ಧಾರವಾಡ : ಬೆಂಗಳೂರಿನ ಕೆಜೆ ಹಳ್ಳಿ ಹಾಗೂ ಡಿಜೆ ಹಳ್ಳಿಯಲ್ಲಿ ನಡೆದ ಘಟನೆಯನ್ನು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಖಂಡಿಸಿದ್ದು, ಘಟನೆ ಹಿಂದೆ ನಿಶ್ಚಿತವಾಗಿ ದೊಡ್ಡ ವ್ಯಕ್ತಿಗಳ ಕೈವಾಡ ಇದ್ದೇ ಇರುತ್ತೆ ಎಂದು ಆರೋಪಿಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುತಾಲಿಕ್, ಇದು ಮೊದಲ ಬಾರಿ ಅಲ್ಲ, ಇದು ಕಾಂಗ್ರೆಸ್ಸಿನವರು ಮುಸ್ಲಿಮರನ್ನು ತಲೆ ಮೇಲೆ ಕುರಿಸಿಕೊಂಡಿದ್ದಕ್ಕೆ ಆಗಿದ್ದು ಎಂದು ಆಕ್ರೋಶ ಹೊರಹಾಕಿದರು.
ಈ ಘಟನೆಗೆ ಸಂಬಂಧಿಸಿ ಸೈಬರ್ ಕ್ರೈಂಗೆ ದೂರನ್ನು ಕೊಡಬಹುದಿತ್ತು. ಶಾಸಕರ ಮನೆ ಪೊಲೀಸ್ ಠಾಣೆಯನ್ನು ಸುಡ್ತಿರಲ್ಲ, ಇಲ್ಲಿ ಸಂವಿಧಾನ ಯಾಕೆ ಬೇಕು. ಇದು ತಾಲಿಬಾನಾನಾ ಅಥವಾ ಪಾಕಿಸ್ತಾನನಾ ಎಂದು ಪ್ರಶ್ನಿಸಿದ ಮುತಾಲಿಕ್, ಸಂವಿಧಾನ ಪ್ರಕಾರ ಹಾಗೂ ಕಾನೂನು ಪ್ರಕಾರ ನಡೆಯಬೇಕು ಎಂದು ಸಾಮಾನ್ಯ ಜ್ಞಾನ ಇಲ್ಲವಾ ನಿಮಗೆ ಎಂದು ಕಿಡಿಕಾರಿದರು.
ಈ ಪ್ರಕರಣವನ್ನು ಬಿಜೆಪಿ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಇಲ್ಲದೇ ಹೋದರೆ ಮುಂದೆ ನಿಮ್ಮ ಮನೆಗೆ ಕೂಡಾ ಬೆಂಕಿ ಬೀಳುತ್ತೆ ಎಂದು ಮುತಾಲಿಕ್ ಎಚ್ಚರಿಕೆ ನೀಡಿದರು. ಇದು ಪೂರ್ವ ಯೋಜಿತ ಘಟನೆ, ಇದರ ಹಿಂದೆ ನಿಶ್ಚಿತವಾಗಿ ದೊಡ್ಡ ವ್ಯಕ್ತಿಗಳ ಕೈವಾಡ ಇದ್ದೇ ಇರುತ್ತೆ. ಈ ಹಿಂದೆ ನಮ್ಮ ದೇವರನ್ನು ಅವಹೇಳನ ಮಾಡಿದ್ದಾರೆ. ನಾವು ಅದನ್ನೇ ಮಾಡಬಹುದಲ್ಲ. ಸರ್ಕಾರ ಇವರನ್ನು ಒದ್ದು ಒಳಗೆ ಹಾಕಬೇಕು. ಹೊರಗೆ ಬರದಂತೆ ಮಾಡಬೇಕು ಎಂದು ಆಗ್ರಹಿಸಿದರು.








