ಶಶಿಭೂಷಣ್ ಹೆಗಡೆ ಕಾಂಗ್ರೆಸ್ ಗೆ ಬಂದರೆ ಒಂದು ಕಲ್ಲಲ್ಲಿ ಮೂರು ಹಕ್ಕಿ!; ಶಿರಸಿಯಲ್ಲಿ ದೇಶಪಾಂಡೆಯ ಕುತಂತ್ರದ ರಾಜಕಾರಣ ವರ್ಸಸ್ ಸುಷ್ಮಾ ರಾಜಗೋಪಾಲ ರೆಡ್ಡಿ:
ಉತ್ತರ ಕನ್ನಡದ ರಾಜಕಾರಣ ಯಾವತ್ತಿಗೂ ಅರ್ಥವಾಗದ ನಿಗೂಢ ವಿದ್ಯಮಾನ. ಅಲ್ಲಿ ರಾಜಕಾರಣ ಹೆಚ್ಚು ಸದ್ದು ಮಾಡುವುದಿಲ್ಲ ಸುದ್ದಿಯೂ ಆಗುವುದಿಲ್ಲ. ಅನಂತ್ ಕುಮಾರ್ ಹೆಗಡೆಯೊಬ್ಬರನ್ನು ಹೊರತುಪಡಿಸಿ ಉಳಿದ ರಾಜಕಾರಣಿಗಳು ಸುದ್ದಿ ಗದ್ದಲಗಳಲ್ಲಿ ಕಾಣಿಸಿಕೊಳ್ಳುವುದೂ ವಿರಳ. ಇನ್ನು ಶಿರಸಿ ಸಿದ್ದಾಪುರದ ರಾಜಕಾರಣವಂತೂ ಒಳಗೊಳಗೇ ಬೇಯುವ ಹಿಟ್ಟಿನ ಕಡುಬಿನಂತೆ. ಎಲ್ಲವೂ ತೆರೆಮರೆಯಲ್ಲೇ ನಡೆದು ಹೋಗುತ್ತವೆ. ಸುದ್ದಿ ಮಾಡುವವರ ಇಶಾರೆಗೂ ಅದು ದಕ್ಕುವಂತದ್ದಲ್ಲ. ಶಿರಸಿ ಸಿದ್ದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಾಳೆಯದಲ್ಲಿ ಒಂದಷ್ಟು ಒಳಗೊಳಗೆ ಕಸರತ್ತುಗಳು ನಡೆಯುತ್ತಿವೆ. ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ನಿಮಗಿಲ್ಲಿ ಬೂದಿ ಗುಡ್ಡೆ ಮುಚ್ಚಿದ ರಾಶಿಯೊಳಗಿಂದ ಸಣ್ಣಗೆ ಹೊಗೆಯೊಂದು ಸುಳಿ ತಿರುಗುತ್ತಿರುವುದು ಅರಿವಿಗೆ ಬಂದೀತು.
ಮೊನ್ನೆ ಮೊನ್ನೆ ಸಿಕ್ಕ ವರ್ತಮಾನದ ಅನ್ವಯ ಕಳೆದ ಎರಡೂ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಸೋಲು ಕಂಡಿದ್ದ ಶಶಿಭೂಷಣ್ ಹೆಗಡೆ ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ. ಈ ವದಂತಿ ಹಿಂದೆಯೂ ಕೇಳಿಬಂದಿತ್ತು. ಮಾಜಿ ಮುಖ್ಯಮಂತ್ರಿ ಜನತಾ ಪರಿವಾರದ ನೇತಾರರಾಗಿದ್ದ ಪ್ರಭಾವಿ ನಾಯಕ ರಾಮಕೃಷ್ಣ ಹೆಗಡೆಯವರ ಮೊಮ್ಮಗ ಈ ಶಶಿಭೂಷಣ್ ಹೆಗಡೆ. ಅಷ್ಟಕ್ಕೂ ಜೆಡಿಎಸ್ ನಿಂದ ಪದೇ ಪದೇ ಸ್ಫರ್ಧಿಸಿ ಸೋತು ಸುಣ್ಣವಾಗಿರುವ ಶಶಿಭೂಷಣ್ ಹೆಗಡೆಗೆ ಈಗ ತಮ್ಮ ರಾಜಕೀಯ ಅಸ್ಥಿತ್ವ ಉಳಿಸಿಕೊಳ್ಳಲು ಇರುವ ಏಕೈಕ ಮಾರ್ಗ ಕಾಂಗ್ರೆಸ್ ಗೆ ಸೇರುವುದಷ್ಟೆ. ಅದು ಸುದ್ದಿಯಲ್ಲ ಎನ್ನುತ್ತೀರಾದರೇ ಇಲ್ಲೊಂದು ಟ್ವಿಸ್ಟ್ ಇದೆ. ಶಶಿಭೂಷಣ್ ಹೆಗಡೆಯವರನ್ನು ಕಾಂಗ್ರೆಸ್ ಅಂಗಳಕ್ಕೆ ಕರೆತರುತ್ತಿರುವುದು ಉತ್ತರ ಕನ್ನಡ ಜಿಲ್ಲೆಯ ಹಿರಿಯ ಪ್ರಭಾವಿ ನಾಯಕ ಆರ್.ವಿ ದೇಶಪಾಂಡೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಶಿರಸಿ ಸಿದ್ದಾಪುರದಲ್ಲಿ ಅತ್ಯಂತ ಹೆಚ್ಚು ಮತ ಹೊಂದಿರುವ ಹವ್ಯಕ ಬ್ರಾಹ್ಮಣರನ್ನು ಗಣನೆಗೆ ಇಟ್ಟುಕೊಂಡಲ್ಲಿ ಶಶಿಭೂಷಣ್ ಹೆಗಡೆ ಕಾಂಗ್ರೆಸ್ ಗೆ ಬಂದರೆ ಖಂಡಿತಾ ಲಾಭವಿದೆ. ಈಗಾಗಲೇ ಪಾದುಕಾಶ್ರಮದ ಕಲ್ಯಾಣಿಗೆ ಕೊಳಚೆ ನೀರು ಹರಿದ ವಿದ್ಯಮಾನದಲ್ಲಿ ಶಿರಸಿಯ ಒಂದು ಬಣದ ಹವ್ಯಕ ಬ್ರಾಹ್ಮಣರಿಗೆ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಅಸಮಧಾನವಿದೆ. ಜೊತೆಗೆ ಅಭಿವೃದ್ಧಿ ವಿಚಾರದಲ್ಲಿಯೂ ಕಾಗೇರಿ ಕೆಲಸ ಮಾಡುತ್ತಿಲ್ಲ ಅನ್ನುವ ಬೇಸರವಿದೆ.
ಆದರೆ ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಸ್ಫರ್ಧಿಸಿ ಮತ್ತೊಮ್ಮೆ ಸೋಲಿನ ರುಚಿ ಕಂಡ ಶಶಿಭೂಷಣ್ ಹೆಗಡೆ ನಂತರ ರಾಜಕೀಯ ನಿವೃತ್ತಿ ಪಡೆಯುವ ನಿರ್ಧಾರಕ್ಕೆ ಬಂದಿದ್ದರು. ಅದಾದ ನಂತರ ಅನರ್ಹರ ಪಟ್ಟಿಯಲ್ಲಿ ಕಾಣಿಸಿಕೊಂಡು ಮೈತ್ರಿ ಸರ್ಕಾರವನ್ನು ಬೀಳಿಸಿದರಲ್ಲ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್, ಹೀಗಾಗಿ ಮತ್ತೆ ಉಪಚುನಾವಣೆ ನಡೆದಾಗ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಪ್ರಶಾಂತ್ ದೇಶಪಾಂಡೆ, ಭೀಮಣ್ಣ ನಾಯ್ಕ್ ಜೊತೆ ಶಶಿಭೂಷಣ್ ಹೆಗಡೆಯವರೂ ಟಿಕೆಟ್ ಆಕಾಂಕ್ಷಿ ಎನ್ನುವ ಸುದ್ದಿಗಳಿದ್ದವು. ಆದರೆ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಗೇರಿ ವಿರುದ್ಧ ಕಾಂಗ್ರೆಸ್ ನಿಂದ ಸ್ಫರ್ಧಿಸಿ ಮಣ್ಣುಮುಕ್ಕಿದ್ದ ಭೀಮಣ್ಣ ನಾಯ್ಕ್ ರಿಗೆ ಮತ್ತೆ ಅವಕಾಶ ನೀಡಿ ಯಲ್ಲಾಪುರ ಉಪಚುನಾವಣೆಯ ಟಿಕೆಟ್ ನೀಡಲಾಯ್ತು. ಶಿವರಾಮ್ ಹೆಬ್ಬಾರ್ ವಿರುದ್ಧ ಒಳ ಒಪ್ಪಂದ ಮಾಡಿಕೊಂಡು ಸೋಲನ್ನು ಒಪ್ಪಿಕೊಂಡರು ಭೀಮಣ್ಣ ಎನ್ನುವ ಆಪಾದನೆಯೂ ಕೇಳಿ ಬಂದಿತು. ಈಗ ಸದ್ಯ ಶಿರಸಿ ಸಿದ್ದಾಪುರ ಭಾಗದಲ್ಲಿ ಭೀಮಣ್ಣ ನಾಯ್ಕ್ ನಿಷ್ಕ್ರಿಯ ನಾಯಕ. ಇದೇ ಕಾರಣದಿಂ ಶಶಿಭೂಷಣ್ ಹೆಗಡೆಯವರನ್ನು ಕಾಂಗ್ರೆಸ್ ಗೆ ಕರೆತರುವ ಪ್ರಯತ್ನಗಳಾಗುತ್ತಿವೆಯೇ?
ಇಲ್ಲ! ಇಲ್ಲಿ ಇನ್ನೊಂದು ಇಂಟರೆಸ್ಟಿಂಗ್ ವಿಚಾರವಿದೆ. ಶಿರಸಿ ಸಿದ್ದಾಪುರದ ಸುತ್ತಮುತ್ತ ಪ್ರದೇಶದಲ್ಲಿ ದೀಪಕ್ ಹೊನ್ನಾವರ್ ಹೆಸರು ಕೇಳದೇ ಇರುವವರು ಇಲ್ಲ. 2013ರ ಚುನಾವಣೆಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಕಾಂಗ್ರೆಸ್ ನಿಂದ ಸ್ಫರ್ಧಿಸಿದ್ದ ದೀಪಕ್ ಹೊನ್ನಾವರ ತೀವ್ರ ಪ್ರತಿರೋಧ ಒಡ್ಡಿ ಕೇವಲ 3 ಸಾವಿರ ಮತಗಳಿಂದ ಪರಾಭವಗೊಂಡಿದ್ದರು. ಈ ಭಾಗದಲ್ಲಿ ಅತ್ಯಂತ ಪ್ರಭಾವಿ ಜನಪ್ರಿಯ ನಾಯಕರಾಗಿ ಗುರುತಿಸಿಕೊಂಡಿದ್ದರು ದೀಪಕ್ ಹೊನ್ನಾವರ. ಅಂಕೋಲಾ ಬಳಿ ರಸ್ತೆ ಅಪಘಾತದಲ್ಲಿ ನಿಧನ ಹೊಂದದಿದ್ದರೇ ಈ ಹೊತ್ತಿಗಾಗಲೇ ದೀಪಕ್ ಹೊನ್ನಾವರ ಅಲ್ಲಿನ ಶಾಸಕರಾಗಿರುತ್ತಿದ್ದರು. ಶಿರಸಿ ಕ್ಷೇತ್ರದ ನಿರ್ಣಾಯಕ ಮತದಾರ ಸಮುದಾಯವಾಗಿರುವ ನಾಮದಾರಿ ಸಮಾಜದ ದೊಡ್ಡ ಬೆಂಬಲ ದೀಪಕ್ ಅವರಿಗಿತ್ತು. ಈಗ ದೀಪಕ್ ಹೊನ್ನಾವರ ಅವರ ಸಹೋದರಿ ಸುಷ್ಮಾ ರಾಜಗೋಪಾಲ ರೆಡ್ಡಿಯವರು ಸಿದ್ದಾಪುರ ಮತ್ತು ಶಿರಸಿ ಸುತ್ತಮುತ್ತ ಕಾಂಗ್ರೆಸ್ ಸಂಘಟನೆಯನ್ನು ಬಲಪಡಿಸಲು ನಿರಂತರವಾಗಿ ಓಡಾಡುತ್ತಿದ್ದಾರೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಬದುಕಿದ್ದಾಗ ದೀಪಕ್ ಹೊನ್ನಾವರ ಅವರಿಗೂ ಆರ್.ವಿ ದೇಶಪಾಂಡೆಯವರಿಗೂ ನಡುವಿನ ಸಂಬಂಧ ಅಷ್ಟಕಷ್ಟೆ ಎಂಬಂತಿತ್ತು. ಈಗ ಶಿರಸಿ ಸಿದ್ದಾಪುರ ಬ್ಲಾಕ್ ಗಳಲ್ಲಿ ಚಟುವಟಿಕೆಯಿಂದ ಓಡಾಡುತ್ತಿರುವ ಸುಷ್ಮಾ ರಾಜಗೋಪಾಲ ರೆಡ್ಡಿವರು ಡಿಕೆ ಶಿವಕುಮಾರ್ ಪಾಳೆಯದಲ್ಲಿ ಗುರುತಿಸಿಕೊಂಡವರು. ಹೀಗಾಗಿ ಮುಂದಿನ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸುಷ್ಮಾರಿಗೆ ಶಿರಸಿ ಸಿದ್ದಾಪುರದ ಕಾಂಗ್ರೆಸ್ ಟಿಕೆಟ್ ಸಿಗುವುದು ದೇಶಪಾಂಡೆಯವರಿಗೆ ಸುತರಾಂ ಇಷ್ಟವಿಲ್ಲ.
ಹೀಗಾಗಿ ಸಿದ್ದರಾಮಯ್ಯನವರ ಮೂಲಕ ಶಶಿಭೂಷಣ್ ಹೆಗಡೆಯವರನ್ನು ಕಾಂಗ್ರೆಸ್ ಮನೆ ಸೇರಿಸಲು ಆರ್.ವಿ ದೇಶಪಾಂಡೆ ಕಸರತ್ತು ಮಾಡುತ್ತಿದ್ದಾರೆ. ಹೇಗಿದ್ದರೂ ಸಿದ್ದರಾಮಯ್ಯನವರ ರಾಜಕೀಯ ಗುರು ರಾಮಕೃಷ್ಣ ಹೆಗಡೆಯವರು, ಅವರ ಮೊಮ್ಮಗನಿಗೆ ಟಿಕೆಟ್ ಕೊಡಿಸಿದರೆ ಗುರುವಿನ ಋಣ ಸಂದಾಯವಾಗುತ್ತದೆ ಎಂಬ ಲೆಕ್ಕಾಚಾರವೂ ಇಲ್ಲಿದೆ. ಜೊತೆಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಲ್ಲಿ ಡಿಕೆ ಶಿವಕುಮಾರ್ ಪಾಳೆಯದ ಅಭ್ಯರ್ಥಿಗಳಿಗೆ ಸಾಧ್ಯವಾದಷ್ಟು ಟಿಕೆಟ್ ಕಡಿತಗೊಳಿಸಬೇಕು ಎನ್ನುವ ರಾಜಕಾರಣವೂ ಕೆಲಸ ಮಾಡುತ್ತಿದೆ. ಈ ಓಳಮರ್ಮಗಳ ಅರಿವಿದ್ದೂ ಸುಷ್ಮಾ ರಾಜಗೋಪಾಲ ರೆಡ್ಡಿಯವರು ತಲೆ ಕೆಡಿಸಿಕೊಳ್ಳದೆ ಕ್ಷೇತ್ರದಾದ್ಯಂತ ಮಿಂಚಿನ ಸಂಚಾರ ಮಾಡುತ್ತಿರುವುದು ಅತ್ತ ಭೀಮಣ್ಣ ನಾಯ್ಕ್ ಗಾಗಲೀ ಇತ್ತ ಆರ್.ವಿ ದೇಶಪಾಂಡೆಯವರಿಗಾಗಲೀ ಅರಗಿಸಿಕೊಳ್ಳಲಾಗ್ತಿಲ್ಲ. ಬೆಳಿಗ್ಗೆ ಶೇರು ವ್ಯವಹಾರ ಮಾಡಿ, ಮಧ್ಯಾಹ್ನ ಉದ್ದಿಮೆಗಳ ವಹಿವಾಟು ನೋಡಿಕೊಂಡು, ಸಮಯ ಸಿಕ್ಕರೆ ಮಾತ್ರ ರಾಜಕಾರಣ ಮಾಡುವ ಆರ್.ವಿ ದೇಶಪಾಂಡೆ ಕಾಂಗ್ರೆಸ್ ನ ಎಂಥಹ ಅವಕಾಶವಾದಿ ರಾಜಕಾರಣಿ ಎನ್ನುವುದು ರಾಜ್ಯಕ್ಕೆ ಗೊತ್ತಿದೆ. ಪಕ್ಷದ ಸಂಘಟನೆಯಲ್ಲಾಗಲೀ, ಮಹತ್ವದ ಜವಾಬ್ದಾರಿ ಹೊರುವಲ್ಲಾಗಲೀ ಯಾವತ್ತೂ ಹಿಂದೆ ಉಳಿಯುವ ದೇಶಪಾಂಡೆ ಅಧಿಕಾರ ಬಂದಾಗ ಮಾತ್ರ ದೊಡ್ಡ ಖಾತೆಗೆ ಕೈಒಡ್ಡಿ ನಿಂತುಬಿಡುತ್ತಾರೆ. ಸದ್ಯ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆಶಿ, ದೇಶಪಾಂಡೆ ಎಂಡ್ ಪಟಾಲಂ ಅನ್ನು ದೂರವಿಟ್ಟಿರುವುದು ಗುಟ್ಟಿನ ಸಂಗತಿಯೇನೂ ಅಲ್ಲ.
https://youtu.be/I5BRabD3f5A
ಈ ಎಲ್ಲಾ ಹಿನ್ನೆಲೆಯಲ್ಲಿ ಶಶಿಭೂಷಣ್ ಹೆಗಡೆ ಕಾಂಗ್ರೆಸ್ ಪಡಸಾಲೆಗೆ ಬರುವ ವಿಚಾರದಲ್ಲಿ ಸಾಕಷ್ಟು ಒಳಸುಳಿಗಳಿವೆಯಾದರೂ, ಅದರಿಂದ ಕಾಂಗ್ರೆಸ್ ಗೆ ಲಾಭವಂತೂ ಖಂಡಿತಾ ಇದೆ. ಆದರೆ ಶಶಿಭೂಷಣ್ ಹೆಗಡೆಗೆ ಟಿಕೆಟ್ ಸಿಗುವುದು ಅಷ್ಟು ಸುಲಭವಿಲ್ಲ. ಈಗಾಗಲೇ ಶಿರಸಿ ಸುತ್ತಮುತ್ತ ಕಾರ್ಯಕರ್ತರ ವಲಯದಲ್ಲಿ ಸುಷ್ಮಾ ರಾಜಗೋಪಾಲ ರೆಡ್ಡಿಯವರ ನಾಯಕತ್ವದಲ್ಲಿ ನಂಬಿಕೆ ವಿಶ್ವಾಸಗಳು ಹುಟ್ಟಿವೆ. ಜೊತೆಗೆ ಭೀಮಣ್ಣ ನಾಯ್ಕ್ ನಿಷ್ಕ್ರಿಯತೆ ಕುರಿತಾದ ಅಸಮಧಾನವೂ ಇದೆ. ಗತಿಸಿದ ನಾಯಕ ದೀಪಕ್ ಹೊನ್ನಾವರ ಅವರ ಸಹೋದರಿ ಎನ್ನುವ ಅಭಿಮಾನವಿದೆ. ಇಷ್ಟನ್ನೇ ಗಣನೆಗೆ ಇಟ್ಟುಕೊಂಡಲ್ಲಿ ಸುಷ್ಮಾರಿಗೆ ಈ ಬಾರಿ ಟಿಕೆಟ್ ಸಿಗುವುದರಲ್ಲಿ ಸಂದೇಹಗಳಿಲ್ಲ; ಆರ್.ವಿ ದೇಶಪಾಂಡೆಗೆ ಮುಖಭಂಗ ತಪ್ಪಿದ್ದಲ್ಲ.
-ವಿಶ್ವಾಸ್ ಭಾರದ್ವಾಜ್ (ವಿಭಾ)








