ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಯ ದಾಳಿಗಳು ಈಗ ಹೊಸ ಸಂಚಲನ ಮೂಡಿಸಿವೆ. ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ನಡೆದಿರುವ ಇಡಿ ಮತ್ತು ಐಟಿ ದಾಳಿಯನ್ನು ಕೆಪಿಸಿಸಿ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ ತೀವ್ರವಾಗಿ ಖಂಡಿಸಿದ್ದಾರೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರವು ತನಿಖಾ ಸಂಸ್ಥೆಗಳನ್ನು ವಿರೋಧ ಪಕ್ಷಗಳನ್ನು ಮಟ್ಟಹಾಕಲು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಕೇಂದ್ರೀಯ ಸಂಸ್ಥೆಗಳು ಬಿಜೆಪಿ ಪಾಲಿನ ವಾಷಿಂಗ್ ಮೆಷಿನ್
ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಕೆ ಹರಿಪ್ರಸಾದ್, ಜಾರಕಿಹೊಳಿ ಕುಟುಂಬದ ಮೇಲಿನ ಈ ದಾಳಿ ನಮಗೇನು ಅಚ್ಚರಿ ತಂದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವತಂತ್ರವಾಗಿ ಕೆಲಸ ಮಾಡಬೇಕಾದ ಇಡಿ, ಐಟಿ ಮತ್ತು ಸಿಬಿಐ ಸಂಸ್ಥೆಗಳು ಇಂದು ಕೇವಲ ವಿರೋಧ ಪಕ್ಷದ ನಾಯಕರನ್ನು ಹೆದರಿಸುವ ಕೆಲಸ ಮಾಡುತ್ತಿವೆ. ಬಿಜೆಪಿಯ ಎನ್ಡಿಎ ಸರ್ಕಾರವು ಈ ಸಂಸ್ಥೆಗಳನ್ನು ತನ್ನ ರಾಜಕೀಯ ವಾಷಿಂಗ್ ಮೆಷಿನ್ ಆಗಿ ಮಾಡಿಕೊಂಡಿದೆ. ಬೇರೆ ಪಕ್ಷದಲ್ಲಿದ್ದಾಗ ಭ್ರಷ್ಟರೆನಿಸಿಕೊಳ್ಳುವವರು ಬಿಜೆಪಿಗೆ ಸೇರಿದ ಕೂಡಲೇ ಈ ಸಂಸ್ಥೆಗಳ ಕಣ್ಣಿಗೆ ಶುದ್ಧಹಸ್ತರಾಗಿ ಕಾಣುತ್ತಾರೆ. ಈಗಾಗಲೇ ಸರ್ವೋಚ್ಚ ನ್ಯಾಯಾಲಯವು ಜಾರಿ ನಿರ್ದೇಶನಾಲಯದ ಕಾರ್ಯವೈಖರಿ ಬಗ್ಗೆ ಕಟುವಾಗಿ ಟೀಕಿಸಿದ್ದರೂ ಕೇಂದ್ರ ಸರ್ಕಾರಕ್ಕೆ ಬುದ್ಧಿ ಬಂದಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ಸತೀಶ್ ಜಾರಕಿಹೊಳಿ ಅವರ ಬಾಮೈದನ ಮನೆಯ ಮೇಲೆ ದಾಳಿ ನಡೆಸಿರುವುದು ಮತ್ತು ಅವರ ಮಗಳನ್ನ ಗುರಿಯಾಗಿಸಿರುವುದು ರಾಜಕೀಯ ಪ್ರೇರಿತ ಎಂದು ಹರಿಪ್ರಸಾದ್ ಕಿಡಿಕಾರಿದ್ದಾರೆ. ದಾಳಿ ಮಾಡುವ ಮುನ್ನ ಪಾಲಿಸಬೇಕಾದ ಶಿಷ್ಟಾಚಾರಗಳ ಬಗ್ಗೆ ಪ್ರಶ್ನಿಸಿದ ಅವರು, ಒಬ್ಬ ಸಚಿವರ ಮೇಲೆ ಅಥವಾ ಜನಪ್ರತಿನಿಧಿಗಳ ಮೇಲೆ ದಾಳಿ ನಡೆಸುವಾಗ ವಿಧಾನಸಭಾಧ್ಯಕ್ಷರ ಅನುಮತಿ ಪಡೆದಿದ್ದೀರಾ ಇಲ್ಲವೋ ಎಂಬುದು ನಮಗೆ ತಿಳಿಯಬೇಕಿದೆ. ಕಾನೂನಿನ ಚೌಕಟ್ಟನ್ನು ಮೀರಿ ನಡೆಯುತ್ತಿರುವ ಈ ಬೆಳವಣಿಗೆಗಳು ಅಪಾಯಕಾರಿ ಎಂದು ಎಚ್ಚರಿಸಿದರು.
ಜಾರಕಿಹೊಳಿ ಕುಟುಂಬದೊಳಗಿನ ತಾರತಮ್ಯಕ್ಕೆ ಆಕ್ರೋಶ
ದಾಳಿಯ ಹಿಂದಿರುವ ತಾರತಮ್ಯದ ಬಗ್ಗೆ ಮಾತನಾಡಿದ ಹರಿಪ್ರಸಾದ್, ಸತೀಶ್ ಜಾರಕಿಹೊಳಿ ಅವರಿಗೆ ಮಾತ್ರ ದೇವೇಂದ್ರಪ್ಪ ಅವರು ಮಾವ ಅಲ್ಲ. ಆದರೆ ಬಿಜೆಪಿಯಲ್ಲಿದ್ದ ದೇವೇಂದ್ರಪ್ಪ ಅವರ ಮೇಲೆ ಯಾಕೆ ದಾಳಿ ನಡೆಯಲಿಲ್ಲ? ಇದೇ ಕುಟುಂಬದ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಮತ್ತು ಲಖನ್ ಜಾರಕಿಹೊಳಿ ಅವರ ಮೇಲೆ ಇಂತಹ ಕ್ರಮಗಳು ಏಕೆ ಜರುಗುತ್ತಿಲ್ಲ? ಕೇವಲ ಕಾಂಗ್ರೆಸ್ ಪಕ್ಷದಲ್ಲಿ ಇರುವವರನ್ನು ಮಾತ್ರ ಗುರಿಯಾಗಿಸಿಕೊಂಡು ದಾಳಿ ಮಾಡಲಾಗುತ್ತಿದೆ. ಇದು ಸಂಪೂರ್ಣವಾಗಿ ಪಕ್ಷಪಾತದಿಂದ ಕೂಡಿದ ದಾಳಿಯಾಗಿದೆ. ಇಂತಹ ಬೆದರಿಕೆಗಳಿಗೆ ಕಾಂಗ್ರೆಸ್ ಬಗ್ಗುವುದಿಲ್ಲ, ನಾವು ಇದನ್ನು ರಾಜಕೀಯವಾಗಿ ಸಬಲವಾಗಿ ಎದುರಿಸುತ್ತೇವೆ ಎಂದರು.
ಆದಿವಾಸಿ ನಾಯಕರನ್ನು ಗುರಿಯಾಗಿಸುತ್ತಿದೆಯೇ ಕೇಂದ್ರ?
ಕೇಂದ್ರ ಸರ್ಕಾರದ ವಿರುದ್ಧ ಹರಿಪ್ರಸಾದ್ ಮತ್ತೊಂದು ಗಂಭೀರ ಆರೋಪ ಮಾಡಿದ್ದು, ಸತೀಶ್ ಜಾರಕಿಹೊಳಿ ಅವರಂತಹ ಆದಿವಾಸಿ ಮತ್ತು ಪರಿಶಿಷ್ಟ ಪಂಗಡದ ಪ್ರಭಾವಿ ನಾಯಕರನ್ನು ಕೇಂದ್ರ ಸರ್ಕಾರ ಹಗೆತನದಿಂದ ನೋಡುತ್ತಿದೆ ಎಂದಿದ್ದಾರೆ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ದಲಿತ ಮತ್ತು ಆದಿವಾಸಿ ನಾಯಕರ ಏಳಿಗೆಯನ್ನು ಸಹಿಸುತ್ತಿಲ್ಲ. ಇಂತಹ ಹಗೆತನದ ರಾಜಕಾರಣದಿಂದ ದೇಶಕ್ಕೆ ಅಥವಾ ಜನರಿಗೆ ಯಾವ ಲಾಭವೂ ಇಲ್ಲ. ಸತೀಶ್ ಮತ್ತು ಅವರ ಮಗಳ ಮೇಲಿನ ಈ ದಾಳಿಯನ್ನು ಕಾಂಗ್ರೆಸ್ ಪಕ್ಷವು ಒಕ್ಕೊರಲಿನಿಂದ ಖಂಡಿಸುತ್ತದೆ ಎಂದು ಅವರು ಗುಡುಗಿದ್ದಾರೆ.
ಸತೀಶ್ ಜಾರಕಿಹೊಳಿ ಮನೆ ಮೇಲಿನ ದಾಳಿಯು ರಾಜ್ಯ ರಾಜಕೀಯದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ವಾಕ್ಸಮರಕ್ಕೆ ಹೊಸ ಆಯಾಮ ನೀಡಿದ್ದು, ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ.







