ಆತಂಕ ಬೇಡ.. ವಿದೇಶಿ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ : ಬೊಮ್ಮಾಯಿ Bommai Saaksha tv
ಬೆಂಗಳೂರು : ಕೋವಿಡ್ -19 ರೂಪಾಂತರಿ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ವಿದೇಶಿ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾವಹಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಂಕಿತ ಸೋಂಕಿತರೆಲ್ಲರನ್ನೂ ಕ್ವಾರಂಟೈನ್ ಗೆ ಒಳಪಡಿಸಲಾಗುವುದು.
ಆತಂಕಪಡುವ ಅವಶ್ಯಕತೆ ಇಲ್ಲ. ಲಾಕ್ ಡೌನ್ ಮಾಡುವಂತಹ ಯಾವುದೇ ಶಿಫಾರಸು ಸರ್ಕಾರದ ಮುಂದಿಲ್ಲ.
ಆದರೂ ಎಲ್ಲರೂ ಕೋವಿಡ್ -19 ನಿಯಮಗಳನ್ನು ತಪ್ಪದೇ ಪಾಲಿಸಬೇಕು ಎಂದರು.
ಕ್ಲಸ್ಟರ್ ಗಳಲ್ಲಿರುವ ಎಲ್ಲರಿಗೂ ಕೋವಿಡ್ ತಪಾಸಣೆಯನ್ನು ಮಾಡಿ, ಏಳನೇ ದಿನ ಮತ್ತೊಮ್ಮೆ ತಪಾಸಣೆಗೊಳಪಡಿಸುವ ಕ್ರಮ ಕೈಗೊಳ್ಳಲಾಗಿದೆ.
ಧಾರವಾಡದ SDMನಲ್ಲಿ ಈಗಾಗಲೇ 4 ಸಾವಿರ ಜನರನ್ನು ತಪಾಸಣೆ ಮಾಡಲಾಗಿದೆ.
ಅದೇ ರೀತಿ ಮೈಸೂರು, ಹಾಸನ, ಬೆಂಗಳೂರು ನಗರಗಳಲ್ಲಿರುವ ಕ್ಲಸ್ಟರ್ ಗಳಲ್ಲೂ ತಪಾಸಣಾ ಅಭಿಯಾನ ಕೈಗೊಳ್ಳಲಾಗಿದೆ.
ಪರೀಕ್ಷೆಯ ಮಾದರಿಗಳನ್ನು ಹೆಚ್ಚಿನ ಸ್ಪಷ್ಟತೆಗಾಗಿ ಪ್ರಯೋಗಾಲಯಗಳಿಗೆ ಕಳುಹಿಸಲಾಗುತ್ತಿದೆ ಎಂದು ಹೇಳಿದರು.









