ಕಲಬುರಗಿ: ಸಂಸದ ಉಮೇಶ್ ಜಾಧವ ಬೆಂಬಲಿಗರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಜಿಲ್ಲೆಯ ಅಪಜಲಪುರ ತಾಲೂಕಿನ ಸಾಗನೂರು ಗ್ರಾಮದ ಜಮೀನೊಂದರಲ್ಲಿ ಈ ಘಟನೆ ನಡೆದಿದೆ. ಕಣ್ಣಿಗೆ ಖಾರದ ಪುಡಿ ಎರಚಿ ನಂತರ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಹಿರಿಯ ಬಿಜೆಪಿ ಮುಖಂಡ ಮಹಾಂತಪ್ಪಾ ಆಲೂರೆ ಅವರ ಬರ್ಬರ ಹತ್ಯೆಯ ಬೆನ್ನಲ್ಲಿಯೇ ಮತ್ತೊಬ್ಬ ಬಿಜೆಪಿ ಮುಖಂಡ ಕೊಲೆಯಾಗಿರುವುದಕ್ಕೆ ಆತಂಕ ಮನೆ ಮಾಡುತ್ತಿದೆ.
ಗಿರೀಶ್ ಚಕ್ರ ಹತ್ಯೆಯಾಗಿರುವ ಬಿಜೆಪಿ ಮುಖಂಡ. ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಕಲಬುರಗಿ ಬಿ.ಎಸ್ ಎನ್ ಎಲ್ ಸಲಹಾ ಸಮಿತಿಗೆ ನಿರ್ದೇಶಕರನ್ನಾಗಿ ಇವರನ್ನು ಸಂಸದ ಜಾಧವ್ ಆಯ್ಕೆ ಮಾಡಿದ್ದರು. ಸಲಹಾ ಸಮಿತಿ ನಿರ್ದೇಶಕರಾಗಿ ನೇಮಕ ಹೊಂದಿದ ಹಿನ್ನೆಲೆಯಲ್ಲಿ ಪಾರ್ಟಿ ಕೊಡುವುದಾಗಿ ಜಮೀನಿಗೆ ಕರೆಯಿಸಿ ಸ್ನೇಹಿತರೇ ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸಾಗನೂರ ಗ್ರಾಮದ ಸಚಿನ್ ಮತ್ತು ಆತನ ಗ್ಯಾಂಗ್ ನಿಂದ ಈ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.