Author Special : ಅಡವಿಪುರದಲ್ಲೊಂದು ಭಯಾನಕ ಮದುವೆ ( ಹಾರರ್ ಥ್ರಿಲ್ಲರ್ ಕಥೆ )
” ಈ ಕಾರ್ತಿಕ್ ಒಂದು ವರ್ಷವಾಯ್ತು,, ಈಗ ಎಲ್ಲರನ್ನೂ ಕರೆಸಿಕೊಳ್ತಿದ್ದಾನೆ ”
” ಲೇ ಸೌಮ್ಯ… ಅವನ ಊರಿಗೆ ಹೋಗಿ ಕ್ಲಾಸ್ ತಗೊಳೋಣ ಬಿಡೆ..
ಸುಕನ್ಯಳ ಮಾತಿಗೆ ಸೌಮ್ಯ , ವಿಕ್ಕಿ , ಸಾಂಕೇತ್, ಪ್ರತ್ಯೂಷ , ವಿಧೂಷ್ ತಲೆಯಾಡಿಸಿದರು.
ಸೌಮ್ಯ ಹೊರಗೆ ನೋಡಿದವಳಿಗೆ ಎದೆ ಝಲ್ ಎನಿಸುತ್ತಿದೆ. ಅಕ್ಕ ಪಕ್ಕ ಕಾಡು ದಾರಿ ನರಪಿಳ್ಳಿಯೂ ಇಲ್ಲ…!!! ಗಾಢಾಂಧಕಾರ…!! ಗೌಗುಡುತ್ತಿರುವ ಪಕ್ಷಿಗಳ ಧ್ವನಿ ಅತಿ ಭಯಂಕರ..!!! ಎಲ್ಲರ ಎದೆ ನಡುಗಿಸುವಂತಹ ನಿಶ್ಯಬ್ಧ..!!!
ಹೇ ನಾವೆಲ್ಲಾ ಹೈವೇ ದಾಟಿ ರೌದ್ರಾರವ ದಾರಿಗೆ ( ಕಾಲ್ಪನಿಕ) ಬಂದು ಸುಮಾರು 30 ನಿಮಿಷವೇ ಆಗಿರಬಹುದು ಅಲ್ವಾ..?? ಆದರೆ ಒಂದೇ ಒಂದು ನರಪಿಳ್ಳೆಯೂ ನಮ್ಮ ಕಣ್ಣಿಗೆ ಬಿದ್ದಿಲ್ಲ ಅಷ್ಟು ಹೊತ್ತಿಂದ…
ಹೋಗಲಿ ಒಂದ್ ಗಾಡಿ , ಒಂದು ಅಂಗಡಿಯೂ ಕಾಣಿಸಲಿಲ್ಲ… ನಿಮಗೆ ಏನೋ ವಿಚಿತ್ರ ಅನ್ನುಸ್ತಿಲ್ವಾ… ಕೊಂಚ ಅನುಮಾನ ಗೊಂದಲ ಶುರುವಾಗಿತ್ತು….
ಸೌಮ್ಯಳ ಮಾತು ಮುಗಿದು ನಿಮಿಷ ಕಳೆದಿರಲಿಲ್ಲ ಮುಂಬದಿಯಿಂದ ಒಬ್ಬ ಅಜ್ಜ ಕಾಣಿಸಿಬಿಡುವನು! ಎಲ್ಲರಿಗೂ ಭಯ… ಒಮ್ಮೆಲೆ ಆಘಾತ… ಆ ವೃದ್ಧ ಕಾರಿಗೆ ತೀರ ಸನಿಹ ಬಂದುಬಿಟ್ಟಿದ್ದ ಎಲ್ಲರ ಜೀವ ಬಾಯಿಗೆ ಬಂದಿದೆ…
ತಕ್ಷಣವೇ ವಿಕ್ಕಿ ಕಾರ್ ನಿಲ್ಲಿಸಿಬಿಟ್ಟಿದ್ದ… ಎಲ್ಲರೂ ಹೆದರಿ ಕಣ್ಮುಚ್ಚಿಬಿಟ್ಟಿದ್ದರು… ಇನ್ನೇನು ತಾತನಿಗೆ ಗುದ್ದೇ ಬಿಟ್ಟೆವು ಎನಿಸಿ…
ಪುಣ್ಯ ಎಲ್ಲರಿಗೂ ಹೋದ ಜೀವ ವಾಪಸ್ ಬಂದಿತ್ತು.. ತಾತ ಸುರಕ್ಷಿತವಾಗಿದ್ದನ್ನ ನೋಡಿ…
ತಾತ ಹುಷಾರು…!!! ಹೀಗೆಲ್ಲಾ ರಸ್ತೆಯಲ್ಲಿ ಗಾಡಿಗೆ ಅಡ್ಡ ಬರಬೇಡಿ ಎಂದರೆ ,,, ಗಹಗಹಿಸಿ ಎಷ್ಟು ಭಯಾನಕವಾಗಿ ನಗುತ್ತಾರೆಂದರೆ ಆ ತಾತ,,, ಅವರ ನಗು ಇಡೀ ಕಾಡನ್ನೇ ನಡುಗಿಸುವಷ್ಟು ಭಯಾನಕವಾಗಿ ಪ್ರತಿಧ್ವನಿಸಿತ್ತು..
ಸೌಮ್ಯ , ಸುಕನ್ಯ , ಪ್ರತ್ಯೂಷ ಗಾಬರಿಯಾಗಿ ಕೈ ಕೈ ಹಿಡಿದು ಅಂಟಿಕೊಂಡು ಕುಳಿತರೆ , ಹುಡುಗರಿಗೂ ಭಯ… ವಿಕ್ಕಿ ಸ್ವಲ್ಪ ಧೈರ್ಯವಂತ…
ಹೇ ತಾತ ಯಾಕ್ ನಗ್ತಿದ್ದೀರಾ ಹೀಗೆ ಎಂದವನ ಮಾತಿಗೆ ಧಿಡೀರ್ ಕಿಟಕಿ ಬಳಿ ಬಂದು ನಿಂತು ಬಿಡುವ ವೃದ್ಧ
ದುರುಗುಟ್ಟುತ್ತಾ… ಹೇ…. ಹೇ ಹೇ ಎಲ್ಲಿ ಎಲ್ಲಿಗೆ ಹೋಗ್ತಿರೋದು..!!?? ನೀವು ಈ ರಸ್ತೆಯಲ್ಲಿ ಅದು ಇಷ್ಟ್ ಹೊತ್ತಿನಲ್ಲಿ…!!!!
ಎಂದವರ ಮಾತಿಗೆ ವಿಕ್ಕಿ ನುಡಿದ ,, ನಾವು ಬೆಂಗಳುರಿಂದ ಬಂದಿದ್ದೀವಿ ತಾತ , ಇಲ್ಲೇ ಅಡವಿಪುರದಲ್ಲಿ ( ಕಾಲ್ಪನಿಕ) ಹೋಗ್ತಿದ್ದೀವಿ,ಎಂದೊಡನೆ ತಾತ ಆಘಾತಗೊಂಡಿದ್ದರು..
ಏನು..??? ಏನಂದ್ರಿ ಅಡವಿಪುರ…!!!! ಅಡವಿಪುರಕ್ಕೆ ಹೋಗ್ತಿದ್ದೀರ ,,, ಬೇಡ ವಾಪಸ್ ಹೊರಟೋಗಿ ,,, ಈ ದಾರಿ , ಆ ಅರಣ್ಯಪುರ ಎರೆಡೂ ಸುರಕ್ಷಿತವಲ್ಲ , ಬಂದ ದಾರಿಯಲ್ಲಿ ವಾಪಸ್ ಹೊರಟೋಗಿ, ಎಂದವರ ಮಾತಿಗೆ ಎಲ್ಲರೂ ಗಾಬರಿಯಾಗಿ ಏನ್ ಹೇಳ್ತಿದ್ದೀರಾ ತಾತ ಎನ್ನಲು ವಿಕ್ಕಿ ಮೊಬೈಲ್ ರಿಂಗ್ ಆಗಿತ್ತು..
ಲೋ ಕಾರ್ತಿಕ್ ಬಂದ್ವಿ ಇರೋ, ಎಂದರೆ ಆ ಕಡೆ ಇಂದ ಕಾರ್ತಿಕ್ ಸರಿ ಬನ್ನಿ ಬೇಗ ಎಂದವ ಕಾಲ್ ಕಟ್ ಮಾಡಿಬಿಟ್ಟರೆ ,,, ತಾತ ಸಾರಿ ನಮಗೆ ಅಷ್ಟು ಸಮಯ ಇಲ್ಲ ನೀವು ಹೊರಡಿ ಬಾಯ್ ಎಂದರೆ ,,
ಆ ತಾತ ಬೇಡ ,, ಬೇಡ ಎಂದು ಎಷ್ಟೇ ಹೇಳಿದರೂ ಕೇಳದೇ ಮುಂದಕ್ಕೆ ಸಾಗಿಯೇ ಬಿಡುವರು…
ಅವರು ಕೊಂಚ ಮುಂದೆ ಸಾಗಿದಾಕ್ಷಣ ಆ ತಾತ ಮಾಯವೇ ಆಗಿದ್ದರು.. ಗಾಳಿಯ ಜೊತೆಗೆ ಗಾಳಿಯಂತೆಯೇ…!!!
ಎಲ್ಲರೂ ಮೌನವಾಗಿದ್ದರು.. ಇನ್ನೇನು ಎಲ್ಲರೂ ಅಡವಿಪುರದ ಊರ ಹೆಬ್ಬಾಗಿಲ ತಲುಪಿಯೇ ಬಿಟ್ಟಿದ್ದರು…
ಚಿಕ್ಕಮಗಳೂರಿನ ಗುಡ್ಡಗಳಿಂದ ಸುತ್ತುವರಿದ ಒಂದು ಸಣ್ಣ ಊರೇ ಅಡವಿಪುರ… ಎಲ್ಲರೂ ಹೆಬ್ಬಾಗಿಲ ನೋಡಿ ಖುಷಿಯಾಗಿದ್ದರು…. ಇಷ್ಟು ಹೊತ್ತಿನಿಂದ ಜನರೇ ಕಂಡಿರಲಿಲ್ಲ… ಈಗ ಜನರೇ ಜನರು ಕಾಣಿಸುತ್ತಿದ್ದಾರೆ..
ಇಡೀ ಊರಿಗೆ ಊರೇ ಜಗಮಗಿಸುತ್ತಿದೆ… ಸಂಭ್ರಮದಲ್ಲಿ ಜನರು ಅತ್ತಿಂದಿತ್ತ, ಇತ್ತಿಂದತ್ತ ಓಡಾಡುತ್ತಿದ್ದಾರೆ… ಹೆಂಗಳೆಯರು ಬಣ್ಣ ಬಣ್ಣದ ಸೀರೆ ,ಲಂಗಾ ದಾವಣಿ , ಲೆಹೆಂಗಾ , ಚೂಡಿದಾರ್ ನಲ್ಲಿ ಮಿರಿ ಮಿರಿ ಮಿಂಚುತ್ತಿದ್ದಾರೆ…
ಹುಡುಗೀರಿಗೆ ಒಂದಷ್ಟು ಹುಡುಗರು ಕಾಳು ಹಾಕೋಕೆ ಪ್ರಯತ್ನ ಪಡ್ತಿದ್ದಾರೆ… ಮತ್ತೊಂದೆಡೆ ಊರಿನ ಹಿರಿಯರೆಲ್ಲಾ ತಲೆಗೆ ಪಂಚೆ ಕಟ್ಟಿ , ಪೇಟ ಸುತ್ತಿ ,, ಗತ್ತಲ್ಲಿ ಓಡಾಡುತ್ತಿದ್ದಾರೆ… ಪುಟಾಣಿಗಳು ಆಟವಾಡುತ್ತಾ ಓಡಾಡುತ್ತಿದ್ದಾರೆ…
ವ್ಹಾ..!! ಈ ವಾತಾವರಣ ಕಂಡು ಎಲ್ಲರೂ ಉತ್ಸಾಹದಲ್ಲಿದ್ದರು… ಎಲ್ಲರೂ ಊರಿನ ಹೆಬ್ಬಾಗಲ ದಾಟಿ ಊರೊಳಗೆ ಪ್ರವೇಶ ಪಡೆದರು…
ಎಲ್ಲರ ಕಂಗಳೂ ಅವರತ್ತಲೇ ,,,ಎಲ್ಲರೂ ಈ ಸಿಟಿಮಂದಿಯನ್ನೇ ಆಶ್ಚರ್ಯದಿಂದ ನೋಡ್ತಿದ್ದಾರೆ… ಆದರೆ ದಿಗಿಲೆನಿಸಿದ್ದು ಮಾತ್ರ ಎಲ್ಲರ ನೋಟವೂ ಒಂದೇ ರೀತಿ ಗಂಭೀರವಾಗಿಯೇ ಇದೆ… ಒಂದಿಷ್ಟೂ ಬದಲಾವಣೆಯಿಲ್ಲ… ಸೌಮ್ಯ ಮತ್ತೆಲ್ಲರಿಗೂ ಭಯವಾಗುತ್ತಿದೆ..
ಇವರು ಒಂದಷ್ಟು ಮುಂದೆ ಬಂದದ್ದೇ ತಡ… ಅವರು ದಾಟಿ ಬಂದಿದ್ದ ಜಗಮಗಿಸುತ್ತಿದ್ದ ಹೆಬ್ಬಾಗಿಲು ಸಂಪೂರ್ಣ ಬದಲಾಗಿಬಿಟ್ಟಿತ್ತು…. ಪಾಳು ಬಿದ್ದ ಹಾಗೆ, ಬಣ್ಣ ಮಾಸಿದ ಹಾಗೆ ಅಲ್ಲಲ್ಲಿ ಹೊಗೆ ತುಂಬಿ ಕಪ್ಪಾದ ಹಾಗೆ… ಧೂಳು ತುಂಬಿದ್ದ ಒಂದು ನಾಮ ಫಲಕದ ಮೇಲೆ ರಪ್ಪನೆ ಬೀಸಿದ ಗಾಳಿಗೆ ಎಲೆಗಳೆಲ್ಲಾ ದೂರ ಸರಿದು , ಧೂಳು ಸರಿದು ಕಂಡಿದ್ದು ಸರ್ಕಾರ ಅಂಟಿಸಿದ್ದ ಸೂಚನೆ ,, ಅಪಾಯ ,,, ಯಾರೂ ಈ ಊರ ಹೆಬ್ಬಾಗಿಲು ದಾಟಬಾರದು… ಈವರೆಗೂ ಈ ಊರ ಪ್ರವೇಶ ಮಾಡಿದವರು ಜೀವಂತವಾಗಿ ಹಿಂದುರಿಗಿಲ್ಲ..!!!! ಎಂಬ ಸೂಚನೆ…
ಎಲ್ಲರೂ ಬಂದು ಒಂದು ದೊಡ್ಡ ಮನೆ ಎದುರಿಗೆ ಕಾರು ನಿಲ್ಲಿಸಿದರು… ಚಪ್ಪರ ಕಟ್ಟಿ , ಮನೆಗೆ ತೋರಣಾಲಂಕಾರ ಮಾಡಿ ಪಕ್ಕದಲ್ಲೇ ಪೆಂಡಲ್ ಹಾಕಿಸಿದ್ದು ನೋಡಿಯೇ ಅರಿವಾಗಿತ್ತು… ಇದೇ ಮದುವೆ ಮನೆ ಎಂಬುದು… ಅಲ್ಲಿ ಕಾರ್ ನಿಲ್ಲಿಸಿದವರು ಇನ್ನೇನು ಹೊಸ್ತಿಲ ದಾಟಬೇಕು.. ಕಾರ್ತಿಕ್ ಕರೆ ಬಂದಿತ್ತು… ಎಲ್ಲಿದ್ದೀರ..??? ಎಂದು
ವಿಕ್ಕಿ ” ಲೋ ನಿಮ್ಮ ಮನೆ ಇದೇ ತಾನೆ ಚಪ್ಪರ ಹಾಕಿಸಿದ್ದೀರಲ್ಲಾ ಅಲ್ಲಿ”
ಎಂದವನ ಮಾತಿಗೆ ಲೋ ಅಲ್ಲಿ ಬೇಡ ಮುಂದೆ ಬನ್ನಿ ಹಾಗೆ ನಡೆದುಕೊಂಡು ಮದುವೆ ಮಂಟಪ ಇದೆ ಇಲ್ಲೇ ಮದುವೆ ಎಂದವನ ಮಾತಿಗೆ ಹೂ ಗುಟ್ಟಿ ಎಲ್ಲರೂ ಹೊರಟರು… ಸೌಮ್ಯಗೆ ಎಲ್ಲವೂ ವಿಚಿತ್ರ ಎನಿಸುತ್ತಿದೆ… ಇವರೆಲ್ಲಾ ಬಂದಾಗ ಯಾವ ಸನ್ನಿವೇಶವಿತ್ತೋ ಅದೇ ಪುನಃ ಪುನಃ ಮರುಕಳಿಸುತ್ತಿರುವಂತೆ ಭಾಸವಾಗ್ತಿದೆ…. ಆದ್ರೆ ಸೌಮ್ಯ ಏನೂ ಹೇಳದೇ ಮೌನವಾಗಿದ್ದಾಳೆ…
ಮುಂದೆ ಸಾಗಿದವರಿಗೆ ಸುಂದರವಾಗಿ , ಅದ್ಧೂರಿಯಾಗಿ ಅಲಂಕೃತಗೊಂಡಿದ್ದ ಕಲ್ಯಾಣ ಮಂಟಪ ಕಾಣಿಸಿತು…
ಹೊರಗೆ ದೊಡ್ಡದಾಗಿ ಬರೆಯಲಾಗಿತ್ತು… ಸುನಿತಾ ವೆಡ್ಸ್ ವಿಕ್ಕಿ ಅಂತ…
ಎಲ್ಲರೂ ಒಂದು ಕ್ಷಣ ಗಾಬರಿಯಾಗಿಬಿಟ್ಟಿದ್ದರು..
ಸೌಮ್ಯ ” ವಿಕ್ಕಿ , ನನಗೇಕೋ ಏನೂ ಸರಿಯಿಲ್ಲ ಅನ್ನಿಸ್ತಿದೆ ಕಣೋ..
ಆದ್ರೆ ಅವಳನ್ನ ಸಮಾಧಾನಪಡಿಸಿ ಬಲವಂತವಾಗಿಯೇ ಅವಳನ್ನ ಕರೆದುಕೊಂಡು ಹೋಗುವನು… ಅವಳಿಚ್ಛೆಗೆ ವಿರುದ್ಧವಾಗಿ…
ಹೀಗೆ ಎಲ್ಲರೂ ಕಲ್ಯಾಣ ಮಂಟಪದ ಹೊಸ್ತಿಲ ದಾಟಿಯೇ ಬಿಟ್ಟಿದ್ದರು… ಕಿಲ ಕಿಲ ,ಮಕ್ಕಳ ಧ್ವನಿ , ಗಿಜಿಗಿಜಿ , ಜನಜಂಗುಳಿ , ನಡುವೆ ಕಂಡವನೇ ಖುಷಿ ಖುಷಿಯಾಗಿ ಬಂದ ಅತಿಥಿಗಳನ್ನ ಸ್ವಾಗತಿಸುತ್ತಿರುವ ಕಾರ್ತಿಕ್…!!!
ಕಾರ್ತಿಕ್ ನನ್ನ ಕಂಡ ಎಲ್ಲರೂ ಖುಷಿಯಾಗಿದ್ದರು… ಕಾರ್ತಿಕ್ ಕೂಡ ಖುಷಿಯಾಗಿ ಓಡೋಡಿ ಬಂದವ ಎಲ್ಲರನ್ನೂ ಮಾತನಾಡಿಸಿದ…
ಅವನನ್ನ ಅಪ್ಪಲು ಹೋದವರನ್ನ ತಡೆದ… ಹೇ ಹಳ್ಳಿ ಇದು ಇದೆಲ್ಲಾ ಇಲ್ಲಿನ ಹಿರಿಯರಿಗೆ ಹಿಡಿಸಲ್ಲ ಎಂದರೆ , ಎಲ್ಲರಿಗೂ ಗೊಂದಲ… ಅನುಮಾನ… ಆದರೂ ಮೌನವಾಗಿದ್ದರು.. ಆದ್ರೆ ಅವರ ಅನುಮಾನ ಹೆಚ್ಚಿಸಿದ್ದು ಕಾರ್ತಿಕ್ ಹೇಳಿದ ಮಾತು..
ಯಾವುದೇ ಕಾರಣಕ್ಕೂ ಮೊಬೈಲ್ ಹೊರತೆಗೆಯಬಾರದು , ಫೋಟೋಗಳನ್ನ ತೆಗೆಯಬಾರದು , ನಮ್ಮ ಊರಿನ ಮುಖಂಡರೆಲ್ಲಾ ಸೇರಿ ಇಲ್ಲೊಂದು ನಿಯಮ ಜಾರಿಗೊಳಿಸಿದ್ದಾರೆ… ಯಾರೂ ಕೂಡ ಬಹಿರಂಗವಾಗಿ ಮೊಬೈಲ್ ಬಳಸುವಂತಿಲ್ಲಾ… ಎಂದಾಗ ಎಲ್ಲರೂ ಶಾಕ್..
ಹೇ ಇದೆಂಥಹ ಕಾನೂನು ಎಂದರೆ ,,, ಕಾರ್ತಿಕ್ ಕೈ ಮುಗಿದು ಪ್ಲೀಸ್ ಎಂದು ಬೇಡಿದ ಮೇಲೆ ಅವನ ಮಾತಿಗೆಲ್ಲರೂ ಒಪ್ಪಿ ರಾಜಿಯಾದ ನಂತರ , ಅವರನ್ನೆಲ್ಲಾ ಕೂರಿಸಿ ಅತಿಥಿಗಳ ಸ್ವಾಗತ್ತಕ್ಕೆ ಹೊರಡುವ…
ಎಲ್ಲರೂ ಗೊಂದಲದಲ್ಲಿ ಒಂದೆಡೆ ಕುಳಿತು ಈ ಬಗ್ಗೆ ಮಾತನಾಡ್ತಿದ್ದರು… ಈಗ ಎಲ್ಲರಿಗೂ ಕೊಂಚ ಕೊಂಚವೇ ಭಯ ಶುರುವಾಗಿತ್ತು…
ಆಗಲೇ ಸೌಮ್ಯ ಕಂಗಳು ಅಲ್ಲೇ ಇದ್ದ ದೊಡ್ಡ ಗಡಿಯಾರದತ್ತ ಬೀಳುವುದು..
ಸಮಯ ರಾತ್ರಿ 10.10 ಕ್ಕೆ ಸ್ಥಗಿತವಾಗಿದೆ… ತನ್ನ ವಾಚ್ ನೋಡಿಕೊಂಡಳು ಸಮಯ 9.45 ಆಗಿದೆ… ಬಿಡು ಗಡಿಯಾರ ಕೆಟ್ಟಿರಬೇಕೆಂದುಕೊಂಡವಳು ಮತ್ತೊಂದು ಕಡೆ ನೋಡಿದವಳಿಗೆ ಭಯವಾಗಿತ್ತು… ಇನ್ನೊಂದು ಗಡಿಯಾರದ ಸಮಯವೂ ಕೂಡ 10.10. ರಲ್ಲೇ ಸ್ಥಗಿತವಾಗಿದೆ..
ಪೂಜಾರಿ ಇಲ್ಲ ಮಂತ್ರ ಪಠಣೆ ಇಲ್ಲ , ವಾದ್ಯವಿಲ್ಲ , ಸಂಗೀತವಿಲ್ಲ.. ಮುಖ್ಯವಾಗಿ ಅಗ್ನಿಕುಂಡವಿದೆ ಆದ್ರೆ ಅದರಲ್ಲಿ ಅಗ್ನಿಯಿಲ್ಲ…
ಅನುಮಾನ ಗಾಢವಾಗುತ್ತಿದೆ… ಎಲ್ಲರನ್ನೂ ಒಮ್ಮೆ ಕರೆಯುವಳು … ಗಯ್ಸ್ ಯಾಕೋ ಒಂಥರ ಅನ್ನುಸ್ತಿದೆ… ಹೊರಗೆ ಹೋಗಿ ಸರಿಯಾಗಿ ಮದುವೆ ಸಮಯಕ್ಕೆ ಬರೋಣವಾ ಅಂತ…
ಆದರೆ ವಿಕ್ಕಿ ಬಿಟ್ಟು ಮಿಕ್ಕವರೆಲ್ಲರೂ ಅವಳ ಮಾತಿಗೆ ಊಗುಟ್ಟಿ ಹೊರಟರೆ ಅವನ ಮೇಲೆ ಕೋಪಗೊಂಡು ಹೋಗುವಳು ಸೌಮ್ಯ ಮಿಕ್ಕವರೊಂದಿಗೆ ಹೊರಗೆ..
ಲೇ ಸೌಮ್ಯ ಯಾಕೋ ಎಲ್ಲಾ ವಿಚಿತ್ರ ಅನ್ನಿಸ್ತಿದೆ… ಬಂದಾಗಿಂದ ಒಬ್ಬರೂ ಮಾತನಾಡಿಲ್ಲ ನಮ್ಮ ಜೊತೆಗೆ… ಎಲ್ಲಾ ಸನ್ನಿವೇಶ ಒಂತರ ರಿಪೀಟ್ ರಿಪೀಟ್ ನಡೆಯುತ್ತಿರುವಂತೆ ಅನ್ನಿಸ್ತಿದೆ ನಮ್ಮ ಮುಂದೆ ಎಂದ ಸುಕನ್ಯ ಮಾತಿಗೆ ಎಲ್ಲರೂ ತಲೆಯಾಡಿಸಿ ತಮಗೂ ಇದೇ ಅನುಮಾನವಿರುವ ಬಗ್ಗೆ ಮಾತನಾಡುತ್ತಾ ನಡೆದುಕೊಂಡು ಬಂದವರು ಅದ್ಯಾವಾಗ ಕಾರ್ತಿಕ್ ಮನೆ ಬಳಿ ಹೋದರೋ ಗೊತ್ತೇ ಆಗೋದಿಲ್ಲ…
ಎಲ್ಲರೂ ಕುತೂಹಲದಲ್ಲಿ ಕಾರ್ತಿಕ್ ಮನೆ ಹೇಗಿರಬಹುದೆಂದು ನೋಡಲು ಮನೆ ಒಳಗೆ ಪ್ರವೇಶ ಮಾಡುವರು… ಹೊಸ್ತಿಲು ದಾಟಿದ್ದೇ ತಡ ಎಲ್ಲರ ಎದೆ ಝಲ್ ಎಂದಿತ್ತು…. ಯಾಕಂದ್ರೆ ಇಷ್ಟು ಹೊತ್ತು ಬೆಳಕಿನಿಂದ ಕಂಗೊಳಿಸುತ್ತಿದ್ದ ಮನೆ ಇದ್ದಕ್ಕಿದ್ದ ಹಾಗೆ ಪಾಳು ಬಿದ್ದಂತೆ ಬದಲಾಗಿದೆ… ಜಾಡು ಹಿಡಿದಿದೆ… ಧೂಳು ತುಂಬಿದೆ…
ಸುಟ್ಟು ಕರಕಲಾದಂತೆ , ಬೆಂಕಿಗಾಹುತಿಯಾಗಿ ಸರ್ವನಾಶವಾಗಿರುವಂತೆ… ಆಗಲೇ ಸೌಮ್ಯಳ ಕಾಲಿಗೆ ತಾಕಿದ ಫೋಟೋ ಎತ್ತುನೋಡಿದವಳ ಕೈ ನಡುಗಿತ್ತು… ಎಲ್ಲರ ಪರಿಸ್ಥಿತಿಯೂ ಇದೇ.. ಆ ಫೋಟೋದಲ್ಲಿದ್ದರು ಬೇರೆ ಯಾರೂ ಅಲ್ಲ ಅವರನ್ನ ಇಲ್ಲಿಗೆ ಬಾರದಂತೆ ತಡೆದಿದ್ದ ಆ ತಾತ… ಎಲ್ಲರ ಬೆವರು ಕಿತ್ತು ಬರುತ್ತಿದೆ… ಫೋಟೋ ಮೇಲೆ ಅವರು ಸತ್ತ ಇಸವಿ ಇದೆ… ಮೂರು ವರ್ಷಗಳ ಹಿಂದೆಯೇ ತಾತ ಮೃತಪಟ್ಟಾಗಿದೆ..
ಎಲ್ಲರೂ ಬೆಚ್ಚಿ ಬೀಳುವರು… ಹಾಗಾದರೆ ನಾವು ನೋಡಿದ್ದು ಆತ್ಮವಾ ಎಂದು… ಎಲ್ಲರೂ ಹೆದರುತ್ತಾ , ಇಲ್ಯಾಕೋ ಸರಿ ಕಾಣ್ತಿಲ್ಲ ಇಲ್ಲಿಂದ ಹೊರಟುಬಿಡೋಣ ಅದೇ ಉತ್ತಮ ಎಂದುಕೊಂಡವರ ಮುಂದೆ ಗಾಳಿಯಲ್ಲಿ ಹಾರಿ ಬಂದ ಒಂದು ಪತ್ರ ಸಿಗುತ್ತದೆ… ಅದನ್ನ ಓದಿದಾಗ ಮತ್ತಷ್ಟು ಆಘಾತ…
ಯಾಕಂದ್ರೆ ಅದು ಮದುವೆ ಹೆಣ್ಣು ಸುನಿತಾ ವರ್ಷದ ಹಿಂದೆ ಬರೆದಿದ್ದ ಡೆತ್ ನೋಟ್ ಆಗಿತ್ತು… ಅವಳು ಸೌಮ್ಯಳ ಬಾಯ್ ಫ್ರೆಂಡ್ ಅಂದ್ರೆ ಕಾರ್ತಿಕ್ ಸ್ನೇಹಿತ ವಿಕ್ಕಿಯನ್ನ ಪ್ರೀತಿಸುತ್ತಿದ್ದು ಬೇರೆ ಅವರ ಜೊತೆಗೆ ಮದುವೆಯಾಗೋಕೆ ಇಷ್ಟವಿಲ್ಲ ಎಂದು ಬರೆದಿದ್ದ ಡೆತ್ ನೋಟ್ ಅದಾಗಿತ್ತು…
ವಿಕ್ಕಿ ನನ್ನ ಒಪ್ಪಿಲ್ಲ… ಆ ಸೌಮ್ಯಳನ್ನ ಪ್ರೀತಿಸುತ್ತಿದ್ದಾನೆ.. ನನಗೆ ಇಂದು ಬೇರೆ ಅವರ ಜೊತೆಗೆ ಮದುವೆಯಾಗ್ತಿದೆ… ನನಗೆ ಇದು ಇಷ್ಟವಿಲ್ಲ. ಎಲ್ಲರ ಎದುರೇ ನಾನು ಆತ್ಮಹತ್ಯೆ ಮಾಡಿಕೊಂಡು ನನ್ನ ಪಾವಿತ್ರ್ಯ ಪ್ರೀತಿಗೆ ಸಾಕ್ಷ್ಯ ನೀಡುವೆ ಎಂದಾಗಿತ್ತು. ಇದನ್ನ ನೋಡಿ ಎಲ್ಲರಿಗೂ ತಲೆ ತಿರುಗಿಬಿಟ್ಟಿತ್ತು.
ಆಗಲೇ ಅವರ ಕಣ್ಮುಂದೆ ಬಂದ ದೃಶ್ಯ ಬೆಚ್ಚಿ ಬೀಳಿಸಿತ್ತು ಅವರನ್ನ… ಕಾರಣ ಹಿಂದೇನಾಯ್ತೆಂಬುದನ್ನ ಯಾರೋ ಅವರಿಗೆ ತೋರಿಸುತ್ತಿರುವಂತೆ ಅನಿಸುತ್ತಿದೆ…
( ಮದುವೆ ದಿನ ಇಡೀ ಊರಿಗೆ ಊರೇ ಸಂಭ್ರಮದಂತೆ ಜಾತ್ರೆಯಂತೆ ಕಂಗೊಳಿಸುತಿತ್ತು… ಆ ಊರಿನ ಹಿರಿಯರ ಮಗಳ ಮದುವೆ ಎಂದು… ಆದ್ರೆ ತಾಳಿ ಕಟ್ಟಿಸಿಕೊಳ್ಳುವ ಮೊದಲೇ ಅಗ್ನಿ ಕೊಂಡಕ್ಕೆ ಸೀರೆ ಅಂಟಿಸಿಕೊಂಡವಳು ತನ್ನನ್ನ ಮಾತ್ರವೇ ಅಲ್ಲ ಇಡೀ ಮದುವೆಮನೆಯಲ್ಲಿದ್ದವರನ್ನೆಲ್ಲಾ ಸುಟ್ಟು ಸಾಯುವ ಹಾಗೆ ಮಾಡಿಬಿಟ್ಟಿದ್ದಳು… ಅವಳು ಬೆಂಕಿಗಾಹುತಿಯಾಗುವಾಗ ತಡೆಯಲು ಬಂದವರು ಅವಳೊಂದಿಗೆ ಸುಟ್ಟು ಹೋಗುವಾಗ ಅಲ್ಲೇ ಪಕ್ಕದಲ್ಲೇ ಇದ್ದ ಎಣ್ಣೆ ಚೆಲ್ಲಿ ಬೆಂಕಿ ಹಬ್ಬಿ ಅಲ್ಲಿದ್ದ ಕರ್ಟನ್ ಗಳಿಗೆ ಪಸರಿಸಿ ಅಡುಗೆ ಮನೆವರೆಗೂ ತಲುಪಿ ಗ್ಯಾಸ್ ಬ್ಲಾಸ್ಟ್ ಆಗಿತ್ತು…ಆಗ ಸಮಯ 10.10 ಆಗಿತ್ತು… ಮಕ್ಕಳು ಹಿರಿಯರು , ಯುವಕ ಯುವತಿಯರು ಬೆಂಕಿಯಲ್ಲಿ ಸಜೀವ ದಹನವಾಗಿಬಿಟ್ಟರು…
ಆಗಿನಿಂದ ಇಡೀ ಆತ್ಮಗಳು ಅದೇ ಊರಿನಲ್ಲಿ ಶಾಂತಿ ಸಿಗದೇ ಓಡಾಡುತ್ತಿವೆ… ಉಳಿದ ಒಂದಷ್ಟು ಮಂದಿ ಬೇರೆ ಕಡೆಗಳಿಗೆ ವಲಸೆ ಹೋಗಿದ್ದರು… ಅಪ್ಪಿ ತಪ್ಪಿ ಆ ಊರಿಗೆ ಬಂದವರು ಯಾರೂ ಉಳಿದಿಲ್ಲ.. ) ನೋಡ್ತಾ ನೋಡ್ತಾ ದೃಶ್ಯ ಮಾಯ… ಎಲ್ಲರಿಗೂ ಭಯ…!!!
ಬೆವರುತ್ತ ಪರಸ್ಪರ ಮುಖ ನೋಡಿಕೊಂಡವರು ,, ವಿಕ್ಕಿ … ವಿಕ್ಕಿ ಎಂದು ಮನೆಯಿಂದ ಹೊರಗೆ ಕಾಲಿಟ್ಟರು , ಸೌಮ್ಯ ಏನೋ ಯೋಚನೆ ಮಾಡುತ್ತಾ ,,, ಗಯ್ಸ್ ಎಲ್ಲರೂ ಮೊಬೈಲ್ ಕ್ಯಾಮೆರಾ ಆನ್ ಮಾಡಿ ಎಂದವಳ ಮಾತಿಗೆ ಊಗುಟ್ಟು ಕ್ಯಾಮೆರಾ ಆನ್ ಮಾಡಿ ಕೈ ನಡುಗಿಸುತ್ತಾ ಹಿಡಿದವರ ಜೀವ ಬಾಯಿಗೆ ಬಂದಿತ್ತು…
ಕ್ಯಾಮೆರಾ ಹೊರತಾಗಿ ಕಾಣಿಸುತ್ತಿರುವ ಜನರು ಕ್ಯಾಮೆರಾದಲ್ಲಿ ಕಾಣಿಸುತ್ತಿಲ್ಲ… ಆ ಇಡೀ ಜಾಗವೇ ಸ್ಮಶಾನ… ಪಾಳು ಬಿದ್ದಂತೆ , ಮನೆಗಳೆಲ್ಲಾ ಸುಟ್ಟು ಕರಕಲಾದಂತೆ ಕಾಣುತ್ತಿದೆ…
ಗಾಡಿಗಳೆಲ್ಲಾ ನಾಶವಾಗಿದೆ… ಅಲ್ಲಿದ್ದರು ಯಾರೂ ಕೂಡ ಮನುಷ್ಯರೇ ಅಲ್ಲ…
ಅವರೆಲ್ಲರ ದೇಹಗಳು ಅರೆಬರೆ ಬೆಂದುಹೋಗಿದೆ.. ಮುಖ ಸುಟ್ಟು ಕರಕಲಾಗಿದೆ… ಎಲ್ಲರೂ ಇವರತ್ತಲೇ ಬರುತ್ತಿದ್ದಾರೆ.. ಗುಂಪುಗೂಡಿ… ಭಯದಲ್ಲಿ ಏದುಸಿರು ಬಿಡುತ್ತಿದ್ದವರ ಶಕ್ತಿ ಕುಂದಿದೆ… ಸೌಮ್ಯ ಮೊಬೈಲ್ ನೋಡಲು 10 ಗಂಟೆ ಸಮಯವಾಗಿದೆ…
ಅವಳಿಗೆ ಈಗೊಂದು ವಿಚಾರ ಅರ್ಥವಾಗಿದೆ.. ಧೈರ್ಯ ಮಾಡಿ ಗಯ್ಸ್ ಹೆದರೋಕೆ ಟೈಮ್ ಅಲ್ಲ ಇದು… ನಾವಿಲ್ಲಿಂದ ಓಡಬೇಕು.. ನಮ್ಮ ಹತ್ರ ಇರೋದು ಇನ್ನೂ ಹತ್ತೇ ನಿಮಿಷ ಮಾತ್ರ… ತಡ ಮಾಡೋದು ಬೇಡ ನಾ ಹೇಳಿದ ಹಾಗೆ ಮಾಡುವ ,,, ವಿಕ್ಕಿ ಜೀವ ಅಪಾಯದಲ್ಲಿದೆ ಎಂದವಳ ಮಾತು ಕೇಳಿ ಸಾಂಕೇತ್ ಏನ್ ಮಾಡೋದು ಎಂದಾಗ ಸಾಂಕೇತ್ ವಿಧೂಷ್ ಲೈಟರ್ ತೆಗೀರಿ ಎನ್ನುವಳು ಸೌಮ್ಯ… ಟೈಮ್ ಇಲ್ಲ ನಾ ಹೇಳಿದ್ದು ಮಾಡಿ…
ಅವೆಲ್ಲಾ ಗುಂಪು ಗಟ್ಟಿ ಬರುತ್ತಿರುವಾಗ ಲೈಟರ್ ಹಿಡಿದುಬಿಡುವರು ಎಲ್ಲರೂ ಸೇರಿ … ತಕ್ಷಣ ಹೆದರಿ ಆ ಆತ್ಮಗಳು ಮಾಯವಾಗುತ್ತಿವೆ…
ಪ್ರತ್ಯುಷಾ ಡೀಸೆಲ್ ತೆಗೆದುಕೊಂಡು ಓಡೋಡಿ ಬಂದಳು ಡೀಸೆಲ್ ಕೈಲಿ ಹಿಡಿದು ಕ್ಯಾಪ್ ಕಳಚಿದ ಸೌಮ್ಯ ಕಲ್ಯಾಣ ಮಂಟಪದತ್ತ ಓಡೋಡಿ ಹೋಗ್ತಿದ್ದಾಳೆ… ಇನ್ನು 5 ನಿಮಿಷ ಮಾತ್ರವೇ ಉಳಿದಿದೆ… 10. 10 ಆಗಲಿಕ್ಕೆ…
ಕಲ್ಯಾಣ ಮಂಟಪ ಮುಖ್ಯ ದ್ವಾರ ತಲುಪಿದವರನ್ನ ತಡೆಯಲು ಎಲ್ಲರೂ ಓಡೋಡಿ ಬರುತ್ತಿದ್ದಾರೆ ಅವರತ್ತ… ಮಂಟಪದಲ್ಲಿ ತಾಳಿ ಹಿಡಿದು ವಿಕ್ಕಿ ಕುಳಿತಿದ್ದಾನೆ ಅವನಿಗೋ ಪ್ರಜ್ಞೆಯೇ ಇಲ್ಲ.
ಸುನಿತಾ ಆತ್ಮ ಸಂಪೂರ್ಣ ಸುಟ್ಟು ಕರಕಲಾಗಿದೆ… ಅಲ್ಲೇ ನಿಂತಿರುವ ಕಾರ್ತಿಕ್ ಗಹಗಹಿಸಿ ನಗುತ್ತಾ , ಸುನಿತಾ ಇವತ್ತು ನಿನ್ನ ಪ್ರೀತಿಸಿದವನ ಜೊತೆಗೆ ನಿನ್ನ ಮದ್ವೆ
ಸಂತೋಷನಾ….??? ಅವನು ನಿನಗೆ ತಾಳಿ ಕಟ್ಟಿದಮೇಲೆ ಅವನೂ ಸತ್ತು ನಮ್ಮ ತರ ಆಗುತ್ತಾನೆ… ಆಗಲಾದ್ರೂ ನೀವು ಒಟ್ಟಿಗೆ ಇರಬಹುದು ಎಂದರೆ, ಬಾಗಿಲಲ್ಲೇ ನಿಂತು ಕಿರುಚುವ ಸೌಮ್ಯಳ ಮಾತಿಗೆ ಭಯಾನಕವಾಗಿ ಅವಳನ್ನ ದಿಟ್ಟಿಸುತ್ತಾನೆ ಕಾರ್ತಿಕ್ , ಮತ್ತೆ ಸುನಿತಾ… ಮತ್ತೆಲ್ಲರೂ….
ತಾಳಿ ಕಟ್ಟಲು ಮುಂದಾಗಿರೋ ವಿಕ್ಕಿಯನ್ನ ಎಷ್ಟೇ ಕರೆದ್ರೂ ಕೇಳಿಸಿಕೊಳ್ತಿಲ್ಲ… ಉಳಿದಿರೋದು ಎರೆಡೇ ನಿಮಿಷ… ಹೋ ನೀನು ತಡೀತ್ಯಾ ನನ್ನ ನೀನು… ಹೇಗೆ ಸೌಮ್ಯ ಎಂದು ನಕ್ಕರೆ , ಸೌಮ್ಯ ಮತ್ತೆಲ್ಲರೂ ತಮ್ಮ ಮೊಬೈಲ್ ಗಳಲ್ಲಿ ಜೋರಾಗಿ ಹನುಮಾನ್ ಚಾಲೀಸಾ ಹಾಕಿಬಿಡುವರು….
ಹನುಮಾನ್ ಚಾಲೀಸಾ ಕೇಳಿ ಎಲ್ಲ ಆತ್ಮಗಳು ಕಿರುಚುತ್ತಾ ವಿಚಲಿತವಾಗಿಬಿಡುತ್ತವೆ… ಮಂಟಪದಲ್ಲಿದ್ದ ವಿಕ್ಕಿಗೆ ಪ್ರಜ್ಞೆ ಬಂದು ಸುತ್ತಲಿನ ವಾತಾವರಣ ಕಂಡು ಭಯಭೀತನಾಗಿ ಅಲ್ಲಿಂದ ಎದ್ನೋ ಬಿದ್ನೋ ಓಡೋಡಿ ಬಂದರೆ …. ಕಾರ್ತಿಕ್ ಸುನಿತಾ ಆಕ್ರೋಶದಲ್ಲಿ …. ಕಿರುಚಾಡುತ್ತಾ ಅವರ ಬಳಿ ಬರತೊಡಗಿದರೆ ,, ಸೌಮ್ಯ ಮುಂದೆ ಡೀಸೆಲ್ ಎರಚಾಡಿ ಲೈಟರ್ ನಿಂದ ಬೆಂಕಿ ಹಚ್ಚಿ ಬಿಟ್ಟರೆ ,,, ಎಲ್ಲಾ ಆತ್ಮಗಳು ಬೇಡ ಬೇಡ ,,, ಬೇಡ ಎಂದು ಕಿರುಚಾಡುತ್ತಲೇ ಮಾಯವಾಗಿಬಿಟ್ಟವು….
ಈ ನಾಲ್ವರೂ ಓಡೋಡಿ ಕಾರಿನ ಬಳಿ ಬರುತ್ತಿದ್ದಾರೆ… ರಸ್ತೆಯಲ್ಲಿದ್ದ ಆತ್ಮಗಳೆಲ್ಲವೂ ಮಾಯವಾಗುತ್ತಿವೆ… ಎಲ್ಲರೂ ಕಾರ್ ಏರಿ ಕುಳಿತರೆ… ತಕ್ಷಣವೇ ಸುಕನ್ಯ ಕಾರ್ ಶುರು ಮಾಡಿ ಹೋಗ್ತಿದ್ದಾಳೆ…. ಎಲ್ಲರೂ ಹಿಂದಿಂದೆ ತಿರುಗಿ… ನೋಡ್ತಿದ್ದಾರೆ ಅವರು ಬರುವಾಗಿದ್ದ ಸಂಭ್ರಮದ ವಾತಾವರಣ ವಾಸ್ತವದಲ್ಲಿ ಎಷ್ಟು ಭಯಾನಕ ಅವರಿಗೆ ಅವರಿವಾಗುತ್ತಿದೆ…
ಮುಂದೆ ಬಂದ ಆತ್ಮಗಳಿಗೆ ಗುದ್ದಿಕೊಂಡೇ ಹೆಬ್ಬಾಗಿಲ ದಾಟಿಯೇ ಬಿಟ್ಟವರು ಅಲ್ಲೇ ಮುಂದೆ ಇಂದ ದೇವಸ್ಥಾನದ ಬಳಿ ಕಾರ್ ನಿಲ್ಲಿಸಿ ಹಿಂದೆ ನೋಡಿದವರಿಗೆ ವಾಸ್ತವದ ಪರಿಚಯವಾಗಿತ್ತು…. ಎಲ್ಲರೂ ಏದುಸಿರು ಬಿಡುತ್ತಾ ಸುಧಾರಿಸಿಕೊಳ್ತಿದ್ದಾರೆ,,,ವಿಕ್ಕಿಯನ್ನ ಸೌಮ್ಯ ಅಪ್ಪಿಕೊಂಡಿದ್ದಾಳೆ…
ಅಡವಿಪುರ ಹೊರಗಿನಿಂದ ಅತ್ಯಂತ ಭಯಾನಕವಾಗಿ ಕಾಣುತ್ತಿದೆ… ಎಲ್ಲರೂ ದೇವರಿಗೆ ಕೈ ಮುಗಿದು ಅಲ್ಲಿಂದ ಹೊರಟು ಬಿಡುವರು…
ಹೆಸರು – ನಿಹಾರಿಕಾ ” ನಮ್ಮು”
ಕಥೆಯ ಹೆಸರು – ಅಡವಿಪುರದಲ್ಲೊಂದು ಭಯಾನಕ ಮದುವೆ
ಇದು ಥ್ರಿಲ್ಲಿಂಗ್ ಕಥಾಲೋಕ ಸ್ಪರ್ಧೆಗಾಗಿ ಬರೆದ ಕಥೆಯಾಗಿದೆ..
– ನಿಹಾರಿಕಾ ರಾವ್ –
( ಕಥೆಯ ಲೇಖಕರು )








