ಆರೋಪ ಸಾಬೀತಾದ್ರೆ ರಮೇಶ್ ಜಾರಕಿಹೊಳಿ ಅರೆಸ್ಟ್ ಆಗೋದು ಪಕ್ಕಾ : ಬಿಸಿಪಾ
ಹಾವೇರಿ : ಅವಶ್ಯಕತೆ ಕಂಡುಬಂದ್ರೆ, ತನಿಖೆಯಲ್ಲಿ ರಮೇಶ ಜಾರಕಿಹೊಳಿ ಮೇಲಿನ ಆರೋಪ ಸಾಬೀತಾದ್ರೆ ಖಂಡಿತ ಅರೆಸ್ಟ್ ಮಾಡ್ತಾರೆ ಎಂದು ಸಿಡಿ ಪ್ರಕರಣದ ಬಗ್ಗೆ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಹಿರೇಕೆರೂರು ಪಟ್ಟಣದಲ್ಲಿ ಮಾತನಾಡಿದ ಅವರು, ಮೇಟಿ ಪ್ರಕರಣವನ್ನ ಉಲ್ಲೇಖಿಸಿ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು. ಸಿದ್ದರಾಮಯ್ಯ ಹೇಳಿದ ತಕ್ಷಣ ವೇದಾಂತ ಏನಲ್ಲ. ಹಿಂದೆ ಮೇಟಿಯವರ ಕೇಸ್ ನಲ್ಲಿ ಮಹಿಳೆ ಬಂದು ಹೇಳಿಕೆ ಕೊಟ್ಟಾಗ್ಲೂ ಎಫ್ ಐಆರ್ ಆಗಿರ್ಲಿಲ್ಲ.
ನಮ್ಮ ಸರಕಾರ ಎಸ್ ಐಟಿ ತನಿಖೆಗೆ ಸೂಚನೆ ಕೊಟ್ಟಿದೆ. ಆ ಮೇಲೆ ಸಂತ್ರಸ್ತೆ ಬಂದ್ಮೇಲೆ ಪ್ರಕರಣ ಕೂಡ ದಾಖಲಿಸಿದ್ದಾರೆ. ಅವಶ್ಯಕತೆ ಕಂಡುಬಂದ್ರೆ, ತನಿಖೆಯಲ್ಲಿ ರಮೇಶ ಜಾರಕಿಹೊಳಿ ಮೇಲಿನ ಆರೋಪ ಸಾಬೀತಾದ್ರೆ ಖಂಡಿತ ಅರೆಸ್ಟ್ ಮಾಡ್ತಾರೆ ಎಂದು ಹೇಳಿದರು.
ಇದೇ ವೇಳೆ ಚಿತ್ರರಂಗಕ್ಕೆ ಕೊರೊನಾ ನಿಯಮದಲ್ಲಿ ಸಡಿಲಿಕೆ ಕೊಟ್ಟಿರೋದನ್ನ ಸಮರ್ಥಿಸಿಕೊಂಡ ಸಚಿವರು, ಚಿತ್ರರಂಗಕ್ಕೆ ಅತಿ ಅವಶ್ಯಕ ಇದೆ. ಎಲ್ಲರೂ ಕೂಡ ಮಾಸ್ಕ್ ಧರಿಸಬೇಕು ಅನ್ನೋ ಸೂಚನೆ ಕೊಟ್ಟಿದ್ದಾರೆ. ಕೊರೊನಾ ನಿಯಮ ಕಳೆದ ವರ್ಷದಂತೆ ಜನರು ಈಗ ಪಾಲನೆ ಮಾಡ್ತಿಲ್ಲ.
ಜನರ ಜವಾಬ್ದಾರಿಯೂ ಬಹಳಷ್ಟಿದೆ. ಒಂದು ವಾರದ ಮಟ್ಟಿಗೆ ಸಿನಿಮಾ ಮಂದಿರ ಬಿಟ್ಟಿದ್ದಾರೆ. ಮುಂಜಾಗ್ರತಾ ಕ್ರಮ ಕೈಗೊಂಡು ಮಾಡಬೇಕೆಂದು ಸಿಎಂ ಹೇಳಿರೋದು ಒಳ್ಳೆಯದೆ. ಜನರೂ ಈ ಬಗ್ಗೆ ಜಾಗೃತರಾಗಿರಬೇಕು ಎಂದು ಮನವಿ ಮಾಡಿಕೊಂಡರು.
ವಿಜಯೇಂದ್ರ ದೇವ ಲೋಕದಿಂದ ಬಂದಿದ್ದಾರಾ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಮಾತನಾಡಿ, ವಿಜಯೇಂದ್ರ ರಾಜ್ಯ ಬಿಜೆಪಿಯ ಉಪಾಧ್ಯಕ್ಷರು. ಕಾಮಾಲೆ ಕಣ್ಣಿನವರಿಗೆ ಲೋಕವೆಲ್ಲ ಹಳದಿ ಕಾಣುತ್ತದೆ.
ಹಾಗೆ ಕಾಂಗ್ರೆಸ್ ನವರಿಗೆ ವಿಜಯೇಂದ್ರ ನೋಡಿದಾಕ್ಷಣ ಬೇರೆ ಬೇರೆ ಕಾಣ್ತಿದೆ. ವಿಜಯೇಂದ್ರ ಯುವನಾಯಕರು, ಚಾಣಾಕ್ಷರಿದ್ದಾರೆ. ಮಸ್ಕಿ, ಬಸವಕಲ್ಯಾಣ, ಬೆಳಗಾವಿ ಚುನಾವಣೆಯಲ್ಲೂ ಅವರು ಪ್ರಭಾವವನ್ನ ತೋರಿಸ್ತಾರೆ. ಕ್ಷುಲ್ಲಕ ವಿಚಾರಗಳಿಗೆ ವಿಜಯೇಂದ್ರರನ್ನ ಟೀಕೆ ಮಾಡೋದು ಸರಿಯಲ್ಲ ಎಂದು ಹೇಳಿದರು.










