ಕಳೆದೆರೆಡು ದಿನಗಳಿಂದ ರಾಜ್ಯದಲ್ಲಿ ಸುರಿದ ಮಳೆ ಈಗಾಗಲೇ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದ್ದು, ಇನ್ನು ಮೂರು ದಿನ ಇದೇ ಮಳೆ ಮುಂದುವರಿದರೆ ಕಷ್ಟವಾಗಲಿದೆ ಎಂದು ಸಚಿವ ಸಿಟಿ ರವಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಕಂದಾಯ ಸಚುವ ಆರ್ ಅಶೋಕ್ ಜತೆಗಿನ ಸಭೆಗೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಸಿಟಿ ರವಿ ಅವರು “ಚಿಕ್ಕಮಗಳೂರಿನಲ್ಲಿ200 ರಿಂದ 250 ಮಿ ಮೀ ಮಳೆ ಆಗಿದೆ. ಮನೆಗಳು, ಬಿದ್ದಿವೆ, ತೋಟಗಳು ನೆಲಕಚ್ಚಿವೆ. ಎರಡು ತಾತ್ಕಾಲಿಕ ಸೇತುವೆ ಕೊಚ್ಚಿಹೋಗಿವೆ. ನಾಳೆಯಿಂದ ಜಿಲ್ಲೆಯಲ್ಲೇ ಇರಲಿದ್ದೇನೆ”, ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಸಕಲ ಸಿದ್ಧತೆಗಳನ್ನು ನಡೆಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಶೃಂಗೇರಿ ಭಾಗಗಳಲ್ಲಿ ಮಳೆಯಿಂದ ಆದ ಅನಾಹುತಗಳ ಬಗ್ಗೆ ಮಾತನಾಡಿದ ಸಿಟಿ ರವಿ ಅವರು ಶೃಂಗೇರಿ,ಮೂಡಿಗೆರೆ ಭಾಗದಲ್ಲಿ ಮಳೆ ಹೆಚ್ಚಿದೆ. ಬಾಳೂರು,ದೇವರಮನೆಯಲ್ಲಿ 300 ಮಿ. ಮೀ ಮಳೆಯಾಗಿದೆ. 12 ಮನೆಗಳು ಜಖಂ ಆಗಿವೆ. ಒಟ್ಟು 67 ಎಕರೆ ಬಾಳೆ ಬೆಳೆ ನಾಶವಾಗಿದೆ. ಕಳೆದ ವರ್ಷ ಲ್ಯಾಂಡ್ ಸ್ಲೈಡ್ ಆಗಿತ್ತು. ಆದೇ ಜಾಗದಲ್ಲಿ ಮತ್ತೆ ಈಗಲೂ ಭೂ ಕುಸಿತವಾಗಿದೆ. ಗುಡ್ಡ ಕುಸಿದು ರಸ್ತೆ ಜಖಂ ಆಗಿತ್ತು, ಈಗ ತೆರವು ಮಾಡಲಾಗಿದೆ. ಪ್ರವಾಹದ ಪರಿಸ್ಥಿತಿ ನಿಯಂತ್ರಣಾ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚನೆಯನ್ನು ಕೊಟ್ಟಿದ್ದೇನೆ” ಎಂದು ತಿಳಿಸಿದ್ದಾರೆ.