ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಹಾಗೂ 2ನೇ ಅಲೆಯ ಭೀತಿಯ ನಡುವೆಯೇ ದೀಪಾವಳಿ ಹಬ್ಬದ ನಂತರ ಪದವಿ ಕಾಲೇಜುಗಳು ಹಾಗೂ ಡಿಸೆಂಬರ್ 15ರಿಂದ ಶಾಲಾ-ಕಾಲೇಜುಗಳ ಆರಂಭಕ್ಕೆ ಭರ್ಜರಿ ಸಿದ್ಧತೆ ನಡೆದಿದೆ.
ದೀಪಾವಳಿ ಹಬ್ಬಕ್ಕೆ ಇನ್ನು ಎರಡು ದಿನಗಳು ಬಾಕಿ ಇದ್ದು, ಹಬ್ಬ ಮುಗಿಯುತ್ತಿದ್ದಂತೆ ಅಂದರೆ ನವೆಂಬರ್ 17ರಿಂದ ಪದವಿ ಕಾಲೇಜುಗಳನ್ನು ಆರಂಭಿಸಲು ಭರದ ಸಿದ್ಧತೆ ನಡೆದಿದೆ.
ಈಗಾಗಲೇ ಎಲ್ಲಾ ಪದವಿ ಕಾಲೇಜುಗಳ ಕೊಠಡಿ ಶುಚಿತ್ವ ಮುಗಿದು ಸ್ಯಾನಿಟೈಸ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ವಿದ್ಯಾರ್ಥಿಗಳ ಆಗಮನಕ್ಕಾಗಿ ಎದುರು ನೋಡುತ್ತಿವೆ.
ಕಳೆದ ತಿಂಗಳು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನ.17ರಿಂದ ಡಿಗ್ರಿ ಕಾಲೇಜುಗಳನ್ನು ಆರಂಭಿಸಲು ಅನುಮತಿ ನೀಡಲಾಗಿತ್ತಯ. ಈ ಹಿನ್ನೆಲೆಯಲ್ಲಿ ಕೊರೊನಾ ಗೈಡ್ಲೈನ್ಸ್ ಅನುಸಾರವೇ ತರಗತಿಗಳನ್ನು ಆರಂಭಿಸಲು ಸಿದ್ಧತೆ ನಡೆದಿದೆ.
ಒಂದು ಬೆಂಚ್ಗೆ ಇಬ್ಬರು ವಿದ್ಯಾರ್ಥಿಗಳು ಎಂಬಂತೆ ಸಮಾಜಿಕ ಅಂತರ ಕಾಯ್ದುಕೊಂಡು, ಕಡ್ಡಾಯವಾಗಿ ಮಾಸ್ಕ್ ಧರಿಸಿ ಸ್ಯಾನಿಟೈಸ್ ಮಾಡುವ ಮೂಲಕ ಪದವಿ ಕಾಲೇಜುಗಳನ್ನು ಆರಂಭಿಸಲು ಸರ್ವಸಿದ್ಧತೆ ಬಹುತೇಕ ಪೂರ್ಣಗೊಂಡಿದೆ.
ಡಿಸೆಂಬರ್ 15ರಿಂದ ಶಾಲೆ-ಕಾಲೇಜು ಆರಂಭಿಸಿ..!
ದೀಪಾವಳಿ ಹಬ್ಬದ ನಂತರ ಪದವಿ ಕಾಲೇಜುಗಳ ಆರಂಭವಾಗುತ್ತಿರುವ ಬೆನ್ನಲ್ಲೇ ಹೈಸ್ಕೂಲು ಹಾಗೂ ಪಿಯುಸಿ ತರಗತಿಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಆದರೆ, ಹೈಸ್ಕೂಲ್, ಪಿಯುಸಿ ತರಗತಿಗಳು ಆರಂಭಿಸುವುದೇ ಆದರೆ ಡಿಸೆಂಬರ್ 15ರ ನಂತರ ಆರಂಭಿಸಿ ಎಂದು ಪೋಷಕರ ಸಂಘಟನೆಗಳು ಸರ್ಕಾರಕ್ಕೆ ಸಲಹೆ ನೀಡಿವೆ.
ಮೊದಲು 10ನೇ ತರಗತಿ ಹಾಗೂ 12ನೇ ಕ್ಲಾಸ್ಗಳನ್ನು ಆರಂಭಿಸುವಂತೆ ಆರ್ಟಿಇ ವಿದ್ಯಾರ್ಥಿಗಳ ಸಂಘ ಹಾಗೂ ಪೋಷಕರ ಸಂಘ ಶಿಕ್ಷಣ ಇಲಾಖೆಗೆ ಸಲಹೆ ನೀಡಿವೆ.
ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸಿದ 5 ದಿನಗಳ ನಂತರ 9 ಹಾಗೂ 11(ಪ್ರಥಮ ಪಿಯುಸಿ) ನೇ ಕ್ಲಾಸ್ ತರಗತಿಗಳನ್ನು ಆರಂಭಿಸಬಹುದು. ಆದರೆ, ಹೆಚ್ಚುವರಿ ಶುಲ್ಕ ಕಟ್ಟುವಂತೆ ಶಾಲೆಗಳು ಒತ್ತಡ ಹೇರುವಂತಿಲ್ಲ ಎಂದು ಷರತ್ತು ವಿಧಿಸಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.
ಶಿಕ್ಷಣ ಇಲಾಖೆಗೆ ಪೋಷಕರ ಸಲಹೆಗಳು ಇಂತಿವೆ..
1. ಡಿ.15ರ ನಂತರ 10 ಹಾಗೂ 12ನೇ ತರಗತಿ ಆರಂಭಿಸಿ
2. 5 ದಿನ ಬಿಟ್ಟು 9 ಹಾಗೂ 11ನೇ ತರಗತಿ ಪ್ರಾರಂಭಿಸಬಹುದು
3 ದಿನಕ್ಕೆರಡರಂತೆ ಪಾಳಿಯಲ್ಲಿ ತರಗತಿಗಳನ್ನು ನಡೆಸಬೇಕು
4. ಬೆಳಿಗ್ಗೆ 7ರಿಂದ ಮಧ್ಯಾಹ್ನ 12 ಗಂಟೆಗೆ ಒಂದು ಪಾಳಿ
5. ಮಧ್ಯಾಹ್ನ 1ಗಂಟೆಯಿಂದ ಸಂಜೆ 5 ಗಂಟೆಗೆ ಮತ್ತೊಂದು ತರಗತಿ
6. ಯೂನಿಫಾರಂ ಧರಿಸಲೇಬೇಕು ಎಂದು ಕಡ್ಡಾಯ ಮಾಡುವಂತಿಲ್ಲ
7. ಶಾಲಾ-ಕಾಲೇಜುಗಳು ಹೆಚ್ಚುವರಿ ಶುಲ್ಕ ನೀಡುವಂತೆ ಒತ್ತಾಯ ಮಾಡುವಂತಿಲ್ಲ
8. ಒಂದು ಕ್ಲಾಸ್ನಲ್ಲಿ ಕೇವಲ 10 ವಿದ್ಯಾರ್ಥಿಗಳಿರುವಂತೆ ನೋಡಿಕೊಳ್ಳಬೇಕು
9. ಆಟೋಟ ಸೇರಿದಂತೆ ಪಠ್ಯೇತರ ಚಟುವಟಿಕೆಗಳನ್ನು ನಡೆಸಬಾರದು
10 ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯ ಮಾಡುವುದು
ಇದು, ಪೋಷಕರ ಸಂಘಗಳು ಶಿಕ್ಷಣ ಇಲಾಖೆಗೆ ನೀಡಿದ ಸಲಹೆಗಳಾಗಿವೆ. ಈಗಾಗಲೇ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು, ಎಸ್ಡಿಎಂಸಿ ಅಧ್ಯಕ್ಷರು, ಸರ್ಕಾರಿ ಶಾಲೆಗಳ ಶಿಕ್ಷಕರು ಹಾಗೂ ಡಿಡಿಪಿಇ, ಬಿಇಒಗಳ ಸಭೆ ನಡೆಸಿಸಿ ಅಭಿಪ್ರಾಯ ಸಂಗ್ರಹಿಸಿರುವ ಶಿಕ್ಷಣ ಇಲಾಖೆ, ತನ್ನ ವರದಿಯನ್ನು ಮುಖ್ಯಮಂತ್ರಿಗಳಿಗೆ ನೀಡಿದೆ.
ಮುಖ್ಯಮಂತ್ರಿಗಳು ಶಿಕ್ಷಣ ಹಾಗೂ ಆರೋಗ್ಯ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿ ಶಾಲಾ-ಕಾಲೇಜು ಆರಂಭಕ್ಕೆ ಅನುಮತಿ ನೀಡುವ ಸಾಧ್ಯತೆ ಇದೆ. ಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಭರದ ಸಿದ್ದತೆ ನಡೆಸಿರುವ ಬೆನ್ನಲ್ಲೇ ಪೋಷಕರ ಅಭಿಪ್ರಾಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel