ಹಾಸನ: ಕೋರ್ಟ್ ನಲ್ಲಿ ಸಾಕ್ಷಿ ಹೇಳಲು ಮುಂದಾಗಿದ್ದ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ಅರಸೀಕೆರೆ (Arsikere) ತಾಲೂಕಿನ ತೂಬಿನಕೆರೆ ಬೋವಿ ಕಾಲೋನಿ ನಿವಾಸಿ ಜಯಪ್ಪ(34) ಕೊಲೆಯಾದ ದುರ್ದೈವಿ. ಕಾಳೆನಹಳ್ಳಿ ಹಟ್ಟಿಯ ಅಣ್ಣಯ್ಯ(24) ಆರೋಪಿ ಎನ್ನಲಾಗಿದೆ. ಸದ್ಯ ಪ್ರಕರಣದ ಆರೋಪಿಯನ್ನು ಗ್ರಾಮಾಂತರ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ.
2021ರಲ್ಲಿ ಅಪ್ರಾಪ್ತ ಬಾಲಕಿ ಅಪಹರಿಸಿದ ಪ್ರಕರಣದಲ್ಲಿ ಅಣ್ಣಯ್ಯ ಜೈಲು ಸೇರಿದ್ದ. 2022ರಲ್ಲಿ ಆರೋಪಿ ಬೇಲ್ ಮೇಲೆ ಹೊರಗೆ ಬಂದಿದ್ದ. ಈ ಪ್ರಕರಣದಲ್ಲಿ ಜಯಪ್ಪ ಪ್ರಮುಖ ಸಾಕ್ಷಿಯಾಗಿದ್ದರು. ಜಯಪ್ಪ ಸಾಕ್ಷಿ ಹೇಳಿದರೆ ಕಠಿಣ ಶಿಕ್ಷೆಯಾಗುವ ಭೀತಿಯಲ್ಲಿ ಅಣ್ಣಯ್ಯ ಇದ್ದ. ಹೀಗಾಗಿ ರಾಜಿಯಾಗುವಂತೆ ಆರೋಪಿಯು ಕೇಳಿದ್ದಾನೆ.
ಒಪ್ಪದಿದ್ದಾಗ ಜಯಪ್ಪನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಇತ್ತ ಕಾಣೆಯಾದ ಮಗನ ಕುರಿತು ತಾಯಿ ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರಿಗೆ ಬುಸ್ತೇನಹಳ್ಳಿಯ ರೈಲ್ವೆ ಟ್ರ್ಯಾಕ್ ಹತ್ತಿರ ಜಯಪ್ಪನ ಮೃತ ದೇಹ ಪತ್ತೆಯಾಗಿತ್ತು. ತನಿಖೆ ಕೈಗೊಂಡಾಗ ಸತ್ಯ ಬಯಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.