ಪಾಷಾಣವಾಯ್ತು ಕಲ್ಲಂಗಡಿ | ಹೈದರಾಬಾದ್ ನಲ್ಲಿ ಇಬ್ಬರು ಸಾವು
ಹೈದರಾಬಾದ್ : ಕಲ್ಲಂಗಡಿ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಅಂತ ವೈದ್ಯರೇ ಹೇಳುತ್ತಾರೆ. ಆದ್ರೆ ಹೈದರಾಬಾದಿನಲ್ಲಿ ಕಲ್ಲಂಗಡಿ ತಿಂದು ಬಾಲಕರಿಬ್ಬರು ಕೊನೆಯುಸಿರೆದಿದ್ದಾರೆ.
ಇದು ಅಚ್ಚರಿ ಎನಿಸಿದ್ರೂ ನಂಬಲೇಬೇಕಾದ ಸತ್ಯ. ಬೇಸಿಗೆ ಕಾಲ ಬಂತು ಅಂದ್ರೆ ಸಾಕು ಕಲ್ಲಂಗಡಿ ಹಣ್ಣು ಎಲ್ಲೆಂದರಲ್ಲಿ ಸಿಗುತ್ತೆ. ಬಿಸಿಲಿನ ತಾಪವನ್ನ ತಡೆದುಕೊಳ್ಳಲು ಕಲ್ಲಂಗಡಿ ಹಣ್ಣು ತಿನ್ನಲು ಜನ ಮುಗಿ ಬೀಳ್ತಾರೆ. ಆದರೆ, ಕಲ್ಲಂಗಡಿ ತಿಂದ ಮಕ್ಕಳು ಮೃತಪಟ್ಟಿದ್ದಾರೆ.
ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ಇಸ್ಸಾಂಪೇಟಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಾರ್ಚ್ 29 ಶ್ರೀಶೈಲಂ ಎನ್ನುವರು ಮನೆಗೆ ಒಂದು ಕಲ್ಲಂಗಡಿಯನ್ನ ತೆಗೆದುಕೊಂಡು ಹೋಗಿದ್ದರು. ಕುಟುಂಬಸ್ಥರು ಮಧ್ನಾಹ್ನ ಮೊದಲು ಅರ್ಧವನ್ನು ತಿಂದು, ಉಳಿದ ಅರ್ಧವನ್ನು ಕಪ್ ಬೋರ್ಡ್ ನಲ್ಲಿ ಇಟ್ಟಿದ್ದರು. ಮತ್ತೆ ರಾತ್ರಿ ಉಳಿದ ಹಣ್ಣನ್ನು ತಿಂದಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಇಡೀ ಕುಟುಂಬ ಹೊಟ್ಟೆ ನೋವಿನಿಂದ ನರಳಾಡಿದೆ.
ಕೂಡಲೇ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿತ್ತು. ಆದ್ರೆ ಏಪ್ರಿಲ್ 2 ರಂದು ಚಿಕಿತ್ಸೆ ಫಲಕಾರಿಯಾಗದೇ ದರವೇಣಿ ಸಿವಾನಂದು (12) ಮತ್ತು ಚರಣ್? (10) ಮೃತಪಟ್ಟಿದ್ದಾರೆ. ಇನ್ನುಳಿದ ಶ್ರೀಶೈಲಂ, ಗುಣವತಿ ಮತ್ತು ಅಜ್ಜಿ ಸರಮ್ಮಲ್ ಅವರಿಗೆ ಚಿಕಿತ್ಸೆ ಮುಂದುವರಿಸಿದ್ದು, ಅವರ ಸ್ಥಿತಿ ಗಂಭೀರವಾಗಿದೆ.
ಸತ್ತಿದ್ದು ಯಾಕೆ..?
ಇನ್ನು ಪ್ರಕರಣ ಪೊಲೀಸ್ ರಿಗೆ ಒಂದು ಚಾಲೆಂಜ್ ಆಗಿದ್ದು, ತನಿಖೆ ವೇಳೆ ಬಾಲಕರ ಸಾವಿಗೆ ಮತ್ತು ಕುಟುಂಬಸ್ಥರ ಹೊಟ್ಟೆ ನೋವಿಗೆ ಕಾರಣವೇನು ಎಂಬುದು ಬಯಲಾಗಿದೆ. ಶ್ರೀಶೈಲಂ ಅವರ ಮನೆಯಲ್ಲಿ ಇಲಿಗಳ ಕಾಟ ಹೆಚ್ಚಾಗಿದ್ದರಿಂದ ಅವುಗಳನ್ನು ಕೊಲ್ಲಲು ಇಲಿ ಪಾಶಾಣವನ್ನು ಮನೆಗೆ ತಂದಿದ್ದರು. ಆ ಪಾಶಾಣವನ್ನ ಎಲ್ಲ ಕಡೆ ಸಿಂಪಡಿಸಿದ್ದರು. ಇಲಿಗಳು ಪಾಶಾಣ ತಿಂದು ಅದೇ ಬಾಯಲ್ಲಿ ಕಲ್ಲಂಗಡಿ ಹಣ್ಣನ್ನು ಸಹ ತಿಂದಿದೆ. ಇದನ್ನ ಗಮನಿಸದೇ ಶ್ರೀಶೈಲಂ ಮನೆಯವರು ಹಣ್ಣು ತಿಂದಿದ್ದು, ಅನಾರೋಗ್ಯಕ್ಕೆ ಈಡಾಗಿದ್ದಾರೆ.










