ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಖ್ಯಾತಿಯ ನಿರ್ದೇಶಕ ಆದಿತ್ಯ ಧರ್ ಅವರ ಬಹುನಿರೀಕ್ಷಿತ ಧುರಂಧರ್ 2: ದಿ ರಿವೆಂಜ್ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ ಸುನಾಮಿ ಎಬ್ಬಿಸಿದೆ. ಭಾರತದ ಗೂಢಚಾರರ ಸಾಹಸಗಾಥೆಯನ್ನು ಹೊಂದಿರುವ ಈ ಸಿನಿಮಾ ಜಾಗತಿಕವಾಗಿ ಸಂಚಲನ ಮೂಡಿಸಿದ್ದು, ಕೇವಲ ಗಳಿಕೆಯಲ್ಲಿ ಮಾತ್ರವಲ್ಲದೆ ವಿವಾದಗಳ ಮೂಲಕವೂ ಸುದ್ದಿಯಲ್ಲಿದೆ. ಜನಪ್ರಿಯ ಯೂಟ್ಯೂಬರ್ ಧ್ರುವ್ ರಾಟಿ ಈ ಚಿತ್ರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದು, ನಿರ್ದೇಶಕರನ್ನು ಬಿಜೆಪಿ ಪ್ರಚಾರಕ ಎಂದು ಜರೆದಿದ್ದಾರೆ.
ಮೊದಲ ದಿನವೇ 143 ಕೋಟಿ ಲೂಟಿ: ಬಾಕ್ಸ್ ಆಫೀಸ್ ದಾಖಲೆ ಉಡೀಸ್
ಧುರಂಧರ್ 2 ಸಿನಿಮಾ ತೆರೆಕಂಡ ಕ್ಷಣದಿಂದಲೇ ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಅಭಿಮಾನಿಗಳ ಆರ್ಭಟದ ನಡುವೆ ತೆರೆಕಂಡ ಈ ಚಿತ್ರವು ಮೊದಲ ದಿನವೇ ಬರೋಬ್ಬರಿ 143 ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದಿದೆ. ಈ ಮೂಲಕ ಇತ್ತೀಚಿನ ದಿನಗಳಲ್ಲಿ ಅತ್ಯಧಿಕ ಓಪನಿಂಗ್ ಪಡೆದ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಚಿತ್ರದ ಮೇಕಿಂಗ್, ರಣವೀರ್ ಸಿಂಗ್ ಹಾಗೂ ಆರ್. ಮಾಧವನ್ ಅವರ ನಟನೆಯನ್ನು ಪ್ರೇಕ್ಷಕರು ಮುಕ್ತ ಕಂಠದಿಂದ ಶ್ಲಾಘಿಸುತ್ತಿದ್ದಾರೆ.
ಆದಿತ್ಯ ಧರ್ ಬಿಜೆಪಿ ಏಜೆಂಟ್: ಧ್ರುವ್ ರಾಟಿ ಕೆಂಡಾಮಂಡಲ
ಸಿನಿಮಾದ ಯಶಸ್ಸಿನ ಅಬ್ಬರದ ನಡುವೆಯೇ ವಿವಾದದ ಕಿಡಿಯೊಂದು ಹೊತ್ತಿಕೊಂಡಿದೆ. ಪ್ರಖ್ಯಾತ ಯೂಟ್ಯೂಬರ್ ಧ್ರುವ್ ರಾಟಿ, ಈ ಸಿನಿಮಾವನ್ನು ತೀವ್ರವಾಗಿ ಟೀಕಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ಮೂಲಕ ತಮ್ಮ ಅಸಮಾಧಾನ ಹೊರಹಾಕಿರುವ ಅವರು, ನಿರ್ದೇಶಕ ಆದಿತ್ಯ ಧರ್ ಓರ್ವ ಬಿಜೆಪಿ ಪ್ರಚಾರಕ ಎಂದು ನೇರವಾಗಿಯೇ ಆರೋಪಿಸಿದ್ದಾರೆ.
ನಾನು ಮೂರು ತಿಂಗಳ ಹಿಂದೆಯೇ ಹೇಳಿದ್ದೆ, ಆದಿತ್ಯ ಧರ್ ಒಬ್ಬ ಬಿಜೆಪಿಯ ಪ್ರಚಾರಕ ಎಂದು, ಈಗ ಅದು ಮತ್ತೊಮ್ಮೆ ಸಾಬೀತಾಗಿದೆ. ಹಿಂದಿನ ಸಿನಿಮಾದ ಯಶಸ್ಸಿನ ಅತಿಯಾದ ಆತ್ಮವಿಶ್ವಾಸದಿಂದ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಆದರೆ ದುರಾದೃಷ್ಟವಶಾತ್ ಈ ಬಾರಿಯ ಸಿನಿಮಾ ಒಂದು ಒಳ್ಳೆಯ ಪ್ರೊಪಗಾಂಡಾ ಸಿನಿಮಾ ಕೂಡ ಅಲ್ಲ ಎಂದು ರಾಟಿ ವ್ಯಂಗ್ಯವಾಡಿದ್ದಾರೆ.
ಅಲ್ಲದೆ, ಧುರಂಧರ್ ಮೊದಲ ಭಾಗ ಬಿಡುಗಡೆಯಾದಾಗಲೂ ಧ್ರುವ್ ರಾಟಿ, ತಮ್ಮ ವಿಡಿಯೋ ಮೂಲಕ ಆ ಸಿನಿಮಾವನ್ನು ನೆಲಕಚ್ಚುವಂತೆ ಮಾಡುತ್ತೇನೆ ಎಂದು ಸವಾಲು ಹಾಕಿದ್ದರು. ಆದರೆ ಆ ಸಿನಿಮಾ 1400 ಕೋಟಿಗೂ ಅಧಿಕ ಗಳಿಕೆ ಕಂಡು ರಾಟಿ ಅವರ ಲೆಕ್ಕಾಚಾರವನ್ನು ತಲೆಕೆಳಗಾಗಿಸಿತ್ತು. ಇದೀಗ ಎರಡನೇ ಭಾಗದ ವಿರುದ್ಧವೂ ಅವರು ತಿರುಗಿಬಿದ್ದಿದ್ದು, ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆ ಜೋರಾಗಿದೆ.
ಗಲ್ಫ್ ಹಾಗೂ ಪಾಕ್ ನಲ್ಲಿ ನಿಷೇಧ: ಲಾಹೋರ್ ನಲ್ಲಿ ಕದ್ದು ಮುಚ್ಚಿ ವೀಕ್ಷಣೆ
ಚಿತ್ರದಲ್ಲಿ ಪಾಕಿಸ್ತಾನವನ್ನು ಭಯೋತ್ಪಾದಕ ದೇಶ ಎಂದು ನೇರವಾಗಿ ಚಿತ್ರಿಸಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಸೇರಿದಂತೆ ಹಲವು ಗಲ್ಫ್ ರಾಷ್ಟ್ರಗಳು ಧುರಂಧರ್ 2 ಪ್ರದರ್ಶನವನ್ನು ನಿಷೇಧಿಸಿವೆ. ಆದರೆ ವಿಚಿತ್ರವೆಂದರೆ, ನಿಷೇಧದ ನಡುವೆಯೂ ಪಾಕಿಸ್ತಾನದ ಲಾಹೋರ್ ನ ಗಲ್ಲಿ ಗಲ್ಲಿಗಳಲ್ಲಿ ಪೈರೇಟೆಡ್ ಕಾಪಿಗಳ ಮೂಲಕ ಜನರು ಈ ಸಿನಿಮಾವನ್ನು ಮುಗಿಬಿದ್ದು ನೋಡುತ್ತಿದ್ದಾರೆ. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರತೀಯ ಸಿನಿಮಾದ ಕ್ರೇಜ್ ಗಡಿ ದಾಟಿ ಹಬ್ಬಿರುವುದಕ್ಕೆ ಸಾಕ್ಷಿಯಾಗಿದೆ.
ಧುರಂಧರ್ 2 ಚಿತ್ರವು ಕರಾಚಿಯ ಲಿಯಾರಿಗೆ ತೆರಳುವ ಭಾರತದ ಗುಪ್ತಚರನೊಬ್ಬನ ಸಾಹಸಮಯ ಕಥೆಯನ್ನು ಒಳಗೊಂಡಿದೆ. ಇದೊಂದು ಕಾಲ್ಪನಿಕ ಕಥೆಯಾಗಿದ್ದರೂ, ನೈಜ ಘಟನೆಗಳ ಸನ್ನಿವೇಶಗಳನ್ನು ಅತ್ಯದ್ಭುತವಾಗಿ ಬೆರೆಸಿರುವುದು ಪ್ರೇಕ್ಷಕರ ರೋಮಾಂಚನಕ್ಕೆ ಕಾರಣವಾಗಿದೆ. ಸಿನಿಮಾದಲ್ಲಿ ರಣವೀರ್ ಸಿಂಗ್, ಆರ್. ಮಾಧವನ್, ಅರ್ಜುನ್ ರಾಂಪಾಲ್, ರಾಕೇಶ್ ಬೇಡಿ, ಡ್ಯಾನಿಶ್ ಇಕ್ಬಾಲ್ ಹಾಗೂ ಸಾರಾ ಅರ್ಜುನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉರಿ ನಿರ್ದೇಶಕ ಆದಿತ್ಯ ಧರ್ ಅವರ ನಿರ್ದೇಶನ ಕೌಶಲ್ಯ ಮತ್ತೊಮ್ಮೆ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದೆ.
ಧುರಂಧರ್ 2 ಕೇವಲ ಒಂದು ಸಿನಿಮಾವಾಗಿ ಉಳಿಯದೆ, ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.







