ಪ್ರೇಮ ವಿವಾಹವಾಗಿದ್ದ ವೈದ್ಯೆ ಆತ್ಮಹತ್ಯೆಗೆ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಪತಿಯ ವಿರುದ್ಧ ಆರೋಪ ಕೇಳಿ ಬಂದಿದೆ.
ಈ ಘಟನೆ ಗದಗ ತಾಲೂಕಿನ (Gadag) ಹುಲಕೋಟಿ (hulkoti) ಗ್ರಾಮದಲ್ಲಿ ನಡೆದಿದೆ. ಹುಲಕೋಟಿ ಗ್ರಾಮದ ಮನೆಯಲ್ಲಿ ಸರ್ಕಾರಿ ವೈದ್ಯೆ ಡಾ. ಗೀತಾ ಕೋರಿ ಆತ್ಮಹತ್ಯೆ ಮಾಡಿಕೊಂಡ ವೈದ್ಯೆ. ಬಿಎಎಂಎಸ್ ಮುಗಿಸಿದ್ದ ಡಾ. ಗೀತಾ ಗದಗನಲ್ಲಿ (ಆರ್ಬಿಎಸ್ಕೆ) ರಾಷ್ಟ್ರೀಯ ಬಾಲ ಸಾಂಸ್ಥೆ ಕಾರ್ಯಕ್ರಮದ ವೈದ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು.
ಪತಿ ಡಾ. ಕುಶಾಲ್ ಕೋರಿ ಬಿಎಎಂಎಸ್ ಗದಗ ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ ಆಯುಷ್ಯ ಇಲಾಖೆ ವೈದ್ಯಾಧಿಕಾರಿ ಆಗಿ ಸೇವೆ ಮಾಡುತ್ತಿದ್ದರು. ಇವರಿಬ್ಬರು ಓದುವ ಸಂದರ್ಭದಲ್ಲಿಯೇ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ಆದರೆ, ಇತ್ತೀಚೆಗೆ ದಂಪತಿಯ ಮಧ್ಯೆ ವಿರಸ ಉಂಟಾಗಿದೆ. ಆದರೆ, ಇಬ್ಬರ ಜಗಳ ಸಾವಿನಲ್ಲಿ ಅಂತ್ಯವಾಗಿದ್ದು, ವೈದ್ಯೆಯ ಕುಟುಂಬಸ್ಥರು ಪತಿಯ ಮೇಲೆ ಆರೋಪಿಸುತ್ತಿದ್ದಾರೆ. ಮಗಳ ಸಾವಿಗೆ ಪತಿ ಡಾ ಕುಶಾಲನೇ ಕಾರಣ ಅಂತ ಆರೋಪಿಸಿದ್ದಾರೆ. ಅಲ್ಲದೇ, ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಗೋಡೆ ಮೇಲಿನ ಬರಹ ಸಾಕಷ್ಟು ಅನುಮಾನ ಹುಟ್ಟಿಸಿದೆ. ಸಾವಿನ ಕುರಿತು ಬರೆದು ಯುವ ವೈದ್ಯೆ ನೇಣಿಗೆ ಶರಣಾಗಿದ್ದಾಳೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ನೀಡಿದ್ದು, ತನಿಖೆ ಕೈಗೊಂಡಿದ್ದಾರೆ.