ಟೀಮ್ ಇಂಡಿಯಾದ ಹೆಡ್ ಕೋಚ್ ಹುದ್ದೆಯನ್ನು ದ್ರಾವಿಡ್ ತಿರಸ್ಕರಿಸಿದ್ದು ಯಾಕೆ ?
ಟೀಮ್ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು 2017ರಲ್ಲಿ ಟೀಮ್ ಇಂಡಿಯಾದ ಹೆಡ್ ಕೋಚ್ ಹುದ್ದೆಗೆ ಪ್ರಮುಖ ಸ್ಪರ್ಧಿಯಾಗಿದ್ದರು. ಆದ್ರೆ ಕೌಟುಂಬಿಕ ಕಾರಣದಿಂದಾಗಿ ಅವರು ಹೆಡ್ ಕೋಚ್ ಹುದ್ದೆಯಿಂದ ಹಿಂದೆ ಸರಿದರು ಎಂದು ಸಿಒಎನ ಅಧ್ಯಕ್ಷರಾಗಿದ್ದ ವಿನೋದ್ ರಾಯ್ ಹೇಳಿದ್ದಾರೆ.
ರಾಹುಲ್ ದ್ರಾವಿಡ್ ಅವರು 2015ರಲ್ಲಿ ಭಾರತ ಎ ಮತ್ತು 19 ವಯೋಮಿತಿ ತಂಡಗಳ ಕೋಚ್ ಆಗಿ ನೇಮಕಗೊಂಡಿದ್ದರು. ರಾಹುಲ್ ದ್ರಾವಿಡ್ ಅವರು ಟೀಮ್ ಇಂಡಿಯಾದ ಕೋಚ್ ಆಗುವಂತಹ ಎಲ್ಲಾ ಅವಕಾಶಗಳಿದ್ದವು. ಆದ್ರೆ ಅವರು ಭಾರತ 19 ವಯೋಮಿತಿ ತಂಡದ ಕೋಚ್ ಹುದ್ದೆಯನ್ನು ನಿಭಾಯಿಸುವುದಾಗಿ ಹೇಳಿದ್ದರು.
ಟೀಮ್ ಇಂಡಿಯಾದ ಕೋಚ್ ಆಗಲು ದ್ರಾವಿಡ್ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. ಆಗ ಟೀಮ್ ಇಂಡಿಯಾದ ನಿದೇರ್ಶಕರಾಗಿದ್ದ ರವಿಶಾಸ್ತ್ರಿ ಅವರು ಅನಿಲ್ ಕುಂಬ್ಳೆಯ ಹುದ್ದೆಯನ್ನು ಅಲಂಕರಿಸಿದ್ದರು. ರವಿಶಾಸ್ತ್ರಿಗಿಂತ ಮುನ್ನ ಅನಿಲ್ ಕುಂಬ್ಳೆ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿದ್ದರು. ನಂತರ ಆ ಸ್ಥಾನವನ್ನು ರವಿಶಾಸ್ತ್ರಿ ತುಂಬಿದ್ದಾರೆ. 2021ರ ವಿಶ್ವಕಪ್ ತನಕ ರವಿಶಾಸ್ತ್ರಿಯವರು ಟೀಮ್ ಇಂಡಿಯಾದ ಕೋಚ್ ಆಗಿದ್ದಾರೆ.
ನಮಗೆ ರಾಹುಲ್ ದ್ರಾವಿಡ್ ಸೂಕ್ತ ವ್ಯಕ್ತಿಯಾಗಿತ್ತು. ಆದ್ರೆ ದ್ರಾವಿಡ್ ಮನಸ್ಸು ಮಾಡಲಿಲ್ಲ. ಇಬ್ಬರು ಮಕ್ಕಳು ಬೆಳೆಯುತ್ತಿದ್ದಾರೆ. ನಾನು ಟೀಮ್ ಇಂಡಿಯಾದ ಪರ ಆಡುತ್ತಿರುವಾಗ ವರ್ಷಪೂರ್ತಿ ಆಡಿದ್ದೇನೆ. ಮಕ್ಕಳ ಜೊತೆ ಕಾಲ ಕಳೆಯಲು ಅವಕಾಶವೇ ಸಿಗಲಿಲ್ಲ. ಇದೀಗ ಅವರ ಜೊತೆ ಕಾಲಕಳೆಯಬೇಕಿದೆ. ನನ್ನ ಕುಟುಂಬಕ್ಕೆ ಸಮಯವನ್ನು ಮೀಸಲಿಡಬೇಕಿದೆ ಎಂದು ದ್ರಾವಿಡ್ ಹೇಳಿದ್ದರು ಅಂತ ವಿನೋದ್ ರಾಯ್ ಹೇಳಿದ್ದಾರೆ.
ಈ ನಡುವೆ, ರಾಹುಲ್ ದ್ರಾವಿಡ್ ಮತ್ತು ಜಹೀರ್ ಖಾನ್ ಹೆಸರು ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ಮತ್ತು ಬೌಲಿಂಗ್ ಕೋಚ್ಗೆ ಕೇಳಿಬಂದಿತ್ತು. ಆದ್ರೆ ಬಿಸಿಸಿಐ ಇವರಿಬ್ಬರನ್ನು ಒಪ್ಪಂದಕ್ಕೆ ಒಳಪಡಿಸಲಿಲ್ಲ. 2017ರಲ್ಲಿ ಜಹೀರ್ಖಾನ್ ಐಪಿಎಲ್ಗೂ ವಿದಾಯ ಹೇಳಿ ಕಾಮೆಂಟರಿ ಮಾಡುತ್ತಿದ್ದರು. ರಾಹುಲ್ ದ್ರಾವಿಡ್ 19 ವಯೋಮಿತಿಯ ತಂಡಕ್ಕೆ ಕೋಚ್ ಆಗಿದ್ದರು ಅಂತಾರೆ ವಿನೋದ್ ರಾಯ್.
ದ್ರಾವಿಡ್ ಹೆಡ್ ಕೋಚ್ ಹುದ್ದೆಯಿಂದ ಹಿಂದೆ ಸರಿದ ನಂತರ ರವಿಶಾಸ್ತ್ರಿಯವರ ಹೆಸರು ಮುಂಚೂಣಿಯಲ್ಲಿತ್ತು. ಆಗ ರವಿಶಾಸ್ತ್ರಿ ಕೂಡ ಅಷ್ಟೊಂದು ಆಸಕ್ತಿ ವಹಿಸಿರಲಿಲ್ಲ. ನಂತರ ಬಿಸಿಸಿಐ ರವಿಶಾಸ್ತ್ರಿಯವರಿಗೆ ಆಹ್ವಾನ ನೀಡಿತ್ತು. ಈ ನಡುವೆ, ಸೆಹ್ವಾಗ್ ಮತ್ತು ಟಾಮ್ ಮೂಡಿ ಹೆಸರು ಕೂಡ ಕೇಳಿಬಂದಿತ್ತು. ಅಂತಿಮವಾಗಿ ರವಿಶಾಸ್ತ್ರಿಯವರನ್ನು ಆಯ್ಕೆ ಮಾಡಲಾಗಿತ್ತು. ರವಿಶಾಸ್ತ್ರಿಯವರ ಒಪ್ಪಂದವನ್ನು ಮತ್ತೊಂದು ಅವಧಿಗೆ ಕಳೆದ ವರ್ಷ ವಿಸ್ತರಿಸಲಾಗಿತ್ತು. 2021ರವರೆಗೆ ಶಾಸ್ತ್ರಿ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ಮುಂದುವರಿಯಲಿದ್ದಾರೆ. ಇನ್ನೊಂದೆಡೆ, ರಾಹುಲ್ ದ್ರಾವಿಡ್ 2019ರಲ್ಲಿ ಕೋಚ್ ಹುದ್ದೆಯನ್ನು ತ್ಯಜಿಸಿ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.