ಅನಗತ್ಯವಾಗಿ ಮನೆಯಿಂದ ಯಾರೂ ಸುಮ್ಮನೆ ಹೊರಗೆ ಬರಬೇಡಿ ಎಂದು ಕಲಬುರಗಿ ಜಿಲ್ಲಾಧಿಕಾರಿ ಬಿ ಶರತ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಕೊರೋನಾ ವೈರಸ್ ನಿಂದ 76ರ ವೃದ್ಧ ಸಾವಿಗೀಡಾಗಿದ್ದು, 71ಮಂದಿಯನ್ನು ಕೊರೋನಾ ಶಂಕಿತರೆಂಬ ಹಿನ್ನೆಲೆಯಲ್ಲಿ ತೀವ್ರ ನಿಗಾದಲ್ಲಿ ಇಡಲಾಗಿದೆ.
ಇಂದು ಕಲಬುರಗಿಯ ವಾರ್ತಾ ಭವನದಲ್ಲಿ ಸುದ್ದಿ ಗೋಷ್ಟಿ ನಡೆಸಿದ ಜಿಲ್ಲಾಧಿಕಾರಿ ಬಿ. ಶರತ್, ಮೃತ ವ್ಯಕ್ತಿಯ ಸಂಪರ್ಕದಲ್ಲಿದ್ದ 71 ಜನರನ್ನು ನಿಗಾ ದಲ್ಲಿ ಇರಿಸಲಾಗಿದೆ . ಅದರಲ್ಲಿ ನಾಲ್ಕು ಜನರು ಕೊರೋನಾ ದಿಂದ ಸಾವನ್ನಪ್ಪಿದ ವ್ಯಕ್ತಿಯ ಜೊತೆ ನೇರ ಸಂಪರ್ಕದಲ್ಲಿದ್ದ ಹಿನ್ನೆಲೆಯಲ್ಲಿ ಅವರಿಗೆ ಇಎಸ್ಐ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಲಬುರಗಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತ ವ್ಯಕ್ತಿಗೆ ಚಿಕಿತ್ಸೆ ನೀಡಿದ ಆಸ್ಪತ್ರೆಯ ನರ್ಸ್ ನನ್ನು ಸಹ ಚಿಕಿತ್ಸೆಗೆ ಒಳ ಪಡಿಸಲಾಗಿದೆ. ಮೃತ ವ್ಯಕ್ತಿಯ ಸಂಪರ್ಕದಲ್ಲಿದ್ದ 36 ಜನರು ಹೈ ರಿಸ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅದರಲ್ಲಿ ಮೃತ ವ್ಯಕ್ತಿಯ ಇಬ್ಬರು ಹೆಣ್ಣು ಮಕ್ಕಳು, ಮೃತ ವ್ಯಕ್ತಿಯ ಮೊಮ್ಮಗ ಸಹ ಸೇರಿದ್ದಾರೆ ಎಂದರು.
ಇದೇ ವೇಳೆ ಕೊರೊನಾ ಸೋಂಕಿನಿಂದ ಮೃತ ಪಟ್ಟ ವ್ಯಕ್ತಿ ಮಗನನ್ನು ಸಂದರ್ಶನ ಮಾಡಿದ ಪತ್ರಕರ್ತರನ್ನು ಹೊರ ಹೋಗುವಂತೆ ಡಿಸಿ ಮನವಿ ಮಾಡಿದರು. ಖಾಸಗಿ ಚಾನಲ್ ವೊಂದರ ಓರ್ವ ಕ್ಯಾಮೆರಾಮನ್ ಹಾಗೂ ಇಬ್ಬರು ವರದಿಗಾರರನ್ನು ಚಿಕಿತ್ಸೆಗೆ ಒಳಪಡಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಇಂತಹ ದುಸ್ಸಾಹಸಕ್ಕೆ ಯಾರೂ ಕೈ ಹಾಕಬೇಡಿ ಎಂದು ಡಿಸಿ ಮಾಧ್ಯಮದವರ ಬಳಿ ಮನವಿ ಮಾಡಿಕೊಂಡರು. ಮೃತ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಒಟ್ಟು 71 ಜನ ಭಾಗವಹಿಸಿದ್ದರು ಹಾಗೂ ಮೃತ ವೃದ್ಧನ ಮಗ ವಿಜಯಪುರಕ್ಕೆ ಹೋಗಿ ಬಂದಿರುವುದಾಗಿ ವರದಿ ಬಂದಿದ್ದು, ಇದರ ಬಗ್ಗೆ ಮಾಹಿತಿ ಕಲೆ ಹಾಕಿ ಎಲ್ಲರ ಮೇಲೂ ನಿಗಾ ಇಡಲಾಗಿದೆ. ಪರಿಸ್ಥಿತಿ ಬಹಳ ಗಂಭೀರವಾಗಿದ್ದು, ಅನಿವಾರ್ಯ ಕಾರಣವಿಲ್ಲದೆ ದಯವಿಟ್ಟು ಮನೆಯಿಂದ ಹೊರಗೆ ಬರಬೇಡಿ ಎಂದು ಕಲಬುರಗಿ ನಗರದ ಜನರಲ್ಲಿ ಕೇಳಿಕೊಂಡರು.
ಮದುವೆ ಕಾರ್ಯಕ್ರಮ ನಿಗದಿಯಾಗಿದ್ದರೆ, ಮೊದಲು ನಮಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ಕೊಡಬೇಕು. ನಂತರ ನಾವು ಅನುಮತಿ ನೋಡಿ ಕೊಡುತ್ತೇವೆ ಎಂದರು. ಹೊರ ದೇಶಗಳಿಗೆ ಹೋಗಿ ಬಂದವರು ಸ್ವಯಂಪ್ರೇರಣೆಯಿಂದ ಬಂದು ಪರೀಕ್ಷೆಗೆ ಒಳಪಡಬೇಕು. ಕಾಲ್ ಸೆಂಟರ್ ಆರಂಭಿಸುತ್ತಿದ್ದು, ಜನರಿಗೆ ಏನಾದರೂ ಮಾಹಿತಿ ಬೇಕಿದ್ದರೆ, ಅಥವಾ ಆರೋಗ್ಯ ಹದಗೆಟ್ಟಿದ್ದರೆ, ಕಾಲ್ ಸೆಂಟರ್ ಅನ್ನು ಸಂಪರ್ಕಿಸಿ. ಈ ಮೂಲಕ ಕೊರೋನಾ ಕಾಯಿಲೆ ತಡೆಗಟ್ಟಲು ಸಹಾಯವಾಗಲಿದೆ. 2 ವಾರಗಳ ಕಾಲ ಯಾರು ಅನಾವಶ್ಯಕವಾಗಿ ಹೊರಗೆ ಬರಬೇಡಿ ಎಂದರು. ಕಲಬುರಗಿಯಿಂದ ಈಶಾನ್ಯ ಸಾರಿಗೆ ಬಸ್ ಸೌಲಭ್ಯಗಳಲ್ಲೂ ಸ್ವಲ್ಪ ಕಡಿತ ಮಾಡಲಾಗಿದ್ದು, ಈ ಬಗ್ಗೆ ಸಾರಿಗೆ ಇಲಾಖೆ ಎಂಡಿ ಜೊತೆ ಚರ್ಚಿಸಿ ಮಾಹಿತಿ ಕೊಡುತ್ತೇವೆ ಎಂದು ಹೇಳಿದರು.









