ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಅಯೋಗ್ಯ 2 ಚಿತ್ರದ ಪ್ರಚಾರ ಕಾರ್ಯ ಈಗ ಭರ್ಜರಿಯಾಗಿ ಸಾಗುತ್ತಿದೆ. ನಟ ಸತೀಶ್ ನೀನಾಸಂ ತಮ್ಮ ಚಿತ್ರತಂಡದೊಂದಿಗೆ ಹುಬ್ಬಳ್ಳಿಯಲ್ಲಿ ಅಬ್ಬರದ ಪ್ರಚಾರ ನಡೆಸಿದ್ದು, ಈ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಗ್ಗೆ ಆಡಿರುವ ಮಾತುಗಳು ಈಗ ಸಿನಿವಲಯದಲ್ಲಿ ಸಂಚಲನ ಮೂಡಿಸಿವೆ.
ದರ್ಶನ್ ಚಿತ್ರರಂಗದ ಆಸ್ತಿ ಎಂದ ಸತೀಶ್
ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸತೀಶ್ ನೀನಾಸಂ, ದರ್ಶನ್ ಅವರು ನಮ್ಮ ಚಿತ್ರರಂಗದ ಶಕ್ತಿ ಎಂದು ಬಣ್ಣಿಸಿದರು. ಶಿವಣ್ಣ, ಪುನೀತ್ ರಾಜ್ ಕುಮಾರ್ ಹಾಗೂ ಸುದೀಪ್ ಅವರು ನಮ್ಮ ಚಿತ್ರರಂಗಕ್ಕೆ ಹೇಗೆ ಆಸ್ತಿಯೋ, ಅದೇ ರೀತಿ ದರ್ಶನ್ ಕೂಡ ನಮ್ಮ ಇಂಡಸ್ಟ್ರಿಯ ದೊಡ್ಡ ಆಸ್ತಿ. ಅವರು ಎದುರಿಸುತ್ತಿರುವ ಸಂಕಷ್ಟದಿಂದ ಆದಷ್ಟು ಬೇಗ ಹೊರಗೆ ಬರಲಿ ಎಂದು ನಾನು ಆಶಿಸುತ್ತೇನೆ ಎಂದು ಭಾವುಕರಾಗಿ ನುಡಿದರು. ಅಯೋಗ್ಯ 2 ಚಿತ್ರದ ಪ್ರಚಾರಕ್ಕೆ ದರ್ಶನ್ ಅಭಿಮಾನಿಗಳು ನೀಡುತ್ತಿರುವ ಅಭೂತಪೂರ್ವ ಬೆಂಬಲಕ್ಕೆ ಸತೀಶ್ ಈ ಸಂದರ್ಭದಲ್ಲಿ ವಿಶೇಷ ಧನ್ಯವಾದ ಅರ್ಪಿಸಿದರು.
ಸಿದ್ದಾರೂಢ ಮಠದಲ್ಲಿ ವಿಶೇಷ ಪೂಜೆ ಮತ್ತು ಮೆರವಣಿಗೆ
ಹುಬ್ಬಳ್ಳಿಯ ಪ್ರಸಿದ್ಧ ಶ್ರೀ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದ ಚಿತ್ರತಂಡ, ಅಲ್ಲಿ ವಿಶೇಷ ಪೂಜೆ ಸಲ್ಲಿಸಿ ಚಿತ್ರದ ಯಶಸ್ಸಿಗಾಗಿ ಪ್ರಾರ್ಥಿಸಿತು. ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ನಟ ಸತೀಶ್ ನೀನಾಸಂ ಅವರಿಗೆ ಹಾಸ್ಯ ನಟರಾದ ದಡಿಯಾ ಗಿರೀಶ್, ಶಿವರಾಜ್ ಕೆ.ಆರ್.ಪೇಟೆ ಹಾಗೂ ಚಿತ್ರದ ನಿರ್ದೇಶಕ ಮಹೇಶ್ ಕುಮಾರ್ ಸಾಥ್ ನೀಡಿದರು. ಅಭಿಮಾನಿಗಳ ಸಮ್ಮುಖದಲ್ಲಿ ಚಿತ್ರದ ಹುಡುಗಿಯರು ಡೇಂಜರಸ್ ಎಂಬ ಹಾಡಿಗೆ ಕಲಾವಿದರು ಸಖತ್ ಆಗಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಆಗಸ್ಟ್ 7ಕ್ಕೆ ಅಯೋಗ್ಯ 2 ಅಬ್ಬರ ಶುರು
ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಡುಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಅಯೋಗ್ಯ ಸಿನಿಮಾದಲ್ಲಿ ಏನಮ್ಮಿ ಹಾಡು ಎಷ್ಟು ಹಿಟ್ ಆಗಿತ್ತೋ, ಈಗ ಅಯೋಗ್ಯ 2 ಸಿನಿಮಾದ ಮುದ್ದು ಮುದ್ದು ಪುಟ್ಟಲಕ್ಷ್ಮಿ ಮತ್ತು ಹುಡುಗಿಯರು ಡೇಂಜರಸ್ ಹಾಡುಗಳು ಜನರ ಮನ ಗೆಲ್ಲುತ್ತಿವೆ. ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಜೋಡಿಯನ್ನು ಮತ್ತೆ ತೆರೆಮೇಲೆ ನೋಡಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಈ ಬಹುನಿರೀಕ್ಷಿತ ಸಿನಿಮಾ ಆಗಸ್ಟ್ 7 ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲಿದೆ. ಮೊದಲ ಭಾಗದಂತೆ ಈ ಚಿತ್ರವೂ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುವ ಭರವಸೆಯನ್ನು ಚಿತ್ರತಂಡ ವ್ಯಕ್ತಪಡಿಸಿದೆ.







