ಡಿಜೆ ಹಳ್ಳಿ ಗಲಭೆ ಪ್ರಕರಣ ಸಂಬಂಧ ತನಿಖೆ ಆರಂಭಿಸಿದ್ದ ಪೊಲಿಸರು ಈಗಾಗಲೇ 150 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದು, ಬಳ್ಳಾರಿ ಜೈಲಿಗೆ 81 ಆರೋಪಿಗಳನ್ನ ಶಿಪ್ಟ್ ಮಾಡಿದ್ದಾರೆ. ಇನ್ನೂ ಪ್ರಕರಣ ತೀವ್ರ ಹಿಂಸಾತ್ಮಕ ರೂಪ ಪಡೆದಿದ್ದು ಎಲ್ಲೆಡೆಯಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಪ್ರಕರಣದಲ್ಲಿ ಪ್ರಮುಖವಾಗಿ ಎಸ್ ಡಿಪಿಐ ಕೈವಾಡವಿದೆ ಎಂಬ ಆರೋಪಗಳಿವೆ.
ಇದೀಗ ಈ ವಿಚಾರವಾಗಿ ಎಸ್ ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮೊಹಮ್ಮದ್ ತುಂಬೆ ಅವರು ಪ್ರತಿಕ್ರಿಯಿಸಿದ್ದು, ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಪ್ರಕರಣದ ತನಿಖೆಯಾಗಬೇಕು. ನ್ಯಾಯಾಲಯವೇ ಮೇಲ್ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ ಮಾತು ಮುಂದುವರೆಸಿದ ಇಲ್ಯಾಸ್ ನಿಷ್ಪಕ್ಷಪಾತ ನ್ಯಾಯಾಂಗ ತನಿಖೆಯಾಗಬೇಕು. ಬಂಧನಕ್ಕೊಳಗಾಗಿರುವ ನವೀನ್ ಬಿಜೆಪಿ ನಾಯಕರೊಂದಿಗೆ ನಂಟು ಹೊಂದಿದ್ದಾರೆ. ಮುಸ್ಲಿಮರು ಮತ್ತು ದಲಿತರ ನಡುವೆ ಬಿರುಕು ಮೂಡಿಸಲು ವೋಟ್ ಬ್ಯಾಂಕ್ ಗಾಗಿ ಗಲಭೆ ಸೃಷ್ಟಿಸಲು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸಂಚು ರೂಪಿಸಿದ್ದವು ಎಂದು ಆರೋಪಿಸಿ ಕಿಡಿಕಾರಿದ್ದಾರೆ.