ಬೆಂಗಳೂರು: ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಮೂರನೇ ಎರಡರಷ್ಟು ಶಾಸಕರ ಸ್ಥಾನ ಗೆದ್ದು ಪಕ್ಷ ಅಧಿಕಾರಕ್ಕೇರಲಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿಯ ವಿಶೇಷ ಸಭೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪಕ್ಷವನ್ನು ಹೆಚ್ಚಿನ ಬಹುಮತದೊಂದಿಗೆ ಅಧಿಕಾರಕ್ಕೆ ತರಲು ಪರಿಶ್ರಮ ಮತ್ತು ಪ್ರವಾಸ ಅತ್ಯಗತ್ಯ. ತಿಂಗಳಲ್ಲಿ ಏಳು ದಿನ ಕಾರ್ಯಕರ್ತರನ್ನು ಭೇಟಿ ಮಾಡಿ ಮತ್ತು ಪಕ್ಷಕ್ಕಾಗಿ ನಿಮ್ಮನ್ನು ತೊಡಗಿಸಿಕೊಳ್ಳಿ ಎಂದು ಸೂಚನೆ ಮಾಡಿದರು.
ದೇಶದ ಅಭಿವೃದ್ಧಿಗಾಗಿ ಒಂದು ದೇಶ ಒಂದು ತೆರಿಗೆ ಇರಬೇಕು. ಹಾಗೆಯೇ ಒಂದು ದೇಶ ಒಂದೇ ಚುನಾವಣೆ ಬಗ್ಗೆ ಚರ್ಚೆ ನಡೆಸಲು ಇದು ಸಕಾಲ ಎಂದು ಅರುಣ್ಸಿಂಗ್ ಅಭಿಪ್ರಾಯಪಟ್ಟರು. ಈಗ ಹೆಚ್ಚಿನ ಸಮಯವನ್ನು ನಾವು ಚುನಾವಣೆಗೆ ಮೀಸಲಾಗಿ ಇಡಬೇಕಾಗುತ್ತಿದೆ. ಚುನಾವಣಾ ಕಾರ್ಯದಿಂದ ಶಿಕ್ಷಕರು, ಪೊಲೀಸ್ ವ್ಯವಸ್ಥೆ ತೊಂದರೆಗೆ ಸಿಲುಕುತ್ತದೆ. ಅಭಿವೃದ್ಧಿ ಕಾರ್ಯ ಸ್ಥಗಿತಗೊಳ್ಳುತ್ತದೆ ಎಂದು ಅವರು ವಿವರಿಸಿದರು.
ಬಿಎಸ್ವೈ ಆಡಳಿತಕ್ಕೆ ಅರುಣ್ಸಿಂಗ್ ಫುಲ್ ಮಾರ್ಕ್ಸ್
ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಸರಕಾರದ ಬಗ್ಗೆ ಪಕ್ಷದವರು ಹೊರಗಡೆ ಮಾತನಾಡಬಾರದು ಎಂದು ಸೂಚಿಸಿದ ಅರುಣ್ ಸಿಂಗ್, ಚಪ್ಪಾಳೆ ತಟ್ಟಿ ಯಡಿಯೂರಪ್ಪ ಅವರನ್ನು ಅಭಿನಂದಿಸಲು ಮನವಿ ಮಾಡಿದರು. ಗೋಹತ್ಯಾ ನಿಷೇಧ ಕಾಯ್ದೆಗಾಗಿ ಸರಕಾರವನ್ನು ಅಭಿನಂದಿಸಿದರು.

ಬಿಜೆಪಿಗೆ ಭದ್ರ ನೆಲೆ ಒದಗಿಸಿದ ಜಿಲ್ಲೆ ಶಿವಮೊಗ್ಗ. ಕರ್ನಾಟಕದ ಪ್ರತಿ ಕ್ಷೇತ್ರದಲ್ಲೂ ಬಿಜೆಪಿಯ ಕಮಲ ಅರಳಿಸುವ ಪ್ರಯತ್ನ ನಮ್ಮದಾಗಲಿ. ಈ ಸಭೆಗೆ ಕೋವಿಡ್ ನಡುವೆಯೂ ಶೇ 90ರಷ್ಟು ಸದಸ್ಯರು ಬಂದಿರುವುದು ಮಹತ್ವದ ವಿಚಾರ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದ ನಂತರ ಈ ಸಭೆ ನಡೆಯುತ್ತಿದೆ. ಇದು ಪಕ್ಷಕ್ಕೆ ಸಂತಸ ನೀಡಿದೆ ಎಂದರು.
ದೇಶದ ಬಹುತೇಕ ರೈತರು ಪ್ರಧಾನಿ ಮೋದಿ ಅವರನ್ನು ಬೆಂಬಲಿಸುತ್ತಿದ್ದಾರೆ. ಕಾಂಗ್ರೆಸ್ ಪ್ರಯತ್ನದಿಂದ ಕೆಲವೇ ಕೆಲವು ರೈತರು ದೆಹಲಿಯ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಕನಿಷ್ಠ ಬೆಂಬಲ ಬೆಲೆಯಡಿ ರೈತರ ಉತ್ಪನ್ನ ಖರೀದಿಯ ಪ್ರಮಾಣ ಮತ್ತು ಬೆಂಬಲ ಬೆಲೆಯೂ ಹೆಚ್ಚುತ್ತಲೇ ಸಾಗಿದೆ. 14 ವರ್ಷ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಅವರ ನೇತೃತ್ವದಲ್ಲಿ ಕೃಷಿ ಉತ್ಪಾದನಾ ಪ್ರಮಾಣ ತೀವ್ರವಾಗಿ ಹೆಚ್ಚಿತ್ತು. ರಾಹುಲ್ ಬಾಬಾ ಅವರಿಗೆ ಕೃಷಿಯ ಬಗ್ಗೆ ಏನೇನೂ ತಿಳಿದಿಲ್ಲ ಎಂದು ಟೀಕಿಸಿದರು.
ಸಮರ್ಪಕ ಪೂರ್ವ ತಯಾರಿ ಮೂಲಕ ಮೋದಿ ಅವರು ಕಾರ್ಯ ನಿರ್ವಹಿಸುತ್ತಾರೆ. ಎಲ್ಲರಿಗೂ ನೀರು, ವಿದ್ಯುತ್, ಮನೆ ಒದಗಿಸಿ ದೇಶವನ್ನು ಸಮಗ್ರವಾಗಿ ಅಭಿವೃದ್ಧಿಯತ್ತ ನಡೆಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರು ಕೇವಲ ವಿರೋಧಕ್ಕಾಗಿ ವಿರೋಧ ಮಾಡುತ್ತಾರೆ. ಜಿಎಸ್ಟಿ, ತ್ರಿವಳಿ ತಲಾಕ್, ರಾಮ ಮಂದಿರ ಸೇರಿ ಎಲ್ಲೆಡೆ ವಿರೋಧsವನ್ನೇ ಅವರು ಪ್ರವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಅರುಣ್ಸಿಂಗ್ ಟೀಕಿಸಿದರು.
ರೈತ ಸುಧಾರಣಾ ಮಸೂದೆಗಳ ಜಾರಿ ಬಗ್ಗೆ ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿತ್ತು. ಕಾಂಗ್ರೆಸ್ ಹೇಳಿದ್ದನ್ನು ಮಾಡುವುದಿಲ್ಲ. ಆದರೆ, ಬಿಜೆಪಿ ಆಶ್ವಾಸನೆ ನೀಡದೆ ಉತ್ತಮ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುತ್ತಿದೆ. ಇದರಿಂದಾಗಿ ಕಾಂಗ್ರೆಸ್ ವಿನಾಶದತ್ತ ನಡೆದಿದೆ. ಡಿಸೆಂಬರ್ 31ರಂದು ಹೊಸ ವರ್ಷಾಚರಣೆಗೆ ಇಟಲಿಗೆ ರಾಹುಲ್ ಗಾಂಧಿ ತೆರಳಿದ್ದೇ ಇದಕ್ಕೆ ಸ್ಪಷ್ಟ ಉದಾಹರಣೆ ಎಂದರು.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಲ್ಲಿ ಉತ್ತಮ ನಾಯಕತ್ವದ ಗುಣ ಇಲ್ಲ. ಜೆಡಿಎಸ್ ಕೂಡ ರಾಜ್ಯದಲ್ಲಿ ವಿನಾಶದತ್ತ ನಡೆಯುತ್ತಿದೆ ಎಂದು ಅರುಣ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








