ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಕಂಡು ಕೇಳರಿಯದ ಡ್ರಗ್ಸ್ ನಂಟಿನ ಆರೋಪದ ಮೇರೆಗೆ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿ ಕಳೆದ 2 ತಿಂಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಶೆ ರಾಣಿಯರಾದ ಸಂಜನಾ, ರಾಗಿಣಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.
ಬೆಂಗಳೂರಿನ ಸೆಷನ್ಸ್ ಕೋರ್ಟ್ನಲ್ಲಿ ಸಂಜನಾ, ಗಲ್ರಾನಿ, ರಾಗಿಣಿ ದ್ವಿವೇದಿ ಜಾಮೀನು ಅರ್ಜಿ ವಜಾಗೊಂಡಿತ್ತು. ರಾಗಿಣಿ, ಸಂಜನಾ ಜತೆ ಡ್ರಗ್ಸ್ ಪೆಡ್ಲರ್ಗಳಾದ ರಾಹುಲ್, ಲೂಮ್ ಪೆಪ್ಪರ್, ರವಿಶಂಕರ್, ಪ್ರಶಾಂತ್ ರಾಜು ಹಾಗೂ ರಾಗಿಣಿ ಬಾಯ್ಫ್ರೆಂಡ್ ನಿರ್ಮಾಪಕ ಶಿವಕುಮಾರ್ ಚಿಪ್ಪಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿತ್ತು.
ಈ ಹಿನ್ನೆಲೆಯಲ್ಲಿ ಸಂಜನಾ, ರಾಗಿಣಿ ಸೇರಿದಂತೆ 6 ಮಂದಿ ಆರೋಪಿಗಳು ಹೈಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ನಲ್ಲಿ ವಾದ ಮಂಡಿಸಿದ್ದ ಸಂಜನಾ, ರಾಗಿಣಿ ಪರ ವಕೀಲರು, ಸಿಸಿಬಿ ಪೊಲೀಸರ ಬಳಿ ಡ್ರಗ್ಸ್ ಆರೋಪ ಸಾಬೀತುಪಡಿಸುವಂತಹ ಸಾಕ್ಷ್ಯಾಧಾರಗಳು ಇಲ್ಲ. ಬಾಲಿವುಡ್ ಡ್ರಗ್ಸ್ ಕೇಸಲ್ಲಿ ಎನ್ಸಿಬಿಯಿಂದ ಬಂಧನಕ್ಕೊಳಗಾಗಿದ್ದ ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿಗೆ ಮುಂಬೈ ಹೈಕೋರ್ಟ್ ಜಾಮೀನು ನೀಡಿದೆ. ಹೀಗಾಗಿ ಇದೂ ಕೂಡ ಅದೇ ಮಾದರಿಯ ಪ್ರಕರಣವಾಗಿದೆ. ನ್ಯಾಯಾಲಯ ತಮ್ಮ ಕಕ್ಷಿದಾರರಿಗೂ ಜಾಮೀನು ನೀಡುವಂತೆ ಹೈಕೋರ್ಟ್ಗೆ ಮನವಿ ಮಾಡಿದ್ದರು.
ಆದರೆ, ಅರೋಪಿಗಳಿಗೆ ಜಾಮೀನು ನೀಡಿದರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದೆ. ಈ ಆರೋಪಿಗಳ ಜತೆ ಇನ್ನೂ ಕೆಲವರು ತಲೆಮರೆಸಿಕೊಂಡಿದ್ದಾರೆ. ಹೀಗಾಗಿ ಜಾಮೀನು ನೀಡದಂತೆ ಸಿಸಿಬಿ ಪರ ವಕೀಲರು ಹೈಕೋರ್ಟ್ನ್ನು ಆಗ್ರಹಿಸಿದ್ದರು.
ಸಂಜನಾ, ರಾಗಿಣಿ ಸೇರಿದಂತೆ 6 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ, ಅಕ್ಟೋಬರ್ 24ರಂದು ತೀರ್ಪು ಕಾಯ್ದಿರಿಸಿತ್ತು. ಇಂದು ಜಾಮೀನು ಅರ್ಜಿಯ ತೀರ್ಪು ಪ್ರಕಟಿಸಿದ ನ್ಯಾಯಾಲಯ ನಶೆರಾಣಿಯರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾ ಮಾಡಿದೆ. ಹೀಗಾಗಿ ಜಾಮೀನು ಪಡೆದು ಜೈಲಿನಿಂದ ಹೊರಬರುವ ನಿರೀಕ್ಷೆಯಲ್ಲಿದ್ದ ನಶೆರಾಣಿಯರಿಗೆ ಭಾರಿ ನಿರಾಸೆಯಾಗಿದೆ.
ಜೈಲಿನಲ್ಲಿ ಕುಸಿದು ಬಿದ್ದ ನಶೆ ಡ್ರಗ್ಗಿಣಿಯರು..?
ಡ್ರಗ್ಸ್ ಪ್ರಕರಣದಲ್ಲಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿಯನ್ನು ಸಿಸಿಬಿ ಪೊಲೀಸರು ಸೆ.4ರಂದು ಬಂಧಿಸಿದ್ದರು. ಸತತ 11 ದಿನಗಳ ಸುದೀರ್ಘ ವಿಚಾರಣೆ ಬಳಿಕ ರಾಗಿಣಿಯನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಹೀಗಾಗಿ ರಾಗಿಣಿ ಕಳೆದ 61 ದಿನಗಳಿಂದ ಪರಪ್ಪನ ಅಗ್ರಹಾರ ಜೈಲು ಹಕ್ಕಿಯಾಗಿದ್ದಾಳೆ.
ಇದೇ ಪ್ರಕರಣದಲ್ಲಿ ಸೆ.8ರಂದು ಸಿಸಿಬಿ ಪೊಲೀಸರು ನಟಿ ಸಂಜನಾ ಗಲ್ರಾನಿ ಮನೆ ಮೇಲೆ ದಾಳಿ ಮಾಡಿ ಬಂಧಿಸಿದ್ದರು. ಸಂಜನಾಳನ್ನು ಕೂಡ ಸತತ 7 ದಿನ ವಿಚಾರಣೆ ಬಳಿಕ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಹೀಗಾಗಿ ಜಾಮೀನಿಗಾಗಿ ಕಳೆದ 61 ದಿನಗಳಿಂದ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಸಂಜನಾ ಹಾಗೂ ರಾಗಿಣಿಗೆ ಹೈಕೋರ್ಟ್ನ ಇಂದಿನ ತೀರ್ಪು ಶಾಕ್ ನೀಡಿದೆ.
ಇಂದು ಹೈಕೋರ್ಟ್ನಲ್ಲಿ ಜಾಮೀನು ಸಿಕ್ಕೇ ಸಿಗುತ್ತದೆ ಎಂಬ ಆಶಾಭಾವನೆಯಲ್ಲಿದ್ದ ಸಂಜನಾ-ರಾಗಿಣಿ, ಜೈಲಿನಲ್ಲಿ ಮಧ್ಯಾಹ್ನದ ಊಟ ಸೇವಿಸದೇ ತೀರ್ಪಿಗಾಗಿ ಎದುರು ನೋಡುತ್ತಿದ್ದರು. ಆದರೆ, ಹೈಕೋರ್ಟ್ ಜಾಮೀನು ಅರ್ಜಿ ವಜಾಗೊಳ್ಳುತ್ತಿದ್ದಂತೆ ಕಣ್ಣೀರಿಟ್ಟ ಸಂಜನಾ ಹಾಗೂ ರಾಗಿಣಿ ಕುಸಿದು ಬಿದ್ದಿದ್ದಾರೆ. ಅಲ್ಲೇ ಇದ್ದ ಜೈಲು ಸಿಬ್ಬಂದಿ ಜತೆ ಅಳಲು ತೋಡಿಕೊಂಡು ಕಣ್ಣೀರಿಟ್ಟರು. ಹೀಗಾಗಿ ಇಬ್ಬರಿಗೂ ಜೈಲು ಸಿಬ್ಬಂದಿ ಸಾಂತ್ವನ ಹೇಳಿದರು ಎಂದು ಜೈಲು ಮೂಲಗಳು ತಿಳಿಸಿವೆ.
ಸುಪ್ರೀಂಕೋರ್ಟ್ ಮೊರೆ ಹೋಗ್ತಾರಾ ಡ್ರಗ್ಗಿಣಿಯರು..!
ಕೆಳ ನ್ಯಾಯಾಲಯ ಹಾಗೂ ಹೈಕೋರ್ಟ್ ನಟಿಯರಾದ ಸಂಜನಾ ಗಲ್ರಾನಿ ಹಾಗೂ ರಾಗಿಣಿ ಜಾಮೀನು ಅರ್ಜಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಒಂದೇ ಉಳಿದಿರುವ ಕೊನೆಯ ಆಯ್ಕೆ. ಸುಪ್ರೀಂಕೋರ್ಟ್ನಲ್ಲೂ ಜಾಮೀನು ಅರ್ಜಿ ವಜಾಗೊಂಡರೆ ಜೈಲಿನಿಂದ ಹೊರಬರಲು ಸದ್ಯಕ್ಕೆ ಇದ್ದ ಎಲ್ಲಾ ಅವಕಾಶದ ಬಾಗಿಲುಗಳು ಮುಚ್ಚಿದಂತಾಗುತ್ತವೆ.
ಸುಪ್ರೀಂಕೋರ್ಟ್ ಕೂಡ ಜಾಮೀನು ನಿರಾಕರಿಸಿದೆ, ಸಿಸಿಬಿ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಬೇಕು. ಒಂದು ವೇಳೆ 3 ತಿಂಗಳೊಳಗೆ ಸಿಸಿಬಿ ಪೊಲೀಸರು ಚಾರ್ಜ್ಶೀಟ್ ಸಲ್ಲಿಸದಿದ್ದರೆ ಮತ್ತೆ ಕೆಳ ಹಂತದ ಕೋರ್ಟ್ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಬಹುದು. ಒಂದು ವೇಳೆ ಸಿಸಿಬಿ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದರೆ ಸುಮಾರು ಸುಮಾರು 6 ತಿಂಗಳು ಜಾಮೀನು ಸಿಗುವುದು ಅನುಮಾನ ಎನ್ನಲಾಗಿದೆ.
ಹೀಗಾಗಿ ಜಾಮೀನು ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರುತ್ತಾರಾ ಅಥವಾ ಸೆಷನ್ಸ್ ಕೋರ್ಟ್ನಲ್ಲೇ ಜಾಮೀನಿಗೆ ಕಾಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇತರೆ ಆರೋಪಿಗಳಿಗೆ ಬಂಧನಕ್ಕೆ ಬಲೆ..!
ನಟಿ ರಾಗಿಣಿ ಬಾಯ್ಫ್ರೆಂಡ್ ಶಿವಪ್ರಕಾಶ್ ಚಿಪ್ಪಿ, ಆದಿತ್ಯ ಆಳ್ವಾ ಸೇರಿದಂತೆ ಹಲವು ಆರೋಪಿಗಳು ಕಳೆದ 2 ತಿಂಗಳಿಂದ ತಲೆ ಮರೆಸಿಕೊಂಡಿದ್ದಾರೆ. ಶಿವಪ್ರಕಾಶ್ ಚಿಪ್ಪಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನೂ ಹೈಕೋರ್ಟ್ ವಜಾಗೊಳಿಸಿದೆ. ಹೀಗಾಗಿ ಆರೋಪಿಗಳು ತಪ್ಪಿಸಿಕೊಳ್ಳಲು ಅನ್ಯಮಾರ್ಗಗಳು ಇಲ್ಲದ ಹಿನ್ನೆಲೆಯಲ್ಲಿ ಆರೋಪಿಗಳ ಬಂಧನಕ್ಕೆ ಸಿಸಿಬಿ ಪೊಲೀಸರು ಬಲೆ ಬೀಸುವ ಸಾಧ್ಯತೆ ಇದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel