ಮರಿ ರಾಜಾಹುಲಿ ಪಟ್ಟಾಭಿಷೇಕಕ್ಕೆ ಆಪರೇಷನ್-೨೩ ವಿಧಾನಸೌಧ..?
ಕರ್ನಾಟಕ ರಾಜಕಾರಣದಲ್ಲಿ ಸದ್ದಿಲ್ಲದೇ ಮೆತ್ತಗೆ ಏನೋ ನಡೆಯುತ್ತಿದೆ. ತೆರೆಮರೆಯಲ್ಲಿ, ಮಾಧ್ಯಮಗಳ ಕಣ್ಣಿಗೆ ಬೀಳದಂತೆ ಆಪರೇಷನ್ ವಿಧಾನಸೌಧ-೨೩ ಯೋಜನೆಯ ತಯಾರಿಗಳು ಸಿದ್ಧವಾಗುತ್ತಿದೆ. ಇತ್ತೀಚೆಗೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಮತ್ತೆ ೧೫೦ ಸೀಟುಗಳ ಮಾತಾಡಿದ್ದಾರೆ. ರಾಜಾಹುಲಿಯ ಮರಿ ಪದೇ ಪದೇ ದೆಹಲಿಯ ಫ್ಲೈಟು ಹತ್ತುತ್ತಿದೆ. ತಿಂಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜೊತೆ ಸುದೀರ್ಘ ಮಾತುಕಥೆ ನಡೆಸಿ ವಾಪಾಸು ಬಂದಿದ್ದ ಶ್ರೀಮಾನ್ ವಿಜಯೇಂದ್ರ ಬಾಹುಬಲಿ ಸದ್ಯ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿಲ್ಲವಾದರೂ ಗುಟ್ಟು ಬಿಟ್ಟುಕೊಡದೇ ಮುಂಬರುವ ಚುನಾವಣೆಯ ಭರ್ಜರಿ ಸಿದ್ಧತೆಗಳಾಗುತ್ತಿರುವುದು ಖಂಡಿತಾ.
ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿಯೂ ವಿಜಯೇಂದ್ರ ಚಾಲ್ ಚೆನ್ನಾಗಿಯೇ ಚಲಾವಣೆಯಾಗುತ್ತಿದೆ. ಸಿಎಂ ಬೊಮ್ಮಾಯಿ ದಿಲ್ಲಿಯಲ್ಲಿ ಚಡಪಡಿಸುತ್ತಾ ಕೂತಿದ್ದರೇ ಇತ್ತ ವಿಜಯೇಂದ್ರ ಪಟಾಲಂನಲ್ಲಿ ಸಣ್ಣಗೆ ಸಂಭ್ರಮ ಮನೆ ಮಾಡುತ್ತಿದೆ. ದೊಡ್ಡ ಪೋರ್ಟ್ಫೋಲಿಯೋ ಒಂದನ್ನು ಬಾಚಿಕೊಳ್ಳುವ ಹವಣಿಕೆಯಲ್ಲಿರುವ ವಿಜಯೇಂದ್ರರ ಮಹತ್ವಾಕಾಂಕ್ಷೆ ಕೇವಲ ಮಂತ್ರಿಗಿರಿ ಮಾತ್ರವಲ್ಲ ಅನ್ನುವುದು ಅವರನ್ನು ಬಲ್ಲ ಎಲ್ಲರಿಗೂ ತಿಳಿದಿರುವಂತದ್ದೆ. ಮುಖ್ಯವಾಗಿ ಯಡ್ಯೂರಪ್ಪನವರಿಗೆ ತುರ್ತಾಗಿ ತನ್ನ ಸಾಮ್ರಾಜ್ಯದ ಉತ್ತರಾಧಿಕಾರಿಗೆ ಪಟ್ಟ ಕಟ್ಟಬೇಕಿದೆ. ಕೂಡಲೇ ಅದಾಗದೇ ಹೋದರೇ ಆಪರೇಷನ್-೨೩@ವಿಧಾನಸೌಧ. ಕಾಮ್ ಯೋಜನೆ ಯಶ್ವಸಿಯಾಗುವುದಿಲ್ಲ ಅನ್ನುವ ಸತ್ಯ ಅಪ್ಪ ಮಗ ಇಬ್ಬರಿಗೂ ಗೊತ್ತಿದೆ.
ಬಿ.ವೈ ವಿಜಯೇಂದ್ರ ಯಡಿಯೂರಪ್ಪನವರಿಗಿಂತ ಚಾಣಾಕ್ಷ ರಾಜಕಾರಣಿ ಅನ್ನುವ ಸಂಗತಿ ರಾಜಕೀಯ ಪಂಡಿತರು ಯಾರೂ ಅಲ್ಲಗಳೆಯುವುದಿಲ್ಲ. ವಿಜಯೇಂದ್ರ ನೇತೃತ್ವದಲ್ಲಿ ಎದುರಿಸಿದ ಎರಡೂ ಉಪಚುನಾವಣೆಗಳೂ ಅದಕ್ಕೆ ಸಾಕ್ಷಿ. ಸಾಮ, ದಾನ, ಬೇದ ಹಾಗೂ ಅಗತ್ಯಬಿದ್ದರೇ ದಂಡ ನಾಲ್ಕೂ ಪ್ರಯೋಗಗಳನ್ನು ಸೂಕ್ತವಾಗಿ ಮಾಡಿಯಾದರೂ ಹಿಡಿದ ಕಾರ್ಯ ಈಡೇರಿಸಿಯೇ ತೀರುವ ಹಠ ವಿಜಯೇಂದ್ರರದ್ದು. ಲಿಂಗಾಯಿತ ಸಮುದಾಯದ ಮಠಗಳ ಸದ್ಯದ ಈ ನೀಲಿಕಣ್ಣಿನ ಹುಡುಗ ಧರ್ಮಾತೀತವಾಗಿ ಜ್ಯಾತ್ಯಾತೀತವಾಗಿ ಅಪ್ಪನಂತೆಯೇ ಗುರುತಿಸಿಕೊಳ್ಳುತ್ತಿರುವುದು ಸುಳ್ಳಲ್ಲ. ಗಮನಿಸಿ ನೋಡಿ ಈವರೆಗೆ ವಿಜಯೇಂದ್ರ ಉಳಿದ ಬಿಜೆಪಿ ನಾಯಕರಂತೆ ಕೋಮುಸಾಮರಸ್ಯ ಕೆರಳಿಸುವ ಮಾತಾಡಿಲ್ಲ. ಅದು ಅಪ್ಪ ಯಡ್ಡಿಯೂರಪ್ಪ ಹೇಳಿಕೊಟ್ಟ ಪಾಠ. ಬಿಜೆಪಿಯಲ್ಲಿದ್ದುಕೊಂಡೇ ಬಿಜೆಪಿಯ ಮೂಲನೀತಿಯನ್ನು ನಿರ್ಲಕ್ಷಿಸಿ ರಾಜಕಾರಣ ಮಾಡಬೇಕು. ಕರ್ಮಠ ಬಿಜೆಪಿಯ ಹೊರಗೆ ನಿಂತು ನಾಯಕನಾಗಿ ಬೆಳೆಯಬೇಕು. ಪಕ್ಷನ್ನು ಅವಲಂಭಿಸಬಾರದು ಬದಲಿಗೆ ಪಕ್ಷವೇ ತಮ್ಮನ್ನು ಅವಲಂಭಿಸುವಂತಾಗಬೇಕು. ಇದು ಯಡಿಯೂರಪ್ಪನವರ ರಾಜಕೀಯ ಸೂತ್ರ. ಅದನ್ನು ಚಾಚೂ ತಪ್ಪದೇ ಮಗನಿಗೆ ಹೇಳಿಕೊಡುತ್ತಿದ್ದಾರೆ.
ಇವತ್ತಿನ ಮಟ್ಟಿಗೆ ಬಿಜೆಪಿ ರಾಜ್ಯದಲ್ಲಿ ಸೂತ್ರ ಹರಿದಿರುವ ಗಾಳಿಪಠ; ರಾಜ್ಯದಲ್ಲಿ ಬೊಮ್ಮಾಯಿ ನೇತೃತ್ವದ ಸರ್ಕಾರ ಬಂದ ನಂತರ ಯಾವುದೂ ಸರಿಯಿಲ್ಲ. ಬಸವರಾಜ್ ಬೊಮ್ಮಾಯಿ ಅತ್ತ ಹೈಕಮಾಂಡ್ಗೆ ಇತ್ತ ಯಡಿಯೂರಪ್ಪನವರಿಗೆ ನಿಷ್ಠೆ ಇಟ್ಟುಕೊಂಡೇ ಎರಡೂ ದೋಣೆಯಲ್ಲಿ ಒಂದೊಂದು ಕಾಲಿಟ್ಟು ಹುಟ್ಟು ಹಾಕುತ್ತಿದ್ದಾರೆ. ರಾಜ್ಯದ ಯಾವ ಅಂಗಾಂಗಳೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅಸಮರ್ಥ ಹೋಮ್ ಮಿನಿಸ್ಟರ್ ಅರಗ ಜ್ಞಾನೇಂದ್ರ ಕಾರಣ ಲಾ ಎಂಡ್ ಆರ್ಡರ್ ಹಳಿ ತಪ್ಪಿದೆ. ಹೇಳಿಕೊಳ್ಳುವ ಯಾವ ಯೋಜನೆಗಳೂ ಸಮರ್ಪಕವಾಗಿ ಆಗುತ್ತಿಲ್ಲ. ಗುತ್ತಿಗೆದಾರರ ಸಂಘ ೪೦% ಕಮಿಷನ್ ಹೆಸರಲ್ಲಿ ತಿರುಗಿಬಿದ್ದಿದೆ. ಸಂಪುಟದ ಎಲ್ಲಾ ಸಹುದ್ಯೋಗಿಗಳು ಭರ್ತಿ ದುಡ್ಡು ಮಾಡುವಲ್ಲಿ ಬ್ಯುಸಿಯಾಗಿದ್ದಾರೆ. ಸ್ಪಷ್ಟವಾಗಿ ರಾಜ್ಯದಲ್ಲೀಗ ಆಡಳಿತ ವಿರೋಧಿ ಅಲೆಯಿದೆ. ಆದರೆ ಯಡಿಯೂರಪ್ಪ ಪಕ್ಷದಲ್ಲಿ ಇರುವ ತನಕ ಅದರ ಚಿಂತೆ ಉಳಿದ ನಾಯಕರಿಗಿಲ್ಲ. ಯಡ್ಯೂರಪ್ಪನವರ ಲಿಂಗಾಯಿತ ಮತಬ್ಯಾಂಕ್ ಒಂದು ಸಾಕು. ಇಡೀ ಚುನಾವಣೆಯ ಚಿತ್ರಣವನ್ನೇ ಬದಲಾಯಿಸಿಬಿಡಬಹುದು. ಅದರ ಜೊತೆಗೆ ಬಿಜೆಪಿ ಈಗ ಮಾಡಿಕೊಂಡಿರುವ ಖಜಾನೆಯಿದೆಯಲ್ಲ ಒಂದಲ್ಲ ಎರಡು ಎಲೆಕ್ಷನ್ ಅನ್ನು ಸಲೀಸಾಗಿ ಎದುರಿಸಿಬಿಡಬಹುದು. ಆದರೆ ಪ್ರಶ್ನೆಯಿರುವುದುದೇ ಯಡಿಯೂರಪ್ಪ ಮತ್ತು ವಿಜಯೇಂದ್ರರ ಅಂತಿಮ ತೀರ್ಮಾನ ಯಾವುದು ಅನ್ನುವುದರ ಮೇಲೆ.
ಏನಿದು ಆಪರೇಷನ್-೨೩ ವಿಧಾನಸೌಧ?:
ಯಡಿಯೂರಪ್ಪನವರು ರಾಜಕಾರಣದಲ್ಲಿ ತಾವು ಅನುಭವಿಸಬೇಕಾದ ಎಲ್ಲವನ್ನೂ ಅನುಭವಿಸಿಯಾಗಿದೆ. ಅಫ್ ಕೋರ್ಸ್ ಅದೆಲ್ಲವೂ ಅವರೇ ದಕ್ಕಿಸಿಕೊಂಡ ಫಲ. ಬೂಕನಕೆರೆಯ ಬಸ್ ಸ್ಟ್ಯಾಂಡ್ ನಿಂದ, ಶಿಕಾರಿಪುರದ ರೈಸ್ ಮಿಲ್ ನಿಂದ, ಶಿವಮೊಗ್ಗದ ಶಾಖೆಗಳಿಂದ ವಿಧಾನಸೌಧದ ಮೂರನೆಯ ಮಹಡಿ ಹತ್ತುವ ತನಕ ಅವರ ಪರಿಶ್ರಮ ಸಾಧಾರಣ ಮಾತಲ್ಲ. ಯಡಿಯೂರಪ್ಪನವರಿಗೆ ಸುಮ್ಮನೇ ವಯಸ್ಸಾಗಿಲ್ಲ, ತಮ್ಮ ಬದುಕಿನ ಮುಕ್ಕಾಲು ಆಯುಷ್ಯವನ್ನು ರಾಜಕಾರಣಕ್ಕೇ ಮೀಸಲಿಟ್ಟು ಸವೆದಿದ್ದಾರೆ. ಅವರಿಗೆ ಸದ್ಯ ಇರುವ ಕೊನೆಯ ಆಸೆ ಒಂದೇ. ಹೇಗಾದರೂ ತಮ್ಮ ನಂತರ ತಮ್ಮ ಕುಟುಂಬದ ಪ್ರತಿನಿಧಿಯಾಗಿ ವಿಜಯೇಂದ್ರ ಶಕ್ತಿ ಕೇಂದ್ರದಲ್ಲಿರಬೇಕು. ತಮ್ಮ ಬದುಕಿನ ಅವಧಿಯಲ್ಲೇ ವಿಜಯೇಂದ್ರರ ಪಟ್ಟಾಭಿಷೇಕವೂ ಆಗಿಬಿಡಬೇಕು.
ಅವತ್ತು ದೆಹಲಿಯಲ್ಲಿ ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತ ಅಮಿತ್ ಶಾ, ಮಿಸ್ಟರ್ ಯಡಿಯೂರಪ್ಪ ನೀವಿನ್ನು ರಾಜೀನಾಮೆ ಕೊಡಬಹುದು. ನೀವು ತೋರಿಸಿದ ವ್ಯಕ್ತಿಯನ್ನು ಸಿಎಂ ಮಾಡ್ತೀವಿ ಅಂದಾಗ ಆದ ಅವಮಾನವಿತ್ತಲ್ಲ, ಅದನ್ನು ಹಲ್ಲು ಕಚ್ಚಿ ಸಹಿಸಿಕೊಂಡಿದ್ದು ಅದೊಂದೇ ಕಾರಣಕ್ಕೆ. ಹೇಗಿದ್ದರೂ ಚುನಾವಣೆ ಹತ್ತಿರ ಬಂದಾಗ ಇದೇ ಮೋದಿ-ಶಾ ತಮ್ಮನ್ನು ಹುಡುಕಿಕೊಂಡು ಬರಲೇಬೇಕಲ್ಲ. ಆಗ ಉತ್ತರ ಕೊಟ್ಟರಾಯಿತು ಎಂದು ಆತ್ಮಾಭಿಮಾನಕ್ಕೆ ಪೆಟ್ಟು ಬಿದ್ದರೂ ತೆಪ್ಪಗೆ ರಾಜೀನಾಮೆ ಕೊಟ್ಟು ಧವಳಗಿರಿಗೆ ಹೋಗಿಬಿಟ್ಟರು. ಆದರೆ ಅವತ್ತೇ ಯಡಿಯೂರಪ್ಪ ನಿರ್ಧರಿಸಿಬಿಟ್ಟಿದ್ದರು ತಮ್ಮ ನಿಜವಾದ ಸಾಮರ್ಥ್ಯವನ್ನು ಈಗ ಬಸಿದು ತೆಗೆದಾದರೂ ವಿಜಯೇಂದ್ರರನ್ನು ರಾಜಕೀಯ ಮುನ್ನೆಲೆಗೆ ತರಲೇಬೇಕು. ಹಾಗಾಗೇ ತಮ್ಮ ಪಟ್ಟ ಶಿಷ್ಯ ಬಸವರಾಜ್ ಬೊಮ್ಮಾಯಿಯನ್ನು ಪ್ರತಿಷ್ಠಾಪಿಸಿದರು. ವಿಧಾನಸೌಧದ ಕಾಂಟ್ಯಾಕ್ಟು ಕೈತಪ್ಪದಂತೆ ನೋಡಿಕೊಂಡರು. ಆವತ್ತಿಗೂ ಇವತ್ತಿಗೂ ಬಸವರಾಜ್ ಬೊಮ್ಮಾಯಿ ಯಡಿಯೂರಪ್ಪನವರ ಕೈಗೊಂಬೆಯೇ. ಆದರೆ ಪರಿಸ್ಥಿತಿ ಬದಲಾಗಲೇಬೇಕಲ್ಲವೇ! ಹೈಕಮಾಂಡ್ ಕ್ರಮೇಣ ಬಸವರಾಜ್ ಬೊಮ್ಮಾಯಿಯವರನ್ನು ಯಡಿಯೂರಪ್ಪನವರ ಪ್ರಭಾವರ್ತುಲದಿಂದ ಹೊರಗೆ ತಂದು ಶಕ್ತಿಕೇಂದ್ರದ ಲಿಂಕ್ ತಪ್ಪಿಸಲು ನೋಡುತ್ತಿದೆ. ಅದಾಗಿಬಿಟ್ಟರೇ ಯಡಿಯೂರಪ್ಪನವರು ಏಕಾಂಗಿಯಾಗುತ್ತಾರೆ. ದುಡ್ಡಿದ್ದರೇ ಲಿಂಗಾಯಿತ ಮತಬ್ಯಾಂಕ್ ಒಡೆಯುವುದು ಎಷ್ಟರ ಕೆಲಸ. ಇದಕ್ಕಾಗಿಯೇ ಅಲ್ಲಿ ಲಿಂಗಾಯಿತ ಸಮುದಾಯದವರೇ ಆದ ಯತ್ನಾಳ್ ರಿಗೆ ಸುಪಾರಿ ಕೊಟ್ಟು, ಇಲ್ಲಿ ನಿರಾಣಿಯವರನ್ನು ಬ್ಯುಸಿನೆಸ್ ಪಾರ್ಟನರ್ ಮಾಡಿಕೊಂಡು ಆಟವಾಡಲು ಹೈಕಮಾಂಡ್ ದೊಡ್ಡಪ್ಪಂದಿರುವ ಪ್ರಯತ್ನಿಸುತ್ತಲೇ ಇದ್ದಾರೆ.
ಈ ಕಣ್ಣಾಮುಚ್ಚಾಲೆ ಆಟ ಯಡಿಯೂರಪ್ಪನವರಿಗೆ ಗೊತ್ತಿಲ್ಲದೇನಲ್ಲ. ಈಗ ರೆಬೆಲ್ ಆಗುವುದು ದೊಡ್ಡ ಮಾತಲ್ಲ. ಬಂಡೆದ್ದು ಪಕ್ಷದಿಂದ ಹೊರಬಿದ್ದರೇ ಒಂದು ನಲ್ವತ್ತು ಶಾಸಕರು ಹಿಂಬಾಲಿಸಿಬಿಡುತ್ತಾರೆ, ಅದೂ ಕಷ್ಟವೇನಲ್ಲ. ಲಿಂಗಾಯಿತ ಮಠಗಳ ಶರಣು ಹೋದರೇ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚುವಂತೆ ಮಾಡಿಬಿಡಬಹುದು. ಆದರೆ ಅದರಿಂದ ಪುಕ್ಷಟ್ಟೆ ಲಾಭ ಕಾಂಗ್ರೆಸ್ಗೆ ಸೇರುತ್ತದೆ. ವಿಜಯೇಂದ್ರ ಮುಖ್ಯಮಂತ್ರಿಯಾಗುವುದಿಲ್ಲ. ಜೊತೆಗೆ ಐಟಿ-ಇಡಿ ದಾಳಿಯ ಧಮಕಿ ಹಾಕುತ್ತಿದೆ ಹೈಕಮಾಂಡ್; ಸದ್ಯಕ್ಕೆ ಯಾವುದೂ ಬಹಿರಂಗವಾಗದಂತೆ ಕೋಟೆ ಕಾಪಾಡಿಕೊಳ್ಳಬೇಕು ಅದು ಪ್ರಿಯಾರಿಟಿ. ಮುಂದಿನ ಪಾನ್ ಅನ್ನು ಎಲೆಕ್ಷನ್ ಹತ್ತಿರ ಬಂದಂತೆ ಮೂವ್ ಮಾಡಿದರಾಯ್ತು ಎಂದು ಸುಮ್ಮನಿದ್ದರು ಯಡಿಯೂರಪ್ಪ.
ಇನ್ನೇನು ೨೦೨೩ರ ಚುನಾವಣೆಗೆ ವರ್ಷದ ಮಿತಿಯಿದೆ. ಇದು ಸರಿಯಾದ ಸಮಯ. ಈಗ ತುರ್ತಾಗಿ ವಿಜಯೇಂದ್ರ ಮಂತ್ರಿಯಾಗಿಬಿಟ್ಟರೇ ಪಕ್ಷ ಸಂಘಟನೆಯ ನೆಪದಲ್ಲಿ ವಿಜಯೇಂದ್ರರನ್ನು ಬಿಜೆಪಿ ಆಂತರಿಕ ವಲಯದಲ್ಲಿ ಬಲಿಷ್ಠರನ್ನಾಗಿಸಿಬಿಡಬಹುದು. ಅಷ್ಟಾಗಿಬಿಟ್ಟರೇ ಕನಿಷ್ಠ ೧೫೦ ಕ್ಷೇತ್ರಗಳಿಗೆ ಇನ್ವೆಸ್ಟ್ ಮಾಡುವುದು ಕಷ್ಟವಲ್ಲ. ಒಂದೊಂದು ಕ್ಷೇತ್ರಗಳಿಗೂ ಕನಿಷ್ಠ ೨೦ ಕೋಟಿ ಬಂಡವಾಳ ಹೂಡಿದರೂ; ಒಟ್ಟು ೩೦೦೦ ಕೋಟಿ. ನಾಟ್ ಎ ಬಿಗ್ ಡೀಲ್. ಈ ೧೫೦ ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ ೧೦೦ ತಮ್ಮ ಮಾತು ಕೇಳುವ ನಾಯಕರನ್ನು ಶಾಸಕರನ್ನಾಗಿ ಮಾಡಬೇಕು. ಆಗ ಸರ್ಕಾರ ರಚನೆಯಾಗುವ ಸಮಯದಲ್ಲಿ ವಿಜಯೇಂದ್ರ ಹೆಸರು ಮೊದಲಿರಬೇಕು. ಇಷ್ಟೂ ಅಂದಾಜು ಸರಿಯಾಗಿ ನಡೆದರೇ ಮತ್ತೇನಿದೆ, ಸನ್ಮಾನ್ಯ ವಿಜಯೇಂದ್ರ ಯಡಿಯೂರಪ್ಪ ಕರ್ನಾಟಕದ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವುದು ನಿಕ್ಕಿ. ಇದೇ ಯಡಿಯೂರಪ್ಪ ಮತ್ತಯ ವಿಜಯೇಂದ್ರ ಕೂತು ರೂಪಿಸಿದ ಆಪರೇಷನ್-೨೩ ವಿಧಾನಸೌಧ ಯೋಜನೆ. ಈ ಪ್ಲಾನ್ ವರ್ಕೌಟ್ ಆಗುವ ಮೊದಲ ಹಂತದ ಕಾರ್ಯಕ್ರಮವೇ ವಿಜಯೇಂದ್ರ ರಾಜ್ಯ ಮಂತ್ರಿಮಂಡಲದೊಳಗೆ ಎಂಟ್ರಿಯಾಗುವುದು; ಹೈಕಮಾಂಡ್ಗೆ ಫರ್ಸ್ಟ್ ಚೆಕ್ ಮೆಟ್..
ಹೈಕಮಾಂಡ್ ಇಲ್ಲಿಯವರೆಗೆ ಸಚಿವ ಸಂಪುಟ ವಿಸ್ತರಣೆಯನ್ನು ಮುಂದೂಡುತ್ತಾ ಬಂದಿದ್ದು ಇದೇ ಕಾರಣಕ್ಕೆ. ಹೇಗಾದರೂ ಮಾಡಿ ವಿಜಯೇಂದ್ರ ಮಂತ್ರಿಯಾಗುವುದನ್ನು ತಪ್ಪಿಸಬೇಕು, ಅದಕ್ಕೆ ಸಂಕ್ರಾಂತಿ-ಯುಗಾದಿ ಮುಗೀಲಿ ಅಂತಂದಿತ್ತು ಮೋ-ಷಾ ಜೋಡಿ. ಆದರೀಗ ಯಾವ ಹಬ್ಬಗಳೂ ಇಲ್ಲ ಸದ್ಯ. ಜೊತೆಗೆ ಪೂರ್ಣ ಮಂತ್ರಿಮಂಡಲ ರೀಶಫಲ್ ಆಗಬೇಕು, ಪಕ್ಷದೊಳಗೆ ಬಂಡಾಯದ ಧ್ವನಿ ಮೊಳಗಿಸಿತ್ತಿರುವ ಹಿರಿಯ ನಾಯಕರಿಗೆ ಕೊನೆಯ ಅವಧಿಗಾದರೂ ಅವಕಾಶ ಕೊಡಲೇಬೇಕು. ಈವರೆಗೆ ಪಕ್ಷಕ್ಕೆ ಡ್ಯಾಮೇಜ್ ಮಾಡಿರುವ ಅಸಮರ್ಥರಿಗೆ ಕೋಕ್ ಸಹ ಕೊಡಬೇಕು. ಈಗ ವಿಧಿಯಿಲ್ಲ ಸಂಪುಟ ವಿಸ್ತರಣೆ ಅನಿವಾರ್ಯ. ಪದೇ ಪದೇ ವಿವಾದಾತ್ಮಕ ಹೇಳಿಕೆ ಕೊಟ್ಟು ಮರ್ಯಾದೆ ತೆಗೆಯುತ್ತಿರುವ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ, ಗೃಹಮಂತ್ರಾಲಯವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುವಲ್ಲಿ ಹೀನಾಯ ವೈಫಲ್ಯ ಕಂಡ ಅರಗ ಜ್ಞಾನೇಂದ್ರ ಸೇರಿದಂತೆ ಕೆಲವರಿಗೆ ಕೋಕ್ ಕೊಡಲೇಬೇಕು. ವಿಜಯೇಂದ್ರ ಮಂತ್ರಿ ಮಂಡಲದೊಳಗೆ ಬರುವುದೇ ಆದರೇ ಸಾಧ್ಯವಾದಷ್ಟು ದೊಡ್ಡ ತಾಕತ್ತಿನ ಪೋರ್ಟ್ಫೋಲಿಯೋ ಕೊಡಬಾರದು ಅನ್ನುವುದು ಹೈಕಮಾಂಡ್ ಹವಣಿಕೆ. ಗೃಹ ಸಚಿವಸ್ಥಾನದ ಮೇಲೆ ವಿಜಯೇಂದ್ರ ಕಣ್ಣಿರುವುದು ಸುಳ್ಳಲ್ಲ; ಹೀಗಾಗಿ ಕಾರ್ಕಳ ಸುನಿಲ್ ಕುಮಾರ್ಗೆ ಹೋಂ ಕೊಟ್ಟು, ವಿಜಯೇಂದ್ರರಿಗೆ ಕಂದಾಯ ಸಚಿವ ಸ್ಥಾನ ಕೊಟ್ಟರೇ ಹೇಗೆ ಅನ್ನುವ ತರ್ಕ ಮಾಡುತ್ತಿದೆ ಹೈಕಮಾಂಡ್. ಕೊನೇ ಕ್ಷಣದಲ್ಲಿ ವಿಜಯೇಂದ್ರರಿಗೆ ಸಚಿವ ಸ್ಥಾನವನ್ನೇ ನಿರಾಕರಿಸಿದರೇ ಹೇಗೆ ಅನ್ನುವ ಆಲೋಚನೆಯೂ ಅದಕ್ಕಿದೆ. ಆದರೆ ಯಡಿಯೂರಪ್ಪನವರ ಆಕ್ರೋಶವನ್ನು ಹತ್ತಿಕ್ಕುವ ಸಾಮರ್ಥ್ಯ ಬಿಜೆಪಿಗಿದ್ಯಾ ಅನ್ನುವುದು ಸದ್ಯದ ಪ್ರಶ್ನೆ. ರಾಜಕಾರಣ ಕೂತೂಹಲ ಹಂತ ತಲುಪಿದೆ; ಕರ್ನಾಟಕದ ಭವಿಷ್ಯದ ಭಾಗ್ಯ ಯಾರಿಗೆ ಸಿಹಿ ಯಾರಿಗೆ ಕಹಿ ಅನ್ನುವುದನ್ನು ಕಾದು ನೋಡೋಣ.
-ವಿಪ್ರಭಾ











