ಹಣಕಾಸಿನ ಸಮಸ್ಯೆಯಿಂದ ತನ್ನ ಕಾರನ್ನು ಮಾರಾಟ ಮಾಡಲು ನಿರ್ಧರಿಸಿದ ಅಥ್ಲೀಟ್ ದ್ಯುತೀ ಚಂದ್
ಹೊಸದಿಲ್ಲಿ, ಜುಲೈ 12: ಭಾರತದ ಸ್ಟಾರ್ ಅಥ್ಲೀಟ್ ದ್ಯುತೀ ಚಂದ್ ಅವರು ಅರ್ಥಿಕ ಸಮಸ್ಯೆಯ ಹಿನ್ನಲೆಯಲ್ಲಿ ತನ್ನ ಬಿಎಂಡಬ್ಲ್ಯೂ ಕಾರನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ಗೆ ತಯಾರಿ ನಡೆಸುತ್ತಿರುವ ದ್ಯುತಿಗೆ ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಪ್ರಾಯೋಜಕರಿಂದ ಆದಾಯ ಬರುತ್ತಿಲ್ಲ. ಇದರಿಂದಾಗಿ ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿರುವ ದ್ಯುತೀ ತನ್ನ ದುಬಾರಿ ಕಾರನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತಾನು ಬಿಎಂಡಬ್ಲ್ಯೂ ಕಾರನ್ನು ಮಾರಾಟಕ್ಕೆ ಇಟ್ಟಿರುವುದಾಗಿ ಮಾಹಿತಿ ಹಂಚಿಕೊಂಡಿದ್ದ ದ್ಯುತೀ ಆ ಬಳಿಕ ತನ್ನ ಪೋಸ್ಟ ಅನ್ನು ಡಿಲೀಟ್ ಮಾಡಿದ್ದಾರೆ.
ದ್ಯುತೀ ಮಾರಾಟ ಮಾಡಲು ನಿರ್ಧರಿಸಿರುವ ಕಾರು 2015 ಬಿಎಂಡಬ್ಲ್ಯೂ 3-ಸೀರೀಸ್ ಮಾದರಿಯದ್ದಾಗಿದ್ದು, 30 ಲಕ್ಷ ರೂ.ಗೆ ದ್ಯುತೀ ಖರೀದಿಸಿದ್ದರು.
ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಯಾವುದೇ ಪ್ರಾಯೋಜಕರು ನನ್ನ ಅಭ್ಯಾಸಕ್ಕೆ ಹಣ ಖರ್ಚು ಮಾಡಲು ಮುಂದೆ ಬರುತ್ತಿಲ್ಲ. ನಾನು ಟೋಕಿಯೋ ಒಲಿಂಪಿಕ್ಸ್ ಗೆ ತಯಾರಿ ನಡೆಸುತ್ತಿರುವ ಹಿನ್ನಲೆಯಲ್ಲಿ ಅಭ್ಯಾಸಕ್ಕೆ ಮತ್ತು ಆಹಾರಕ್ಕೆ ಹಣದ ಅವಶ್ಯಕತೆ ಇದ್ದು, ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿದ್ದೇನೆ. ಹೀಗಾಗಿ ಬಿಎಂಡಬ್ಲ್ಯೂ ಕಾರನ್ನು ಮಾರಾಟ ಮಾಡಲು ನಿರ್ಧಾರ ಮಾಡಿರುವುದಾಗಿ ದ್ಯುತೀ ಹೇಳಿದ್ದಾರೆ ಎಂದು ವರದಿಗಳಿಂದ ತಿಳಿದು ಬಂದಿದೆ.
ಜಕಾರ್ತಾದಲ್ಲಿ 2018ರಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ 100 ಮೀ. ಮತ್ತು 200 ಮೀ. ಓಟದಲ್ಲಿ ದ್ಯುತೀ ಚಂದ್ ಬೆಳ್ಳಿ ಪದಕ ಗೆದ್ದಿದ್ದರು. ಒಡಿಶಾ ಸರ್ಕಾರ ದ್ಯುತೀಯ ಉತ್ತಮ ಪ್ರದರ್ಶನಕ್ಕಾಗಿ ನಗದು ಪುರಸ್ಕಾರ ನೀಡಿ ಗೌರವಿಸಿತ್ತು. ಆ ನಗದು ಬಹುಮಾನದಲ್ಲಿ ದ್ಯುತೀ ಬಿಎಂಡಬ್ಲ್ಯೂ ಕಾರನ್ನು ಖರೀದಿಸಿದ್ದರು.