loan app ಕಿರುಕುಳ – ಪುತ್ರಿ ಹುಟ್ಟುಹಬ್ಬದಂದೇ ಆತ್ಮಹತ್ಯೆಗೆ ಶರಣಾದ ದಂಪತಿಗಳು…
ಆನ್ಲೈನ್ನಲ್ಲಿ ಲೋನ್ ಆ್ಯಪ್ ಮೂಲಕ ಸಾಲ ಪಡೆದಿದ್ದ ದಂಪತಿಗಳು ಕಿರುಕುಳ ಸಹಿಸಲಾಗದೇ ತಮ್ಮ ಪುತ್ರಿಯ ಹುಟ್ಟುಹಬ್ಬದ ದಿನದಂದೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಮೃತರನ್ನು ಕೊಲ್ಲಿ ದುರ್ಗಾರಾವ್ ಹಾಗೂ ರಮ್ಯಾ ಲಕ್ಷ್ಮಿ ಎಂದು ಗುರುತಿಸಲಾಗಿದೆ. ದಂಪತಿಗಳು ಹತ್ತು ವರ್ಷಗಳ ಹಿಂದೆ ಜೀವನೋಪಾಯಕ್ಕಾಗಿ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ರಾಜವೊಮ್ಮಂಗಿ ಮಂಡಲದ ಲಬ್ಬರ್ತಿ ಗ್ರಾಮದಿಂದ ರಾಜಮಹೇಂದ್ರವರಂಗೆ ವಲಸೆ ಹೋಗಿದ್ದರು.. ದಂಪತಿಗಳಿಗೆ ನಾಲ್ಕು ಮತ್ತು ಎರಡು ವರ್ಷದ ಇಬ್ಬರು ಮಕ್ಕಳಿದ್ದಾರೆ.
ವೃತ್ತಿಯಲ್ಲಿ ಟೈಲರ್ ಆಗಿರುವ ದುರ್ಗರಾವ್ ಹೆಚ್ಚುವರಿ ಹಣ ಗಳಿಸಲು ಅರೆಕಾಲಿಕ ಪೇಂಟಿಂಗ್ ಕೆಲಸವನ್ನೂ ಮಾಡುತ್ತಿದ್ದರು. ದುರ್ಗರಾವ್ ಅವರು ಎರಡು ಲೋನ್ ಆ್ಯಪ್ಗಳಿಂದ ಸುಮಾರು 30,000 ರೂಪಾಯಿಗಳನ್ನು ತೆಗೆದುಕೊಂಡಿದ್ದಾರೆ ಮತ್ತು ಭಾಗಶಃ ಮೊತ್ತವನ್ನು ಪಾವತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ, ಕಳೆದ ಕೆಲವು ದಿನಗಳಿಂದ, ಹಣ ಮರುಪಾವತಿ ಮಾಡಲು ವಿಫಲವಾದರೆ ತನ್ನ ಹೆಂಡತಿಯ ಅಶ್ಲೀಲ ವೀಡಿಯೊಗಳನ್ನು ಪೋಸ್ಟ್ ಮಾಡುವುದಾಗಿ ಅವನಿಗೆ ಕರೆಗಳು ಬರುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ, ಪೂರ್ವ ಗೋದಾವರಿ ಜಿಲ್ಲೆಯ ಮೊಗಲ್ತೂರಿನಲ್ಲಿ ದಂಪತಿಗಳು ತಮ್ಮ ಸಂಬಂಧಿಕರ ಸಮಾರಂಭದಲ್ಲಿ ಭಾಗವಹಿಸಿ ರಾತ್ರಿ ಮರಳಿದರು. ಬಳಿಕ ಮಕ್ಕಳನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಲಾಡ್ಜ್ನಲ್ಲಿ ಕೊಠಡಿ ಬಾಡಿಗೆಗೆ ಪಡೆದು ವಿಷ ಸೇವಿಸಿ ಜೀವನ ಅಂತ್ಯಗೊಳಿಸಿದ್ದಾರೆ.
ಘಟನೆಯ ನಂತರ ಎಚ್ಚೆತ್ತುಕೊಂಡಿರುವ ಆಂಧ್ರ ಪ್ರದೇಶದ ರಾಜ್ಯ ಸರ್ಕಾರ ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ಇಲ್ಲದೆ ನಡೆಸುತ್ತಿರುವ ಸಾಲದ ಆ್ಯಪ್ ಆಪರೇಟರ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಇಬ್ಬರು ಮಕ್ಕಳಿಗೆ ತಲಾ ₹ 5 ಲಕ್ಷ ಆರ್ಥಿಕ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.








