ಕೇರಳ- ಸೆಪ್ಟೆಂಬರ್ ನಲ್ಲಿ ಕೋವಿಡ್ ಪ್ರಕರಣಗಳು ಘಾತೀಯವಾಗಿ ಹೆಚ್ಚಳ – ರಾಜ್ಯ ಸರ್ಕಾರ ಎಚ್ಚರಿಕೆ
ತಿರುವನಂತಪುರಂ, ಅಗಸ್ಟ್ 15: ಕೇರಳದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಕೋವಿಡ್ ಸಕಾರಾತ್ಮಕ ಪ್ರಕರಣಗಳು ಘಾತೀಯವಾಗಿ ಹೆಚ್ಚಾಗಬಹುದು ಎಂದು ರಾಜ್ಯ ಆರೋಗ್ಯ ಇಲಾಖೆ ಸ್ಪಷ್ಟವಾದ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಕೊರೋನಾ ಸೋಂಕಿನ ವಿರುದ್ಧ ಹೋರಾಡಲು ರಾಜ್ಯ ಸರ್ಕಾರವು ಲಭ್ಯವಿರುವ ಎಲ್ಲ ಸಂಪನ್ಮೂಲಗಳೊಂದಿಗೆ ಮಾನವಶಕ್ತಿ ಮತ್ತು ತಾಂತ್ರಿಕ ಪರಿಣತಿಯನ್ನು ಸಜ್ಜುಗೊಳಿಸುತ್ತಿದೆ.
ಸೆಪ್ಟೆಂಬರ್ನಿಂದ ಪ್ರಕರಣಗಳು ಹೆಚ್ಚಾಗಲಿವೆ ಎಂಬ ತಜ್ಞರ ಅಭಿಪ್ರಾಯ ಸರ್ಕಾರಕ್ಕೆ ಬಂದಿದೆ ಎಂದು ರಾಜ್ಯ ಆರೋಗ್ಯ ಸಚಿವ ಕೆ.ಕೆ.ಶೈಲಜಾ ಹೇಳಿದ್ದಾರೆ. ರಾಜ್ಯವು ಪ್ರತಿದಿನ 10,000 ರಿಂದ 20,000 ಪ್ರಕರಣಗಳನ್ನು ನಿರೀಕ್ಷಿಸಬಹುದು ಮತ್ತು ಹೆಚ್ಚಿನ ಸಾವುನೋವುಗಳು ಸಂಭವಿಸಬಹುದು ಎಂದು ಸಚಿವರು ತಿಳಿಸಿದ್ದಾರೆ.

ಪರಿಸ್ಥಿತಿಯನ್ನು ಎದುರಿಸಲು ಆರೋಗ್ಯ ಇಲಾಖೆಯು ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಯ ಕಂಟ್ರಿ ಆಫೀಸ್ ಫಾರ್ ಇಂಡಿಯಾ (ಡಬ್ಲ್ಯುಸಿಒ) ಸೇರಿದಂತೆ ಏಜೆನ್ಸಿಗಳ ತಾಂತ್ರಿಕ ಸಲಹೆ ಮತ್ತು ಪರಿಣತಿಯನ್ನು ಕೋರಿದೆ. ಕೋವಿಡ್ ಬ್ರಿಗೇಡ್’ ಬ್ಯಾನರ್ ಅಡಿಯಲ್ಲಿ ಕೊರೋನಾ ತಡೆಗಟ್ಟುವ ಪ್ರಯತ್ನಗಳು ನಡೆಯುತ್ತಿವೆ.
ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳದೊಂದಿಗೆ ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತದೆ ಎಂದು ನಾವು ಅರ್ಥಮಾಡಿಕೊಳ್ಳಬೇಕು. ಆದ್ದರಿಂದ, ನಾವು ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಹಿಡಿತ ಸಾಧಿಸಬೇಕು. ಅದಕ್ಕಾಗಿ ನಮಗೆ ಸಾರ್ವಜನಿಕರ ಸಂಪೂರ್ಣ ಬೆಂಬಲ ಬೇಕಾಗುತ್ತದೆ. ಅವರು ಕಟ್ಟುನಿಟ್ಟಾಗಿ ಆರೋಗ್ಯ ಪ್ರೋಟೋಕಾಲ್ ಗಳನ್ನು ಅನುಸರಿಸಬೇಕು ಎಂದು ಆರೋಗ್ಯ ಸಚಿವ ಕೆ.ಕೆ.ಶೈಲಜಾ ಮನವಿ ಮಾಡಿದ್ದಾರೆ.
ಕೊರೋನಾ ವೈರಸ್ ಕೇಂದ್ರಬಿಂದುವಾಗಿರುವ ಚೀನಾದ ವುಹಾನ್ನಿಂದ ರಾಜ್ಯಕ್ಕೆ ಮರಳಿದ ನಂತರ ವೈದ್ಯಕೀಯ ವಿದ್ಯಾರ್ಥಿಯೊಬ್ಬನಿಗೆ ಜನವರಿ ತಿಂಗಳಲ್ಲಿ ಕೋವಿಡ್ -19 ಸೋಂಕು ದೃಢಪಡುವುದರ ಮೂಲಕ ರಾಜ್ಯದಲ್ಲಿ ಮೊದಲ ಪ್ರಕರಣ ವರದಿಯಾಯಿತು. ಮೇ 5 ರಂದು ರಾಜ್ಯದಲ್ಲಿ 500 ಪ್ರಕರಣಗಳು ವರದಿಯಾಗಿದ್ದವು. ಆದರೆ, ಇದು ಮೇ 27 ರ ವೇಳೆಗೆ 1000 ಕ್ಕೆ ದ್ವಿಗುಣಗೊಂಡಿತು. ಜುಲೈ 4 ರಂದು ಕೇರಳದಲ್ಲಿ 4000 ಪ್ರಕರಣಗಳು ವರದಿಯಾಗಿದ್ದರೆ, ಜುಲೈ 16 ರ ವೇಳೆಗೆ ರಾಜ್ಯವು 10,000 ದಾಟಿದೆ ಮತ್ತು ಜುಲೈ ಅಂತ್ಯದ ವೇಳೆಗೆ ರಾಜ್ಯದಲ್ಲಿ 20,000 ಕೋವಿಡ್-19 ಪ್ರಕರಣಗಳು ವರದಿಯಾಗಿವೆ.

ಆಗಸ್ಟ್ 14 ರಂದು ಕೇರಳದಲ್ಲಿ 1564 ಪ್ರಕರಣಗಳು ಪತ್ತೆಯಾಗಿದ್ದು ಈ ಮೂಲಕ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 39,708 ಮತ್ತು ಮಾರ್ಚ್ನಿಂದ ಸಾವಿನ ಸಂಖ್ಯೆ 129 ಎಂದು ವರದಿಯಾಗಿದೆ. ಈ ನಡುವೆ, ರಾಜ್ಯದ ಮೊದಲ ಕೋವಿಡ್ ಆಸ್ಪತ್ರೆ ಕಾಸರಗೋಡಿನಲ್ಲಿ ತೆರೆಯಲು ಸಜ್ಜಾಗಿದೆ. 5 ಎಕರೆ ಭೂಮಿಯಲ್ಲಿ 541 ಹಾಸಿಗೆಗಳನ್ನು ಹೊಂದಿರುವ ಆಸ್ಪತ್ರೆಯನ್ನು ಸ್ಥಾಪಿಸಲಾಗುತ್ತಿದೆ.








