ಇವರು ಭಾರತೀಯ ಮಾಸ್ಟರ್ ಶೆಫ್ಗಳು. ಇವರ ಮೂಲ ರಾಜಸ್ತಾನದ ಒಂದು ಸಣ್ಣ ಗ್ರಾಮ. ಮಾಡುವುದು ಅಡುಗೆ ಕೆಲಸವಾದ್ರೂ ಅವರಿಗೆ ಆರಂಕಿ ಸಂಬಳವಿದೆ. ದೇಶ ವಿದೇಶಗಳಲ್ಲಿ ಈ ಅಡುಗೆ ಭಟ್ಟರಿಗೆ ಭಾರೀ ಡಿಮ್ಯಾಂಡ್ ಇದೆ. ಅಂದ ಹಾಗೆ ಇವರು ಮೆನಾರಿಯನ್ ಬಾಣಸಿಗರು. ಲಕ್ಷಗಳ ಪಗಾರ ಎಣಿಸುವ ಮಾಡ್ರನ್ ನಳ ಮಹಾರಾಜರು.
ರಾಜಸ್ತಾನದ ರಜಪೂತ ಸಾಂಪ್ರದಾಯಿಕ ಖಾದ್ಯ ತಿಂದು ಬೆಳೆದ ಆ ಬಾಣಸಿಗರು ಯಾವುದೇ ಪದವಿ ಕಲಿತವರಲ್ಲ. ಆದ್ರೆ ಯಾವುದೇ ಪ್ರೊಫೇಶನಲ್ ಕುಕ್ಗಳನ್ನೂ ಮೀರಿಸುವಂತೆ ರುಚಿಕಟ್ಟಾದ ಖಾದ್ಯಗಳನ್ನು ತಯಾರಿಸ್ತಾರೆ. ಹೀಗಾಗೇ ಈ ಪಾಕ ಪಂಡಿತರಿಗೆ ಮಲ್ಟಿ ಮಿಲಿಯನರ್, ಆಗರ್ಭ ಶ್ರೀಮಂತ ಬಿಸಿನೆಸ್ ಟೈಕೂನ್, ಸುಪ್ರಸಿದ್ಧ ಸೆಲೆಬ್ರಿಟಿಗಳ ಮನೆಯ ಪಾಕ ಶಾಲೆಗೆ ರೆಡ್ ಕಾರ್ಪೆಟ್ ಸ್ವಾಗತವಿದೆ. ಅಂಬಾನಿ, ಹಿಂದೂಜಾರಂತಹ ಕರೂಡ್ಪತಿಗಳ ನಾಲಿಗೆ ರುಚಿ ತೀರಿಸಿದ ಈ ಬಾಣಸಿಗರೇ ಮೆನಾರಿಯನ್ ಮಾಸ್ಟರ್ ಶೆಫ್ಗಳು.
ಅದು ಭಾರತದ ಸಾವಿರಾರು ಗ್ರಾಮಗಳ ಪೈಕಿ ಒಂದು ಗ್ರಾಮ. ಅದಿರುವುದು ರಜಪೂತರ ಕ್ಷಾತ್ರ ನೆಲ ರಾಜಸ್ತಾನದಲ್ಲಿ. ಆ ಹಳ್ಳಿ ಹಿಂದೊಂದು ಕಾಲದಲ್ಲಿ ಕುಗ್ರಾಮವಾಗಿದ್ದ, ಆರ್ಥಿಕವಾಗಿ ಹಿಂದುಳಿದಿದ್ದ ಹಾಗೂ ಅಭಿವೃದ್ಧಿ ಕಾಣದ ಹಳ್ಳಿ ಮಾತ್ರವಾಗಿತ್ತು. ಆದರೂ ಆ ಗ್ರಾಮಕ್ಕೊಂದು ಪ್ರತ್ಯೇಕತೆ ಇದೆ, ವಿಶೇಷತೆ ಇದೆ, ಕುತೂಹಲದ ದೃಷ್ಟಿಯಿಂದ ಆ ಗ್ರಾಮವನ್ನು ನೋಡಲಾಗ್ತಿದೆ. ಅದಕ್ಕೆ ಕಾರಣ, ಭಾರತದ ಪ್ರಸಿದ್ಧ, ಪ್ರಖ್ಯಾತ ಹಾಗೂ ಆಗರ್ಭ ಶ್ರೀಮಂತ ಕುಟುಂಬಗಳಿಗೆ ಅಡುಗೆ ಮಾಡಿ ಬಡಿಸುವ ಬಾಣಸಿಗರು ಆ ಗ್ರಾಮದವರು.
ರಾಜಸ್ತಾನದ ಉದಯಪುರದಿಂದ ಕೇವಲ 30 ಕಿಲೋಮೀಟರ್ ದೂರದಲ್ಲಿರುವ ಮೆನಾರ್ ಎಂಬ ಗ್ರಾಮವೇ, ಆಗರ್ಭ ಶ್ರೀಮಂತರ ಪಾಕಶಾಲೆಯ ಪ್ರವೀಣರನ್ನು ಕೊಟ್ಟ ಗ್ರಾಮ. ನೋಡಲು ಕುಗ್ರಾಮದಂತಿರುವ ಮೆನಾರ್ ಗ್ರಾಮ ಭಾರತೀಯ ಪಾಕಶಾಸ್ತ್ರದ ಇತಿಹಾಸದಲ್ಲೇ ಅತ್ಯದ್ಭುತವಾದ ಬಾಣಸಿಗರನ್ನು ಕೊಟ್ಟಿದೆ. ಮೆನರ್ ಗ್ರಾಮದ ಬಾಣಸಿಗರನ್ನು ಮೆನಾರಿಯಾ ಮಾಸ್ಟರ್ ಶೆಫ್ಗಳೆಂದು ಗುರುತಿಸಲಾಗ್ತಿದೆ. ಈ ಮೆನಾರಿಯಾ ಬಾಣಸಿಗರು, ಯಾವುದೇ ಪದವಿ ಪಡೆದವರಲ್ಲ, ವಿಶೇಷ ಪಾಕಶಾಸ್ತ್ರದ ಹೊತ್ತಿಗೆಗಳನ್ನು ಓದಿದವರಲ್ಲ. ತಮ್ಮ ಬಾಲ್ಯ ಹಾಗೂ ತಾರುಣ್ಯದಲ್ಲಿ ಮನೆಯ ಹೆಣ್ಣು ಮಕ್ಕಳಿಂದ ಅಡುಗೆ ಕಲೆಯನ್ನ ಕಲಿತ ಇವರು ಈಗ ದೇಶ ವಿದೇಶಗಳಲ್ಲಿ ಹೆಸರು ಮಾಡುತ್ತಿದ್ದಾರೆ.
ಮೆನಾರಿಯನ್ ಮಹಿಳೆಯರು ಅತ್ಯದ್ಭುತವಾಗಿ ಅಡುಗೆ ಮಾಡುತ್ತಾರೆ. ಅದರಲ್ಲೂ ರೊಟ್ಟಿ, ಸಬ್ಜಿ, ದಾಲ್ ತಯಾರಿಕೆ ಇವರಿಗೆ ಕರತಲಾಮಲಕ ವಿದ್ಯೆ. ರಾಜಸ್ತಾನಿ ಮಹಿಳೆಯರ ಅಚ್ಚುಕಟ್ಟಾದ ಹಾಗೂ ರುಚಿಯಾದ ಜೋಳದ ರೊಟ್ಟಿ, ಸಬ್ಜಿ, ದಾಲ್ ತಿಂದು ಬೆಳೆದ ಕೆಲವು ಯುವಕರು ಮುಂದೆ ರಾಜಸ್ತಾನಿ ಸಾಂಪ್ರದಾಯಿಕ ಪಾಕಶಾಸ್ತ್ರವನ್ನೇ ತಮ್ಮ ಬದುಕಿನ ವೃತ್ತಿಯನ್ನಾಗಿಸಿಕೊಂಡರು. ಮನೆಯಲ್ಲೇ ಪಾಕಶಾಸ್ತ್ರದ ಪ್ರಾಥಮಿಕ ಕಲಿಕೆ ಕಲಿತ ಮೆನಾರಿಯನ್ ಬಾಣಸಿಗರು ತಮ್ಮ ಪಾಕ ವೈವಿದ್ಯತೆಯಲ್ಲಿ ಹಲವು ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ.
ಮೆನಾರ್ ಗ್ರಾಮದ ಬಾಣಸಿಗರು ಭಾರತದ ಟ್ಯಾಲೆಂಟೆಡ್ ಮಾಸ್ಟರ್ ಶೆಫ್ಗಳು ಅನ್ನೋದ್ರಲ್ಲಿ ಎರಡು ಮಾತಿಲ್ಲ. ಹೀಗಾಗಿಯೇ ಧೀರೂಬಾಯಿ ಅಂಬಾನಿ ಕುಟುಂಬ, ಹಿಂದೂಜಾ ಸಹೋದರರು, ಲತಾ ಮಂಗೇಶ್ಕರ್ ಹಾಗೂ ಜೂಹಿ ಚಾವ್ಲಾ ಕುಟುಂಬಕ್ಕೆ ಈಗಲೂ ರುಚಿಕಟ್ಟಾದ ಅಡುಗೆ ತಯಾರಿಸಿಕೊಡುವ ಅಡುಗೇ ಭಟ್ಟರು ಈ ಮೆನಾರ್ ಗ್ರಾಮದವರು.
ಕೇವಲ ಭಾರತದಲ್ಲಿ ವಾಸವಿರುವ ಮಲ್ಟಿ ಮಿಲೇನಿಯರ್ ಭಾರತೀಯರಷ್ಟೇ ಅಲ್ಲ, ವಿದೇಶಗಳಲ್ಲಿ ನೆಲೆಸಿರುವ ನೂರಾರು ಬಿಲೇನಿಯರ್ ಉದ್ದಿಮೆಪತಿಗಳು ಹಾಗೂ ಬಿಸೆನೆಸ್ ಟೈಕೂನ್ಗಳೂ ಸಹ ಮೆನಾರಿಯಾ ಮಾಸ್ಟರ್ ಶೆಫ್ಗಳಿಗೆ ತಮ್ಮ ಅಡುಗೆ ಕೋಣೆಯ ನಿಯಂತ್ರಣ ಕೊಟ್ಟಿದ್ದಾರೆ. ಇಂಗ್ಲೆಂಡ್ ಒಂದರಲ್ಲೇ ಅರ್ಧ ಡಜನ್ಗೂ ಹೆಚ್ಚು ಮೆನಾರ್ ಗ್ರಾಮ ಮೂಲದ ಬಾಣಸಿಗರು ಭಾರತೀಯ ಸಿರಿವಂತರ ಪಾಕಶಾಲೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಈಗ ಸದ್ಯ ಹಿಂದೂಜಾ ಸಹೋದರರ ಲಂಡನ್ ಕಿಚನ್ನಲ್ಲಿ ಮುಖ್ಯ ಬಾಣಸಿಗನಾಗಿರುವ ಯಶವಂತ್ ಮೆನಾರಿಯಾಗೆ ಈಗ ಕೇವಲ 28 ವರ್ಷ. ತನ್ನ 14ನೇ ವರ್ಷದಲ್ಲೇ ಮೆನಾರ್ ಗ್ರಾಮದ ಬಳಿಯ ಒಂದು ಮಲ್ಟಿ ನ್ಯಾಷನಲ್ ಕಂಪನಿಯ ಸನಿಹ ಮೊಬೈಲ್ ಕ್ಯಾಂಟಿನ್ ತೆರೆದು ರಾಜಸ್ತಾನಿ ಖಾದ್ಯ ತಯಾರಿಸಿ ಮಾರಲು ಶುರುಮಾಡಿದ್ದ ಯಶವಂತ್ ಮೆನಾರಿಯಾ ಆ ಬಳಿಕ ಹಿಂತಿರುಗಿ ನೋಡಲೇ ಇಲ್ಲ.
ಹಿಂದೂಜಾ ಕುಟುಂಬದ ಮೂರನೆಯವರಾದ ಅಶೋಕ್ ಪಿ ಹಿಂದೂಜಾರ ಮುಂಬೈ ಮನೆಯಲ್ಲಿ ಬಾಣಸಿಗರಾಗಿ ಸೇರಿಕೊಂಡಿದ್ದ ಯಶವಂತ್ ಅಲ್ಲಿ ಸುಮಾರು ಒಂದು ದಶಕ ಕೆಲಸ ಮಾಡಿ ಆ ಬಳಿಕ ಅವರ ಜೊತೆಯೇ ಲಂಡನ್ಗೆ ವಲಸೆ ಹೋದರು. ಅವರ ಮೆನಾರಿಯಾ ಪಾಕಶೈಲಿ ಕೇವಲ ಲಂಡನ್ ಮಾತ್ರವಲ್ಲ, ಆಂಟ್ವರ್ಪ್, ಹಾಂಗ್ ಕಾಂಗ್, ನೈರೋಬಿ, ದುಬೈ, ಮಸ್ಕತ್, ಅಬುದಾಬಿ, ಕತಾರ್ ಹಾಗೂ ಇನ್ನು ಕೆಲವು ರಾಷ್ಟ್ರಗಳಲ್ಲೂ ಪ್ರಸಿದ್ದಿ ಪಡೆದಿದೆ.
ಇನ್ನೊಬ್ಬ ಮೆನಾರಿಯ ಕುಕ್ ಪೂನಮ್ ಚಂದ್ ಅಕ್ಲಿಂಗ್ ದಸೂಟ್ರವರ ಕಥೆ ಇನ್ನಷ್ಟು ಕುತೂಹಲಕಾರಿಯಾಗಿದೆ. 1997ರಲ್ಲಿ ಧೀರೂಬಾಯಿ ಅಂಬಾನಿ ಕುಟುಂಬದ ಮುಖ್ಯ ಬಾಣಸಿಗರಾಗಿದ್ದ ಪೂನಮ್ಚಂದ್, ಆ ಬಳಿಕ ಭಾರತದ ಗಾನ ಕೋಗಿಲೆ ಲತಾ ಮಂಗೇಷ್ಕರ್ ಮನೆಯ ಅಡುಗೆಕೋಣೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಈಗ ಸದ್ಯ ನಿವೃತ್ತಿ ಹೊಂದಿರುವ ಪೂನಮ್ ಚಂದ್, ರಾಜಸ್ತಾನಿ ಆಹಾರ ತಯಾರಿಕೆ ಕಲಿಯುವ ಆಸಕ್ತರಿಗೆ, ತಮ್ಮ ಪಾಕಸಾಮರ್ಥ್ಯವನ್ನು ಹೇಳಿಕೊಡ್ತಿದ್ದಾರೆ.
ಧೀರೂಬಾಯಿ ಕುಟುಂಬಕ್ಕೆ ಸುದೀರ್ಘ 10 ವರ್ಷಗಳ ಕಾಲ ರಾಜಸ್ತಾನಿ ಅಡುಗೆ ತಯಾರಿಸಿ ಉಣಿಸಿದ ಪೂನಮ್ಚಂದ್, 2007ರ ವರೆಗೂ ಧೀರೂಬಾಯಿ ಮನೆಗೆ ಸಿರಿಧಾನ್ಯಗಳ ಖಾದ್ಯ, ಗೋದಿ ರೊಟ್ಟಿ, ಡೋಕ್ಲಾ, ಪೋಹೆ, ಕಚೋರಿ ಮುಂತಾದ ರಾಜಸ್ತಾನಿ ವೈವಿಧ್ಯಮಯ ಖಾದ್ಯಗಳನ್ನು ತಯಾರಿಸಿ ಭೇಷ್ ಎನಿಸಿಕೊಂಡಿದ್ದರು. ಅಂದ ಹಾಗೆ ಪೂನಮ್ಚಂದ್ ತಮ್ಮ ತಾಯಿಯಿಂದ ಕಲಿತ ರಾಜಸ್ತಾನಿ ಪಾಕಶಾಸ್ತ್ರದ ವಿನಃ ಬೇರೆ ಯಾವ ಪ್ರಫೋಷನಲ್ ಕೋರ್ಸ್ಗಳನ್ನೂ ಓದಲಿಲ್ಲ. ಆದರೆ ಭಾರತದ ಆಗರ್ಭ ಶ್ರೀಮಂತ ಧೀರೂಬಾಯಿ ಕುಟುಂಬಕ್ಕೆ ನಿರಂತರ 10 ವರ್ಷಗಳ ಕಾಲ ಅಡುಗೆ ಮಾಡಿ ಬಡಿಸುವ ಹಿಂದಿದ್ದಿದ್ದು ಮಾತ್ರ ಅವರಲ್ಲಿದ್ದ ಮೆನಾರಿಯನ್ ಪಾಕಪ್ರಾವಿಣ್ಯತೆ.
ಸರಿಯಾಗಿ ಶಾಲೆಯ ವಿದ್ಯಾಭ್ಯಾಸವನ್ನೇ ಪೂರ್ಣಗೊಳಿಸದ ಪೂನಮ್ಚಂದ್, ಪ್ರಸಿದ್ದ ಗುಜರಾತಿ ಮಾಸ್ಟರ್ ಶೆಫ್ ತರಳಾ ದಲಾಲ್ ಬಳಿ ಗುಜರಾತಿ ಹಾಗೂ ರಾಜಸ್ತಾನಿ ಅಡುಗೆಯ ಕೆಲವು ಸೂಕ್ಷ್ಮಗಳನ್ನು ಕಲಿತುಕೊಂಡರು. ಕೇವಲ ಪೂನಮ್ ಚಂದ್ ಮಾತ್ರವಲ್ಲ, ಅವರಿಗಿಂತ ಮೊದಲು ಹಾಗೂ ಅವರ ನಂತರ ಹಲವು ಮೆನಾರಿಯನ್ ಬಾಣಸಿಗರು ಯಾವುದೇ ಖಾದ್ಯ ತಯಾರಿಕೆಯ ಕೋರ್ಸ್ ಕಲಿತಿಲ್ಲ. ಆದರೂ ಪ್ರೊಫೇಷನಲ್ ಶೆಫ್ಗಳನ್ನು ಮೀರಿಸುವಂತೆ ಮೆಕ್ಸಿಕನ್, ಇಟಾಲಿಯನ್ ಮುಂತಾದ ಕಾಂಟಿನೆಂಟಲ್ ಖಾದ್ಯಗಳನ್ನು ತಯಾರಿಸುತ್ತಾರೆ. ಯಾವುದೇ ರಾಷ್ಟ್ರದ ಖಾದ್ಯ ತಯಾರಿಸುವ ಕಲೆಯನ್ನು ಮೆನಾರ್ ಗ್ರಾಮದ ಬಾಣಸಿಗರು ಅತ್ಯಂತ ಅಚ್ಚುಕಟ್ಟಾಗಿ ಮಾಡ್ತಾರೆ ಅನ್ನೋದು ಪ್ರಚಲಿತದಲ್ಲಿರುವ ಜನಪ್ರಿಯ ಮಾತು. ಹೀಗಾಗಿ ಮೆನಾರಿಯನ್ ಮಾಸ್ಟರ್ ಶೆಫ್ಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಪೂನಮ್ ಚಂದ್ಗಿಂತ ಮೊದಲು ಅಂಬಾನಿ ಕುಟುಂಬದ ಅಡುಗೆ ಮನೆಯ ನೇತೃತ್ವ ವಹಿಸಿದ್ದ ಮೆನಾರ್ ಗ್ರಾಮದವರೇ ಆದ ಭೈರೂಲಾಲ್ ರಜಪೂತ್ ಕುಟುಂಬಕ್ಕೆ ಅಂಬಾನಿ ಕುಟುಂಬ ಈಗಲೂ ಪಿಂಚಣಿ ನೀಡುತ್ತಿದೆ.
ನಿಮಗೆ ಆಶ್ಚರ್ಯ ಆಗಬಹುದು ಮೆನಾರಿಯನ್ ಅಡುಗೆ ಭಟ್ಟರಿಗೆ ಆರಂಕಿಯ ಸಂಬಳವಿದೆ. ಹಾಗೂ ಮೆನಾರ್ ಅನ್ನುವ ಕುಗ್ರಾಮವನ್ನು ಇಲ್ಲಿನ ಕೆಲವು ಬಾಣಸಿಗರು ತಮ್ಮ ಆದಾಯದ ಹಣದಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಮೆನಾರ್ ಗ್ರಾಮದ ಮತ್ತೊಬ್ಬ ಸುಪ್ರಸಿದ್ದ ಬಾಣಸಿಗ ವಿಜಯ್ ಲಾಲ್ ದಹೂಟ್. ಇವರು ದುಬೈನಲ್ಲಿ ನೆಲೆಸಿರುವ ಭಾರತೀಯ ಮೂಲದ ಖ್ಯಾತ ಉದ್ಯಮಿ ಮೇಗನ್ಮಲ್ ಜೇತಾನಂದ್ ಪಾಂಚೋಲಿಯಾ ಮನೆಯಲ್ಲಿ ಸುಮಾರು 15 ವರ್ಷ ಅಡುಗೆ ಭಟ್ಟರಾಗಿ ಕೆಲಸ ಮಾಡಿದ್ದರು. ಅವರ ನಿವೃತ್ತಿಯ ನಂತರ ಮೆನಾರ್ ಅಭಿವೃದ್ಧಿಗಾಗಿ ತಮ್ಮ ನಿವೃತ್ತಿ ವೇತನ ಹಾಗೂ ಪಿಂಚಣಿ ಹಣವನ್ನು ಮೆನಾರ್ ಗ್ರಾಮದ ಅಭಿವೃದ್ಧಿಗೆ ಬಳಸಿದ್ದಾರೆ.
1957ರಲ್ಲಿ ದುಬೈನಲ್ಲಿ ವಿದ್ಯುತ್ ವ್ಯವಸ್ಥೆ ಕಲ್ಪಿಸಿ ಕ್ರಾಂತಿ ಮಾಡಿದ್ದು ಇದೇ ವಿಜಯ್ ಲಾಲ್ ದಹೂಟ್ರ ದಣಿ ಮೇಗನ್ಮಲ್ ಪಾಂಚೋಲಿಯಾ. ಈ ಪಾಂಚೋಲಿಯಾರ ಮನವೊಲಿಸಿದ ವಿಜಯ್ ದಹೂಟ್, ಮೆನಾರ್ ಗ್ರಾಮದಲ್ಲಿ 1.42 ಕೋಟಿ ರೂ ಮೊತ್ತದ 100 ಬೆಡ್ಗಳ ಸುಸಜ್ಜಿತ ಆಸ್ಪತ್ರೆ, ಶಾಲೆ ಹಾಗೂ ಸಮುದಾಯ ಕೇಂದ್ರ ಸ್ಥಾಪನೆ ಮಾಡಿದ್ದಾರೆ. ಬಾಣಸಿಗರು ಮನಸ್ಸು ಮಾಡಿ ಊರಿನ ಅಭಿವೃದ್ಧಿ ಸಾಧಿಸಬಹುದು ಅನ್ನುವುದಕ್ಕೆ ಮೆನಾರ್ ಗ್ರಾಮ ಹಾಗೂ ಮೆನಾರಿಯನ್ ಮಾಸ್ಟರ್ ಶೆಫ್ಗಳು ಅತ್ಯುತ್ತಮ ನಿದರ್ಶನ.
ಮೆನಾರ್ ಗ್ರಾಮದವರೇ ಆದ ಪ್ರಭುಲಾಲ್ ಆರ್ ಜೋಶಿ ಹಾಗೂ ಗುಜರಾತ್ನ ಜಿತೇಂದ್ರ ಶಾ ಒಟ್ಟಾಗಿ 1987ರಲ್ಲಿ ಹೀನಾ ಟೂರ್ಸ್ ಎಂಡ್ ಟ್ರಾವೆಲ್ಸ್ ಅನ್ನುವ ಸಂಸ್ಥೆ ಆರಂಭಿಸಿದ್ದರು. ಈ ಸಂಸ್ಥೆ ಆರಂಭಿಸಿದ್ದ ಉದ್ದೇಶವೇನೆಂದರೆ, ಮೆನಾರ್ನ ಬಾಣಸಿಗರಿಗೆ ಒಳ್ಳೆಯ ಶ್ರೀಮಂತ ಕುಟುಂಬಗಳಲ್ಲಿ ಉದ್ಯೋಗ ಕೊಡಿಸುವುದು ಹಾಗೂ ಮೆನಾರಿಯನ್ ಮಾಸ್ಟರ್ ಶೆಫ್ ಗಳಿಗೆ ಶಾಶ್ವತ ಉದ್ಯೋಗ ಸೃಷ್ಟಿಸುವುದು. ಇದು ಅದೆಷ್ಟು ಯಶಸ್ವಿಯಾಯ್ತೆಂದರೆ ಈಗ ಭಾರತದಾದ್ಯಂತ ಹಾಗೂ ವಿದೇಶಗಳಲ್ಲೂ ಹೀನಾ ಟೂರ್ಸ್ ಎಂಡ್ ಟ್ರಾವೆಲ್ಸ್ ಶಾಖೆಗಳಿವೆ. ಇದರ ಯಶಸ್ಸಿಗೆ ಕಾರಣ ಮೆನಾರ್ನ ಬಾಣಸಿಗರು ತಯಾರಿಸುವ ಅದ್ಭುತ ರುಚಿಯ ಶುದ್ಧ ಸಸ್ಯಾಹಾರಿ ಆಹಾರ. ಈ ಸಂಸ್ಥೆ ಈಗ ಮೆನಾರ್ ಮೂಲದ ಬಾಣಸಿಗರಿಗೆ ಪ್ರೊಫೇಶನಲ್ ತರಬೇತಿ ನೀಡ್ತಿದೆ.
ಮೆನಾರ್ ಗ್ರಾಮದ ಇನ್ನೊಂದು ವಿಶೇಷ ಅಂದ್ರೆ ಇಲ್ಲಿರುವ ಸರೋವರ ಹಾಗೂ ಮೆನಾರ್ ಸರೋವರವನ್ನು ಹುಡುಕಿಕೊಂಡು ಬರುವ ತರಹೇವಾರಿ ವಲಸೆ ಹಕ್ಕಿಗಳು. ನೋಡಲು ಸಣ್ಣ ಗ್ರಾಮವಾದ ಈ ಮೆನಾರ್, ಅದ್ವಿತೀಯ ಬಾಣಸಿಗರನ್ನು ಪ್ರಪಂಚಕ್ಕೆ ಕೊಟ್ಟಿದೆ. ಪಕ್ಕಾ ರಾಜಸ್ತಾನಿ ಸಂಪ್ರದಾಯವನ್ನು ಪಾಲಿಸುವ ಈ ಗ್ರಾಮದಲ್ಲಿ ಹಲವು ವೈವಿಧ್ಯಮಯ ಆಚರಣೆಗಳನ್ನು ನಡೆಸಲಾಗುತ್ತೆ. ಅದರಲ್ಲೂ ಹೋಳಿ ಹಬ್ಬದ ರಾತ್ರಿ ನಡೆಸಲಾಗುವ ಜಮರ್ಬೀಜ್ ಸಿಡಿಮದ್ದು ಹಾಗೂ ಕೋವಿ ಸಿಡಿಸುವ ಪ್ರದರ್ಶನ ಸಾಕಷ್ಟು ವೈಭವದಿಂದ ಕೂಡಿರುತ್ತದೆ.
ಮೆನಾರ್ ಗ್ರಾಮವನ್ನು ಭಾರತದ ಪಾಕಶಾಸ್ತ್ರದ ಇತಿಹಾಸದಲ್ಲಿ ಅದ್ವಿತೀಯ ಬಾಣಸಿಗರನ್ನು ತಯಾರಿಸುವ ಕಾರ್ಖಾನೆ ಅಂದ್ರೆ ತಪ್ಪಾಗುವಿಲ್ಲ. ಮುಖ್ಯವಾಗಿ ಈ ರಜಪೂತ ಸಾಂಪ್ರದಾಯಿಕ ಪಾಕ ಪ್ರವೀಣರಿಗೆ ತಮ್ಮೂರಿನ ಅಭಿವೃದ್ಧಿ ಮಾಡಬೇಕೆಂಬ ತುಡಿತ ಸಹ ಶ್ಲಾಘನೀಯ ಸಂಗತಿ. ಈ ನಿಟ್ಟಿನಲ್ಲಿ ಮೆನಾರ್ ಗ್ರಾಮ ಹಾಗೂ ಮೆನಾರಿಯನ್ ಮಾಸ್ಟರ್ ಶೆಫ್ಗಳು ವಿಶಿಷ್ಟ ಸ್ಥಾನದಲ್ಲಿ ನಿಲ್ಲುವ ಸಂಗತಿಗಳು.
ಭಾರತದ ಮಿಲೇನಿಯರ್ ಬಾಣಸಿಗರ ಪಟ್ಟಿ ಇಲ್ಲಿದೆ. ಇವರೆಲ್ಲರ ತಿಂಗಳ ಆಧಾಯವೂ ಲಕ್ಷದ ಮೇಲೆ ದಾಟುತ್ತದೆ. ಇವರಲ್ಲಿ ಅನೇಕರು ಟಿವಿ ಶೋಗಳನ್ನು ನಡೆಸಿಕೊಡುತ್ತಾರೆ. ಮತ್ತೆ ಕೆಲವರು ತಮ್ಮದೇ ಸ್ವಂತ ಪಾಕಕಲಿಕೆಯ ಶಾಲೆಗಳನ್ನೂ ತೆರೆದಿದ್ದಾರೆ. ಇವರಲ್ಲಿ ಮಹಿಳೆಯರೂ ಇದ್ದಾರೆ ಪುರುಷರೂ ಇದ್ದಾರೆ. ಆರತಿ ಸಿಕ್ವೈರಾ, ಅಂಜುಮ್ ಆನಂದ್, ಸುರ್ಜನ್ ಸಿಂಗ್ ಜೋಲಿ, ಫಾರೂಕ್ ಖಂಬಾಟ, ಗಗನ್ ಆನಂದ್, ಗರಿಮಾ ಅರೋರಾ, ಹರ್ಪಲ್ ಸೋಖಿ, ಕುಮಾರ್ ಮಹದೇವನ್, ಕುನಾಲ್ ಕಪೂರ್, ಎಂ ಎಸ್ ಕೃಷ್ಣ ಅಯ್ಯರ್, ಮಧುರ್ ಜೆಫ್ರಿ, ಮನೀತ್ ಚೌಹಾನ್, ಮನೀಶ್ ಮಲ್ಹೋತ್ರಾ, ಮಂಜುನಾಥ್ ಮುರಲ್, ನಾರಾಯಣ ರೆಡ್ಡಿ, ನಾರಾಯಣನ್ ಕೃಷ್ಣನ್, ನಿಖಿತಾ ಗಾಂಧಿ, ನಿಲೇಶ್ ಲಿಮಾಯೆ, ನೀತಾ ಮೆಹ್ತಾ, ರಾಜೇಶ್ ಮಜುಮ್ದಾರ್, ರಾಜೀ ಜಲ್ಲೇಪಲ್ಲಿ, ರೀತು ದಾಲ್ಮಿಯ, ರೋಮಿ ಗಿಲ್, ಸಂಜಯ್ ತುಮ್ಮಾ, ವಿಶ್ವೇಶ್ ಭಟ್, ವಿವೇಕ್ ಸಿಂಗ್, ಸರಂಶ್ ಗೋಯ್ಲಾ ಮುಂತಾದವರು. ಇವರಲ್ಲಿ ಮೊದಲ ಸ್ಥಾನದಲ್ಲಿರುವ ಮೋಸ್ಟ್ ಸೆಲೆಬ್ರಿಟಿ ಬಾಣಸಿಗ ಅಡುಗೆ ಮಾಡುವ ಕಲೆಯ ಮೂಲಕವೇ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಸಂಜೀವ್ ಕಪೂರ್. ಅಡುಗೆ ಮಾಡುವುದೆಂದರೆ ಅಷ್ಟು ಸುಲಭವೂ ಅಲ್ಲ, ಅಡುಗೆ ಮನೆಯಲ್ಲಿ ಕೆಲಸ ಮಾಡುವುದು ನಿಕೃಷ್ಟ ಕೆಲಸವೂ ಅಲ್ಲ.
-ವಿಭಾ (ವಿಶ್ವಾಸ್ ಭಾರದ್ವಾಜ್)








