ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿಯೇತರ ಸರ್ಕಾರ ಆಡಳಿತದಲ್ಲಿದೆ ಎಂಬ ಒಂದೇ ಒಂದು ಕಾರಣಕ್ಕಾಗಿ ಕಳೆದ ಎರಡೂವರೆ ವರ್ಷಗಳಿಂದ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಾಜ್ಯದ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದೆ. ಇತ್ತ ರಾಜ್ಯದ ಪರವಾಗಿ ಧ್ವನಿ ಎತ್ತಬೇಕಾದ ಬಿಜೆಪಿ ಸಂಸದರು ಮತ್ತು ಕೇಂದ್ರ ಸಚಿವರು ಪ್ರಧಾನಿ ಎದುರು ಕೈಕಟ್ಟಿ, ಬಾಯಿಮುಚ್ಚಿ ನಿಲ್ಲುವ ಮೂಲಕ ಕನ್ನಡಿಗರ ಸ್ವಾಭಿಮಾನವನ್ನು ಅಡವಿಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿಶೇಷವಾಗಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ನಡೆಯನ್ನು ಕಟುವಾದ ಶಬ್ದಗಳಲ್ಲಿ ಟೀಕಿಸಿರುವ ಮುಖ್ಯಮಂತ್ರಿಗಳು, ಕೇವಲ ಒಂದು ಸಚಿವ ಸ್ಥಾನ ಉಳಿಸಿಕೊಳ್ಳಲು ರಾಜ್ಯದ ಹಿತಾಸಕ್ತಿಯನ್ನು ಬಲಿಕೊಡಬೇಕೇ ಎಂದು ಪ್ರಶ್ನಿಸುವ ಮೂಲಕ ಮೈತ್ರಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸುದೀರ್ಘ ಅನಿಸಿಕೆ ಹಂಚಿಕೊಂಡಿರುವ ಮುಖ್ಯಮಂತ್ರಿಗಳು, ಕೇಂದ್ರ ಸರ್ಕಾರ ಮತ್ತು ರಾಜ್ಯದ ಬಿಜೆಪಿ-ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.
ಕೇಂದ್ರದಿಂದ ಪ್ರತೀಕಾರದ ರಾಜಕಾರಣ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕನ್ನಡಿಗರು ಹಗಲಿರುಳು ಕಷ್ಟಪಟ್ಟು ದುಡಿದು ಕಟ್ಟುವ ತೆರಿಗೆಯ ಹಣದಲ್ಲಿ ರಾಜ್ಯಕ್ಕೆ ಸಿಗಬೇಕಾದ ನ್ಯಾಯಯುತ ಪಾಲನ್ನು ನೀಡದೆ ವಂಚಿಸಲಾಗುತ್ತಿದೆ. ಬರಪರಿಹಾರ ವಿತರಣೆಯಿಂದ ಹಿಡಿದು ಜಿಎಸ್ಟಿ ಪಾಲಿನವರೆಗೆ ಪ್ರತಿಯೊಂದಕ್ಕೂ ರಾಜ್ಯ ಸರ್ಕಾರ ಹೋರಾಟ ಮಾಡಬೇಕಾದ ಪರಿಸ್ಥಿತಿಯನ್ನು ಕೇಂದ್ರ ನಿರ್ಮಿಸಿದೆ. ನೀರಾವರಿ, ರೈಲ್ವೆ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ರಾಜ್ಯದ ಮಹತ್ವದ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯವಾದ ಅನುದಾನವನ್ನಾಗಲೀ ಅಥವಾ ಆಡಳಿತಾತ್ಮಕ ಅನುಮತಿಯನ್ನಾಗಲೀ ನೀಡದೆ ಸತಾಯಿಸಲಾಗುತ್ತಿದೆ. ಇದು ಒಕ್ಕೂಟ ವ್ಯವಸ್ಥೆಗೆ ಎಸಗುತ್ತಿರುವ ದ್ರೋಹ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೆಪಿ ನಡ್ಡಾ ಬೆದರಿಕೆ ನಿಜವಾಯಿತೇ?
ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು, ಕರ್ನಾಟಕದಲ್ಲಿ ಬಿಜೆಪಿಗೆ ಮತ ಹಾಕದಿದ್ದರೆ ಪ್ರಧಾನಿ ಮೋದಿಯವರ ಆಶೀರ್ವಾದದಿಂದ ರಾಜ್ಯದ ಜನತೆ ವಂಚಿತರಾಗಬೇಕಾಗುತ್ತದೆ ಎಂದು ಬಹಿರಂಗವಾಗಿ ಬೆದರಿಕೆ ಹಾಕಿದ್ದರು. ಇಂದಿನ ವಿದ್ಯಮಾನಗಳನ್ನು ಗಮನಿಸಿದರೆ, ಕೇಂದ್ರ ಸರ್ಕಾರವು ನಡ್ಡಾ ಅವರ ಆ ಬೆದರಿಕೆಯನ್ನು ಅಕ್ಷರಶಃ ಜಾರಿಗೆ ತಂದಂತೆ ಕಾಣುತ್ತಿದೆ. ರಾಜಕೀಯ ದ್ವೇಷಕ್ಕಾಗಿ ಆರೂವರೆ ಕೋಟಿ ಕನ್ನಡಿಗರ ಅಭಿವೃದ್ಧಿಯನ್ನು ಬಲಿಕೊಡುವುದು ಎಷ್ಟು ಸರಿ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮೋದಿ ಎದುರು ಕೈಕಾಲು ನಡುಗುವ ಸಂಸದರು
ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ಮತ್ತು ಸಚಿವರ ವಿರುದ್ಧ ವ್ಯಂಗ್ಯದ ಬಾಣ ಬಿಟ್ಟಿರುವ ಸಿದ್ದರಾಮಯ್ಯ, ರಾಜ್ಯದ ಬಿಜೆಪಿ ನಾಯಕರಿಗೆ ಮೈಕ್ ಮುಂದೆ ನಿಂತು ದ್ವೇಷದ ಭಾಷಣ ಮಾಡಲು ಇರುವ ಧೈರ್ಯ, ರಾಜ್ಯದ ಹಕ್ಕನ್ನು ಕೇಳಲು ಪ್ರಧಾನಿ ಮೋದಿ ಎದುರು ನಿಂತಾಗ ಇರುವುದಿಲ್ಲ. ಮೋದಿ ಎದುರು ಹೋದಾಗ ಇವರ ಕೈಕಾಲು ನಡುಗಲಾರಂಭಿಸುತ್ತದೆ. ಪ್ರಧಾನಿಗಳ ಎದುರು ರಾಜ್ಯದ ಅನ್ಯಾಯದ ವಿರುದ್ಧ ಸೊಲ್ಲೆತ್ತುವ ಧೈರ್ಯವನ್ನೇ ಕಳೆದುಕೊಂಡಿರುವ ಇವರು, ಕೇವಲ ತಮ್ಮ ಕುರ್ಚಿ ಭದ್ರಪಡಿಸಿಕೊಳ್ಳಲು ಮೌನಕ್ಕೆ ಶರಣಾಗಿದ್ದಾರೆ ಎಂದು ಟೀಕಿಸಿದ್ದಾರೆ.
ತಮ್ಮ ಪೋಸ್ಟ್ನಲ್ಲಿ ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಿಎಂ ವಾಗ್ದಾಳಿ ನಡೆಸಿದ್ದಾರೆ. ಪ್ರಾದೇಶಿಕ ಪಕ್ಷದ ನಾಯಕರಾಗಿ, ಈ ಮಣ್ಣಿನ ಮಗ ಎಂದು ಕರೆದುಕೊಳ್ಳುವ ಕುಮಾರಸ್ವಾಮಿ ಅವರು ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಸಿಡಿದೇಳಬೇಕಿತ್ತು. ಆದರೆ, ಅವರು ಕೇವಲ ಒಂದು ಸಚಿವ ಸ್ಥಾನಕ್ಕಾಗಿ ಕೇಂದ್ರ ಸರ್ಕಾರದ ಅಡಿಯಾಳಿನಂತೆ ವರ್ತಿಸುತ್ತಿದ್ದಾರೆ. ಸ್ವಾಭಿಮಾನವನ್ನು ಬದಿಗೊತ್ತಿ, ಇಷ್ಟೊಂದು ನಡುಬಗ್ಗಿಸಿ ನಿಲ್ಲುವ ಅವಶ್ಯಕತೆ ಏನಿತ್ತು? ಕುಮಾರಸ್ವಾಮಿ ಅವರ ಈ ನಡೆ ಅಸಹ್ಯ ಹುಟ್ಟಿಸುವಂತಿದೆ ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.
ಇದು ಕೇವಲ ನನ್ನ ಪ್ರಶ್ನೆಯಲ್ಲ, ಕೇಂದ್ರದ ತಾರತಮ್ಯದಿಂದ ನೊಂದಿರುವ ಸಮಸ್ತ ಕನ್ನಡಿಗರ ಪ್ರಶ್ನೆಯಾಗಿದೆ. ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ವಿಫಲರಾಗಿರುವ ಕೇಂದ್ರ ಸಚಿವರು ಮತ್ತು ಸಂಸದರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮುಖ್ಯಮಂತ್ರಿಗಳು ಎಚ್ಚರಿಸಿದ್ದಾರೆ.








