ಬಿಗ್ ಬಾಸ್ ಕಿರೀಟ ಮುಡಿಗೇರಿಸಿಕೊಂಡ ಮಂಡ್ಯದ ಗಿಲ್ಲಿ ನಟ ಈಗ ಬರೀ ರಿಯಾಲಿಟಿ ಶೋ ಸ್ಟಾರ್ ಅಲ್ಲ, ಗಾಂಧಿನಗರದ ಹೊಸ ಸೆನ್ಸೇಷನ್. ನೂರು ದಿನಗಳ ಕಾಲ ದೊಡ್ಮನೆಯಲ್ಲಿ ಮನರಂಜನೆಯ ಮಹಾಪೂರವನ್ನೇ ಹರಿಸಿದ ಗಿಲ್ಲಿ, ಈಗ ಬೆಳ್ಳಿಪರದೆಯ ಮೇಲೆ ನಗೆಯ ಸುನಾಮಿ ಎಬ್ಬಿಸಲು ಸಜ್ಜಾಗಿದ್ದಾರೆ. ಸದ್ಯ ಸ್ಯಾಂಡಲ್ ವುಡ್ ಅಂಗಳದಲ್ಲಿ ಕೇಳಿಬರುತ್ತಿರುವ ಬಿಸಿಬಿಸಿ ಚರ್ಚೆ ಏನಪ್ಪಾ ಅಂದ್ರೆ, ಹಾಸ್ಯನಟನಿಂದ ಹೀರೋ ಆಗಿ ಬಡ್ತಿ ಪಡೆದ ಚಿಕ್ಕಣ್ಣನ ಖಾಲಿ ಕುರ್ಚಿಯನ್ನು ಗಿಲ್ಲಿ ನಟ ಅಲಂಕರಿಸುತ್ತಾರಾ ಎಂಬುದು.
ಗೆದ್ದವನೇ ಗೆಲ್ಲುವ ಕುದುರೆ ಗಿಲ್ಲಿಗೆ ಹೆಚ್ಚಾಯ್ತು ಡಿಮ್ಯಾಂಡ್
ಬಿಗ್ ಬಾಸ್ ಗೆದ್ದ ಮೇಲೆ ಗಿಲ್ಲಿಯ ಭವಿಷ್ಯವೇ ಬದಲಾಗಿದೆ. ಹೋದಲ್ಲಿ ಬಂದಲ್ಲಿ ಜನ ಜೈಕಾರ ಹಾಕುತ್ತಿದ್ದಾರೆ. ಸೆಲ್ಫಿಗಾಗಿ ಮುಗಿಬೀಳುತ್ತಿದ್ದಾರೆ. ಈ ಜನಪ್ರಿಯತೆಯೇ ಈಗ ಗಿಲ್ಲಿಗೆ ಸಿನಿಮಾದಲ್ಲಿ ರೆಡ್ ಕಾರ್ಪೆಟ್ ವೆಲ್ಕಮ್ ಸಿಗುವಂತೆ ಮಾಡಿದೆ. ಗೌರಿ ಹಾಗೂ ದಿ ಡೆವಿಲ್ ನಂತಹ ದೊಡ್ಡ ಸಿನಿಮಾಗಳಲ್ಲಿ ಗಿಲ್ಲಿ ಈಗಾಗಲೇ ತಮ್ಮ ಕಾಮಿಡಿ ಕರಾಮತ್ತು ಪ್ರದರ್ಶಿಸಿದ್ದಾರೆ. ಕೈತುಂಬಾ ಆಫರ್ ಗಳು ಹುಡುಕಿಕೊಂಡು ಬರುತ್ತಿದ್ದು, ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಪಕ್ಕಾ ಲೋಕಲ್ ಹಾಗೂ ನ್ಯಾಚುರಲ್ ಕಾಮಿಡಿಯನ್ ಸಿಕ್ಕಂತಾಗಿದೆ.
ಉಪಾಧ್ಯಕ್ಷನ ಪಟ್ಟಕ್ಕೆ ಗಿಲ್ಲಿಯೇ ಸೂಕ್ತ
ಕನ್ನಡ ಚಿತ್ರರಂಗದಲ್ಲಿ ಹೀರೋ ಪಕ್ಕ ನಿಂತು ಹೀರೋಯಿನ್ ಗಿಂತ ಹೆಚ್ಚು ಸ್ಕೋರ್ ಮಾಡುತ್ತಿದ್ದವರಲ್ಲಿ ಚಿಕ್ಕಣ್ಣ ಪ್ರಮುಖರು. ಅವರನ್ನು ಪ್ರೀತಿಯಿಂದ ಜನ ಉಪಾಧ್ಯಕ್ಷ ಅಂತಲೇ ಕರೆದರು. ಆದರೆ ಯಾವಾಗ ಉಪಾಧ್ಯಕ್ಷ ಚಿತ್ರದ ಮೂಲಕ ಚಿಕ್ಕಣ್ಣ ಹೀರೋ ಆದರೋ, ಸ್ಟಾರ್ ನಟರ ಪಕ್ಕದ ಆ ಕಾಮಿಡಿ ಜಾಗ ಖಾಲಿಯಾಯಿತು. ಅಷ್ಟೇ ಅಲ್ಲ, ಚಿಕ್ಕಣ್ಣ ಈಗ ಬ್ಯಾಕ್ ಟು ಬ್ಯಾಕ್ ಹೀರೋ ಆಗಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಸ್ಟಾರ್ ನಟರ ಸಿನಿಮಾಗಳಲ್ಲಿ ನಾಯಕನಿಗೆ ಸಾಥ್ ಕೊಡುವ, ಪಂಚಿಂಗ್ ಡೈಲಾಗ್ ಹೊಡೆಯುವ ಆ ಖಾಲಿ ಜಾಗವನ್ನು ತುಂಬಬಲ್ಲ ತಾಕತ್ತು ಇರೋದು ಸದ್ಯಕ್ಕೆ ಗಿಲ್ಲಿ ನಟನಿಗೆ ಮಾತ್ರ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿವೆ.
ಕಾಮಿಡಿ ದಿಗ್ಗಜರ ಹಾದಿಯಲ್ಲಿ ಮಂಡ್ಯದ ಹೈದ
ಇತಿಹಾಸ ನೋಡೋದಾದ್ರೆ, ಕನ್ನಡದಲ್ಲಿ ಯಾರೆಲ್ಲಾ ಟಾಪ್ ಕಾಮಿಡಿಯನ್ ಆಗಿದ್ದರೋ ಅವರೆಲ್ಲಾ ಮುಂದೆ ಹೀರೋ ಆಗಿ ನೆಲೆಕಂಡುಕೊಂಡಿದ್ದಾರೆ. ಶರಣ್ ಅವರು ಕಾಮಿಡಿ ಕಿಂಗ್ ಆಗಿದ್ದವರು, ನೂರಾರು ಸಿನಿಮಾಗಳಲ್ಲಿ ನಗಿಸಿ ನಂತರ ಹೀರೋ ಆದರು. ಕೋಮಲ್ ಕೂಡ ಅದೇ ದಾರಿಯಲ್ಲಿ ಸಾಗಿದರು. ಇವರಿಬ್ಬರು ಬಿಟ್ಟ ಜಾಗವನ್ನು ಚಿಕ್ಕಣ್ಣ ಸಮರ್ಥವಾಗಿ ತುಂಬಿದರು. ಈಗ ಚಿಕ್ಕಣ್ಣ ಹೀರೋ ಆಗಿರೋದ್ರಿಂದ, ಆ ಜಾಗಕ್ಕೆ ಗಿಲ್ಲಿ ಬಂದಿದ್ದಾರೆ. ದರ್ಶನ್, ಸುದೀಪ್, ಯಶ್, ಶಿವಣ್ಣ ಸೇರಿದಂತೆ ಎಲ್ಲಾ ಸ್ಟಾರ್ ಗಳ ಜೊತೆ ಚಿಕ್ಕಣ್ಣ ಮಿಂಚಿದಂತೆ, ಮುಂದಿನ ದಿನಗಳಲ್ಲಿ ಗಿಲ್ಲಿ ಕೂಡ ಸ್ಟಾರ್ ಗಳ ಫೇವರಿಟ್ ಆಗುವ ಲಕ್ಷಣಗಳು ದಟ್ಟವಾಗಿವೆ.
ಬರೀ ನಟನಲ್ಲ ಸಕಲಕಲಾವಲ್ಲಭ ಈ ಗಿಲ್ಲಿ
ಗಿಲ್ಲಿ ಕೇವಲ ನಟನಲ್ಲ, ಆತನೊಬ್ಬ ಅದ್ಭುತ ರೈಟರ್ ಮತ್ತು ಡೈರೆಕ್ಟರ್ ಕೂಡ ಹೌದು. ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದ ನಲ್ಲಿ ಮೂಳೆ ಹಾಗೂ ರಾಂಗ್ ಸೈಡ್ ರಂಗನಾಥ ಸೀರೀಸ್ ಗಳೇ ಇದಕ್ಕೆ ಸಾಕ್ಷಿ. ತಾನೇ ಬರೆದು, ತಾನೇ ನಿರ್ದೇಶಿಸಿ ನಟಿಸುವ ಕಲೆ ಕರಗತ ಮಾಡಿಕೊಂಡಿರುವ ಗಿಲ್ಲಿಗೆ, ಕಾಮಿಡಿ ಟೈಮಿಂಗ್ ಅಂದ್ರೆ ಏನು ಅನ್ನೋದು ರಕ್ತಗತವಾಗಿದೆ. ಸ್ಕಿಟ್ ಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಆತ ಪ್ರೂವ್ ಮಾಡಿರೋ ಟ್ಯಾಲೆಂಟ್ ಈಗ ಬಿಗ್ ಸ್ಕ್ರೀನ್ ಮೇಲೆ ಮ್ಯಾಜಿಕ್ ಮಾಡಲಿದೆ.
ಒಟ್ಟಿನಲ್ಲಿ ಮಂಡ್ಯದ ಸೊಗಡಿನ ಮಾತಿನ ಮೂಲಕವೇ ಕನ್ನಡಿಗರ ಮನಗೆದ್ದಿರೋ ಗಿಲ್ಲಿ, ಸ್ಯಾಂಡಲ್ ವುಡ್ ನ ಮುಂದಿನ ಸ್ಟಾರ್ ಕಾಮಿಡಿಯನ್ ಆಗಿ ಹೊರಹೊಮ್ಮಲಿ, ಚಿಕ್ಕಣ್ಣನ ಸ್ಥಾನ ತುಂಬಿ ಪ್ರೇಕ್ಷಕರನ್ನ ನಗಿಸಲಿ ಅನ್ನೋದೇ ಅಭಿಮಾನಿಗಳ ಆಶಯ.








