ಆನ್ ಲೈನ್ ಕಲಿಕೆ ಎನ್ನುವ ಹೊಸ ಸ್ವರೂಪದ ಶಿಕ್ಷಣದ ಸಾಧಕ ಬಾಧಕಗಳ ಕಡೆ ಗಮನ ಹರಿಸಬೇಕಾದ ಸವಾಲಿನ ಹೊತ್ತಿನಲ್ಲಿ:
ಅದು ಮಾರ್ಚ್ ತಿಂಗಳು. ವಿದ್ಯಾರ್ಥಿಗಳು ರಜಾದಿನದ ಕನಸುಗಳನ್ನು ಹೊತ್ತು ವಾರ್ಷಿಕ ಪರೀಕ್ಷೆಗೆ ಸಿದ್ಧರಾಗುತ್ತಿದ್ದ ಸಮಯ. ಇನ್ನೇನು ಒಂದು ತಿಂಗಳು ಕಳೆದು ಪರೀಕ್ಷೆಯೆಂಬ ಪರೀಕ್ಷೆಯನ್ನು ದಾಟಿದರೆ ಬೇಸಿಗೆಯ ರಜಾ ದಿನಗಳೂ ಶುರುವಾಗುತಿತ್ತು. ಆದರೆ ರಜಾದಿನದ ಮಜಾ ಅನುಭವಿಸಲು ಎಷ್ಟೆಷ್ಟೋ ಕನಸುಗಳನ್ನು ಹೊತ್ತ ಅದೆಷ್ಟೋ ಮುದ್ದು ಮನಸುಗಳ ಮೇಲೆ ಕೊರೋನಾ ಬರೆ ಎಳೆಯಿತು. ಆಗಷ್ಟೇ ಯುರೋಪಿಯನ್ ದೇಶಗಳು ಕೊರೊನಾ ಸುಳಿಗೆ ಸಿಕ್ಕಿ ನರಕಯಾತನೆ ಅನುಭವಿಸುತ್ತಿದ್ದ ಸುದ್ದಿ ಎಲ್ಲೆಡೆಯೂ ಚರ್ಚೆಯಾಗುತ್ತಿತ್ತು. ಅಷ್ಟರಲ್ಲಿ ದೇಶದೊಳಗೂ ಕೊರೊನಾ ಕಾಲಿಟ್ಟಿತು. ಮಾರ್ಚ್ ತಿಂಗಳ ಕೊನೆಯಲ್ಲಿ ದೇಶದ ಜನರ ಹಿತದೃಷ್ಟಿಯನ್ನು ಮುಂದಿಟ್ಟುಕೊಂಡು ದೇಶವ್ಯಾಪಿ ಕೊರೊನ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಲಾಕ್ ಡೌನ್ ಆದೇಶ ಜಾರಿಗೆ ಬಂತು. ಆದರೆ ಪ್ರಧಾನಿ ಮೋದಿ ದೇಶ ಪೂರ್ತಿ ಕರೆ ನೀಡಿದ್ದ ಲಾಕ್ ಡೌನ್ ಗೂ ಸಾಂಕ್ರಾಮಿಕ ಕಾಯಿಲೆ ಕೊರೋನವನ್ನು ತಡೆಗಟ್ಟಲು ಸಾಧ್ಯವಾಗಲಿಲ್ಲ. ತನ್ನ ಕಬಂಧ ಬಾಹುಗಳನ್ನು ಚಾಚುತ್ತಲೇ ಸಾಗಿದ ಈ ಯಕಃಶ್ಚಿತ್ ವೈರಸ್ ಈಗ ರಾಕ್ಷಾಸಾಕಾರ ತಾಳಿನಿಂತಿದೆ.
ರಜಾ ದಿನಗಳ ಕನಸು ಹೊತ್ತ ಎಳೆ ಮನಸ್ಸುಗಳಿಗೆ ಆತಂಕ ಶುರುವಾಯಿತು:
ಮುಂದೆ ಶಾಲಾ ಕಾಲೇಜುಗಳು ವಿಸ್ತರಣೆಯಾಗಿದ್ದ ಪರೀಕ್ಷೆಗಳನ್ನು ಅಲ್ಲಿಗೆ ಮೊಟಕುಗೊಳಿಸಿ, ಮಕ್ಕಳನ್ನು ಮುಂದಿನ ಕ್ಲಾಸ್ ಗೆ ಪಾಸ್ ಮಾಡಿಯೇ ಬಿಟ್ಟರು. ಮುಂದುವರಿದ ಲಾಕ್ ಡೌನ್ ನೊಂದಿಗೆ ಬೇಸಿಗೆ ರಜೆಯೂ ಸಹ ಆತಂಕ ಅನಿಶ್ಚಿತ ಅಭದ್ರತೆಯೊಂದಿಗೇ ಮುಗಿದು ಹೋಯಿತು. ವಿದ್ಯಾರ್ಥಿಗಳ ಮಹತ್ವದ ಘಟ್ಟವಾದ ಪಿಯುಸಿ ಪರೀಕ್ಷೆ, ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಕೆಲವು ರಾಜ್ಯಗಳು ರದ್ದುಗೊಳಿಸಿ, ಎಲ್ಲರನ್ನೂ ಪಾಸ್ ಮಾಡಿದರೆ, ಇನ್ನೂ ಕೆಲವು ರಾಜ್ಯಗಳು ಮಾತ್ರ ಸಾಕಷ್ಟು ಎಚ್ಚರಿಕೆಗಳೊಂದಿಗೆ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಿದವು.

ಶಿಕ್ಷಣ ವ್ಯವಸ್ಥೆ ಅನ್ನುವ ಧನದಾಹಿತನದ ಹೀನ ಮುಖ:
ನಮ್ಮ ದೇಶದ ಶಿಕ್ಷಣ ವ್ಯವಸ್ಥೆ ಸ್ಥಿತಿ ಹೇಳತೀರದಷ್ಟು ಹದಗೆಟ್ಟಿದೆ. ಸೇವೆಯಾಗಬೇಕಿದ್ದ ಶಿಕ್ಷಣ ವ್ಯವಸ್ಥೆ ಹಣ ದೋಚುವ ದಂದೆಯಾಗಿದೆ. ಇದಕ್ಕೆ ಪೂರಕವಾಗಿ ನಮ್ಮ ರಾಜ್ಯದಲ್ಲಿ ಅನೇಕ ಶಾಲಾ ಕಾಲೇಜುಗಳು ಮೇ ಕೊನೆಯಾಗುವಷ್ಟರಲ್ಲಿ ಶಾಲಾ ಶುಲ್ಕ ಪಾವತಿಸಲು ಪೋಷಕರ ಮೇಲೆ ಒತ್ತಡ ಹೇರುವ ಮೂಲಕ ತನ್ನ ಕರಾಳ ಮುಖವನ್ನು ಅನಾವರಣಗೊಳಿಸತೊಡಗಿದವು.
ಒಂದು ಕಡೆ ಪೋಷಕರಿಂದ ಮಕ್ಕಳ ಶಾಲಾ ಶುಲ್ಕ ಪಾವತಿಸಲು ಬೇಡಿಕೆ ಸಲ್ಲಿಸಿದರೆ ಇನ್ನೊಂದು ಕಡೆ ಸರಕಾರದ ಮೇಲೆ ಶಾಲಾ ಕಾಲೇಜು ಪುನಾರಂಭಿಸಲು ಸತತ ಬೇಡಿಕೆ ಸಲ್ಲಿಸಿದರು. ಈ ನಡುವೆ ಶಾಲಾ ಕಾಲೇಜುಗಳ ದಂದೆಯನ್ನು ಬಟಾ ಬಯಲು ಮಾಡಿದ ಕೆಲ ಪೋಷಕರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ನೋಟೀಸ್ ನೀಡಿದ್ದು ಇದೆ. ಏತನ್ಮಧ್ಯ ಕೆಲವು ಪೋಷಕರು ಮಕ್ಕಳಿಗೆ ಕ್ಲಾಸ್ ಶುರು ಮಾಡಲೇ ಬೇಕೆಂದು ಪಟ್ಟು ಹಿಡಿದರೆ ಇನ್ನು ಹೆಚ್ಚಿನ ಜನ ಈ ವರ್ಷ ಶಾಲೆಗಳು ಬೇಡವೇ ಬೇಡ ಅಥವಾ ಸಾಂಕ್ರಾಮಿಕ ರೋಗ ಮುಗಿದ ಮೇಲೆ ಆಲೋಚನೆ ಮಾಡುವ ಎನ್ನುವ ನಿರ್ಧಾರಕ್ಕೂ ಬಂದಿದ್ದರು. ಇದಕ್ಕೆ ಪೂರಕವಾಗಿ ನಮ್ಮ ರಾಜ್ಯದ ಶಿಕ್ಷಣ ಸಚಿವ ಸುರೇಶ ಕುಮಾರ್ ಸ್ಪಂದಿಸಿದರೆ, ಅದೇಕೋ ಅವರ ಕೊಟ್ಟ ಮಾತು ದಿನದಿಂದ ದಿನಕ್ಕೆ ಶಿಕ್ಷಣ ಪದ್ಧತಿಯನ್ನು ಕಪಿಮುಷ್ಟಿಯಲ್ಲಿ ಹಿಡಿದ ಬಂಡವಾಳಶಾಹಿ ಪಾರುಪತ್ಯಕ್ಕೆ ಶರಣಾದಂತೆ ಕಂಡಿತು.

ಅದಾಗಲೇ ಅನೇಕ ಶಾಲಾ ಕಾಲೇಜುಗಳಿಗೆ ತಮ್ಮ ಶುಲ್ಕ ವಸೂಲಿಗೆ ಆನ್ಲೈನ್ ಕ್ಲಾಸ್ ಶುರು ಮಾಡುವ ನಿರ್ಧಾರಕ್ಕೆ ಬಂದವು. ಆದರೆ ಸರಕಾರ ಯಾವುದೇ ಕಾರಣಕ್ಕೂ ಆನ್ಲೈನ್ ಕ್ಲಾಸ್ ಆಗಲಿ ಅಥವಾ ಶಾಲಾ ಕಾಲೇಜುಗಳ ಪುನರಾರಂಭಕ್ಕೆ ಒಪ್ಪದ ಕಾರಣ ವಿವಾದ ನ್ಯಾಯಾಲಯದ ಮೆಟ್ಟಿಲನ್ನೂ ಏರಿತು.
ಆನ್ಲೈನ್ ಕ್ಲಾಸ್ ಎನ್ನುವ ಹೊಸ ಕರ್ಮಕಾಂಡ:
ಈ ದೇಶದಲ್ಲಿ ಈಗಾಗಲೇ ಅನೇಕ ಆನ್ಲೈನ್ ಕ್ಲಾಸ್ ಗಳು ನಡೆಯುತ್ತಲೇ ಇವೆ. ಆದರೆ ಸಣ್ಣ ಮಕ್ಕಳ ಮೇಲೆ ಅನ್ ಲೈನ್ ಕ್ಲಾಸುಗಳ ಹೊರೆ ಹೊರಿಸಬೇಕೇ ಎಂಬ ಪ್ರಶ್ನೆ ಅನೇಕ ಪೋಷಕರ ಮನಸ್ಸನ್ನು ಕಾಡಿದ್ದೂ ಇದೆ. ಕೊರೋನಾ ಮಹಾಮಾರಿಯಿಂದ ಮಕ್ಕಳು ಅಮೂಲ್ಯವಾದ ಶಿಕ್ಷಣದಿಂದ ವಂಚಿತರಾಗುವುದು ಸಮಂಜಸವಲ್ಲ ಎಂದುಕೆಲ ಪೋಷಕರ ಅಭಿಮತವೂ ಆಗಿದೆ. ಹಾಗಾದರೆ ಈ ಆನ್ ಲೈನ್ ತರಗತಿಗೆ ಭಾರತ ತಯಾರಿದೆಯಾ? ಈಗ ಉದ್ಭವಿಸಿರುವ ಪ್ರಶ್ನೆ ಇದೇ. ಉತ್ತರ, ಖಂಡಿತವಾಗಿಯೂ ಇಲ್ಲ.. ಈಗಲೂ ಅನೇಕ ಕಡೆ ಸ್ಥಿರವಾದ ಇಂಟರ್ನೆಟ್ ಸೌಕರ್ಯವಿಲ್ಲ. ಕೆಲವು ಪ್ರದೇಶದಲ್ಲಿ ಮನೆಯ ಒಳಗಡೆ ಮೊಬೈಲ್ ಕಾಲ್ ಕೂಡ ಸಿಗುವುದಿಲ್ಲ. ಎಷ್ಟೋ ಕಡೆ ಒಂದು ಕರೆಗಾಗಿ ಜನ ಹೊರಗಡೆ ಮೊಬೈಲ್ ನೇತಾಡಿಸಿ ಇಡುವ ಪರಿಸ್ಥಿತಿ ಇದೆ.
ಇನ್ನು ಅನೇಕ ಕಡೆ ಕೊರೊನಾಗೆ ಬೆದರಿದ ಜನರು ನಗರ ಬಿಟ್ಟು ಊರು ಸೇರಿದ್ದಾರೆ. ಹಳ್ಳಿಗಳಲ್ಲಿ ಇಂಟರ್ ನೆಟ್ ವ್ಯವಸ್ಥೆ ಸಮಾಧಾನಕರವಾಗಿಲ್ಲ. ಬಡ ವರ್ಗದ ಪೋಷಕರಿಗೆ ಈ ಆನ್ ಲೈನ್ ಶಿಕ್ಷಣ ಈಗಲೂ ಕಬ್ಬಿಣದ ಕಡಲೆ. ಉಳ್ಳವರು ಹೇಗಾದರೂ ತಮ್ಮ ಮಕ್ಕಳಿಗೆ ಮೊಬೈಲ್, ಲ್ಯಾಪ್ ಟಾಪ್, ಟ್ಯಾಬ್ಲೆಟ್, ಇಂಟರ್ ನೆಟ್ ವ್ಯವಸ್ಥೆ ಮಾಡಿಕೊಡುತ್ತಾರೆ. ಆದರೆ ಬಡವರ ಗತಿಯೇನು? ಈಗಾಗಲೇ ಅನೇಕ ಶಾಲಾ ಕಾಲೇಜುಗಳಲ್ಲಿ ಮೊಬೈಲ್ ಬಳಕೆ ಪೂರ್ಣ ನಿಷಿದ್ಧವಾಗಿತ್ತು. ಆದರೆ ಇಂದು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಾವೇ ಬಲವಂತವಾಗಿ ಮಕ್ಕಳ ಕೈಗೆ ಮೊಬೈಲ್ ನೀಡುವ ಸ್ಥಿತಿ ನಿರ್ಮಾಣವಾಗಿದೆ. ಇದರ ದೂರಗಾಮಿ ದುಷ್ಪರಿಣಾಮಗಳ ಕುರಿತಾಗಿ ಸರ್ಕಾರಕ್ಕಾಗಲೀ ಪೋಷಕರಿಗಾಗಲೀ ಚಿಂತೆ ಇದ್ದಂತಿಲ್ಲ.
ಇನ್ನು ಕ್ಲಾಸ್ ನಡೆಯುತ್ತಿರುವ ಸಂದರ್ಭದಲ್ಲಿ ಬರುವ ಇತರ ಕರೆಯಿಂದ ಅನೇಕ ಸಲ ಆನ್ಲೈನ್ ಕ್ಲಾಸ್ ಅಡಚಣೆಗೊಳ್ಳುವ ಸಾಧ್ಯತೆ ಇದೆ. ಚಿಕ್ಕ ಮಕ್ಕಳ ಆನ್ಲೈನ್ ಕ್ಲಾಸ್ ಸಂದರ್ಭದಲ್ಲಿ ಮಕ್ಕಳೊಂದಿಗೆ ಪೋಷಕರು ಇರಲೇ ಬೇಕಾದ ಪರಿಸ್ಥಿತಿ ಇದೆ. ಈ ಮೊದಲು ಸರಕಾರ ಆನ್ ಲೈನ್ ಕ್ಲಾಸ್ ನಿಷೇಧ ಮಾಡಿದ್ದರೂ ಖಾಸಗಿ ಶಾಲಾ ವಲಯ ಹೈ ಕೋರ್ಟ್ ಮೆಟ್ಟಿಲು ಹತ್ತಿ ಆನ್ಲೈನ್ ಕ್ಲಾಸ್ ಮಾಡಲು ಅನುಮತಿಯೇನೋ ಪಡೆಯಿತು. ಆದರೆ ಸರಕಾರಕ್ಕೆ ಸುಗ್ರೀವಾಜ್ಞೆ ತರುವಷ್ಟು ಧೈರ್ಯವಿರಲಿಲ್ಲ.

ಯಾಕೆಂದರೆ ಹೆಚ್ಚಿನ ಶಿಕ್ಷಣ ಸಂಸ್ಥೆಗಳು ರಾಜಕೀಯ ನಾಯಕರ ಒಡೆತನದಲ್ಲಿಯೇ ಇದೆ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಭಿ ನಮ್ಮಿಡೀ ವ್ಯವಸ್ಥೆಯನ್ನು ನಿಯಂತ್ರಿಸುವಷ್ಟು ದೈತ್ಯಗಾತ್ರ ಬೆಳೆದುಬಿಟ್ಟಿವೆ. ಇಲ್ಲಿ ಗಮನಿಸಬೇಕಾದ ಸಂಗತಿ ಅಂದರೆ ಆನ್ಲೈನ್ ಕ್ಲಾಸ್ ಗೆ ಸೈ ಎಂದ ಹೈ ಕೋರ್ಟ್ ಮಾತ್ರ ಇಂಟರ್ನೆಟ್ ಸೌಲಭ್ಯದ ಬಗ್ಗೆ ಯಾವುದೇ ಪ್ರಸ್ತಾಪ ಮಾಡದಿರುವುದು ಮತ್ತು ಈ ನಿಟ್ಟಿನಲ್ಲಿ ಎದುರಾಗಬಹುದಾದ ತೊಡಕುಗಳ ಕುರಿತು ಗಮನ ಹರಿಸದಿರುವುದು ದುರದೃಷ್ಟಕರ.
ನಮ್ಮಲ್ಲಿ ಸ್ಮಾರ್ಟ್ ಫೋನ್ ಬಳಕೆದಾರರು ಯುರೋಪಿಯನ್ ಅಥವಾ ಮುಂದುವರೆದ ರಾಷ್ಟ್ರಗಳಿಗೆ ಹೋಲಿಸಿದಲ್ಲಿ ಕಡಿಮೆ ಇದ್ದರೂ ಇದೀಗ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸ್ಮಾರ್ಟ್ ಫೋನ್ ಖರೀದಿ ಮಾಡಲೇಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಚಿಕ್ಕ ಮಕ್ಕಳಿಗೆ ದಿನದ ಎರಡು ಗಂಟೆ ನಡೆಯುವ ಆನ್ಲೈನ್ ತರಗತಿಯಲ್ಲಿ ಇನ್ನು ಮುಂದೆ ದಿನವಿಡೀ ನಡೆಯಬಹುದು. ಸರಕಾರ ಇದನ್ನೇ ಸೂಕ್ತ ಸಮಯವೆಂದು ಪರಿಗಣಿಸಿ ಹಳ್ಳಿ ಹಳ್ಳಿಗೂ ಪೂರ್ಣ ಪ್ರಮಾಣದ ಇಂಟರ್ನೆಟ್ ಸೌಲಭ್ಯ ಕಲ್ಪಿಸಬೇಕಾದ ಅಗತ್ಯವಿದೆ. ಜೊತೆಗೆ ಆನ್ ಲೈನ್ ತರಗತಿಗಳಿಗೆ ಒಂದು ಸಮರ್ಪಕ ಮಾರ್ಗಸೂಚಿಯನ್ನೂ ಸಹ ರೂಪಿಸಬೇಕಿದೆ.
ಸದ್ಯ ಬಹುತೇಕ ಪೋಷಕರು ಆನ್ಲೈನ್ ಕ್ಲಾಸ್ ಬೇಡವೆಂದಿಲ್ಲ ಆದರೆ ಸೂಕ್ತ ಸೌಲಭ್ಯವಿಲ್ಲದೆ ಆನ್ಲೈನ್ ಕ್ಲಾಸ್ ನಡೆಸುವುದು ಎಷ್ಟು ಸರಿ? ಹೆಚ್ಚಿನ ಶಾಲಾ ಕಾಲೇಜುಗಳು ಆನ್ಲೈನ್ ಕ್ಲಾಸ್ ಹೆಸರಲ್ಲಿ ಹೆಚ್ಚಿನ ಫೀಸ್ ಹೇರುತ್ತಿದ್ದು, ಸರಕಾರ ಈಗ್ಲೇ ಮಧ್ಯ ಪ್ರವೇಶಿಸಿ ಖಾಸಗಿ ಶಾಲಾ ಕಾಲೇಜು ಚಾರ್ಜ್ ಮಾಡುವ ಫೀಸ್ ಮೇಲೆ ಕಡಿವಾಣ ಹಾಕಲೇ ಬೇಕಿದೆ.

ಆನ್ ಲೈನ್ ಕ್ಲಾಸ್ ಬೇಕಿತ್ತಾ ನಮ್ಮ ಮಕ್ಕಳಿಗೆ?
ಕೇಂದ್ರದ ಮಾನವ ಸಂಪನ್ಮೂಲ ಸಚಿವಾಲಯ ಬಿಡುಗಡೆ ಮಾಡಿದ “ಪ್ರಜ್ಞಾ” ಮಾರ್ಗಸೂಚಿಗಳ ಅನ್ವಯ ಎಲ್.ಕೆ.ಜಿ ಮತ್ತು ಪ್ರೀ.ಕೆ.ಜಿ ಕ್ಲಾಸ್ ಗಳು 30 ನಿಮಿಷದ ಒಂದು ಅವಧಿಗೆ ಸೀಮಿತ ಗೊಳಿಸಿದರೆ 1 ರಿಂದ 8 ನೇ ತರಗತಿಯವರಿಗೆ 45 ನಿಮಿಷಗಳ 2 ಅವಧಿ ನಿಗದಿ ಪಡಿಸಲಾಗಿದೆ. 9 ರಿಂದ ದ್ವಿತೀಯ ಪಿ ಯು ವಿದ್ಯಾರ್ಥಿಗಳಿಗೆ 30 ರಿಂದ 45 ನಿಮಿಷಗಳ 4 ಕ್ಲಾಸುಗಳವರೆಗೆ ಪ್ರತಿ ದಿನ ನಡೆಸಲು ಸೂಚಿಸಿದೆ. ಕೊರೋನಾ ಕಾರಣದಿಂದ 240 ಮಿಲಿಯನ್ ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಆನ್ಲೈನ್ ಮೂಲಕ ಸೂಕ್ತ ಶಿಕ್ಷಣ ನೀಡಲು ಸರಕಾರ ನಿರ್ಧರಿಸಿದ್ದು ಅದಕ್ಕೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಮಾರ್ಗಸೂಚಿಗಳಲ್ಲಿ ಆನ್ಲೈನ್ ಅಥವಾ ಡಿಜಿಟಲ್ ಶಿಕ್ಷಣವನ್ನು ಎಂಟು ಹಂತಗಳಾಗಿ ವಿಂಗಡಿಸಲಾಗಿದೆ.
ಯೋಜನೆ, ವಿಮರ್ಶೆ, ವ್ಯವಸ್ಥೆ, ಮಾರ್ಗದರ್ಶನ, ಮಾತುಕತೆ, ನಿಯೋಜನೆ, ಟ್ರ್ಯಾಕ್ ಮತ್ತು ಮೆಚ್ಚುಗೆ. ಈ ಹಂತಗಳು ಡಿಜಿಟಲ್ ಯೋಜನೆ ಮತ್ತು ಅನುಷ್ಠಾನಕ್ಕೆ ಉತ್ತಮ ಮಾರ್ಗದರ್ಶನ ನೀಡಬಹುದೆನ್ನಲಾಗಿದೆ. ಆನ್ಲೈನ್ ಮತ್ತು ಡಿಜಿಟಲ್ ಶಿಕ್ಷಣದ ಯೋಜನೆಯ ಅನುಷ್ಠಾನದಲ್ಲೇ ಸೂಕ್ತ ಮೌಲ್ಯಮಾಪನ ಮತ್ತು ಕಾಳಜಿ ಅಗತ್ಯವಿದ್ದು ಮುಖ್ಯವಾಗಿ ಕ್ಲಾಸ್ ನ ಅವಧಿ, ಸ್ಕ್ರೀನ್ ಸಮಯ, ಅಂತರ್ಗತತೆ ಮತ್ತು ಸಮತೋಲಿತ ಆನ್ ಲೈನ್ ಮತ್ತು ಆಫ್ಲೈನ್ ಚಟುವಟಿಕೆಗಳು, ಡಿಜಿಟಲ್ ಶಿಕ್ಷಣದ ಸಮಯದಲ್ಲಿ ಕಡೆ ಗಮನಹರಿಸಬೇಕಾಗಿದೆ.

ಹಸ್ತಕ್ಷೇಪದ ವಿಧಾನಗಳು, ಸಂಪನ್ಮೂಲಗಳ ಸಂರಕ್ಷಣೆ, ಬುದ್ದಿವಂತಿಕೆ, ಭೌತಿಕ-ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ ಸೇರಿದಂತೆ, ಇನ್ನು ಮುನ್ನೆಚ್ಚರಿಕೆಗಳನ್ನು ಒಳಗೊಂಡಂತೆ ಸೈಬರ್ ಸುರಕ್ಷತೆ ಮತ್ತು ನೈತಿಕ ಅಭ್ಯಾಸಗಳು ಮತ್ತು ಸೈಬರ್ ಸುರಕ್ಷತೆಯನ್ನು ಕಾಪಾಡುವ ಕ್ರಮಗಳು ಮತ್ತು ಇತರ ಸಮಸ್ಯೆಗಳನ್ನು ಆಡಳಿತ ಶಾಲೆಯ ಮುಖ್ಯಸ್ಥರು, ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಮಾರ್ಗಸೂಚಿಗಳಿಂದ ತಿಳಿಸಲಾಗಿದೆ. ಇನ್ನು ಮಾರ್ಗಸೂಚಿಗಳನ್ನು ಶಾಲಾ ಮುಖ್ಯಸ್ಥರು ಮತ್ತು ಶಿಕ್ಷಕರಿಗೆ ಅದರ ಅಗತ್ಯವನ್ನು ವಿವರಿಸಿ ಸೂಕ್ತ ಮೌಲ್ಯಮಾಪನ ಯೋಜನೆಯನ್ನು ಡಿಜಿಟಲ್ ಶಿಕ್ಷಣಕ್ಕೆ ಅಳವಡಿಸಿ ಸೈಬರ್ ಸುರಕ್ಷತೆ ಮತ್ತು ಗೌಪ್ಯತೆಯ ಬಗ್ಗೆ ಸೂಕ್ತ ಕ್ರಮಗಳ ಬಗ್ಗೆ ಖಚಿತಪಡಿಸಿಕೊಳ್ಳಬೇಕೆಂದು ತಿಳಿಸಲಾಗಿದೆ.
ಆದರೆ ಯಾವುದೇ ಮಾರ್ಗಸೂಚಿಯನ್ನು ಪಾಲಿಸದ ರಾಜ್ಯ ಸರಕಾರಗಳು ಆನ್ಲೈನ್ ಕ್ಲಾಸ್ ಮೇಲೆ ಯಾವುದೇ ರೀತಿ ಕಾನೂನಾತ್ಮಕ ಕ್ರಮ ಕೈಗೊಳ್ಳುವುದಾಗಲಿ, ನಿಗದಿತ ಶುಲ್ಕ ವಿಧಿಸುವುದಾಗಲಿ ಅಥವಾ ಮಕ್ಕಳ ಭವಿಷ್ಯ ಸಮಸ್ಯೆಗಳ ಕುರಿತಾಗಿ ಗಮನಹರಿಸುವತ್ತಲಾಗಲೀ ಗಮನ ಹರಿಸುತ್ತಿಲ್ಲ. ಇದು ಮುಂಬರುವ ದಿನಗಳಲ್ಲಿ ಹೊಸದೊಂದು ಸಮಸ್ಯೆಗೆ ದಾರಿ ಮಾಡಿಕೊಡುವ ಮೊದಲು ಪೋಷಕರು ಮತ್ತು ಸರ್ಕಾರದ ಪ್ರತಿನಿಧಿಗಳು, ಅಧಿಕಾರಿಗಳು ಗಮನ ನೀಡುವುದು ಒಳ್ಳೆಯದು.







