ನವದೆಹಲಿ: ಮುಂಬರುವ ಫೆಬ್ರವರಿ ತಿಂಗಳಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಹೀಗಾಗಿ ದಕ್ಷಿಣ ಭಾರತದಲ್ಲಿ ಅದರಲ್ಲೂ ದ್ರಾವಿಡರ ನೆಲದಲ್ಲಿ ಕಮಲ ಅರಳಿಸುವ ಬಿಜೆಪಿಯ ಹಲವು ವರ್ಷಗಳ ಪ್ರಯತ್ನ ಸಫಲವಾಗಿಲ್ಲ.
ಈ ಬಾರಿ ತಮಿಳುನಾಡಿನಲ್ಲಿ ಬಿಜೆಪಿಗೆ ನೆಲೆ ಒದಗಿಸಲೇಬೇಕೆಂಬ ಪ್ರಯತ್ನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಸಂಕಲ್ಪ ತೊಟ್ಟಂತೆ ಕಾಣುತ್ತಿದೆ. ಚುನಾವಣೆಗೆ ಮೂರು ತಿಂಗಳು ಬಾಕಿ ಇರುವಾಗಲೇ ತಮಿಳುನಾಡಿನಲ್ಲಿ ಭದ್ರ ಅಡಿಪಾಯ ಹಾಕಲು ಅಮಿತ್ ಶಾ ಇಂದು ಭೇಟಿ ನೀಡುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸರ್ಕಾರಿ ಕಾರ್ಯಕ್ರಮವೊಂದರ ಉದ್ಘಾಟನೆ ನೆಪದಲ್ಲಿ ಹಲವು ತಿಂಗಳ ನಂತರ ಅಮಿತ್ ಶಾ ತಮಿಳುನಾಡಿಗೆ ಭೇಟಿ ನೀಡುತ್ತಿದ್ದಾರೆ. ಆದರೆ, ಅಮಿತ್ ಶಾ ಭೇಟಿ ಉದ್ದೇಶವೇ ತಮಿಳರ ನಾಡಲ್ಲಿ ಬಿಜೆಪಿಗೆ ನೆಲೆ ಕಂಡುಕೊಳ್ಳುವ ಪ್ರಯತ್ನದ ಮೊದಲ ಭಾಗ ಎನ್ನಲಾಗಿದೆ.
ಈಗಾಗಲೇ ಹಿರಿಯ ನಟಿ ಖುಷ್ಬೂ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಜತೆಗೆ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ತಮಿಳುನಾಡಿನಲ್ಲಿ ಪಕ್ಷ ಸಂಘಟನೆಗೆ ಪ್ರಯತ್ನ ಮುಂದುವರೆಸಿದ್ದಾರೆ. ಹೀಗಾಗಿ ತಮಿಳುನಾಡಿನಲ್ಲಿ ಕಮಲ ಅರಳಿಸಲು ಏನೆಲ್ಲಾ ಪ್ಲಾನಿಂಗ್ ಬೇಕೋ ಅದಕ್ಕೆ ಮುನ್ನುಡಿ ಬರೆಯಲು ಅಮಿತ್ ಶಾ ಭೇಟಿಯ ಉದ್ದೇಶವಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ಎಂ.ಕೆ ಅಳಗಿರಿ ಜತೆ ಮೈತ್ರಿ ಮಾಡಿಕೊಳ್ತಾರಾ ಅಮಿತ್ ಶಾ..?
ತಮಿಳುನಾಡಿನಲ್ಲಿ ಸದ್ಯ ಸಂಗಿದ್ಧ ರಾಜಕೀಯ ಸ್ಥಿತಿ ನಿರ್ಮಾಣವಾಗಿದೆ. ಇತ್ತೀಚಿನವರೆಗೆ ತಮಿಳುನಾಡಿನ ರಾಜಕೀಯವನ್ನು ಆಕ್ರಮಿಸಿಕೊಂಡು ಪ್ರಬಲವಾಗಿ ಬೆಳೆದಿದ್ದ ಡಿಎಂಕೆ ಸಂಸ್ಥಾಪಕರಾಗಿದ್ದ ಕರುಣಾನಿಧಿ ಕಾಲ ವಶರಾಗಿದ್ದರೆ, ಎಐಎಡಿಎಂಕೆ ಪ್ರಶ್ನಾತೀತ ನಾಯಕಿಯಾಗಿದ್ದ ಜಯಲಲಿತಾ ವಿಧಿವಶರಾಗಿದ್ದಾರೆ.
ತಮಿಳುನಾಡಿನಲ್ಲಿ ಕರುಣಾನಿಧಿ ಹಾಗೂ ಜಯಲಲಿತಾ ನಡುವೆಯೂ ಪ್ರತಿ ಚುನಾವಣೆಯಲ್ಲೂ ನೇರ ಹಾಗೂ ಪ್ರಬಲ ಸ್ಪರ್ಧೆ ನಡೆಯುತ್ತಿತ್ತು. ಒಂದು ಬಾರಿ ಅಧಿಕಾರಕ್ಕೆ ಬಂದವರು, ಮತ್ತೊಂದು ಬಾರಿ ಪ್ರತಿಪಕ್ಷದಲ್ಲಿ ಕೂರುತ್ತಿದ್ದರು. ಹೀಗಾಗಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಗೆ ತಮಿಳುನಾಡಿನಲ್ಲಿ ನೆಲೆ ಇಲ್ಲದಂತೆ ಮಾಡಿದ್ದ ಅತಿದೊಡ್ಡ ಶಕ್ತಿ ಕರುನಾನಿಧಿ ಹಾಗೂ ಜಯಲಲಿತಾ ಅವರದ್ದಾಗಿತ್ತು.

ಈಗ ಅವರಿಬ್ಬರೂ ಇಲ್ಲವಾಗಿದ್ದರಿಂದ ಪ್ರಾದೇಶಿಕ ಪಕ್ಷಗಳಾದ ಡಿಎಂಕೆ ಹಾಗೂ ಎಐಎಡಿಎಂಕೆ ಪ್ರಭಲ ನಾಯಕರಿಲ್ಲ. ಹೀಗಾಗಿ ಈ ಸದಾವಕಾಶವನ್ನೇ ಸಮರ್ಥವಾಗಿ ಬಳಸಿಕೊಳ್ಳುವುದು ಅಮಿತ್ ಶಾ ಅವರ ಯೋಜನೆಗಳಲ್ಲಿ ಒಂದಾಗಿದೆ.
2014ರಲ್ಲಿ ಕೌಟುಂಬಿಕ ಕಲಹದ ಕಾರಣ ಕರುಣಾನಿಧಿ ಅವರ ಹಿರಿಯ ಪುತ್ರ ಎಂ.ಕೆ ಅಳಗಿರಿ ಅವರನ್ನು ಡಿಎಂಕೆಯಿಂದ ಹೊರಹಾಕಲಾಗಿತ್ತು. ಅಂದಿನಿಂದ ರಾಜಕೀಯ ನೆಲೆ ಕಂಡುಕೊಳ್ಳಲು ಅಳಗಿರಿ ಪ್ರಯತ್ನ ನಡೆಸುತ್ತಲೇ ಬಂದಿದ್ದಾರೆ. ತಮಿಳುನಾಡು ರಾಜಕಾರಣದ ಮೇಲೆ ತಮ್ಮ ಹಿಡಿತ ಸಾಧಿಸಲು ಎಂ.ಕೆ ಅಳಗಿರಿ ಹೊಸ ಪಕ್ಷ ಸ್ಥಾಪಿಸಿದ ಅದಕ್ಕೆ ಕಲೈನರ್ ಡಿಎಂಕೆ ಅಥವಾ ಕೆಡಿಎಂ ಎಂದು ಹೆಸರಿಡುವ ಸಾಧ್ಯತೆ ಇದೆ.

ಹೀಗಾಗಿ ಕರುಣಾನಿಧಿ ಅವರ ಪುತ್ರ ಅಳಗಿರಿ ಅವರನ್ನು ಭೇಟಿ ಮಾಡಲು ಅಮಿತ್ ಶಾ ಪ್ರಯತ್ನಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಂತ ಎಂ.ಕೆ. ಸ್ಟಾಲಿನ್ ಅವರನ್ನು ಬಿಜೆಪಿಗೆ ಬರ ಮಾಡಿಕೊಳ್ಳುತ್ತಾರೆ ಎಂದು ಅರ್ಥವಲ್ಲ. ಎಂ.ಕೆ. ಅಳಗಿರಿ ಅವರಿಗೆ ಹೊಸ ಪಕ್ಷ ಕಟ್ಟಲು ಹುಮ್ಮಸ್ಸು ತುಂಬುವುದು ಅಮಿತ್ ಶಾ ಲೆಕ್ಕಾಚಾರ ಎಂದು ಹೇಳಲಾಗುತ್ತಿದೆ.
ತಮಿಳುನಾಡಿನಲ್ಲಿ ಬಿಜೆಪಿಗೆ ನೆಲೆಯೇ ಇಲ್ಲದಿರುವುದರಿಂದ ಅಳಗಿರಿಯವರ ಹೊಸ ಪಕ್ಷದ ಆಶ್ರಯದಲ್ಲಿ ಬಿಜೆಪಿ ಬೇರು ಬಿಡುವಂತೆ ಮಾಡಬಹುದೆಂಬ ಲೆಕ್ಕಾಚಾರದೊಂದಿಗೆ ಈ ಕಸರತ್ತು ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಮತ್ತೊಂದೆಡೆ, ಸೂಪರ್ ಸ್ಟಾರ್ ತಲೈವಾ ರಜನಿಕಾಂತ್ ಅವರನ್ನೂ ಅಮಿತ್ ಶಾ ಭೇಟಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ಅಮಿತ್ ಶಾ ಅವರನ್ನು ರಜಿನಿಕಾಂತ್ ಭೇಟಿಯಾಗುತ್ತಿಲ್ಲ ಎಂದು ಆಪ್ತರು ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








