ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಿದ್ದ ದಿನ ವಿಜಯೋತ್ಸವ ಆಚರಿಸಿದವರ ಮೇಲೆ ನಡೆದಿದ್ದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಶಾಕೀರ್, ಅಬ್ದುಲ್ ರಜಾಕ್, ಅಬೂಬಕ್ಕರ್ ಸಿದ್ದಿಕ್, ಸವಾದ್ ಹಾಗೂ ಹಫೀಝ್ ಎಂದು ಗುರುತಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರದ ಹಿನ್ನಲೆಯಲ್ಲಿ ಇಡೀ ದೇಶದಲ್ಲೇ ಸಂಭ್ರಮ ಮನೆ ಮಾಡಿತ್ತು. ಈ ವೇಳೆ ಮಂಗಳೂರಿನ ಹೊರವಲಯದ ಉಳ್ಳಾಲ ತಾಲೂಕಿನ ಬೋಳಿಯಾರ್ ನಲ್ಲಿ (Boliyar) ಬಿಜೆಪಿ (BJP) ಕಾರ್ಯಕರ್ತರು ವಿಜಯೋತ್ಸವ ನಡೆಸಿದ್ದರು.
ಆಗ ಬೋಳಿಯಾರ್ ಮಸೀದಿಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿತ್ತು ಎನ್ನಲಾಗಿದೆ. ಆಗ ಮೂವರು ಬಿಜೆಪಿ ಕಾರ್ಯಕರ್ತರು ಬೈಕ್ ನಲ್ಲಿ ತೆರಳುತ್ತಾ `ಬೋಲೋ ಭಾರತ್ ಮಾತಾಕೀ ಜೈ’ ಎಂದು ಘೋಷಣೆ ಕೂಗಿದ್ದರು. ತಕ್ಷಣ ಅಲ್ಲಿದ್ದ ಸುಮಾರು 20ರಿಂದ 25 ಯುವಕರು ಬೈಕ್ ಹಿಂಬಾಲಿಸಿಕೊಂಡು ಮೂವರನ್ನು ತಡೆದು ಓರ್ವನಿಗೆ ಹಿಗ್ಗಾಮುಗ್ಗ ಥಳಿಸಿ ಇಬ್ಬರಿಗೆ ಚೂರಿ ಇರಿದಿದ್ದರು. ಕೃಷ್ಣಕುಮಾರ್ ಎಂಬಾತನ ಮೇಲೆ ಹಲ್ಲೆ ನಡೆಸಲಾಗಿತ್ತು. ಘಟನೆಯಲ್ಲಿ ಗಾಯಗೊಂಡಿರುವ ಹರೀಶ್ ಹಾಗೂ ನಂದಕುಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈಗ ವಿಜಯೋತ್ಸವದ ನಡೆಸಿದ್ದ ಬಿಜೆಪಿ ಕಾರ್ಯಕರ್ತರ ಮೇಲೂ ಕೋಣಾಜೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ವಿಜಯೋತ್ಸವದ ವೇಳೆ ಬಿಜೆಪಿ ಕಾರ್ಯಕರ್ತರು ಮಸೀದಿ ಮುಂದೆ ನಿಂತಿದ್ದವರಿಗೆ ಕೆಟ್ಟ ಶಬ್ದಗಳಿಂದ ನಿಂದಿಸಿ, ಪ್ರಚೋದನಾಕಾರಿ ಘೋಷಣೆ ಕೂಗಿದ್ದಾರೆಂದು ಮಸೀದಿ ಆಡಳಿತ ಮಂಡಳಿಯ ಅಧ್ಯಕ್ಷ ಪಿ.ಕೆ.ಅಬ್ದುಲ್ ನೀಡಿದ್ದಾರೆ. ಈ ದೂರಿನಡಿ ಸುರೇಶ್, ವಿನಯ್, ಸುಭಾಷ್, ರಂಜಿತ್ ಹಾಗೂ ಧನಂಜಯ್ ವಿರುದ್ಧ ಪ್ರಕರಣ ದಾಖಲಾಗಿದೆ.