ದೇಶದಲ್ಲೇ ಅತಿದೊಡ್ಡ ಹಾಗೂ ಸುಸಜ್ಜಿತ ಕೋವಿಡ್ ಕೇರ್ ಸೆಂಟರ್ ಬೆಂಗಳೂರಿನಲ್ಲಿ ಸಿದ್ಧ
ಬೆಂಗಳೂರಿನಲ್ಲಿ ಕೊರೋನ ನಿಯಂತ್ರಿಸಲು 8 ಸಚಿವರಿಗೆ ಜವಾಬ್ದಾರಿ
ಸಾಮಾಜಿಕ ಅಂತರದ ಲಕ್ಷ್ಮಣರೇಖೆ ದಾಟದಿರಿ – ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್
ಬೆಂಗಳೂರು – ಜುಲೈ 9, 2020: ಲಕ್ಷಣರಹಿತ ಹಾಗೂ ಅಲ್ಪಲಕ್ಷಣವುಳ್ಳ ಕೋವಿಡ್ ಸೋಂಕಿತರಿಗಾಗಿ ಬೆಂಗಳೂರಿನ ನೆಲಮಂಗಲದಲ್ಲಿ ದೇಶದಲ್ಲೇ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಸೇವೆಗೆ ಸಿದ್ಧವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು 10,100 ಹಾಸಿಗೆಯನ್ನು ಒಳಗೊಂಡ ಈ ಕೋವಿಡ್ ಕೇರ್ ಸೆಂಟರ್ 100 – 200 ಜನರಿಗೆ ಒಬ್ಬ ವೈದ್ಯರಂತೆ 600 ವೈದ್ಯರು, 1000 ನರ್ಸ್ಗಳು ಇನ್ನಿತರ ಆರೋಗ್ಯ ಯೋಧರು ಬೇಕಾಗಿದ್ದು ಎಲ್ಲವನ್ನೂ ಸರ್ಕಾರ ವ್ಯವಸ್ಥಿತವಾಗಿ ನಿರ್ವಹಿಸುತ್ತಿದೆ ಎಂದು ಹೇಳಿದರು. ಫೋರ್ಟಿಸ್ ಸಂಸ್ಥೆಯ ಮುಖ್ಯಸ್ಥ ಡಾ. ವಿವೇಕ್ ಜವಳಿ ಅವರು ಉಪಸ್ಥಿತರಿದ್ದರು.

ಬೆಂಗಳೂರಿನಲ್ಲಿ ಕೊರೋನ ನಿಯಂತ್ರಿಸಲು 8 ವಲಯಗಳಾಗಿ ವಿಂಗಡನೆ
ಬೆಂಗಳೂರಿನಲ್ಲಿ ಕೊರೋನ ನಿಯಂತ್ರಿಸಲು 8 ವಲಯಗಳಾಗಿ ವಿಂಗಡಿಸಲಾಗಿದ್ದು ಪ್ರತಿವಲಯಕ್ಕೆ ಒಬ್ಬ ಸಚಿವರುಗಳಂತೆ ಡಾ.ಅಶ್ವತ್ಥ ನಾರಾಯಣ್, ಆರ್.ಅಶೋಕ್, ಸುರೇಶ್ ಕುಮಾರ್, ಸೋಮಣ್ಣ, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು, ಗೋಪಾಲಯ್ಯ ಹಾಗೂ ಎಸ್.ಆರ್.ವಿಶ್ವನಾಥ್ ಸೇರಿದಂತೆ ಶಾಸಕರು, ಒಬ್ಬ ಹಿರಿಯ ಐಎಎಸ್ ಅಧಿಕಾರಿ, ಕಾರ್ಪೊರೇಟರ್ ಗಳನ್ನೊಳಗೊಂಡ ಟಾಸ್ಕ್ ಫೋರ್ಸ್ನ ತಂಡಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಲಿವೆ ಎಂದು ಸಚಿವ ಸುಧಾಕರ್ ತಿಳಿಸಿದರು. ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಟ್ರೇಸಿಂಗ್ ಮತ್ತು ಟ್ರ್ಯಾಕಿಂಗ್ ಮಾಡಲು ಕಷ್ಟಸಾಧ್ಯವಾಗಿದೆ. ಇನ್ನು ಮುಂದೆ ಇದನ್ನು ಕಟ್ಟುನಿಟ್ಟಾಗಿ ನಿರ್ವಹಿಸಲಾಗುವುದು. ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಸುಧಾಕರ್ ಹೇಳಿದರು.
ಶೂನ್ಯ ಮರಣ ಪ್ರಮಾಣ
ಬೆಂಗಳೂರಿನಲ್ಲಿ ಗುರುವಾರದಂದು 606 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಆದರೆ ಯಾವುದೇ ಸಾವು ಸಂಭವಿಸಿಲ್ಲ. ಈಗಲೂ ರಾಜ್ಯದ ಮತ್ತು ಬೆಂಗಳೂರಿನ ಮರಣ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದೆ. ಶೂನ್ಯ ಮರಣಪ್ರಮಾಣ ಸಾಧಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಸಚಿವರು ಹೇಳಿದರು. 1ಲಕ್ಷ ಆಂಟಿಜೆನ್ ಕಿಟ್ ತರಿಸಲಾಗಿದ್ದು ವಾರಾಂತ್ಯದಲ್ಲಿ ಬೆಂಗಳೂರಿನಲ್ಲೇ 30-40 ಸಾವಿರ ಟೆಸ್ಟ್ ನಡೆಸಲಾಗುವುದು ಇದರಿಂದ ಸೋಂಕಿತರ ತ್ವರಿತ ಪತ್ತೆಗೆ ಸಹಾಯವಾಗಲಿದೆ ಎಂದು ಡಾ.ಸುಧಾಕರ್ ತಿಳಿಸಿದರು.

ಕೊರೋನ ಸರಪಳಿ ಮುರಿಯಲು ಸಾಮಾಜಿಕ ಅಂತರವೇ ಲಕ್ಷ್ಮಣರೇಖೆ
ರಾವಣನಂತಹ ಅಪಾಯದಿಂದ ಪಾರಾಗಲು ಒಂಟಿಯಾಗಿರುವ ಸೀತೆಯ ರಕ್ಷಣೆಗಾಗಿ ಲಕ್ಷ್ಮಣ ಒಂದು ದಿವ್ಯ ರೇಖೆಯನ್ನು ಎಳೆಯುತ್ತಾನೆ. ಅದೇ ಲಕ್ಷ್ಮಣ ರೇಖೆ. ಆ ಲಕ್ಶ್ಮಣ ರೇಖೆಯ ಒಳಗೆ ಇರುವವರೆಗೂ ಸೀತೆಗೆ ಯಾವುದೇ ರೀತಿಯ ಅಪಾಯ ಉಂಟಾಗುವ ಸಾಧ್ಯತೆಯೇ ಇರಲಿಲ್ಲ. ಆದರೆ ದುರಾದೃಷ್ಟವಶಾತ್ ಸೀತೆ ಆ ಲಕ್ಷ್ಮಣ ರೇಖೆಯನ್ನು ದಾಟಿದ್ದಕ್ಕೆ ಎಂತಹ ಅನಾಹುತ ನಡೆಯಿತು ಎಂದು ನಮಗೆಲ್ಲಾ ಗೊತ್ತಿದೆ. ಇಂದು ನಮಗೆ ಕೋವಿಡ್ ಸೋಂಕಿನ ಸರಪಳಿಯನ್ನು ಮುರಿಯಲು ಇರುವ 3 ಸಿದ್ದ ಸೂತ್ರವೆಂದರೆ ಅದು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಪದೇ ಪದೇ ಸಾಬೂನಿನಿಂದ ಕೈತೊಳೆಯುವುದು ಮತ್ತು ಕಡ್ಡಾಯ ಮಾಸ್ಕ್ ಧರಿಸುವುದು. ಇವೇ ಲಕ್ಷ್ಮಣ ರೇಖೆಗಳು. ಇವು ನಮ್ಮ ಕೈಯಲ್ಲೇ ಇವೆ. ಇವುಗಳನ್ನು ದಾಟಿದರೆ ಕೊರೋನ ಎಂಬ ರಾವಣನ ಕೈಗೆ ಸಿಕ್ಕಿಹಾಕಿಕೊಳ್ಳುವುದು ಖಚಿತ ಎಂದು ಸಚಿವ ಸುಧಾಕರ್ ತಿಳಿಸಿದರು








