`ಸಿದ್ದರಾಮಯ್ಯರನ್ನ ವಿಪಕ್ಷದಲ್ಲೇ ಕೂರಿಸದಿದ್ದರೇ ನಾನು ಯಡಿಯೂರಪ್ಪನೇ ಅಲ್ಲ’
ಬೆಂಗಳೂರು : ಸಿದ್ದರಾಮಯ್ಯ ಅವರನ್ನ ಮುಂದಿನ ಬಾರಿಯೂ ವಿರೋಧಪಕ್ಷದಲ್ಲಿಯೇ ಕೂರಿಸದಿದ್ದರೇ ನಾನು ಯಡಿಯೂರಪ್ಪನೇ ಅಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸವಾಲ್ ಹಾಕಿದ್ದಾರೆ.
ಬಜೆಟ್ ಮಂಡನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕಾಂಗ್ರೆಸ್ ಸಭಾತ್ಯಾಗ ಮಾಡಿದ ಬಗ್ಗೆ ಪ್ರತಿಕ್ರಿಯಿಸಿ ಸಿದ್ದರಾಮಯ್ಯ ವಿರುದ್ಧ ಗುಡುಗಿದರು.
ಸಿದ್ದರಾಮಯ್ಯ ಮುಂದಿನ ಬಾರಿಯೂ ವಿಪಕ್ಷದಲ್ಲಿರುತ್ತಾರೆ, ಅವರನ್ನು ವಿಪಕ್ಷದಲ್ಲೇ ಕೂರಿಸದಿದ್ದರೆ ನಾನು ಯಡಿಯೂರಪ್ಪನೇ ಅಲ್ಲ, ಮುಂದಿನ ಚುನಾವಣೆಯಲ್ಲಿ ನಾವು 130 ರಿಂದ 135 ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ಬಿ.ಎಸ್.ಯಡಿಯೂರಪ್ಪ ಸವಾಲ್ ಹಾಕಿದರು.
ಬಳಿಕ ಬಜೆಟ್ ಬಗ್ಗೆ ಮಾತನಾಡಿ, ಪ್ರತಿಕೂಲ ಸ್ಥಿತಿಯಲ್ಲೂ ಸರ್ವ ವ್ಯಾಪಿ, ಸರ್ವ ಸ್ವರೂಪಿ ಬಜೆಟ್ ನಿರ್ಮಿಸಲು ಪ್ರಯತ್ನಿಸಿದ್ದೇವೆ. ಈ ವರ್ಷದ ಬಜೆಟ್ ಗಾತ್ರ ಶೇ.3 ಕ್ಕಿಂತ ಹೆಚ್ಚಳವಾಗಿದೆ. ಇದೊಂದು ಜನಸ್ನೇಹಿ ಬಜೆಟ್ ಎಂದು ಬಣ್ಣಿಸಿದ್ರು.
ಇನ್ನು ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದು ಪೈಸೆಯೂ ಹೆಚ್ಚುವರಿ ತೆರಿಗೆ ಹಾಕದೆ ಬಜೆಟ್ ಮಂಡಿಸಿದ್ದೇವೆ. ಎಲ್ಲ ವಲಯ, ಜಿಲ್ಲೆಗಳಿಗೆ ವಿಶೇಷ ಕಾರ್ಯಕ್ರಮ ನೀಡಿ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸಿದ್ದೇನೆ. ಯಾರಿಗೂ ಹೊರೆಯಾಗದ ಜನಸ್ನೇಹಿ ಬಜೆಟ್ ಎಂದರು.









