ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯ ಮತ್ತು ರಾಜತಾಂತ್ರಿಕ ವೈಫಲ್ಯಗಳಿಂದಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅಸ್ಥಿರವಾಗಿದ್ದ ಪಾಕಿಸ್ತಾನವು ಇಂದು ಜಾಗತಿಕ ಮಟ್ಟದಲ್ಲಿ ಮಧ್ಯವರ್ತಿ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ಬ್ರೋಕನ್ ಅಂದರೆ ಮುರಿದು ಬಿದ್ದಿದ್ದ ದೇಶವೊಂದನ್ನು ಬ್ರೋಕರ್ ಅಂದರೆ ದಲ್ಲಾಳಿ ಅಥವಾ ಸಂಧಾನಕಾರನನ್ನಾಗಿ ಪರಿವರ್ತಿಸಿದ್ದು ಮೋದಿ ಅವರ ಸಾಧನೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ವ್ಯಂಗ್ಯವಾಡಿದ್ದಾರೆ.
ವಿದೇಶಾಂಗ ಸಚಿವರಿಗೆ ತಿರುಗೇಟು
ಇತ್ತೀಚೆಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು, ಪಾಕಿಸ್ತಾನದಂತೆ ನಮ್ಮದು ದಲ್ಲಾಳಿ ದೇಶವಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಜೈರಾಮ್ ರಮೇಶ್, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಪಾಕಿಸ್ತಾನವು ಈಗ ಪ್ರಮುಖ ಸಂಧಾನಕಾರನಾಗಿ ಹೊರಹೊಮ್ಮುತ್ತಿದೆ. ಇದು ಭಾರತದ ಪ್ರಾದೇಶಿಕ ರಾಜತಾಂತ್ರಿಕತೆಗೆ ಉಂಟಾದ ಅತಿದೊಡ್ಡ ಹಿನ್ನಡೆಯಾಗಿದೆ. ಈ ಸತ್ಯವನ್ನು ಅರಿತಿರುವ ಜೈಶಂಕರ್ ಅವರು, ಭಾರತಕ್ಕೆ ಉಂಟಾಗಿರುವ ಈ ತೀವ್ರ ಮುಜುಗರವನ್ನು ಮುಚ್ಚಿಹಾಕಲು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ವಿಶ್ವಗುರುವಿನ ವಿಶಿಷ್ಟ ಕೊಡುಗೆ
ಪ್ರಧಾನಿ ಮೋದಿ ಅವರ ರಾಜತಾಂತ್ರಿಕತೆಯು ಕೇವಲ ಪ್ರಚಾರ ಮತ್ತು ಆಡಂಬರದಿಂದ ಕೂಡಿದೆಯೇ ಹೊರತು ವಾಸ್ತವದಲ್ಲಿ ಅದು ಹೇಡಿತನದಿಂದ ಕೂಡಿದೆ. ಇದಕ್ಕೆ ಸಾಕ್ಷಿಯೇ ಪಾಕಿಸ್ತಾನವು ಇಂದು ಮಧ್ಯವರ್ತಿ ಪಾತ್ರವನ್ನು ಪಡೆಯುತ್ತಿರುವುದು. ನಮ್ಮ ರಾಜತಾಂತ್ರಿಕ ವೈಫಲ್ಯಗಳು ಒಂದು ಅಸ್ಥಿರ ದೇಶವನ್ನು ಬ್ರೋಕರ್ ದೇಶವನ್ನಾಗಿ ಮಾಡಿದೆ. ಇದು ಸ್ವಯಂ ಘೋಷಿತ ವಿಶ್ವಗುರುಗಳು ದೇಶಕ್ಕೆ ನೀಡಿದ ವಿಶಿಷ್ಟ ಕೊಡುಗೆಯಾಗಿದೆ. ವಿದೇಶಾಂಗ ಸಚಿವರು ಎಷ್ಟೇ ಸಮರ್ಥನೆ ಮಾಡಿಕೊಂಡರೂ ಈ ಕಟುಸತ್ಯವನ್ನು ಅಳಿಸಲು ಸಾಧ್ಯವಿಲ್ಲ ಎಂದು ರಮೇಶ್ ಟೀಕಿಸಿದ್ದಾರೆ.
ಶಾಂತಿ ಮಾತುಕತೆಗೆ ಅಥವಾ ಸಂಧಾನಕ್ಕೆ ಪಾಕಿಸ್ತಾನ ಯೋಗ್ಯವೆಂದು ಪರಿಗಣಿಸುತ್ತಿರುವುದು ನಿಜಕ್ಕೂ ಅತಿರೇಕದ ಸಂಗತಿ. ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಭಾರತ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಭಯೋತ್ಪಾದನೆಯನ್ನು ಪ್ರಾಯೋಜಿಸಿದ ಕುಖ್ಯಾತಿ ಪಾಕಿಸ್ತಾನಕ್ಕಿದೆ. ಒಸಾಮಾ ಬಿನ್ ಲಾಡೆನ್ ನಂತಹ ಜಾಗತಿಕ ಭಯೋತ್ಪಾದಕರಿಗೆ ದಶಕಗಳ ಕಾಲ ಆಶ್ರಯ ನೀಡಿದ ಹಾಗೂ ಪರಮಾಣು ಪ್ರಸರಣ ರಹಿತ ಕಾನೂನುಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಪರಮಾಣು ತಂತ್ರಜ್ಞಾನ ಹಂಚಿದ ದೇಶವೊಂದು ಇಂದು ಶಾಂತಿಧೂತನಾಗಲು ಹೊರಟಿರುವುದು ವಿಪರ್ಯಾಸ ಎಂದು ಕಾಂಗ್ರೆಸ್ ಹೇಳಿದೆ.
ಮನಮೋಹನ್ ಸಿಂಗ್ ವರ್ಸಸ್ ಮೋದಿ ಸರ್ಕಾರ
ಈ ಸಂದರ್ಭದಲ್ಲಿ ಕಾಂಗ್ರೆಸ್, ಯುಪಿಎ ಅವಧಿಯ ರಾಜತಾಂತ್ರಿಕತೆಯನ್ನು ಸ್ಮರಿಸಿದೆ. ಮುಂಬೈನಲ್ಲಿ 26/11ರ ಭಯೋತ್ಪಾದನಾ ದಾಳಿ ನಡೆದಾಗ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಸರ್ಕಾರವು ಪಾಕಿಸ್ತಾನದ ದುಷ್ಕೃತ್ಯಗಳನ್ನು ಜಗತ್ತಿಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿತ್ತು. ಆ ಮೂಲಕ ಪಾಕಿಸ್ತಾನವನ್ನು ಜಾಗತಿಕವಾಗಿ ಏಕಾಂಗಿಯನ್ನಾಗಿ ಮಾಡಿತ್ತು. ಆದರೆ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದನಾ ದಾಳಿಯ ನಂತರ ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಒಂಟಿಯಾಗಿಸಲು ಮೋದಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಬದಲಾಗಿ ಪಾಕ್ ಸೇನಾ ಮುಖ್ಯಸ್ಥ ಅಸಿಂ ಮುನೀರ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತವಲಯದಲ್ಲಿ ಗುರುತಿಸಿಕೊಳ್ಳುವಂತಾಗಿದೆ ಎಂದು ಜೈರಾಮ್ ರಮೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ರಷ್ಯಾ ಉಕ್ರೇನ್ ಯುದ್ಧದಲ್ಲಿ ಭಾರತ ಬ್ರೋಕರ್ ಆಗಿತ್ತೇ
ಇದೇ ವೇಳೆ ಜೈಶಂಕರ್ ಅವರ ದಲ್ಲಾಳಿ ದೇಶ ಹೇಳಿಕೆಗೆ ಕಾಂಗ್ರೆಸ್ ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಕೂಡ ತಿರುಗೇಟು ನೀಡಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಮಧ್ಯಸ್ಥಿಕೆ ವಹಿಸಲು ಪ್ರಧಾನಿ ಮೋದಿ ಅವರು ಹಪಹಪಿಸುತ್ತಿದ್ದಾಗ ಭಾರತವು ಬ್ರೋಕರ್ ದೇಶ ಆಗಿತ್ತೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಇದು ನಿಮ್ಮ ಆಯ್ದ ಮಧ್ಯಸ್ಥಿಕೆಯೇ ಅಥವಾ ಆಯ್ದ ನೆನಪಿನ ಶಕ್ತಿಯೇ ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಒಟ್ಟಾರೆಯಾಗಿ, ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ತಗ್ಗುತಿದ್ದು, ಅಸ್ಥಿರವಾಗಿದ್ದ ಪಾಕಿಸ್ತಾನವು ಅಮೆರಿಕದ ನೆರವಿನೊಂದಿಗೆ ಪ್ರಮುಖ ರಾಜತಾಂತ್ರಿಕ ಪಾತ್ರವನ್ನು ವಹಿಸಿಕೊಳ್ಳುತ್ತಿರುವುದು ಮೋದಿ ಸರ್ಕಾರದ ವೈಫಲ್ಯ ಎಂದು ಕಾಂಗ್ರೆಸ್ ಬಣ್ಣಿಸಿದೆ.







