ಮಹೇಂದ್ರ ಸಿಂಗ್ ಧೋನಿ. ಎಲ್ಲಾ ಲೆಕ್ಕಚಾರಗಳನ್ನು ಬುಡಮೇಲು ಮಾಡುವ ಗ್ರೇಟ್ ಗ್ಯಾಂಬ್ಲರ್. ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿಕೊಂಡು ಪಂದ್ಯ ಮುಗಿಸುವ ವಿಶ್ವ ಕ್ರಿಕೆಟ್ನ ಅದ್ಭುತ ಮ್ಯಾಚ್ ಫಿನಿಶರ್. 4-5 ವರ್ಷಗಳ ಹಿಂದೆ ಕೂಲ್ ಕ್ಯಾಪ್ಟನ್ ಆಗಿದ್ದವರು ಬಳಿಕ ಟೀಮ್ ಇಂಡಿಯಾದ ಚಾಣಕ್ಯ ವಿಕೆಟ್ ಕೀಪರ್ ಆಗಿದ್ದರು. . ಅಷ್ಟೇ ಅಲ್ಲ, ವಿಕೆಟ್ ಹಿಂದುಗಡೆಯಿಂದಲೇ ಪಂದ್ಯದ ಗತಿಯನ್ನು ಕ್ಷಣ ಮಾತ್ರದಲ್ಲಿ ಅರಿತುಕೊಳ್ಳುವ ಮೈಂಡ್ ರೀಡರ್. ಇದೀಗ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ. ಈಗ ಏನಿದ್ರೂ ಅವರ ಹೆಜ್ಜೆ ಗುರುತುಗಳು ಒಂದೊಂದಾಗಿ ನೆನಪು ಮಾಡಿಕೊಳ್ಳುತ್ತವೆ.
ಹೌದು, ಎದುರಾಳಿ ಆಟಗಾರರಿಗೆ ಮಹೇಂದ್ರ ಸಿಂಗ್ ಧೋನಿಯ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಆದ್ರೆ ಅದೇ ಎದುರಾಳಿ ಆಟಗಾರರ ಮನಸ್ಸನ್ನು ಮಹೇಂದ್ರ ಸಿಂಗ್ ಧೋನಿ ತುಂಬಾ ಸುಲಭಾಗಿ ಅರ್ಥಮಾಡಿಕೊಳ್ಳುತ್ತಾರೆ. ಇದು ಎಂಎಸ್ಡಿಗೆ ಒಲಿದು ಬಂದಿರುವ ಕಲೆ. ಶಾಲಾ ತಂಡದ ಗೋಲು ಕೀಪರ್ ಆಗಿದ್ದ ಧೋನಿ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಆಗಿದ್ದು ಹಳೆಯ ಕಥೆ.
ಬಳಿಕ ಟೀಮ್ ಇಂಡಿಯಾ ನಾಯಕನಾಗಿ ಮೂರು ಮಾದರಿಯ ಕ್ರಿಕೆಟ್ನಲ್ಲೂ ಟೀಮ್ ಇಂಡಿಯಾವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದು ಇತಿಹಾಸ ಪುಟ ಸೇರಿಕೊಂಡಿದೆ. ವರ್ತಮಾನದಲ್ಲಿ ಟೀಮ್ ಇಂಡಿಯಾದ ಹಿರಿಯಣ್ಣನಾಗಿ ಯುವ ಆಟಗಾರರಿಗೆ ಸ್ಪೂರ್ತಿಯನ್ನು ನೀಡುತ್ತಿದ್ದಾರೆ.
ಸುಮಾರು 14 ವರ್ಷಗಳಿಂದ ಟೀಮ್ ಇಂಡಿಯಾದಲ್ಲಿ ಣಿಸಿಕೊಳ್ಳುತ್ತಿರುವ ಧೋನಿ ಯಾವತ್ತಾದ್ರೂ ತಾಳ್ಮೆಯನ್ನು ಕಳೆದುಕೊಂಡಿರುವುದು ನೋಡಿದ್ದೀರಾ ? ಸಹ ಆಟಗಾರನಿಗೆ ಬೈದಿರುವುದನ್ನು ಗಮನಿಸಿದ್ದೀರಾ ? ಅಂತಹ ಯಾವುದೇ ಸನ್ನಿವೇಶಗಳು ಕ್ರಿಕೆಟ್ ಅಭಿಮಾನಿಗಳ ಗಮನಕ್ಕೆ ಬಂದಿಲ್ಲ. ಬಂದ್ರೂ ಇದೆಲ್ಲಾ ಆಟದಲ್ಲಿ ಮಾಮೂಲಿ ಅಂತ ಸುಮ್ಮನಾಗುತ್ತಾರೆ.
ಹಾಗಂತ ಧೋನಿ ಯಾವಾಗಲೂ ಕೂಲ್ ಆಗಿಯೇ ಇರುತ್ತಾರೆ ಅಂತ ಅಂದುಕೊಳ್ಳಬೇಡಿ. ಯಾಕಂದ್ರೆ ಧೋನಿ ಕೂಡ ಮನುಷ್ಯನೇ. ತಲೆಕೆಟ್ರೆ ಧೋನಿ ಬೈಯುವ ಸ್ಟೈಲ್ಲೇ ಬೇರೆ. ಒಂದು ಬಾರಿ ಏನಾದ್ರೂ ಸಿಟ್ಟು ಮಾಡ್ಕೊಂಡು ಧೋನಿ ಬೈದು ಬಿಟ್ರೆ ಅದು ಮುಟ್ಟಿನೋಡುವಂತಿರುತ್ತದೆ. ಹಾಗಂತ ಧೋನಿ ಸುಮ್ಮನೆ ಯಾರಿಗೂ ಬೈಯುವುದಿಲ್ಲ. ವಿಕೆಟ್ ಹಿಂದುಗಡೆ ನಿಂತುಕೊಂಡು ತಂಡದ ಆಟಗಾರರಿಗೆ ಆಗಾಗ ಟಿಪ್ಸ್ ಕೂಡ ಕೊಡುತ್ತಿರುತ್ತಾರೆ. ಒಂದು ವೇಳೆ ಅವರ ಮಾತನ್ನು ಕೇಳದೇ ಇದ್ರೆ ಮಾತ್ರ ಧೋನಿಯವರ ಪಿತ್ತ ನೆತ್ತಿಗೇರುತ್ತದೆ. ಅದ್ರಲ್ಲೂ ತಾನೇ ಬೆಳೆಸಿದ ಹುಡುಗ ತನಗೆ ಉಲ್ಟಾ ಹೊಡೆಯುತ್ತಾನೆ ಅಂದ ಮೇಲೆ ಧೋನಿ ಬಿಡಿ ಯಾರು ಕೂಡ ಸುಮ್ಮನಿರುವುದಿಲ್ಲ.ಅಂತಹುದ್ದೇ ಒಂದು ಘಟನೆ ಇತ್ತೀಚೆಗೆ ನಡೆದಿದೆ. ಅಂದ ಹಾಗೇ ಈ ವಿಚಾರವನ್ನು ಹೇಳಿದ್ದು ಯಾರು ಗೊತ್ತಾ ? ಅಷ್ಟಕ್ಕೂ ಮೈದಾನದಲ್ಲಿ ಧೋನಿಯವರಿಂದ ಬೈಸಿಕೊಂಡಿದ್ದು ಯಾರು ಗೊತ್ತಾ ? ಹೇಳಿದ್ರೆ ಅಚ್ಚರಿಪಡುತ್ತೀರಾ. ಯಾಕಂದ್ರೆ ಬೈಸಿಕೊಂಡ ಆಟಗಾರ ಧೋನಿಯ ಆಪ್ತ ಸ್ನೇಹಿತರಲ್ಲಿ ಒಬ್ಬರು.
ಅಷ್ಟಕ್ಕೂ ಧೋನಿಯ ಆಪ್ತವಲಯಲ್ಲಿ
ಕಾಣಿಸಿವುದು ಸುರೇಶ್ ರೈನಾ, ರವೀಂದ್ರ ಜಡೇಜಾ, ಅಶ್ವಿನ್ ಹೀಗೆ ಆಟಗಾರರ ಪಟ್ಟಿ ಬೆಳೆಯುತ್ತಾ ಹೊಗುತ್ತೆ. ಅದ್ರೆ ಅವರು ಯಾರು ಕೂಡ ಅಲ್ಲ. ಬದಲಾಗಿ ಟೀಮ್ ಇಂಡಿಯಾದ ಟ್ರಂಪ್ ಕಾರ್ಡ್ ಬೌಲರ್, ಚೈನಾಮೆನ್ ಖ್ಯಾತಿಯ ಕುಲದೀಪ್ ಯಾದವ್. ಈ ವಿಚಾರವನ್ನು ಸ್ವತಃ ಕುಲದೀಪ್ ಯಾದವ್ ಅವರೇ ಬಹಿರಂಗಪಡಿಸಿದ್ದಾರೆ.
ಕುಲದೀಪ್ ಯಾದವ್ ಧೋನಿ ಸಿಟ್ಟು ಮಾಡ್ಕೊಂಡು ಬೈದಿರುವುದನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ. ಹಾಗಂತ ಕುಲದೀಪ್ ಯಾದವ್ಗೆ ಏನು ಬೇಸರವಾಗಿಲ್ಲ. ಯಾಕಂದ್ರೆ ಧೋನಿ ಬೈದಿರೋದು ಕುಲದೀಪ್ ಯಾದವ್ಗೆ ಅವರಿಗೆ ಪ್ಲಸ್ ಪಾಯಿಂಟ್ ಕೂಡ ಆಗಿದೆ. ಬೈದ ನಂತರದ ಫಲಿತಾಂಶವನ್ನು ನೋಡಿದಾಗ ಧೋನಿ ಯಾಕೆ ಬೈದಿದ್ದಾರೆ ಅಂತ ಮನವರಿಕೆಯಾಯ್ತು. ಅಲ್ಲದೆ ಧೋನಿಯ ಚಾಣಕ್ಯ ಪ್ರತಿಭೆ ಎಂತಹುದ್ದು ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಯ್ತು. ಧೋನಿಯವರ ಅನುಭವ, ಯುವ ಆಟಗಾರರಿಗೆ ನೀಡುವ ಬೆಂಬಲ, ತಂಡಕ್ಕೆ ಯಾವ ರೀತಿ ರೋಲ್ ಮಾಡೆಲ್ ಆಗ್ತಾರೆ ಎಂಬುದು ಸಹ ಕುಲದೀಪ್ ಯಾದವ್ಗೆ ಮನದಟ್ಟಾಗಿದೆ.
ಅಷ್ಟಕ್ಕೂ ಧೋನಿ ಕುಲದೀಪ್ಗೆ
ಯಾವಾಗ ಬೈದಿರೋದು. ಯಾಕೆ ಬೈದಿರೋದು ? ಕುಲದೀಪ್ ಯಾದವ್ ಏನು ತಪ್ಪು ಮಾಡಿದ್ರು ? ಈ ಪ್ರಶ್ನೆಗೆ ಕುಲದೀಪ್ ಉತ್ತರ ನೀಡೋದು ಹೀಗೆ. ಧೋನಿ ಭಯ್ಯಾ ನನಗೆ ಯಾವಾಗಲೂ ಟಿಪ್ಸ್ ಕೊಡ್ತಾ ಇದ್ರು. ವಿಕೆಟ್ ಹಿಂದುಗಡೆ ನಿಂತಕೊಂಡು ಸಲಹೆ ಮಾರ್ಗದರ್ಶನ ನೀಡ್ತಾ ಇದ್ರು. ಅದೊಂದು ಪಂದ್ಯದಲ್ಲಿ ಮಾತ್ರ ನಾನು ಧೋನಿಯರ ಮಾತನ್ನು ಸರಿಯಾಗಿ ಆಲಿಸಿಕೊಳ್ಳುತ್ತಿರಲಿಲ್ಲ. ಅದು ಶ್ರೀಲಂಕಾ ವಿರುದ್ದ ಇಂಧೋರ್ನಲ್ಲಿ ನಡೆಯುತ್ತಿದ್ದ ಟಿ-ಟ್ವೆಂಟಿ ಪಂದ್ಯ. ಆ ಪಂದ್ಯದಲ್ಲಿ ಲಂಕಾ ಬ್ಯಾಟ್ಸ್ಮೆನ್ಗಳು ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ಸೂಚನೆ ನೀಡ್ತಾ ಇದ್ರು. ಆಗ ಧೋನಿ ನನಗೆ ಸಲಹೆ, ಸೂಚನೆಗಳನ್ನು ನೀಡುತ್ತಿದ್ರು. ಆದ್ರೂ ಚೆಂಡು ಸೀಮಾ ರೇಖೆ ದಾಟುತ್ತಿತ್ತು. ಕೊನೆಗೆ ಧೋನಿ ಕುಲದೀಪ್ಗೆ ಫೀಲ್ಡಿಂಗ್ ಸ್ವಲ್ಪ ಚೆಂಚ್ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದರು. ಆದ್ರೆ ಧೋನಿಯ ಮಾತನ್ನು ಕುಲದೀಪ್ ಕೇಳಲಿಲ್ಲ. ಕುಲದೀಪ್ ಯಾದವ್ ಅವರು ಮುಂದಿನ ಎಸೆತ ಎಸೆಯುವ ಆತುರದಲ್ಲಿದ್ದರು.
ಆಗ ಧೋನಿಯ ಇನ್ನೊಂದು ಮುಖ ಕುಲದೀಪ್ ಅವರಿಗೆ ದರ್ಶನವಾಯ್ತು. ಸೀದಾ ಕುಲದೀಪ್ ಯಾದವ್ ಬಳಿ ಬಂದು… ನಾನೇನು ಹುಚ್ಚನಾ.. ನಾನು ನಿನಗೆ ಹುಚ್ಚನಂತೆ ಕಾಣುತ್ತೇನಾ ?
300 ಏಕದಿನ ಪಂದ್ಯಗಳನ್ನು ಆಡಿದ್ದೇನೆ ಅಂತ ಮಹೇಂದ್ರ ಸಿಂಗ್ ಜೋರಾಗಿಯೇ ಹೇಳಿದ್ರು. ಹಿರಿಯ ಆಟಗಾರ, ಮಾಜಿ ನಾಯಕನ ಸಿಟ್ಟನ್ನು ಕಂಡ ಕುಲದೀಪ್ ಯಾದವ್ ಸುಮ್ಮನಾದ್ರು. ಅಷ್ಟೇ ಅಲ್ಲ, ಧೋನಿ ಹೇಳಿದಂತೆ ಫೀಲ್ಡಿಂಗ್ ಕೂಡ ಸೆಟ್ ಮಾಡಿದ್ರು. ಮುಂದಿನ ಎಸೆತದಲ್ಲಿ ಕುಲದೀಪ್ ಯಾದವ್ ವಿಕೆಟ್ ಉರುಳಿಸಿದ್ರು.
ಆಗ ಮತ್ತೆ ಧೋನಿ ಕುಲದೀಪ್ ಯಾದವ್ ಬಳಿ ಬಂದು… ನಿನಗೆ ನಾನು ಏನು ಹೇಳಿದ್ದೇನೆ ಎಂಬುದು ಈಗ ಅರ್ಥ ಆಯ್ತಾ ಎಂದು ಹೇಳಿದ್ರು. ಹೀಗೆ ಧೋನಿಯವರಿಂದ ತಾನು ಹೇಗೆ ಬೈಸಿಕೊಂಡೆ, ಯಾಕೆ ಬೈಸಿಕೊಂಡೆ. ಅವರ ಬೈದಿರುವುದರಿಂದ ಏನನ್ನು ಕಲಿತುಕೊಂಡೆ ಎಂಬುದನ್ನು ಕುಲದೀಪ್ ಯಾದವ್ ಬಹಿರಂಗಪಡಿಸಿದ್ರು. ಮೈದಾನದಲ್ಲಿ ಮಹೇಂದ್ರ ಸಿಂಗ್ ಮಾಡುವ ಗೇಮ್ ಪ್ಲಾನ್ ತಂಡಕ್ಕೆ ಮತ್ತು ಬೌಲರ್ಗಳಿಗೆ ಯಾವ ರೀತಿ ನೆರವಾಗುತ್ತೆ ಎಂಬ ವಿಚಾರಗಳನ್ನು ಈ ಕಾರ್ಯಕ್ರಮದಲ್ಲಿ ಚಾಹಲ್ ಮತ್ತು ಕುಲದೀಪ್ ಯಾದವ್ ಹೇಳಿಕೊಂಡ್ರು.
ಒಟ್ಟಿನಲ್ಲಿ ತಾಳ್ಮೆಯ ಪ್ರತೀಕ ಎಂಬಂತಿದ್ದ ಮಹೇಂದ್ರ ಸಿಂಗ್ ಧೋನಿ ತಾಳ್ಮೆ ಕಳೆದುಕೊಂಡ್ರೆ ಸಹ ಆಟಗಾರರ ಚಳಿ ಕೂಡ ಬಿಡಿಸ್ತಾರೆ. ಯುವ ಆಟಗಾರರನ್ನು ಪಳಗಿಕೊಂಡು ತಂಡವನ್ನು ಉತ್ತುಂಗಕ್ಕೇರಿಸುತ್ತಿದ್ದ ಧೋನಿಯ ಯಶಸ್ಸಿನ ಗುಟ್ಟು ಕೂಡ ಇದೇ ಆಗಿರಬಹುದು.








