ಬೆಂಗಳೂರು: ಕೊರೊನಾ ಮೆಡಿಕಲ್ ಉಪಕರಣಗಳ ಖರೀದಿಯಲ್ಲಿ ನಡೆದಿರುವ 2 ಸಾವಿರ ಕೋಟಿ ಹಗರಣವನ್ನು ಕಲಿಯುಗದ ಕರ್ಮಕಾಂಡ ಎನ್ನಬೇಕೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಕೊರೊನಾ ಉಪಕರಣ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ದಾಖಲೆ ಬಿಡುಗಡೆ ವೇಳೆ ಮಾತನಾಡಿದ ಡಿ.ಕೆ ಶಿವಕುಮಾರ್, ರಾಜ್ಯ ಸರ್ಕಾರ ಹಣ ಲೂಟಿ ಮಾಡುವುದು ಬಿಟ್ಟರೆ ಬೇರೇನೂ ಮಾಡುತ್ತಿಲ್ಲ. ಆಹಾರ ಕಿಟ್, ಬಾಣಂತಿಯರ ಕಿಟ್ನಲ್ಲಿ ಬಿಜೆಪಿಯವರ ಫೋಟೊ ಹಾಕಿಕೊಂಡು ಹಂಚಿ ರಾಜಕೀಯ ಮಾಡಿದ್ದಾರೆ. ಕೊರೊನಾದಿಂದ ಸತ್ತವರ ಹೆಣದ ಮೇಲೆ ಲೂಟಿ ಹೊಡೆದಿದ್ದೀರಿ. ಇದಕ್ಕೆ ನಿಮ್ಮ ಸರ್ಕಾರಕ್ಕೆ ಸಹಕಾರ ಕೊಡಬೇಕಾ ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿಗಳೇ ನಾವು ಯಾವಾಗ ಸರ್ಕಾರಕ್ಕೆ ಸಹಕಾರ ಕೊಟ್ಟಿಲ್ಲ ಹೇಳಿ. ಪಕ್ಷವನ್ನು ಭೇದ ಮರೆತು ಸಹಕಾರ ಕೊಟ್ಟಿದ್ದೇವೆ. 4 ಗಂಟೆಯಲ್ಲಿ ದೇಶಾದ್ಯಂತ ಲಾಕ್ಡೌನ್ ಮಾಡಿದಿರಿ, 120 ದಿನ ನಾವು ಸಹಿಸಲಿಲ್ಲವೇ..? ಕೊರೊನಾದಿಂದ ಸತ್ತವರ ಹೆಣದ ಮೇಲೆ ಲೂಟಿ ಹೊಡೆದಿದ್ದೀರಿ. ಕೊರೊನಾ ಸೋಂಕು ಜತೆಗೆ ಭ್ರಷ್ಟಾಚಾರದ ಸೋಂಕನ್ನು ಹಂಚಿದ್ದೀರಿ.
ಆಹಾರ ಕಿಟ್, ಬಾಣಂತಿಯರ ಕಿಟ್ನಲ್ಲಿ ಬಿಜೆಪಿಯವರ ಫೋಟೊ ಹಾಕಿ ಹಂಚಿದ್ದಾರೆ. ಇದಕ್ಕೆ ನಿಮಗೆ ಸಹಕಾರ ಕೊಡಬೇಕಾ. ಈ ಸರ್ಕಾರಕ್ಕೆ ಹಣ ಲೂಟಿ ಮಾಡುವುದು ಬಿಟ್ಟರೆ ಬೇರೇನೂ ಇಲ್ಲ ಎಂದರು.
ಆಶಾ ಕಾರ್ಯಕರ್ತೆಯರು ಧರಣಿ ಆರಂಭಿಸಿ 14 ದಿನ ಆಗಿದೆ. ಇಲ್ಲಿಯವರೆಗೆ ಸರ್ಕಾರದಿಂದ ಒಬ್ಬರೂ ಅವರನ್ನು ಮಾತನಾಡಿಸಿಲ್ಲ. ಆಶಾ ಕಾರ್ಯಕರ್ತೆರಿಗೆ ಸಂಬಳ ಕೊಟ್ಟಿಲ್ಲ, ಅವರಿಗೆ ಇನ್ಸೂರೆನ್ಸ್ ಮಾಡಿಸಿದ್ದೀರಾ ಎಂದು ಪ್ರಶ್ನಿಸಿದ ಡಿಕೆಶಿ,
ಸರ್ಕಾರ ನಡೆಸಲು ಅಸಮರ್ಥರಾಗಿದ್ದೀರಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಪ್ರಹಾರ ನಡೆಸಿದರು.
ಕೊರೊನಾ ಸಂಕಷ್ಟದಲ್ಲಿ ಲೂಟಿ..!
ರಾಜ್ಯದಲ್ಲಿ ಜನರು ಬೆಡ್ ಇಲ್ಲದೆ, ಅಂಬ್ಯುಲೆನ್ಸ್, ಚಿಕಿತ್ಸೆ ಇಲ್ಲದೆ ಜನರು ಪರದಾಡುತ್ತಿದ್ದಾರೆ. ಕರ್ನಾಟಕದಲ್ಲಿ ಸಾವು ನೋವು ಹೆಚ್ಚಾಗುತ್ತಿದೆ. 10 ಲಕ್ಷ ವಲಸೆ ಕಾರ್ಮಿಕರು ನರಕಯಾತನೆ ಅನುಭವಿಸಿದ್ದಾರೆ. ಕೊರೊನಾ ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮಂತ್ರಿಗಳು, ಅಧಿಕಾರಿಗಳು ಕೊರೊನಾ ಸಂಕಷ್ಟದಲ್ಲಿ ಲೂಟಿ ಹೊಡೆಯಲು ನಿಂತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ನಾನು ಜೂನ್ 9, ಜುಲೈ 3 ರಂದು ಸಿಎಂ ಯಡಿಯೂರಪ್ಪ ಹಾಗೂ ಮತ್ತೆ ಮುಖ್ಯ ಕಾರ್ಯರ್ಶಿಗೆ ಜುಲೈ 10 ಸೇರಿ ವಿವಿಧ ಇಲಾಖೆಗಳಿಗೆ 20 ಪತ್ರ ಬರೆದಿದ್ದೇನೆ. ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅರೆಬರೆ ಉತ್ತರ ಕೊಟ್ಟಿದ್ದು ಬಿಟ್ಟರೆ ಬೇರೆ ಯಾರಿಂದಲೂ ನನ್ನ ಪತ್ರಗಳಿಗೆ ಸರ್ಕಾರದಿಂದ ಉತ್ತರ ಬಂದಿಲ್ಲ. ನನ್ನ ಪತ್ರಗಳಿಗೆ ಸರ್ಕಾರ ಯಾಕೆ ಉತ್ತರ ನೀಡಿಲ್ಲ. ಸರ್ಕಾರ ಸತ್ಯ ಮುಚ್ಚಿಡಲು ಪ್ರಯತ್ನಿಸುತ್ತಿದೆಯಾ ? ನಿಮ್ಮ ವ್ಯವಹಾರದಲ್ಲಿ ಪಾರದರ್ಶಕತೆ ಇದ್ದಿದ್ದರೆ, ಪ್ರಾಮಾಣಿಕತೆ ಇದ್ದಿದ್ದರೆ ಉತ್ತರ ಕೊಡಲು ಇಷ್ಟು ದಿನ ಬೇಕಿತ್ತಾ ? ಎಂದು ಪ್ರಶ್ನಿಸಿದ್ದಾರೆ.
ಜನರ ಜೀವ ಉಳಿಸಲು ಸರ್ಕಾರಕ್ಕೆ ನಮ್ಮ ಬೆಂಬಲ ಒಂದು ಹೆಜ್ಜೆ ಮುಂದೆಯೇ ಇರುತ್ತದೆ. ಉಪಕರಣ ಖರೀದಿಗೆ 324 ಕೋಟಿ ಮಾತ್ರ ಖರೀದಿ ಮಾಡಿದ್ದೇವೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅಶ್ವತ್ಥ ನಾರಾಯಣ ಹೇಳಿದ್ದಾರೆ. ಆದರೆ ಮಾರುಕಟ್ಟೆ ದರಕ್ಕಿಂತ ಮೂರು ಪಟ್ಟು ಕೊಟ್ಟು ಖರೀದಿ ಮಾಡಿದ್ದಾರೆ. ಈ ಸರ್ಕಾರ ಜನರ ದುಡ್ಡು ಹೊಡೆಯಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದರು.