ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದೇ ಬಂದಿದ್ದು, ಸಿಎಂ, ಡಿಸಿಎಂ ಜಗಳ ತಣ್ಣಗಾಗುತ್ತಲೇ ಇಲ್ಲ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತಣ್ಣಗಿದ್ದ ಈ ಜಗಳ ಮತ್ತೆ ಈಗ ಭುಗಿಲೆದ್ದಿದೆ. ಸಿದ್ದು ಬಣ, ಡಿಕೆಶಿ ಬಣದ ಮಧ್ಯೆ ಈಗ ಒಳಸಂಚು ಶುರುವಾಗಿದೆ.
ಡಿಕೆಶಿ ಬಣ ಸಿಎಂ ಸ್ಥಾನಕ್ಕಾಗಿ ಲಾಬಿ ನಡೆಸುವ ತಂತ್ರ ಹೆಣೆದಿತ್ತು. ಆಗ ಸಿದ್ದು ಬಣದಿಂದ ಜಾತಿಗೊಂದು ಡಿಸಿಎಂ ಹುದ್ದೆಯ ಕೂಗು ಎದ್ದಿತ್ತು. ಅದು ತಾರಕಕ್ಕೆ ಹೋಗಿದ್ದರಿಂದಾಗಿ ಈಗ ಮತ್ತೆ ಡಿಕೆಶಿ ಬಣ ರಂಗೋಲಿ ಕೆಳಗೆ ನುಸುಳಿದಂತಿದೆ. ಈ ಫೈಟ್ ಈಗ ಬಿರುಗಾಳಿ ಸೃಷ್ಟಿಸುವ ಎಲ್ಲಾ ಸಾಧ್ಯತೆಗಳನ್ನು ತೋರಿಸುತ್ತಿದೆ. ಸಿಎಂ ಸಿದ್ದರಾಮಯ್ಯ ಬಣದ ಅಸ್ತ್ರಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಬಣ ಪ್ರತ್ಯಾಸ್ತ್ರ ಪ್ರಯೋಗ ಮಾಡುತ್ತಿದ್ದು, ಈಗ ಡಿಕೆ ಬಣಕ್ಕೆ ಮಹಾ ಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ದಾಳವಾಗಿದ್ದಾರೆ. ಈ ದಾಳವನ್ನೇ ಮುಂದಿಟ್ಟುಕೊಂಡು ಡಿಕೆಶಿ ಬಣ ಬ್ರಹ್ಮಾಸ್ತ್ರವನ್ನೇ ಹೂಡಿದೆ ಅನಿಸುತ್ತಿದೆ.
ಲೋಕಸಭೆ ಚುನಾವಣೆಗೂ ಮುನ್ನ ಹೆಚ್ಚುವರಿ ಡಿಸಿಎಂ ಚರ್ಚೆಯನ್ನು ಸಿದ್ದು ಆಪ್ತ ಬಣದ ಸಚಿವ ಕೆ ಎನ್ ರಾಜಣ್ಣ ಮುನ್ನಲೆಗೆ ತಂದಿದ್ದರು. ಡಾ. ಜಿ ಪರಮೇಶ್ವರ್, ಸತೀಶ್ ಜಾರಕಿಹೊಳಿ, ಎಂಬಿ ಪಾಟೀಲ್ ಅವರಂತಹ ಘಟನಾನುಘಟಿ ನಾಯಕರು ಇದಕ್ಕೆ ಧ್ವನಿಯಾಗಿ ನಿಂತಂತೆ ತೋರಿಸಿದರು. ಅಲರ್ಟ್ ಆದ ಡಿಕೆ ಶಿವಕುಮಾರ್ ಹೈಕಮಾಂಡ್ ಮನವೋಲಿಸಿ ಸಿದ್ದು ಬಣಕ್ಕೆ ವಾರ್ನಿಂಗ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು.
ಹೆಚ್ಚುವರಿ ಡಿಸಿಎಂ ಬೇಡಿಕೆಗೆ ಹೈಕಮಾಂಡ್ ಮಣಿಯದಂತೆ ಡಿಕೆಶಿ ಲೋಕಸಭೆಯಲ್ಲಿ ಒಕ್ಕಲಿಗ ಮತಗಳನ್ನು ಸೆಳೆಯುವ ಭರವಸೆ ನೀಡಿದ್ದರು. ಅಲ್ಲದೆ, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಹಿನ್ನಲೆಯಲ್ಲಿ ಆ ಸಮುದಾಯದ ಮತಗಳನ್ನು ಸೆಳೆಯಲು ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ತಪ್ಪು ಸಂದೇಶ ನೀಡುತ್ತದೆ ಎಂಬ ವಾದ ಮುಂದಿಟ್ಟಿದ್ದರು. ಹೀಗಾದರೂ ಸಿದ್ದು ಬಣದ ಬಿಗಿಪಟ್ಟಿಗೆ ಮಣಿಯದ ಹೈಕಮಾಂಡ್ ಲೋಕ ಚುನಾವಣೆ ಮುಗಿಯುವವರೆಗೂ ಸುಮ್ಮನಿರುವಂತೆ ಸೂಚನೆ ನೀಡಿತ್ತು. ಆದರೆ, ಫಲಿತಾಂಶ ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕಾಂಗ್ರೆಸ್ ಪರವಾಗಿ ಬಂದಿಲ್ಲ. ಅದರಲ್ಲೂ ಡಿಕೆ ಶಿವಕುಮಾರ್ ಅವರಿಗೆ ಈ ಫಲಿತಾಂಶ ತೀವ್ರ ಹಿನ್ನಡೆಯಂತೂ ಮಾಡಿತು.
ಹೀಗಾಗಿ ಫಲಿತಾಂಶದ ನಂತರ ಕೆ ಎನ್ ರಾಜಣ್ಣ ಹಾಗೂ ಅವರ ಬಣ ಮತ್ತೆ ಹೆಚ್ಚುವರಿ ಡಿಸಿಎಂ ಬೇಡಿಕೆ ಮೊಳಗಿಸಲು ಮುಂದಾದರು. ಇದರೊಂದಿಗೆ ಮತ್ತೊಂದು ದಾಳವನ್ನೂ ಉರುಳಿಸಲಾಯಿತು ಅದೇನೆಂದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನ. ಸರ್ಕಾರ ರಚನೆಯ ಸಂದರ್ಭದಲ್ಲಿ ಹೈಕಮಾಂಡ್ ಕೊಟ್ಟ ಮಾತಿನಂತೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡಬೇಕು ಹಾಗೂ ಬೇರೆ ಸಮುದಾಯಕ್ಕೆ ಅದನ್ನು ಉಡುಗೊರೆಯಾಗಿ ನೀಡಬೇಕೆಂದು ತಂತ್ರ ಹೆಣೆಯಿತು.
ಅದರಲ್ಲಿಯೂ ಪ್ರಮುಖವಾಗಿ ಲಿಂಗಾಯತ ಸಮುದಾಯಕ್ಕೆ ಅಧ್ಯಕ್ಷ ಪಟ್ಟ ಕಟ್ಟಬೇಕೆಂಬ ಪಟ್ಟನ್ನೇ ಹಿಡಿದಂತೆ ವರ್ತಿಸಲು ಆರಂಭಿಸಿತು. ಸಿಎಂ ಆಯ್ಕೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಹಾಗೂ ಡಿಕೆ ಶಿವಕುಮಾರ್ ಒಬ್ಬರನ್ನೇ ಡಿಸಿಎಂ ಆಗಿ ಆಯ್ಕೆ ಮಾಡುತ್ತೇವೆ ಎಂದು ಹೈಕಮಾಂಡ್ ನಿರ್ಧಾರಕ್ಕೆ ಬಂದಿತ್ತು. ಈ ವೇಳೆ ಡಿಕೆ ಶಿವಕುಮಾರ್ ಲೋಕಸಭೆ ಚುನಾವಣೆ ಆಗುವ ತನಕ ಕೆಪಿಸಿಸಿ ಅಧ್ಯಕ್ಷರಾಗಿ ಇರುತ್ತಾರೆ ಎಂದು ಹೈಕಮಾಂಡ್ ಹೇಳಿತ್ತು. ಅದನ್ನು ನೆನಪು ಮಾಡಿಕೊಡಲು ಇಷ್ಟಪಡುತ್ತೇನೆ. ಎಲ್ಲ ಸಮುದಾಯದವರೂ ಅಧ್ಯಕ್ಷರಾಗಲು ಅರ್ಹರು. ಲಿಂಗಾಯತ ನಾಯಕರು ಅಧ್ಯಕ್ಷ ಸ್ಥಾನ ಕೇಳುತ್ತಿರುವುದರಲ್ಲಿ ತಪ್ಪೇನಿಲ್ಲ ಎಂದು ಸಚಿವ ಕೆ.ಎನ್ ರಾಜಣ್ಣ ವಾದಿಸಲು ಆರಂಭಿಸಿದರು.
ಆದರೆ, ವಿಷಯ ಇದಲ್ಲ, ರಾಜ್ಯದಲ್ಲಿ ಹೆಚ್ಚುವರಿ ಡಿಸಿಎಂ ಬೇಡಿಕೆ ಚರ್ಚೆಗಳು ಮುನ್ನೆಲೆಗೆ ಬಂದ ಸಂದರ್ಭದಲ್ಲಿಯೇ ಸಿಎಂ ಸಿದರಾಮಯ್ಯ ಮುಂದೆ ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡಿ ಎಂದು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಬೇಡಿಕೆ ಇಟ್ಟಿದ್ದಾರೆ. ಇದು ಡಿಕೆಶಿಗೆ ಶಕ್ತಿ ತುಂಬಿದಂತಾಗಿದೆ.
ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಚಂದ್ರಶೇಖರ ಸ್ವಾಮೀಜಿ, ಸಿದ್ದರಾಮಯ್ಯ ಅವರಿಗೆ ವೇದಿಕೆಯಲ್ಲೇ ಬಹಿರಂಗವಾಗಿ ಈ ಬೇಡಿಕೆಯನ್ನು ಇಟ್ಟಿದ್ದಾರೆ. ಎಲ್ಲರೂ ರಾಜ್ಯದ ಸಿಎಂ ಆಗಿ ತಮ್ಮ ತಮ್ಮ ಅಧಿಕಾರ ಅನುಭವಿಸಿದ್ದಾರೆ. ಆದರೆ ಡಿಕೆ ಶಿವಕುಮಾರ್ ಒಬ್ಬರು ಮುಖ್ಯಮಂತ್ರಿ ಆಗಿಲ್ಲ. ಸಿದ್ದರಾಮಯ್ಯ ಅವರು ಈಗಾಗಲೇ ಸಿಎಂ ಸ್ಥಾನ ಅನುಭವಿಸಿದ್ದಾರೆ. ಆ ಕಾರಣಕ್ಕಾಗಿ ಇನ್ನು ಮುಂದೆ ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇದು ವೇದಿಕೆಯಲ್ಲಿಯೇ ಇದ್ದ ಸಿಎಂ ಸಿದ್ದರಾಮಯ್ಯ ಅವರ ಮುಜುಗರಕ್ಕೂ ಕಾರಣವಾಯಿತು.
ಆದರೆ, ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಮಾಡಬೇಕಾ? ಹೆಚ್ಚುವರಿ ಡಿಸಿಎಂ ಸ್ಥಾನ ಸೃಷ್ಟಿ ಮಾಡಬೇಕಾ? ಎಂಬ ಪ್ರಶ್ನೆಗೆ ಹೈಕಮಾಂಡ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸದ್ಯ ರಾಜ್ಯದ ಪ್ರಮುಖ ನಾಯಕರು ದೆಹಲಿಗೆ ತೆರಳಿದ್ದಾರೆ. ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಟ್ಟದ ನಾಯಕರ ಜೊತೆಗೆ ಈ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಆದರೆ, ಅಭಿವೃದ್ಧಿ ವಿಚಾರ ಬಿಟ್ಟು ಕಾಂಗ್ರೆಸ್ ಸಿಎಂ, ಡಿಸಿಎಂಗಾಗಿ ಕಿತ್ತಾಡುತ್ತಿದ್ದರೆ, ಜನ ಛೀಮಾರಿ ಹಾಕುವುದಂತೂ ಗ್ಯಾರಂಟಿ!