ಕೋವಿಡ್ ಕೇರ್ ಸೆಂಟರ್ ನಿಂದ 20 ಸೋಂಕಿತರು ಎಸ್ಕೇಪ್..!
ಮುಂಬೈ : ದೇಶಾದ್ಯಂತ ಕೊರೊನಾ ರಣಕೇಕೆಗೆ ಜನ ನಲುಗಿಹೋಗಿದ್ದಾರೆ. ಆತಂಕಕ್ಕೀಡಾಗಿದ್ದಾರೆ. ಇದರ ಬೆನ್ನಲ್ಲೇ ಮಹಾರಾಷ್ಟ್ರದಲ್ಲೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕೋವಿಡ್ ಕೇರ್ ಸೆಂಟರ್ ನಿಂದ ಕೋವಿಡ್ ಸೋಂಕಿತರು ತಪ್ಪಿಸಿಕೊಂಡ ಘಟನೆ ಯವತ್ಮಾಲ್ ಜಿಲ್ಲೆಯಲ್ಲಿ ನಡೆದಿದೆ.
ಯವತ್ಮಾಲ್ ಜಿಲ್ಲೆಯ ಘಟಾಂಜಿ ತಾಲೂಕಿನ ವಿದ್ಯಾರ್ಥಿಗಳ ಹಾಸ್ಟೆಲ್ ನನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿತ್ತು. ಅಲ್ಲಿ ಆರೈಕೆಯಲ್ಲಿದ್ದ ಸೋಂಕಿತರು ತಪ್ಪಿಸಿಕೊಂಡಿದ್ದಾರೆ ಎಂದು ಆರೋಗ್ಯ ಅಧಿಕಾರಿ ಡಾ. ಸಂಜಯ್ ಪುರಮ್ ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಘಟಾಂಜಿ ತಾಲೂಕು ಪೊಲೀಸ್ ಠಾಣೆಯಲ್ಲಿ ಸುಮಾರು 20 ಮಂದಿ ಸೋಂಕಿತರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು, ಜಿಲ್ಲೆಯ ಅಮ್ಡಿ ಗ್ರಾಮದಲ್ಲಿ ಶುಕ್ರವಾರ ಕೋವಿಡ್ -19 ಪರೀಕ್ಷಾ ಶಿಬಿರವನ್ನು ಆಯೋಜಿಸಲಾಗಿದೆ, ಪರೀಕ್ಷೆಯಲ್ಲಿಪಾಸಿಟಿವ್ ವರದಿ ಬಂದ 19 ಮಂದಿಯನ್ನು ಘಟಾಂಜಿಯ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗಿತ್ತು. ಆ ಎಲ್ಲಾ 19 ರೋಗಿಗಳು ಮತ್ತು ಇನ್ನೊಬ್ಬ ವ್ಯಕ್ತಿ ಶನಿವಾರ ಪರಾರಿಯಾಗಿದ್ದಾರೆ ಎಂದು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಸದ್ಯಕ್ಕೆ ಅವರ ವಿರುದ್ಧ ಅವರ ವಿರುದ್ಧ ಪ್ರಕರಣಗಳು ದಾಖಲಾಗಿದ್ದು, ಅವರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.








