ರಾಮನಗರ: ರಾಜ್ಯ ರಾಜಕೀಯದಲ್ಲಿ ಸಿಎಂ ಹಾಗೂ ಡಿಸಿಎಂ ಬಣಗಳ ಪ್ರತ್ಯೇಕ ಔತಣಕೂಟಗಳ ಸದ್ದು ಜೋರಾಗಿರುವಾಗಲೇ, ಮಾಗಡಿ ಕಾಂಗ್ರೆಸ್ ಶಾಸಕ ಹೆಚ್.ಸಿ. ಬಾಲಕೃಷ್ಣ ಅವರು ನೀಡಿರುವ ಹೇಳಿಕೆ ಈಗ ಹೊಸ ಸಂಚಲನಕ್ಕೆ ಕಾರಣವಾಗಿದೆ. ಅಧಿಕಾರ ಮತ್ತು ನಾಯಕತ್ವ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ನಡೆ ಹಾಗೂ ಅದೃಷ್ಟದ ಬಗ್ಗೆ ಅವರು ಆಡಿರುವ ಮಾತುಗಳು ಪರೋಕ್ಷವಾಗಿ ಪಕ್ಷದ ವರಿಷ್ಠರಿಗೆ ರವಾನಿಸಿದ ಎಚ್ಚರಿಕೆಯಂತಿದೆ. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧವೂ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಅದೃಷ್ಟ ಹುಡುಕಿಕೊಂಡು ಬಂದಾಗ ಸಂಖ್ಯೆಗಳ ಹಂಗೇಕೆ?
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಬಾಲಕೃಷ್ಣ, ಶಾಸಕ ಇಕ್ಬಾಲ್ ಹುಸೇನ್ ಅವರ ಜನವರಿ 6ರ ಪಟ್ಟಾಭಿಷೇಕ ಹೇಳಿಕೆಗೆ ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು. ಕೇವಲ ಇಕ್ಬಾಲ್ ಹುಸೇನ್ ಅವರ ಸಮಯ ಚೆನ್ನಾಗಿದ್ದರೆ ಸಾಲದು, ಹೈಕಮಾಂಡ್ ಸಮಯವೂ ಚೆನ್ನಾಗಿರಬೇಕು. ಮುಖ್ಯವಾಗಿ, ಅದೃಷ್ಟ ಎನ್ನುವುದು ಹುಡುಕಿಕೊಂಡು ಬಂದಾಗ, ಅದಕ್ಕೆ ಯಾವ ಲಕ್ಕಿ ನಂಬರ್ ಅವಶ್ಯಕತೆಯೂ ಇರುವುದಿಲ್ಲ ಎಂದು ಹೇಳುವ ಮೂಲಕ ನಾಯಕತ್ವದ ವಿಚಾರದಲ್ಲಿ ಜ್ಯೋತಿಷ್ಯ ಅಥವಾ ದಿನಾಂಕಗಳಿಗಿಂತ ರಾಜಕೀಯ ಸನ್ನಿವೇಶ ಮತ್ತು ಅದೃಷ್ಟವೇ ಮುಖ್ಯ ಎಂದು ಪ್ರತಿಪಾದಿಸಿದರು. ಈ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಬಲವಾದ ಚರ್ಚೆಗೆ ಗ್ರಾಸವಾಗಿದೆ.
ಊಟಕ್ಕೆ ಸೇರುವುದಕ್ಕೆ ಬಣಗಳ ಹಣೆಪಟ್ಟಿ ಏಕೆ?
ರಾಜ್ಯದಲ್ಲಿ ನಡೆಯುತ್ತಿರುವ ಡಿನ್ನರ್ ಪಾಲಿಟಿಕ್ಸ್ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಊಟಕ್ಕೆ ಸೇರುವುದಕ್ಕೆ ಯಾವುದೇ ಬಣಗಳಿಲ್ಲ ಎಂದು ಸ್ಪಷ್ಟಪಡಿಸಿದರು. ಸಿಎಂ ಕರೆದಿದ್ದ ಔತಣಕೂಟಕ್ಕೆ ನಮಗೂ ಆಹ್ವಾನವಿತ್ತು. ಸಮಾನ ಮನಸ್ಕರು ಒಂದೆಡೆ ಸೇರಿ ಊಟ ಮಾಡಿದರೆ ಅದರಲ್ಲಿ ಬಣ ರಾಜಕೀಯ ಹುಡುಕುವ ಅಗತ್ಯವಿಲ್ಲ. ಅಧಿವೇಶನದ ಸಮಯದಲ್ಲಿ ಶಾಸಕರು ಊಟಕ್ಕೆ ಸೇರುವುದು ಸಾಮಾನ್ಯ ಪ್ರಕ್ರಿಯೆ. ಆದರೆ ಮಾಧ್ಯಮದವರು ಅದಕ್ಕೆ ಡಿನ್ನರ್ ಮೀಟಿಂಗ್ ಎಂಬ ಹೆಸರು ನೀಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಾಯಕತ್ವ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ಶೀಘ್ರದಲ್ಲೇ ಸೂಕ್ತ ಪರಿಹಾರ ಮತ್ತು ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಡಿಕೆಶಿ ಇಚ್ಛಾಶಕ್ತಿಯಿಂದ ಮಾಗಡಿಗೆ ಹರಿದ ಹೇಮಾವತಿ
ಮಾಗಡಿ ತಾಲೂಕಿನ ನೀರಾವರಿ ಯೋಜನೆಗಳ ಬಗ್ಗೆ ಮಾತನಾಡಿದ ಬಾಲಕೃಷ್ಣ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಕುಮಾರಸ್ವಾಮಿ ಹಾಗೂ ದೇವೇಗೌಡರು ಮಾಗಡಿಗೆ ಹೇಮಾವತಿ ನೀರು ಬರುವುದು ಅಸಾಧ್ಯ, ಇದೊಂದು ಬೋಗಸ್ ಸ್ಕೀಮ್ ಎಂದು ಟೀಕಿಸಿದ್ದರು. ಆದರೆ ಇಂದು ಡಿಕೆಶಿ ಅವರ ಇಚ್ಛಾಶಕ್ತಿಯ ಫಲವಾಗಿ ಶ್ರೀರಂಗ ಏತ ನೀರಾವರಿ ಯೋಜನೆ ಸಾಕಾರಗೊಂಡಿದೆ. ಹೇಮಾವತಿ ನೀರು ಮಾಗಡಿಗೆ ಬಂದಿದ್ದು, ಇದರಿಂದ ತಾಲೂಕಿನ 63 ಕೆರೆಗಳಿಗೆ ಜೀವಕಳೆ ಬರಲಿದೆ. ಶೀಘ್ರದಲ್ಲೇ ಲಿಂಕ್ ಕೆನಾಲ್ ಯೋಜನೆಯೂ ಆರಂಭವಾಗಲಿದ್ದು, ಜೆಡಿಎಸ್ ನಾಯಕರ ಟೀಕೆಗಳಿಗೆ ಅಭಿವೃದ್ಧಿಯ ಮೂಲಕ ಉತ್ತರ ನೀಡಿದ್ದೇವೆ. ಜನ ಇನ್ನೂ ದೇವೇಗೌಡರು ಮತ್ತು ಕುಮಾರಸ್ವಾಮಿಯವರನ್ನೇ ನಂಬಿಕೊಂಡು ಕುಳಿತರೆ ಪ್ರಯೋಜನವಿಲ್ಲ ಎಂದು ಹೇಳಿದರು.
ಕುಮಾರಸ್ವಾಮಿ ಡವ್ ರಾಜಕಾರಣ ಮಾಡುವುದನ್ನು ಬಿಡಲಿ
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಹರಿಹಾಯ್ದ ಬಾಲಕೃಷ್ಣ, ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ 100 ಎಕರೆ ಜಾಗ ನೀಡುವಂತೆ ಕುಮಾರಸ್ವಾಮಿ ಕೇಳಿರುವ ವಿಚಾರವನ್ನು ಪ್ರಸ್ತಾಪಿಸಿ ಲೇವಡಿ ಮಾಡಿದರು. ಮಂಡ್ಯ ಜನರ ಋಣ ತೀರಿಸಬೇಕೆಂಬ ಕಾಳಜಿ ಇದ್ದರೆ, ಕುಮಾರಸ್ವಾಮಿ ಅವರು ಸರ್ಕಾರದ ಬಳಿ ಜಾಗ ಕೇಳುವ ಬದಲು ತಮ್ಮ ಸ್ವಂತ ಹಣದಲ್ಲೇ 100 ಎಕರೆ ಜಮೀನು ಖರೀದಿಸಲಿ. ಅವರಿಗೆ ಆ ಶಕ್ತಿ ಇದೆ. ಇಲ್ಲದಿದ್ದರೆ ನಾವೇ ರೈತರ ಬಳಿ ಭಿಕ್ಷೆ ಬೇಡಿಯಾದರೂ ಹಣ ಕೊಡುತ್ತೇವೆ. ಸುಮ್ಮನೆ ಡವ್ ರಾಜಕಾರಣ ಮತ್ತು ಸುಳ್ಳು ಹೇಳುವುದನ್ನು ಕುಮಾರಸ್ವಾಮಿ ಬಿಡಬೇಕು ಎಂದು ಕಿಡಿಕಾರಿದರು.
ಕಣ್ಣೀರು ಸುರಿಸುವವರಿಂದ ಅಭಿವೃದ್ಧಿ ಅಸಾಧ್ಯ
ರಾಮನಗರದ ಅಭಿವೃದ್ಧಿ ವಿಚಾರದಲ್ಲಿ ಕುಮಾರಸ್ವಾಮಿ ಅವರ ಕೊಡುಗೆ ಶೂನ್ಯ ಎಂದು ಬಾಲಕೃಷ್ಣ ಆರೋಪಿಸಿದರು. ಇಷ್ಟು ವರ್ಷ ರಾಮನಗರವನ್ನು ಪ್ರತಿನಿಧಿಸಿದರೂ ಕುಮಾರಸ್ವಾಮಿ ಏನೂ ಕೆಲಸ ಮಾಡಿಲ್ಲ. ಕೇವಲ ಬುರುಡೆ ಬಿಡುವುದು ಮತ್ತು ಕಣ್ಣೀರು ಹಾಕುವುದರಿಂದ ಅಭಿವೃದ್ಧಿ ಆಗುವುದಿಲ್ಲ. ನಮ್ಮ ಜಿಲ್ಲೆ ಇಂದು ಅಭಿವೃದ್ಧಿಯಲ್ಲಿ ಹಿಂದುಳಿದು ಅದೋಗತಿಗೆ ಹೋಗಲು ಕುಮಾರಸ್ವಾಮಿಯವರೇ ನೇರ ಕಾರಣ. ಬೋಗಸ್ ಎಂದು ಅವರು ಕರೆದ ಯೋಜನೆಯಿಂದಲೇ ಇಂದು ನೀರು ಬರುತ್ತಿದೆ. ಕೆಲಸ ಮಾಡುವ ಇಚ್ಛಾಶಕ್ತಿ ಇಲ್ಲದವರಿಂದ ಜನ ಪಾಠ ಕಲಿಯಬೇಕಿದೆ ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.








