Astrology : ಚಾಂದ್ರಮಾನ ಯುಗಾದಿ 22-03-2023 ಬುಧವಾರ
ಶೋಭಕೃತ್ ನಾಮ ಸಂವತ್ಸರ ಆರಂಭ
ಹಳೆಯ ಮತ್ತು ಹೊಸ ವರ್ಷಗಳನ್ನು ಜೋಡಿಸುವ ಸುವರ್ಣಸೇತುವೆ, ಯುಗಾದಿ. ಫಾಲ್ಗುಣ ಕೃಷ್ಣಪಕ್ಷ ಅಮಾವಾಸ್ಯೆಯ ದಿನ ಹಳೆಯ ವರ್ಷಕ್ಕೆ ವಿದಾಯ ಹೇಳಿ, ಮರುದಿನ ಚೈತ್ರ ಶುಕ್ಲಪಕ್ಷ ಪ್ರತಿಪದೆಯಂದು ಹೊಸವರ್ಷವನ್ನು ಸ್ವಾಗತಿಸುತ್ತೇವೆ.
ಶ್ರೀ ಸಂವತ್ಸರಾರಂಭ
ಹಿಂದಿನ ವರ್ಷವೆಂಬ ಕಾಲಪುರುಷನ ಮರಣ ಮತ್ತು ಹೊಸವರ್ಷದ ರೂಪದ ಶಿಶುವಿನ ಜನನಸೂಚಕ, ಈ ಸಂವತ್ಸರಾರಂಭ ಕಾಲ.
ಸಂವತ್ಸರವು ಯಜ್ಞಗಳಿಗೆ ಮೂಲ. ಅದು ಕೇವಲ ಕಾಲಪರಿಮಾಣ ಮಾತ್ರವಲ್ಲ; ಆಧ್ಯಾತ್ಮಿಕತೆಯ ಅಡಿಪಾಯವೂ ಹೌದು. ಸಂವತ್ಸರವನ್ನು ಅಶ್ವಕ್ಕೆ ಹೋಲಿಸಿ, ಒಂದು ವರ್ಷ ಪೂರ್ಣವಾಗಿ ನಡೆಯುವ ಅಶ್ವಮೇಧಯಜ್ಞ ಈ ಸಂವತ್ಸರ ಎಂದು ವೇದಗಳು ಸಾರುತ್ತವೆ.
ಯುಗಾದಿಯ ದಿನ ವಿಶೇಷ
1. ಅಭ್ಯಂಜನ ಸ್ನಾನ.
2. ಬೇವು, ಬೆಲ್ಲ, ತುಪ್ಪ, ಹಣ್ಣುಗಳ ನೈವೇದ್ಯ ಮಾಡಿ ದೇವರಪೂಜೆ. ಪಂಚಾಂಗಪೂಜೆ.
3. ಪಂಚಾಗಶ್ರವಣ.
4. ಪಂಚಾಂಗಶ್ರವಣ ಮುಗಿದ ನಂತರ ತೀರ್ಥವನ್ನು ಸ್ವೀಕರಿಸಿ, ಬೇವು ಬೆಲ್ಲವನ್ನು ಹಿರಿಯವರಿಂದ ತೆಗೆದುಕೊಂಡು ಸ್ವೀಕರಿಸುವುದು.
ಬೇವು-ಬೆಲ್ಲ
ಯುಗಾದಿ ಎಂದ ಕೂಡಲೆ ನಮ್ಮ ನೆನಪಿಗೆ ಬರುವುದು ಬೇವು-ಬೆಲ್ಲ. ಬೇವಿನ ಚಿಗುರಿನ ಕಹಿ, ಬೆಲ್ಲದ ಸಿಹಿ – ಇವೆರಡೂ ಬದುಕಿನ ಪ್ರತೀಕ;
ನೋವು-ನಲಿವುಗಳ ಸಂಕೇತ;
ದೃಷ್ಟ-ಅದೃಷ್ಟಗಳ ಪ್ರತಿಬಿಂಬ.
ಎಲ್ಲರ ಜೀವನವೂ ಸುಖ-ದು:ಖ, ಲಾಭ-ನಷ್ಟ, ಮಾನ-ಅಪಮಾನ, ಜಯ-ಅಪಜಯ – ಈ ದ್ವಂದ್ವಗಳ ಸಮ್ಮಿಲನ. ಯಾರಿಗೂ ದು:ಖ, ನಷ್ಟ, ಅಪಮಾನ, ಪರಾಜಯಗಳು ಸ್ಥಿರವಲ್ಲ. ಹಾಗೆಯೇ ಸುಖ, ಲಾಭ, ಮಾನ, ಜಯಗಳು. ಇವೆಲ್ಲ ಒಂದಾದ ಮೇಲೆ ಒಂದರಂತೆ ಬಂದು ಹೋಗುತ್ತಿರುತ್ತವೆ.
ಆದ್ದರಿಂದ ಮಾನವನು ಸುಖ ಬಂದಾಗ ಹಿಗ್ಗದೆ, ಕಷ್ಟ ಬಂದಾಗ ಕುಗ್ಗದೆ, ಈ ದ್ವಂದ್ವಗಳನ್ನು ಜಯಿಸಿ, ಸಮತೆ ಸಾಧಿಸಬೇಕು; ಸ್ಥಿತಪ್ರಜ್ಞನಾಗಬೇಕು – ಇದು ಯುಗಾದಿಯ ಬೇವು-ಬೆಲ್ಲಗಳ ಸಂದೇಶ.*
ಬೇವು-ಬೆಲ್ಲವನ್ನು ಸ್ವೀಕರಿಸುವಾಗ ಹೇಳುವ ಮಂತ್ರ:-
ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ|
ಸರ್ವಾರಿಷ್ಟ ವಿನಾಶಾಯ ನಿಂಬಕಂದಲ ಭಕ್ಷಣಮ್||
(ಶತಾಯುವಾಗಿ, ವಜ್ರಕಾಯವನ್ನು ಹೊಂದಿ, ಸರ್ವಸಂಪತ್ತು ಪಡೆದು, ಸರ್ವಾರಿಷ್ಟಗಳನ್ನು ನಾಶಪಡಿಸಿ, ಸುಖವಾಗಿರುವುದಕ್ಕಾಗಿ ಬೇವಿನ ಚಿಗುರೆಲೆಗಳ ಭಕ್ಷಣ.)
Astrology : Chandramana Ugadi 22-03-2023 Wednesday








