ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತೊಮ್ಮೆ ತಮ್ಮ ನಡೆವಳಿಕೆಯಿಂದ ಭಾರೀ ವಿವಾದವೊಂದಕ್ಕೆ ಕಾರಣರಾಗಿದ್ದಾರೆ. ಸದಾ ಒಂದಿಲ್ಲೊಂದು ಧಾರ್ಮಿಕ ವಿಚಾರಗಳಲ್ಲಿ ಸುದ್ದಿಯಾಗುವ ಸಿಎಂ, ಇದೀಗ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ ಫೋಟೋವನ್ನು ತಿರಸ್ಕರಿಸುವ ಮೂಲಕ ಭಕ್ತರ ಮತ್ತು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಾರ್ವಜನಿಕವಾಗಿ ಅಭಿಮಾನಿಯೊಬ್ಬರು ಪ್ರೀತಿಯಿಂದ ನೀಡಿದ ರಾಯರ ಫೋಟೋವನ್ನು ಸ್ವೀಕರಿಸಲು ನಿರಾಕರಿಸಿದ ಘಟನೆ ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ಪ್ರಸಂಗ ನಡೆದಿದೆ. ಮುಖ್ಯಮಂತ್ರಿಗಳನ್ನು ಕಂಡ ತಕ್ಷಣ ಕೆಲವು ಅಭಿಮಾನಿಗಳು ಮತ್ತು ಸಾರ್ವಜನಿಕರು ಮನವಿ ಪತ್ರಗಳನ್ನು ಸಲ್ಲಿಸಲು ಮತ್ತು ಅವರನ್ನು ಮಾತನಾಡಿಸಲು ಕಾರಿನ ಬಳಿ ಮುಗಿಬಿದ್ದಿದ್ದರು. ಈ ಸಂದರ್ಭದಲ್ಲಿ ಓರ್ವ ಅಭಿಮಾನಿ ಅತ್ಯಂತ ಭಕ್ತಿಯಿಂದ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಫೋಟೋವನ್ನು ಸಿಎಂ ಅವರಿಗೆ ಉಡುಗೊರೆಯಾಗಿ ನೀಡಲು ಮುಂದಾದರು.
ಆದರೆ, ರಾಯರ ಫೋಟೋವನ್ನು ಕೈಗೆತ್ತಿಕೊಂಡ ಸಿಎಂ ಸಿದ್ದರಾಮಯ್ಯ, ಕ್ಷಣಮಾತ್ರದಲ್ಲಿ ಅದನ್ನು ಆ ಅಭಿಮಾನಿಗೆ ವಾಪಸ್ ನೀಡಿದ್ದಾರೆ. ಅಷ್ಟೇ ಅಲ್ಲದೆ, ಫೋಟೋ ಕೊಟ್ಟ ವ್ಯಕ್ತಿಯತ್ತ ದುರುಗುಟ್ಟಿ ನೋಡಿದ್ದಾರೆ ಎಂದು ವರದಿಯಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ, ಇದೇ ವೇಳೆ ಮತ್ತೊಬ್ಬ ಅಭಿಮಾನಿ ನೀಡಿದ ಚಾಣಕ್ಯನ ಕುರಿತಾದ ಪುಸ್ತಕವನ್ನು ಸಿದ್ದರಾಮಯ್ಯ ಅವರು ಯಾವುದೇ ತಕರಾರಿಲ್ಲದೆ ಸ್ವೀಕರಿಸಿದ್ದಾರೆ. ದೈವ ಭಕ್ತಿಯ ಸಂಕೇತವಾದ ಫೋಟೋವನ್ನು ತಿರಸ್ಕರಿಸಿ, ಬೌದ್ಧಿಕ ಸಂಕೇತವಾದ ಪುಸ್ತಕವನ್ನು ಸ್ವೀಕರಿಸಿದ ಸಿಎಂ ಅವರ ಈ ತಾರತಮ್ಯದ ನಡೆ ಈಗ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಹಿಂದೂ ವಿರೋಧಿ ಪಟ್ಟ ಮತ್ತೆ ಮುನ್ನೆಲೆಗೆ
ಈ ಹಿಂದೆಯೂ ಸಿದ್ದರಾಮಯ್ಯ ಅವರು ಕುಂಕುಮ ಇಟ್ಟುಕೊಳ್ಳಲು ನಿರಾಕರಿಸಿದ್ದು, ಮೈಸೂರು ಪೇಟ ಧರಿಸಲು ಹಿಂಜರಿದಿದ್ದು ಮತ್ತು ದೇವಸ್ಥಾನಗಳಿಗೆ ಭೇಟಿ ನೀಡಿದಾಗ ತೋರುವ ಹಾವಭಾವಗಳು ಚರ್ಚೆಯ ವಿಷಯವಾಗಿದ್ದವು. ಈಗ ರಾಯರ ಫೋಟೋ ತಿರಸ್ಕರಿಸಿದ ಘಟನೆ ಬಿಜೆಪಿಗೆ ಹೊಸ ಅಸ್ತ್ರವನ್ನು ಒದಗಿಸಿಕೊಟ್ಟಂತಾಗಿದೆ.
ಸಿದ್ದರಾಮಯ್ಯ ವಿರುದ್ಧ ಆರ್ ಅಶೋಕ್ ಆಕ್ರೋಶ
ಘಟನೆ ನಡೆಯುತ್ತಿದ್ದಂತೆಯೇ ದೆಹಲಿಯಲ್ಲಿದ್ದ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಸಿಎಂ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯನವರಿಗೆ ಹಿಂದೂ ದೇವರುಗಳನ್ನು ಕಂಡರೆ ಆಗುವುದಿಲ್ಲ. ಅವರಿಗೆ ಹಣೆಗೆ ಇಡುವ ತಿಲಕ, ನಾಮ ಹಾಗೂ ಕೃಷ್ಣನನ್ನು ಕಂಡರೆ ಮೈಮಲೆಯೇರುತ್ತದೆ. ಆದರೆ ಅವರಿಗೆ ಟೋಪಿ ಕಂಡರೆ ಮಾತ್ರ ಎಲ್ಲಿಲ್ಲದ ಖುಷಿ ಎಂದು ವ್ಯಂಗ್ಯವಾಡಿದ್ದಾರೆ.
ಅಂದು ಟಿಪ್ಪು ಜಯಂತಿ ಆಚರಿಸಿ ಕೋಮು ಗಲಭೆಗೆ ಕಾರಣರಾದರು. ಕೋಗಿಲು ಲೇಔಟ್ ನಲ್ಲಿ ಮುಸ್ಲಿಮರಿಗೆ ಮನೆಗಳನ್ನು ಕೊಡುವುದು ಇರಲಿ, ಪ್ರತಿಯೊಂದರಲ್ಲೂ ಅವರದ್ದು ತುಷ್ಟೀಕರಣದ ರಾಜಕಾರಣ. ಇದು ಅವರ ನಿರಂತರ ಪ್ರಕ್ರಿಯೆಯಾಗಿದೆ. ಬಹುಸಂಖ್ಯಾತ ಹಿಂದೂಗಳು ಇವರ ಈ ಧೋರಣೆಯನ್ನು ಅರ್ಥಮಾಡಿಕೊಂಡು ತಕ್ಕ ಪಾಠ ಕಲಿಸದಿದ್ದರೆ, ಸಿದ್ದರಾಮಯ್ಯ ತಮ್ಮ ಈ ಹಿಂದೂ ವಿರೋಧಿ ಚಾಳಿಯನ್ನು ಮುಂದುವರಿಸುತ್ತಾರೆ ಎಂದು ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಸೌಜನ್ಯ ಮರೆತರೆ ಹೇಗೆ? ಅಶ್ವತ್ಥನಾರಾಯಣ ಪ್ರಶ್ನೆ
ಬಿಜೆಪಿ ನಾಯಕ ಅಶ್ವತ್ಥನಾರಾಯಣ ಅವರು ಕೂಡ ಸಿಎಂ ನಡೆಯನ್ನು ಖಂಡಿಸಿದ್ದು, ಇದು ಸೌಜನ್ಯದ ಪ್ರಶ್ನೆ ಎಂದು ಹೇಳಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವವರು ಯಾರೇ ಏನೇ ಪ್ರೀತಿಯಿಂದ ನೀಡಿದರೂ ಅದನ್ನು ಸ್ವೀಕರಿಸುವುದು ಕನಿಷ್ಠ ಸೌಜನ್ಯ. ಕೊಡುವವರ ಭಾವನೆ ಮತ್ತು ನಂಬಿಕೆಗೆ ಗೌರವ ಕೊಡುವುದು ಜನಪ್ರತಿನಿಧಿಯ ಕರ್ತವ್ಯ. ಧರ್ಮ ಯಾವುದಾಧರೂ ಇರಲಿ, ವ್ಯಕ್ತಿಯೊಬ್ಬರು ತಂದುಕೊಟ್ಟಿದ್ದನ್ನು ಪಡೆಯದೆ, ದುರುಗುಟ್ಟಿ ನೋಡುವುದು ಒಬ್ಬ ಮುಖ್ಯಮಂತ್ರಿಗೆ ಶೋಭೆ ತರುವಂತದ್ದಲ್ಲ. ಸಿದ್ದರಾಮಯ್ಯನಂತಹ ಹಿರಿಯ ನಾಯಕರಿಂದ ಇಂತಹ ಅಸೌಜನ್ಯದ ನಡೆಯನ್ನು ನಿರೀಕ್ಷಿಸಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ, ಚಾಣಕ್ಯನ ಪುಸ್ತಕ ಬೇಕು, ಆದರೆ ರಾಯರ ಫೋಟೋ ಬೇಡ ಎಂಬ ಸಿದ್ದರಾಮಯ್ಯನವರ ಈ ನಡೆ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗುತ್ತಿದ್ದು, ಪರ-ವಿರೋಧದ ಚರ್ಚೆ ತೀವ್ರಗೊಂಡಿದೆ.








