ಬಿಜೆಪಿಯೇ ಒಂದು ಭ್ರಷ್ಟ ಪಕ್ಷ : ಸಿದ್ದರಾಮಯ್ಯ
ಬೆಂಗಳೂರು : ಬಿಜೆಪಿಯೇ ಒಂದು ಭ್ರಷ್ಟ ಪಕ್ಷ, ಅದರಲ್ಲಿರುವ ಸಚಿವರುಗಳೂ ಭ್ರಷ್ಟರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಕೇಂದ್ರ ಸರ್ಕಾರ ವಿರೋಧ ಪಕ್ಷಗಳ ಮೇಲೆ ಗೂಢಚಾರ ನಡೆಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಇಂದು ವಿಧಾನಸೌಧದಿಂದ ರಾಜಭವನಕ್ಕೆ ರಾಜಭವನ ಚಲೋ ನಡೆಸಿದ್ದರು.
ಅದಕ್ಕೂ ಮುನ್ನ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಧರಣಿ ನಡೆಸಿದರು.
ಈ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ಅವರು, ಬಿ.ಎಸ್.ಯಡಿಯೂರಪ್ಪನವರು ಕರ್ನಾಟಕದಲ್ಲಿ ಕೆಟ್ಟ ಸರ್ಕಾರವನ್ನು ಕೊಟ್ಟಿದ್ದಾರೆ, ಅಭಿವೃದ್ಧಿಪರ ಇಲ್ಲದಿರುವ ಭ್ರಷ್ಟಾತಾರದಲ್ಲಿ ಕೂಡಿರುವ ಅದಕ್ಷ ಸರ್ಕಾರವನ್ನು ಕರ್ನಾಟಕದಲ್ಲಿ ನೀಡಿದರು.
ಹೀಗಾಗಿ ಸಿಎಂ ಸ್ಥಾನದಿಂದ ಯಡಿಯೂರಪ್ಪನವರು ಕೆಳಗಿಳಿದರೆ ಏನೂ ನಷ್ಟವಿಲ್ಲ. ಯಡಿಯೂರಪ್ಪನವರೇ ಭ್ರಷ್ಟ, ಅವರ ಮಗನೂ ಭ್ರಷ್ಟ, ಹಾಗಾಗಿ ಅವರು ಸಿಎಂ ಹುದ್ದೆಯಿಂದ ಕೆಳಗಿಳಿದರೆ ಬಹಳ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.
ಇನ್ನು ಯಡಿಯೂರಪ್ಪನವರನ್ನು ತೆಗೆಯುವುದರಿಂದ ಬಿಜೆಪಿಯಲ್ಲಿ ಮತ್ತೊಬ್ಬ ಪ್ರಾಮಾಣಿಕ ಮುಖ್ಯಮಂತ್ರಿ ಬರುತ್ತಾರೆ ಎಂದು ನಾನು ಅಂದುಕೊಂಡಿಲ್ಲ. ಬಿಜೆಪಿಯೇ ಒಂದು ಭ್ರಷ್ಟ ಪಕ್ಷ, ಅದರಲ್ಲಿರುವ ಸಚಿವರುಗಳೂ ಭ್ರಷ್ಟರು ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.









