ಬೆಂಗಳೂರು: ಜೈಲಿನಲ್ಲಿ (Parappana Agrahara Jail) ದರ್ಶನ್ (Darshan)ಗೆ ರಾಜಾತಿಥ್ಯ ಸಿಗುತ್ತಿರುವ ಕುರಿತು ಫೋಟೋವೊಂದು ವೈರಲ್ ಆಗಿತ್ತು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸರ್ಕಾರ ತನಿಖೆಗೆ ಆದೇಶ ನೀಡಿತ್ತು. ಇದರ ಬೆನ್ನಲ್ಲಿಯೇ ಸರ್ಕಾರ 7 ಜನರನ್ನು ಅಮಾನತು ಮಾಡಿದೆ.
ಈ ಕುರಿತು ಮಾತನಾಡಿರುವ ಗೃಹ ಸಚಿವ ಪರಮೇಶ್ವರ್, ಈ ಘಟನೆ ಹೇಗೆ ನಡೆಯಿತು ಎಂಬ ಕುರಿತು ವರದಿ ಕೇಳಿದ್ದೇನೆ. ಯಾವುದೇ ಕಾರಣಕ್ಕೂ ಜೈಲಿನಲ್ಲಿ ಈ ರೀತಿ ನಡೆಯಬಾರದು. ಈ ಪ್ರಕರಣದಲ್ಲಿ 7 ಜನ ಭಾಗಿಯಾಗಿದ್ದಾರೆ ಎಂಬ ಕುರಿತು ವರದಿ ಬರುತ್ತಿದ್ದಂತೆ ಎಲ್ಲರನ್ನೂ ಅಮಾನತು ಮಾಡಲಾಗಿದೆ. ಜೈಲುಗಳಲ್ಲಿ ಜಾಮರ್, ಕ್ಯಾಮೆರಾ ಹಾಕಿದರೂ ಹೀಗೆ ಆಗುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಶರಣ ಬಸವ ಅಮೀನ್ಗಡ್, ಪ್ರಭು ಎಸ್. ಖಂಡೇಲ್ವಾಲ್, ಅಸಿಸ್ಟೆಂಟ್ ಜೈಲರ್ಸ್ ಎಲ್.ಎಸ್. ತಿಪ್ಪೇಸ್ವಾಮಿ, ಶ್ರೀಕಾಂತ್ ತಲವಾರ್, ಹೆಡ್ ವಾರ್ಡರ್ಸ್ ವೆಂಕಪ್ಪ ಕೊರ್ಟಿ, ಸಂಪತ್ ಕುಮಾರ್ ಕಡಪಟ್ಟಿ, ವಾರ್ಡರ್ ಬಸಪ್ಪ ತೇಲಿ ಅವರನ್ನು ಅಮಾತು ಮಾಡಿದ್ದೇವೆ ಎಂದು ಗೃಹ ಸಚಿವ ಪರಮೇಶ್ವರ್ (Parameshwar) ಹೇಳಿದ್ದಾರೆ.
ಈ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳ ಪಾತ್ರವಿದ್ದರೂ ಕ್ರಮ ಕೈಗೊಳ್ಳಲಾಗುವುದು. ಆನಂತರ ಯಾರು ಈ ಫೋಟೋ ತೆಗೆದಿದ್ದಾರೆ. ಯಾರ ಪೋನ್ ನಿಂದ ಈ ಫೋಟೋ ವೈರಲ್ ಆಗಿದೆ. ಸಿಗರೇಟ್ ಹೇಗೆ ಬಂತು ಎಂಬ ಕುರಿತು ಚರ್ಚೆ ನಡೆಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ, ಈ ಫೋಟೋ ವೈರಲ್ ಆಗುತ್ತಿದ್ದಂತೆ ಜನರು ಮಾತ್ರ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜೈಲಿನ ಸ್ಥಿತಿ ಕಂಡು ಬೇಸರಿಸಿಕೊಳ್ಳುತ್ತಿದ್ದಾರೆ. ಉಳ್ಳವರಿಗೆ ಜೈಲಾದರೇನು? ನಾಡಾದರೇನು? ಎಲ್ಲವೂ ಒಂದೇ. ಅವರಿಗೆ ಎಲ್ಲವೂ ರೆಸಾರ್ಟ್ ಇದ್ದಂತೆ ಎಂದು ಬೇಸರಿಸಿಕೊಳ್ಳುತ್ತಿದ್ದಾರೆ.








