುದು. ಇನ್ನು ರೈತರಿಗೆ ಬೆಂಬಲ ಬೆಲೆ ಇದುವರೆಗೂ ಕೊಡಲಾಗದ ಸರ್ಕಾರ ಇನ್ಮುಂದೆ ಕೊಟ್ಟೆ ಕೊಡುತ್ತೆ ಅನ್ನೋದು ನಿಜಕ್ಕೂ ಭ್ರಮೆ. ಇದನ್ನ ಭ್ರಮೆಯಲ್ಲಿದ್ದವರು ಮಾತ್ರ ಇದನ್ನ ನಂಬಬೇಕು ಅಷ್ಟೇ.. ಇದಕ್ಕೆ ಸಣ್ಣ ಉದಾಹರಣೆ ಕೊಡಬೇಕೆ..? ಅದೇನು ಎಂದ್ರೆ ಕಾಫಿ ಬೆಳೆ.. ಮಲೆನಾಡಲ್ಲಿ ಇದ್ದವರಿಗೆ ಬಹಳ ಚೆನ್ನಾಗಿ ಗೊತ್ತಿರುತ್ತೆ. ಈ ಹಿಂದೆ ಕಾಫಿ ಬೆಳೆ ವಹಿವಾಟಿಗೆ ಉತ್ತಮ ಸ್ಪಂದನೆ ಇತ್ತು. ಅದು ಕಾಫಿ ಮಂಡಳಿಯ ನಿಯಂತ್ರಣದಲ್ಲಿ ಎಲ್ಲವೂ ಚನ್ನಾಗಿಯೇ ಇತ್ತು. ಕಾಲ ಕ್ರಮೇಣ ಸಂಫೂರ್ಣ ಕಾರ್ಪೊರೇಟ್ ಗೆ ಬಿಟ್ಟುಕೊಟ್ಟು ಸರ್ಕಾರದ ಕಾಫಿ ಮಂಡಳಿಯೇ ಉಳ್ಳವರಿಗೆ ಶರಣಾಗಬೇಕಾಯಿತು. ಈಗ ಉಳ್ಳವರ ಕಪಿಮುಷ್ಠಿಯಿಲ್ಲಿ ಈ ಮಂಡಳಿ ಇರುವುದು ಕಾಣಬಹುದು. ಗಲ್ಲಿ ಗಲ್ಲಿಯಲ್ಲಿ ಕಾಫಿ ಲಿಂಕ್ಸ್ ಗಳು ನಾಯಿಕೊಡೆಯಂತೆ ತಲೆ ಎತ್ತಿರುವುದೇ ಸಾಕ್ಷಿ. ಇವರುಗಳ ತಾಳಕ್ಕೆ ಬಡ ಜನತೆ ಕುಣಿಯಲೇ ಬೇಕಾಗಿದೆ. ಕಾಫಿ ಮಂಡಳಿಯೂ ಏನೂ ಮಾಡಲಾಗದ ಸ್ಥಿತಿಯಲ್ಲಿದೆ. ಇದಕ್ಕೆಲ್ಲಾ ಕಾರಣವೇ ಕಾರ್ಪೊರೇಟ್ ಅನ್ನೋ ಅಜಾಂಡ. ಈಗ ಕೇಂದ್ರ ಸರ್ಕಾರ ಅದೇ ಮಾದರಿಯ ಕೃಷಿ ನೀತಿ ಜಾರಿಗೆ ತರುತ್ತಿದೆ. ಇದರಿಂದ ಅನ್ನಕೊಡೋ ರೈತನು ಕೂಡ ಹಣವಂತನ ಕಾಲು ಕೆಳಗೆ ಮಂಡಿಯೂರಬೇಕಾದ ಪರಿಸ್ಥಿತಿ ನಿರ್ಮಾಣ ಆಗೋದು ಅನುಮಾನವೇ ಇಲ್ಲ.
ಭಾರತ್ ಬಂದ್ | ರಾಜಧಾನಿ ಬೆಂಗಳೂರಲ್ಲಿ ನೀರಸ, ಕೆಲ ಜಿಲ್ಲೆಗಳಿಗೆ ತಟ್ಟಿದ ಬಂದ್ ಬಿಸಿ..!

ಇಲ್ಲಿ ಎಲ್ಲದಕ್ಕಿಂತ ಮುಖ್ಯವಾಗಿ ಗಮನಿಸಬೇಕಾಗಿರುವುದು ಏನು ಗೊತ್ತಾ..? ಸರ್ಕಾರ, ರೈತರ ಜಮೀನು ಖರೀದಿ ನಿಯಮದಲ್ಲಿ ಸಡಿಲಿಕೆ ಮಾಡಿದೆ. ಇದೇ ಈಗ ಎಲ್ಲಾದಕ್ಕೂ ಮಾರಕ ಆಗಿರೋದು. ರೈತರ ಜಮೀನನ್ನ ಯಾರೂ ಬೇಕಾದ್ರೂ ಕೊಂಡುಕೋಳ್ಳಬಹುದು ಎಂದು ಕೇಂದ್ರ ಸರ್ಕಾರ ಕೃಷಿ ಕಾಯ್ದೆಯಲ್ಲಿ ತಿದ್ದುಪಡಿ ತಂದಿದೆ. ಇಲ್ಲಿ ಜಮೀನು ಖರೀದಿಸಲು ಸಾಧ್ಯವಾಗೋದು ಯಾರಿಗೆ..? ಬಡವರಿಗೆ, ಒಪ್ಪೊತ್ತು ಊಟಕ್ಕೂ ಕಷ್ಟಪಡುವವರಿಗೆ ಭೂಮಿ ಖರೀದಿ ಮಾಡಲು ಆಗುತ್ತಾ..? ಹಾಗಾದ್ರೆ ಭಃಉಮಿ ಕೊಳ್ಳುವವರು ಯಾರು ನೀವೇ ಅರ್ಥೈಸಿಕೊಳ್ಳಿ. ಇದು ಹಂತ ಹಂತವಾಗಿ ಅಮಾಯಕರನ್ನ ಮತ್ತಷ್ಟು ಬಡವರನ್ನಾಗಿ ಮಾಡುವ ತಂತ್ರಗಾರಿಕೆ ಅಲ್ಲದೆ ಮತ್ತೇನು ಅಲ್ಲ. ರೈತರು ಭೂಮಿಯನ್ನ ಉಳ್ಳವರಿಗೆ ಮಾರಾಟ ಮಾಡಿದಾಗ ಆರಂಭದಲ್ಲಿ ಒಂದಷ್ಟು ಹೆಚ್ಚು ಹಣ ಸಿಗುತ್ತೆ ನಿಜ.. ಆ ಹಣ ಎಷ್ಟು ದಿನ ಉಳಿಯುತ್ತೆ..? ಯೋಚಿಸಲೇಬೇಕಲ್ವಾ..? ಆ ಹಣ ಖಾಲಿ ಆದ ಮೇಲೆ ಅನ್ನದಾತನ ಪರಿಸ್ಥಿತಿ ಏನು..? ಕಾಲ ಕ್ರಮೇಣ, ಕರೀದಿ ಮಾಡಿದ ಜಾಗದಲ್ಲಿ ಹಣವಂತ ಬಂದು ನಾಟಿ ಮಾಡುತ್ತಾನೆಯೇ..? ಎಸಿ ರೂಮಲ್ಲಿ ಕೂರುವವನು ಬಂದು ಹೊಲದಲ್ಲಿ ಉಳಿಮೆ ಮಾಡುತ್ತಾನೆಯೇ..? ಇದೆಲ್ಲಾ ಯೋಚಿಸಲೇ ಬೇಕು.. ಒಂದಂತೂ ಸತ್ಯ. ಕೆಲ ಹತ್ತನ್ನೆರಡು ವರ್ಷದಲ್ಲಿ ಅನ್ನ ತೆಗೆಯೋ ಭೂಮಿಯಲ್ಲಿ ದೊಡ್ಡ ದೊಡ್ಡ ಕಂಪನಿಗಳು ತಲೆ ಎತ್ತುತ್ತವೆ. ಇಂಡಸ್ಟ್ರೀಗಳು ನಿರ್ಮಾಣವಾಗುತ್ತವೆ. ಕಾಂಕ್ರೀಟ್ ಕಟ್ಟಡಗಳು ಗಗನ ಮುಟ್ಟುತ್ತವೆ. ಅಲ್ಲಿಗೆ ಅನ್ನದಾತನ ಬಾಯಿಗೆ ಮಣ್ಣೆ ಅಲ್ವಾ..? ಇದೇ ರೈತನ ನಿಜವಾದ ಕಗ್ಗೊಲೆ ಅಲ್ವಾ..?
ಇಲ್ಲಿ ಗಮನಿಸಬೇಕಾದುದ್ದು ಏನು ಗೊತ್ತಾ..? ಡಾ.ಬಿ.ಆರ್. ಅಂಬೇಡ್ಕರ್ ಬರೆದ ಸಂವಿಧಾನದಲ್ಲಿ ಎಲ್ಲಾ ಕಾಯ್ದೆಗಳು ಜನರ ಅಭಿವೃದ್ಧಿಗಾಗಿಯೇ ಅಡಕವಾಗಿದೆ. ಆದ್ರೆ ಅಂತಹ ಕಾಯ್ದೆಗಳನ್ನ ತಿದ್ದಿ, ಹಣವಂತರು ಪ್ರಭುತ್ವ ಸಾಧಿಸೋಕೆ ಮುಂದಾಗಿದ್ದಾರೆ. ಒಟ್ಟಿನಲ್ಲಿ ಆರ್ಥಿಕವಾಗಿ ಹಿಂದುಳಿದಿರುವವರನ್ನ ಹಿಂದೆಯೇ ಉಳಿಯುವಂತೆ ವ್ಯವಸ್ಥಿತಿತವಾಗಿ ನೋಡಿಕೊಳ್ಳುತ್ತಿದ್ದಾರೆ. ಸಂವಿಧಾನವನ್ನ ಹಂತ ಹಂತವಾಗಿ ತಿರುಚೋಕೆ ನೋಡುತ್ತಿದ್ದಾರೆ. ಹಾಗಾಗಿ ಸಂವಿಧಾನ ಉಳಿಸೋಕೆ.. ಜನರ, ಅನ್ನದಾತರ ಉಳಿವಿಗಾಗಿ ಈ ಹೋರಾಟ ಅನಿವಾರ್ಯವಾಗಿದೆ.
– ಶಿವು ದಾರದಹಳ್ಳಿ (ಬರಹಗಾರರು)
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









