ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸಚಿವರ ತರಾಟೆ
ಬೆಂಗಳೂರು : ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಮಾರುತಿಮಂದಿರ ವಾರ್ಡಿನಲ್ಲಿ ಸಚಿವ ವಿ.ಸೋಮಣ್ಣ ರವರು ಅಮೃತ್ ನಗರೋತ್ಥಾನ ಕಾಮಗಾರಿಗಳ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದ್ರು.
ವಿನಾಯಕ ಬಡಾವಣೆ ಪಾರ್ಕ್ ಹತ್ತಿರ ಡಾಂಬರೀಕರಣ ಮತ್ತು ಚರಂಡಿ ಅಭಿವೃದ್ಧಿ, ಜಿಕೆಡಬ್ಲ್ಯೂ ಬಡಾವಣೆ ಬಸ್ ನಿಲ್ದಾಣದ ಬಳಿ ಬೃಹತ್ ರಸ್ತೆ ಕಾಮಗಾರಿ, ಪ್ರಿಯದರ್ಶಿನಿ ಬಡಾವಣೆಯಲ್ಲಿ ಡಾಂಬರೀಕರಣ ಮತ್ತು ಚರಂಡಿಗಳ ಅಭಿವೃದ್ಧಿ, ಅನುಭವನಗರದ 8ನೇ ಅಡ್ಡರಸ್ತೆಯಲ್ಲಿ ಡಾಂಬರೀಕರಣ ಮತ್ತು ಚರಂಡಿಗಳ ಅಭಿವೃದ್ಧಿ, ಕೆನರಾ ಬ್ಯಾಂಕ್ ಕಾಲೋನಿ ವಿಲೇಜ್ ನಲ್ಲಿರುವ ಸೂಪರ್ ಮಾರ್ಕೆಟ್ ಹಿಂಭಾಗದ ರಸ್ತೆಯಲ್ಲಿ ಎಸ್ ಡಬ್ಲ್ಯೂಡಿ ಕಾಮಗಾರಿ ಹಾಗೂ ಬೃಹತ್ ನೀರುಗಾಲುವೆ, ಕೆನರಾ ಬ್ಯಾಂಕ್ ಕಾಲೋನಿ ಗಣೇಶ ದೇವಸ್ಥಾನದ ಮುಂಭಾಗದಲ್ಲಿ ಎಲ್ ಇಡಿ ಲೈಟ್ಸ್ ಅಳವಡಿಕೆ ಕಾಮಗಾರಿ ಹಾಗೂ ಸ್ಮಾರ್ಟ್ ಕಂಟ್ರೋಲರ್ಗೆ ಚಾಲನೆ ನೀಡಲಾಯಿತು.
ಇದೇ ವೇಳೆ ಸ್ಥಳ ಪರಿವೀಕ್ಷಣೆ ನಡೆಸಿದ ಸಚಿವರು ವಿನಾಯಕ ಬಡಾವಣೆಯ ವಿನಾಯಕ ಉದ್ಯಾನವನದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡದ ಹಿನ್ನೆಲೆ ಗುತ್ತಿಗೆದಾರ ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಅನುಭವನಗರದಲ್ಲಿ ಸಾರ್ವಜನಿಕರ ಕುಂದುಕೊರತೆ ಪರಿಹರಿಸದ ಹಿನ್ನೆಲೆ BWSSB ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪ್ರಿಯದರ್ಶಿನಿ ಬಡಾವಣೆಯಲ್ಲಿ ಸ್ಥಳೀಯರ ಕುಂದುಕೊರತೆಗಳನ್ನು ಆಲಿಸಿ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಶೀಘ್ರವೇ ಎರಡು ನೂತನ ಬೋರ್ ವೆಲ್ ಗಳನ್ನು ಹಾಕಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ರು.
ಚರಂಡಿ ಸಮಸ್ಯೆ ಪರಿಹರಿಸುವ ನಿಟಿನಲ್ಲಿ ತಕ್ಷಣವೇ ಕಾಮಗಾರಿ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.