ಇಕ್ಕೇರಿ ನಾಯಕರ ಕೋಟೆ ಕಟ್ಟುವ ಕಲೆಯೇ ಅದ್ಭುತ; ಶಿವಪ್ಪನಾಯಕರ ಬಿದನೂರು ಕೋಟೆ ನಿರ್ಮಾಣದ ದೂರದೃಷ್ಟಿ ಮತ್ತು ಭದ್ರತೆಯ ಸವಿವರ: Saakshatv Naavu kelada charitre episode9
ಇಕ್ಕೇರಿಯ ಹಿರಿಯ ವೆಂಕಟಪ್ಪ ನಾಯಕರು ತಮ್ಮ ರಾಜ್ಯ ವಿಸ್ತಾರಕ್ಕಾಗಿ ಕೈಗೊಂಡ ಅನೇಕ ಯುದ್ಧ ದಂಡಯಾತ್ರೆಯ ಪರಿಣಾಮವಾಗಿ ಕರ್ನಾಟಕದ ಪಶ್ಚಿಮ ಕರಾವಳಿಯ ಕಾರವಾರ (ದಕ್ಷಿಣ ಗೋವಾ ಇಂದ) ಇಂದ ಕೇರಳದ ನೀಲೇಶ್ವರದವರೆಗೆ ಮತ್ತು ಪಶ್ಚಿಮ ಘಟ್ಟದ ಮೇಲೂ ಸಹಾ ವಿಜಯ ಫತಾಕೆ ಹಾರಿಸಿ ಹಲವಾರು ಸಾಮಂತರನ್ನು ಸೋಲಿಸಿ ಅಸಂಖ್ಯಾತ ಕೋಟೆಗಳು ಮತ್ತು ಬತ್ತೇರಿಗಳನ್ನು ವಶಪಡಿಸಿಕೊಂಡು 17ನೇ ಶತಮಾನದ ಆದಿಯಲ್ಲಿ ಕರ್ನಾಟಕದ ಅತ್ಯಂತ ಶಕ್ತಿಶಾಲಿ, ಕೀರ್ತಿಶಾಲಿ, ಶ್ರೀಮಂತ ಮತ್ತು ಪ್ರಭಾವಶಾಲಿ ರಾಜನಾಗುತ್ತಾನೆ. ಹಿರಿಯ ವೆಂಕಟಪ್ಪ ನಾಯಕ ಕೋಟೆಯ ವಿನ್ಯಾಸ, ಊರಿನ ವಿನ್ಯಾಸ, ವಾಸ್ತುಶಿಲ್ಪ, ಕೃಷಿ, ನೃತ್ಯ, ಸಂಗೀತ, ನಾಟಕ, ಸಾಹಿತ್ಯ, ಯುದ್ಧ ನೀತಿ ಮತ್ತು ಹಲವಾರು ವಿಷಯಗಳ ಬಗ್ಗೆ ದೀರ್ಘವಾದ ಜ್ಞಾನವನ್ನು ಹೊಂದಿದ್ದು ಅದನ್ನು ತನ್ನ ಚಿಕ್ಕಪ್ಪನ ಮೊಮ್ಮಗ ಶಿವಪ್ಪನಾಯಕನಿಗೆ ಧಾರೆ ಎರೆಯುತ್ತಾನೆ. Saakshatv Naavu kelada charitre episode9

ಹಿರಿಯ ವೆಂಕಟಪ್ಪ ನಾಯಕರ ಏಕಮಾತ್ರ ಚಿರಂಜೀವಿಯ ಅಕಾಲಿಕ ಮರಣದಿಂದ ಇಕ್ಕೇರಿಯ ರಾಜಕೀಯದಲ್ಲಿ ಸ್ವಲ್ಪ ಮಟ್ಟಿಗೆ ಬಿರುಗಾಳಿ ಏಳುತ್ತದೆ. ಹಿರಿಯ ವೆಂಕಟಪ್ಪ ನಾಯಕರ ನಂತರದಲ್ಲಿ ಇಕ್ಕೇರಿಯ ಗದ್ದುಗೆ ಏರಲು ರಾಜಪರಿವಾರದಲ್ಲಿ ಬಿರುಸಿನ ಚಟುವಟಿಕೆಗಳು ಪ್ರಾರಂಭವಾಗುತ್ತದೆ. ಹಿರಿಯ ವೆಂಕಟಪ್ಪ ನಾಯಕರ ಮೊಮ್ಮಗ ವೀರಭದ್ರ ನಾಯಕ ನನ್ನು ಇಕ್ಕೇರಿಯ ರಾಜ ಮಾಡಲು ತೀರ್ಮಾನಿಸಿದ ವೆಂಕಟಪ್ಪ ನಾಯಕನಿಗೆ ಇದಕ್ಕೆ ಅಡ್ಡಿ ಆಗಬಹುದಾದ ಅವನ ಸಹೋದರ ರಾಮರಾಜ ನಾಯಕರ ಮಗ ವಿರೂಪಣ ಒಡೆಯ ನನ್ನು ಸೆರೆಮನೆಗೆ ಹಾಕಿ ಶಿವಪ್ಪನಾಯಕ ಮತ್ತು ಅವನ ಸಹೋದರ ವೆಂಕಟಪ್ಪ ನಾಯಕನಿಗೆ ಬಿದನೂರು ಮತ್ತು ಘಟ್ಟದ ಕೆಳಗಿನ ಕೆಲವು ಪ್ರದೇಶಗಳ ಜವಾಬ್ದಾರಿಯನ್ನು ನೀಡಿ ಇಕ್ಕೇರಿಯ ರಾಜಧಾನಿಯಿಂದ ದೂರ ಇಡುತ್ತಾರೆ.
ಅಂದು ಕೇವಲ ಒಂದು ಸುತ್ತಿನ ಕೋಟೆಗೆ ಸೀಮಿತವಾಗಿದ್ದ ಬಿದಿರು ಹಳ್ಳಿಯನ್ನು ಒಂದು ಅತ್ಯುತ್ತಮ ಊರನ್ನಾಗಿ ಪರಿವರ್ತನೆ ಮಾಡಲು ಫಣತೊಟ್ಟ ಶಿವಪ್ಪನಾಯಕ ತನ್ನ ಸಂಪೂರ್ಣ ಜ್ಞಾನವನ್ನು ಬಳಸಿ ಒಂದು ಅದ್ಭುತವಾದ ಊರನ್ನು ನಿರ್ಮಾಣ ಮಾಡುತ್ತಾನೆ. ಈ ಊರಿನಲ್ಲಿ ಅರಮನೆಗಳು, ಪುಷ್ಕರಣಿಗಳು, ಉದ್ಯಾನವನ, ಕೋಟೆಯ ಅಂಗಳ, ಬತ್ತೇರಿಗಳು, ರಸ್ತೆ, ಹೆದ್ದಾರಿ, ಬಡಾವಣೆಗಳು, ಸೈನಿಕ ನೆಲೆಗಳು, ಕಾರ್ಖಾನೆಗಳು, ದೇವಾಲಯಗಳು, ಮಠಗಳು, ಕೃಷಿ ಸಂಶೋಧನಾ ಕೇಂದ್ರ ಹೀಗೆ ಹತ್ತು ಹಲವಾರು ಪ್ರಯತ್ನಗಳೊಂದಿಗೆ ಬಿದಿರುಹಳ್ಳಿ ದೊಡ್ಡ ಊರಾಗಿ “ಬಿದನೂರು” ಆಗಿ ಪರಿವರ್ತನೆ ಗೊಳ್ಳುತ್ತದೆ. 1637ರಲ್ಲಿ ಬಿಜಾಪುರದ ಆದಿಲ್ ಶಾಹಿಯ ಸೈನ್ಯದ ಅಟ್ಟಹಾಸಕ್ಕೆ ಇಕ್ಕೇರಿಯ ರಾಜಧಾನಿ ಅಕ್ಷರಶಃ ನಲುಗಿಹೋಗುತ್ತದೆ. ಈ ದಾಳಿಯ ನಂತರದಲ್ಲಿ ರಾಜಧಾನಿಯನ್ನು ಸುರಕ್ಷಿತ ದೃಷ್ಟಿಕೋನದಿಂದ ಬೇರೆಡೆ ಸ್ಥಳಾಂತರ ಮಾಡಲು ನಿರ್ಧರಿಸಿದಾಗ ಸಮಸ್ತ ಮಂತ್ರಿ ಮಂಡಲ ಏಕಮತವಾಗಿ ಸೂಚಿಸಿದ ಸ್ಥಳವೇ ಶಿವಪ್ಪನಾಯಕರು ಸೃಷ್ಟಿಸಿದ “ಬಿದನೂರು”.

ಬಿದನೂರು ರಾಜಕೀಯ ಮತ್ತು ಸೈನಿಕ ದೃಷ್ಟಿಕೋನದಿಂದ ಹೇಳುವುದಾದರೆ ಒಂದು ಅದ್ಭುತವಾದ ಶಕ್ತಿ ಕೇಂದ್ರ ಏಕೆಂದರೆ ಬಿದನೂರಿಗೆ ಪಶ್ಚಿಮ ಘಟ್ಟವೇ ಸುರಕ್ಷಾ ಕವಚವಾಗಿ ಆಶ್ರಯ ನೀಡಿತ್ತು. ಬಿದನೂರಿಗೆ ಮೂರು ಸುತ್ತಿನ ಕೋಟೆಯ ಜೊತೆಗೆ ಪಶ್ಚಿಮ ಘಟ್ಟದ ದುರ್ಗಮ ಅರಣ್ಯ, ವನ್ಯಮೃಗಗಳು, ನದಿ, ತೊರೆ, ಹಳ್ಳ, ಕಣಿವೆ ಮತ್ತು ಗುಡ್ಡಗಾಡು ಆಸರೆಯಾಗಿ ನಿಂತವು. ಬಿದನೂರಿನ ಮೂರು ಸುತ್ತಿನ ಕೋಟೆಗೆ ಒಟ್ಟು 18 ಬಾಗಿಲುಗಳು, ಇದರಲ್ಲಿ ಮೊದಲೇ ಸುತ್ತಿನ ಕೋಟೆಗೆ (ಇಂದು ನಗರದಲ್ಲಿ ಉಳಿದಿರುವ) ಒಂದು ಬಾಗಿಲು ಇದ್ದರೆ ಎರಡನೇ ಸುತ್ತಿನ ಕೋಟೆಗೆ (ಇಂದಿನ ನಗರ ಸರಹದ್ದು) ಒಟ್ಟು 10 ಬಾಗಿಲುಗಳು ಇದ್ದು ಅವುಗಳ ಹೆಸರು ಉತ್ತರದಿಂದ ಪ್ರದಕ್ಷಿಣಾಕಾರವಾಗಿ ಈ ತರಹ ಇರುತ್ತದೆ – ದೆಹಲಿ ಬಾಗಿಲು, ಕುರಿಪೇಟೆ ಬಾಗಿಲು, ಶೀಗೆ ಬಾಗಿಲು, ಕವಲೇದುರ್ಗ ಬಾಗಿಲು, ಕೊಡಿಯಾಲ್ ಬಾಗಿಲು, ಬೌಗೋಡಿ ದಿಂಡಿ ಬಾಗಿಲು, ಮಳಲಿ ಬಾಗಿಲು, ಸುರ್ವರ್ ದಿಂಡಿ ಬಾಗಿಲು, ಕೌಲ್ ಸೋಸಿ ಬಾಗಿಲು ಮತ್ತು ಬಸವನಬ್ಯಾಣ ಬಾಗಿಲು. ಇನ್ನೂ ಮೂರನೇ ಸುತ್ತಿನ ಕೋಟೆಗೆ ಉತ್ತರ ಈಶಾನ್ಯದಲ್ಲಿ ಕಾರ್ಗಡಿ ಕುಂಬತ್ತಿ ಗುಡ್ಡದ ಹತ್ತಿರ ಮೂರು ಬಾಗಿಲುಗಳು ಅಂದರೆ ದೊಡ್ಡ ಬಾಗಿಲು (ಫತೇಹ್ ಪೇಟೆ ಬಾಗಿಲು), ಹನುಮನ ಬಾಗಿಲು ಮತ್ತು ಬಸವನ ಬಾಗಿಲು ಇದ್ದರೆ ಆಗ್ನೇಯ ದಿಕ್ಕಿನಲ್ಲಿ ನಡುವಣ ಬಾಗಿಲು ಮತ್ತು ಹನುಮಂತ ಬಾಗಿಲು ಇದ್ದರೆ ವಾಯುವ್ಯದಲ್ಲಿ ಮತ್ತಿಮನೆಯ ಹತ್ತಿರ ಎರಡು ಬಾಗಿಲುಗಳು ಇದ್ದವು.

ಬಿದನೂರಿಗೆ ಕಲಾವತಿ, ಇಲಾವತಿ ಮತ್ತು ಶರಾವತಿ ನದಿಗಳ ಜೊತೆಗೆ ಪಶ್ಚಿಮ ಘಟ್ಟ ಅಂದರೆ ಸಹ್ಯಾದ್ರಿ ಪರ್ವತ ಶ್ರೇಣಿಯ ಕವಚ ಈ ಊರನ್ನು ಅಜೇಯ ಕೋಟೆಯನ್ನಾಗಿ ಮಾಡಿತು. ಬಿದನೂರಿನ ಪಶ್ಚಿಮ ಮತ್ತು ನೈಋತ್ಯದಲ್ಲಿ ಘಟ್ಟ ಇದ್ದ ಪರಿಣಾಮ ಆ ದಿಕ್ಕಿನಿಂದ ದೊಡ್ಡ ಪ್ರಮಾಣದಲ್ಲಿ ಸೈನ್ಯದ ತುಕುಡಿಯ ಜೊತೆಗೆ ಆಕ್ರಮಣ ಮಾಡಲು ಅಸಾಧ್ಯವಾಗಿತ್ತು ಅದೇ ರೀತಿ ದಕ್ಷಿಣ ಮತ್ತು ಆಗ್ನೇಯ ದಿಕ್ಕಿನಲ್ಲಿ ದಟ್ಟವಾದ ಅರಣ್ಯ ಮತ್ತು ತದನಂತರ ಭುವನಗಿರಿದುರ್ಗ (ಕವಲೇದುರ್ಗ) ಕೋಟೆ ಇದ್ದು ಆ ದಿಕ್ಕಿನಿಂದ ಸಹಾ ಶತ್ರುಗಳು ಆಕ್ರಮಣ ಮಾಡಲು ಸಾಧ್ಯವಿರಲಿಲ್ಲ. ಅದೇ ರೀತಿ ಉತ್ತರದಲ್ಲಿ ಶರಾವತಿ ಕಣಿವೆ ಇದ್ದದ್ದರಿಂದ ಶತ್ರುಗಳಿಗೆ ಬಿದನೂರಿನ ಮೇಲೆ ಆಕ್ರಮಣ ಮಾಡಲು ಇದ್ದ ಎರಡು ಮಾರ್ಗ ಒಂದು ವಾಯುವ್ಯ ಮತ್ತು ಇನ್ನೊಂದು ಈಶಾನ್ಯ. ಬಿದನೂರಿನ ಇತಿಹಾಸವನ್ನು ಒಮ್ಮೆ ಗಮನಿಸಿದರೆ ಅದರ ಮೇಲೆ ಹೆಚ್ಚಾಗಿ ಈಶಾನ್ಯ ಭಾಗದಿಂದಲೇ ದಾಳಿ ನಡೆದುಬಂದಿರುವುದು ತಿಳಿಯುತ್ತದೆ. ಇದಕ್ಕೆ ಎರಡು ಕಾರಣಗಳನ್ನು ನಾವು ಕಾಣಬಹುದು, ಒಂದು ಈ ಮಾರ್ಗದಲ್ಲಿ ದೊಡ್ಡ ಪ್ರಮಾಣದಲ್ಲಿ ಸೈನಿಕರು ಮತ್ತು ಬೃಹತ್ ಗಾತ್ರದ ಫಿರಂಗಿಗಳನ್ನು ತರಬಹುದಿತ್ತು ಮತ್ತು ಎರಡನೆಯದು ಕಾರ್ಗಡಿ ಹತ್ತಿರ ಇದ್ದ ಸಮತಟ್ಟಾದ ಪ್ರದೇಶ (ಇದನ್ನು ಇಂದು ಫತೇಹ್ ಪೇಟ್ ಅನ್ನುತ್ತಾರೆ).

ಇನ್ನೂ ಶತ್ರುಗಳು ಈಶಾನ್ಯ ಭಾಗದ ದೊಡ್ಡ ಬಾಗಿಲು, ಹನುಮಂತ ಬಾಗಿಲು ಮತ್ತು ಬಸವನ ಬಾಗಿಲು ದಾಟಿದರು ಸಹಾ ಬಿದನೂರಿನ ಎರಡನೇ ಸುತ್ತಿನ ಕೋಟೆಯ ಹತ್ತಿರ ಹೋಗುವುದು ಸಹಾ ಅಸಾಧ್ಯವಾಗಿತ್ತು ಏಕೆಂದರೆ ಶಿವಪ್ಪನಾಯಕ ಆಯ್ದ ಪ್ರದೇಶಗಳಲ್ಲಿ ಕೋಟೆ ಬತ್ತೇರಿಯನ್ನು ನಿರ್ಮಿಸಿ ಅದರ ಮೂಲಕ ಶತ್ರುಗಳ ಮೇಲೆ ಅಚ್ಚರಿಯ ಮುಸುಕಿನ (guerilla) ಯುದ್ಧವನ್ನು ಮಾಡುವ ಮುಖಾಂತರ ವಿಜಯವನ್ನು ಸಾಧಿಸಿದ ಹಲವಾರು ಪ್ರಕರಣಗಳಿವೆ. ಶಿವಪ್ಪನಾಯಕರು ಬಿದನೂರಿನ ಪರಿಸರದಲ್ಲಿ ಇಂತಹಾ ಬತ್ತೇರಿಯನ್ನು ಆಯಕಟ್ಟಿನ ಸ್ಥಳಗಳಲ್ಲಿ (strategic points) ನಿರ್ಮಿಸಿದ್ದು ಅದರಲ್ಲಿ ಎಲ್ಲದಕ್ಕಿಂತ ಪ್ರಮುಖವಾಗಿದ್ದು ಮಾತ್ರ “ಹಿಲ್ಕುಂಜಿ ಬತ್ತೇರಿ” ಅಥವಾ ಸ್ಥಳೀಯರು ಹೇಳುವ ಹಾಗೆ “ಬರೆಕಲ್ ಬತ್ತೇರಿ”. ಈ ಹಿಲ್ಕುಂಜಿ ಬತ್ತೇರಿ ಇರುವ ಪ್ರದೇಶ ಹಾಗು ಅದರ ಎತ್ತರ (ಸಮುದ್ರ ಮಟ್ಟದಿಂದ – MSL) ಸೈನ್ಯದ ದೃಷ್ಟಿಕೋನದಿಂದ ಎಷ್ಟು ಸೂಕ್ತವಾಗಿತ್ತು ಎಂದರೆ ಈ ಬತ್ತೇರಿ ಇಂದ ಕಾರ್ಗಡಿ ಹತ್ತಿರ ಇರುವ ಬಿದನೂರಿನ ಪ್ರಮುಖ ಬಾಗಿಲುಗಳು, ಬಿದನೂರಿನ ಮಧ್ಯ ಭಾಗ (ಅಂದರೆ ಇಂದಿನ ನಗರ), ಕೊಡಸೆ ಸೇತುವೆ (ಅಂದಿನ ಕಾಲದ ಹಳೆಯ ಸೇತುವೆ) ಮತ್ತು ಕವಲೇದುರ್ಗದ ಮಾರ್ಗವನ್ನು ಯಾರಿಗೂ ತಿಳಿಯದೆ ಕಾವಲು ಇಡಲು ಒಂದು ಅದ್ಭುತವಾದ ಕಣ್ಣಿಗೆ ಮಣ್ಣೆರೆಚುವ (camouflage) ಸೈನಿಕ ತಾಣವಾಗಿತ್ತು.
ಹಿಲ್ಕುಂಜಿ ಬತ್ತೇರಿ ಸಮುದ್ರ ಮಟ್ಟದಿಂದ 834 ಮೀಟರ್ ಎತ್ತರ ಇದ್ದರೆ ಕಾರ್ಗಡಿ, ನಗರ ಪೇಟೆ, ಕೊಡಸೆ ಸೇತುವೆ ಹಾಗೂ ಕವಲೇದುರ್ಗ ಕೋಟೆ ಸಮುದ್ರ ಮಟ್ಟದಿಂದ ಕ್ರಮವಾಗಿ 600 ಮೀಟರ, 594 ಮೀಟರ್, 563 ಮೀಟರ್ ಮತ್ತು 910 ಮೀಟರ್ ಎತ್ತರ ಇದ್ದಾವೇ.

ಈ ಹಿಲ್ಕುಂಜಿ ಬತ್ತೇರಿ ಇರುವ ಸ್ಥಳ ಎಷ್ಟು ಪ್ರಶಕ್ತವಾಗಿದೆ ಎಂದರೆ ಕೆಳಗಿನಿಂದ ಯಾವುದೇ ದಿಕ್ಕಿನಿಂದ ನೋಡಿದರು ಸಹಾ ಕೋಟೆಯ ಇರುವಿಕೆಯ ಒಂದು ಸಣ್ಣ ಕುರುಹು ಸಿಗುವುದಿಲ್ಲ ಎಲ್ಲಿ ನೋಡಿದರೂ ಸಹಾ ಕಣ್ಣಿಗೆ ಕಾಣುವುದು ಮಾತ್ರ ಬರೇ ಕಲ್ಲು ಬಂಡೆಗಳು ಮಾತ್ರ. ಈ ಬಂಡೆಯ ಗುಡ್ಡ ಎಷ್ಟು ಅದ್ಭುತವಾಗಿದೆ ಎಂದರೆ ಇದರ ಮೇಲೆ ಮಧ್ಯ ಮಧ್ಯದಲ್ಲಿ ಬೆಳೆದು ನಿಂತ ಮರಗಳ ಸಣ್ಣ ಕಾಡುಗಳಿವೆ. ಈ ಬರೆಕಲ್ ಗುಡ್ಡವನ್ನು ಏರಲು ಪ್ರಾರಂಭಿಸಿದಾಗ ಮೊದಲು ದಟ್ಟವಾದ ಕಾಡು ಸಿಗುತ್ತದೆ ಸ್ವಲ್ಪ ದೂರ ಸಾಗಿದ ಮೇಲೆ ಬಂಡೆಯ ದರ್ಶನವಾಗುತ್ತದೆ. ಈ ಬಾಗದಲ್ಲಿ ಮೂರು ಬೃಹತ್ ಗಾತ್ರದ ಬಂಡೆಗಳು ಇದ್ದು ಇವುಗಳನ್ನು ಕೋಣಗಲ್ಲು, ಹೋರಿಗಲ್ಲು ಮತ್ತು ಎತ್ತುಗಲ್ಲು ಎಂದು ಕರೆಯುತ್ತಾರೆ ವಿಶೇಷ ಅಂದರೆ ಈ ಬಂಡೆಯ ಕೆಳಗೆ ನುಸುಳಿ ಕೊಂಡು ಒಳಹೊಕ್ಕರೆ ಯಾರಿಗೂ ಕಾಣಿಸುವುದಿಲ್ಲ. ಈ ಭಾಗದಿಂದ ಮತ್ತೆ ಮೇಲೆ ಏರಲು ಪ್ರಾರಂಭಿಸಿದರೆ ಇನ್ನೊಂದು ಸರಿ ದಟ್ಟವಾದ ಕಾಡು ಸಿಗುತ್ತದೆ, ಈ ಕಾಡಿನಲ್ಲಿ ಮಳೆಗಾಲದಲ್ಲಿ ನೀರು ಹರಿಯುವ ಪಥದಲ್ಲಿ ಮುಂದೆ ಸಾಗಿದರೆ ಸ್ವಲ್ಪ ಸಮಯದ ನಂತರ ಕೆಲವು ಏರು ಇಳಿತಗಳನ್ನು ದಾಟಿದಾಗ ಸಿಗುತ್ತದೆ ಇಕ್ಕೇರಿ ನಾಯಕರು ಕಟ್ಟಿಸಿದ ಆಕರ್ಷಣೀಯ ವಾಗಿರುವ ಪುಷ್ಕರಣಿ. ಈ ಪುಷ್ಕರಣಿ ಇರುವ ಸ್ಥಳ ಎಷ್ಟು ಸೊಗಸಾಗಿದೆ ಎಂದರೆ ಈ ಭಾಗದಲ್ಲಿ ಸೂರ್ಯನ ಕಿರಣ ಕಣ್ಣಾಮುಚ್ಚಾಲೆ ಆಡುತ್ತದೆ. 1600ರಲ್ಲಿ ಬ್ರಿಟೀಷ್ ಸರ್ವೇ ಅಧಿಕಾರಿ ಕೊಲಿನ್ ಮೆಕೆಂಜಿ (Colin Mackenzie) ಈ ಭಾಗಕ್ಕೆ ಭೇಟಿ ನೀಡಿ ಇದರ ನಕ್ಷೆ ತಯಾರಿಸಿದಾಗ ಈ ಪುಷ್ಕರಣಿಯ ಬಗ್ಗೆ ಈ ರೀತಿ ಉಲ್ಲೇಖ ಮಾಡಿರುತ್ತಾನೆ – “Clump of trees on high pond”. ಈ ಪುಷ್ಕರಣಿಯ ಉತ್ತರ ದಿಕ್ಕಿನಲ್ಲಿ ಮತ್ತೆ ಏರಲು ಪ್ರಾರಂಭಿಸಿದರೆ ಸ್ವಲ್ಪ ದೂರದ ನಂತರದಲ್ಲಿ 80 ಡಿಗ್ರಿಯ ಕಡಿದಾದ ಬಂಡೆ ಸಿಗುತ್ತದೆ. ಈ ಬಂಡೆಯನ್ನು ಸಣ್ಣ ಹಸುಗೂಸಿನ ತರಹವೇ ಅಂಬೆಗಾಲು ಇಡುತ್ತ ಮೇಲೆ ಏರಬೇಕು. ಇದಾದ ನಂತರ ಬಂಡೆಯ ಮೇಲೆ ಸಾಗಿ ಇನ್ನೊಂದು ಸಣ್ಣ ಕಾಡನ್ನು ದಾಟಿದರೆ ಒಂದು ಸಣ್ಣ ಬಯಲು ಸಿಗುತ್ತದೆ. ಈ ಭಾಗದಲ್ಲಿ ಈ ಹಿಂದೆ ಸೈನಿಕರಿಗೆ ಉಳಿದ ಕೊಳ್ಳಲು ಮಾಡಿದ ವಾಸ ಸ್ಥಳ ಮತ್ತು ಅಡುಗೆ ಮನೆಯ ಕುರುಹುಗಳು ದೊರಕುತ್ತವೆ.

ಇಲ್ಲಿಂದ ಮುಂದೆ ಮತ್ತೆ ಕಾಡಿನ ಮೂಲಕ ಮುಂದೆ ಸಾಗಿ ಕೊನೆಯದಾಗಿ ಬೆಟ್ಟ ಏರಿದರೆ ಹಿಲ್ಕುಂಜಿ ಕೋಟೆ ಬತ್ತೇರಿ ಮತ್ತು ಅದರ ಕಂದಕ ಸಿಗುತ್ತದೆ. ಈ ಕೋಟೆ ಬತ್ತೇರಿಗೆ ಒಟ್ಟು ಮೂರು ಸುತ್ತಿನ ಕಂದಕ ಇದ್ದು ಇದನ್ನು ದಾಟಲು ಅಂದಿನ ಕಾಲದಲ್ಲೇ ಕಲ್ಲಿನ ಸೇತುವೆ ಮಾಡಿರುವುದು ಬಹಳ ವಿಶೇಷ. ಈ ಕೋಟೆ ಬತ್ತೇರಿಯ ಮುಖ್ಯದ್ವಾರ ಪೂರ್ವಾಭಿಮುಖವಾಗಿದ್ದು ಇದನ್ನು ಕಟ್ಟಲು ಸ್ಥಳೀಯ ಬಂಡೆಯ ಕಲ್ಲುಗಳನ್ನೇ ಉಪಯೋಗಿಸಲಾಗಿದೆ. ಈ ಕೋಟೆ ಬತ್ತೇರಿಯ ಸುತ್ತಲೂ ಸುರಕ್ಷತಾ ಗೋಡೆ (Rampart and Parapet Wall) ಮತ್ತು ಅದರ ಮಧ್ಯದಲ್ಲಿ ಕೋವಿ ಇಂದ ಶತ್ರುಗಳನ್ನು ಹೊಡೆಯಲು ಕಿಂಡಿಗಳನ್ನು ಮಾಡಲಾಗಿದೆ. ಕೋಟೆಯ ಪಶ್ಚಿಮದಲ್ಲಿ ಅರೆವೃತ್ತಾಕಾರದ ಮೆಟ್ಟಿಲೇಣಿ (Ramp) ಏರಿದಾಗ ಕಾವಲು ಗೋಪುರ ಸಿಗುತ್ತದೆ, ಇದರಲ್ಲಿ ನಿಂತು ನೋಡಿದರೆ ದೂರದಲ್ಲಿ ಇರುವ ಬಿದನೂರಿನ ಒಂದು ಮತ್ತು ಎರಡನೇ ಸುತ್ತಿನ ಕೋಟೆ, ಇಲಾವತಿ ನದಿ, ಕಲಾವತಿ ನದಿ ಮತ್ತು ಕೊಡಸೆ ಹತ್ತಿರ ಅದರ ಸಂಗಮ, ಕೊಡಚಾದ್ರಿ ಬೆಟ್ಟ, ಕಾರ್ಗಡಿ ಕುಂಬತ್ತಿ ಗುಡ್ಡ ಎಲ್ಲವೂ ಸ್ಪಷ್ಟವಾಗಿ ಕಾಣಿಸುತ್ತದೆ. ಈ ಕೋಟೆಯ ಸುತ್ತಲೂ ಕಾಡು ಆವರಿಸಿ ಕೊಂಡಿದ್ದು ಇದನ್ನು ಪತ್ತೆ ಹಚ್ಚಲು ಇಂದಿನ ಗೂಗಲ್ ಉಪಗ್ರಹ ಕ್ಯಾಮೆರಾ ಗಳಿಂದಲು ಸಾಧ್ಯ ಇಲ್ಲ.
ಈ ಕೋಟೆ ಬತ್ತೇರಿ ಇಂದ ಮತ್ತೆ ಪುಷ್ಕರಣಿಯ ಹತ್ತಿರ ಬಂದು ನೈಋತ್ಯದಲ್ಲಿ ಕಾಡಿನ ಮೂಲಕ ಏರಿ ಸ್ವಲ್ಪ ದೂರ ಸಾಗಿದರೆ ಬೃಹತ್ ಆಕಾರದ ಹುಲಿ ಬಂಡೆ ಸಿಗುತ್ತದೆ. ಈ ಬಂಡೆಯಲ್ಲಿ ನೂರಾರು ಜನರು ಅಡಗಿಕೊಳ್ಳಲು ವಿಶಾಲವಾದ ಜಾಗ ಉಂಟು. ಇಲ್ಲಿಂದ ದಕ್ಷಿಣಕ್ಕೆ ಸಾಗಿದರೆ ಬೆಟ್ಟದ ತುದಿಯಲ್ಲಿ ದೊಡ್ಡ ಬಂಡೆ ನಿಂತಿರುವುದು ಕಾಣಿಸುತ್ತದೆ, ಇದನ್ನು ಸ್ಥಳೀಯರು ದೊಡ್ಡ ಬತ್ತೇರಿ ಎಂದು ಕರೆಯುತ್ತಾರೆ. ಪಕ್ಕದಲ್ಲಿ ಮೈತುಂಬಿ ಹರಿಯುವ ಇಲಾವತಿ (ಹಿಲ್ಕುಂಜಿ) ನದಿಯ ದೃಶ್ಯ ಮತ್ತು ದೂರದ ಪಶ್ಚಿಮ ಘಟ್ಟದ ಗುಡ್ಡ ಬೆಟ್ಟಗಳ ದೃಶ್ಯ ನಿಜಕ್ಕೂ ಅದ್ಭುತವಾಗಿದೆ. ಇನ್ನೂ ದಕ್ಷಿಣ ದಿಕ್ಕಿನಲ್ಲಿ ದುರ್ಬೀನುಗಳ ಮೂಲಕ ನೋಡಿದರೆ ಕವಲೇದುರ್ಗದ ಕೋಟೆ ಕಾಣಿಸುತ್ತದೆ. ಇಲ್ಲಿಂದ ಮುಂದೆ ಇಳಿಜಾರು ಇದ್ದು ಕೆಳಗೆ ಜಾಗೃತರಾಗಿ ಇಳಿದರೆ ಮತ್ತೆ ಎತ್ತುಗಲ್ಲು ಹತ್ತಿರ ಬಂದು ಸೇರುತ್ತೇವೆ.

ಶಿವಪ್ಪ ನಾಯಕರು ಬಿದನೂರಿನ ಕೋಟೆಯ ನಿರ್ಮಾಣ ಮಾಡುವಾಗ ಈ ಬೃಹತ್ ಆಕಾರದ ಬಂಡೆ ಅವರಿಗೆ ಬಹಳ ಆಕರ್ಷಿಸುತ್ತದೆ. ಇದರ ಮೇಲೆ ಬತ್ತೇರಿ ಮಾಡಲು ಸೂಕ್ತ ಎಂದು ನಿರ್ಧರಿಸಿ ಒಂದು ಮುಖ್ಯ ಸೇನಾ ತಾಣವಾಗಿ ಇದನ್ನು ಮಾರ್ಪಾಡು ಮಾಡುತ್ತಾರೆ. ಈ ಬತ್ತೇರಿ ಇಂದ ಕಾರ್ಗಡಿ, ನಗರ ಮತ್ತು ಕವಲೇದುರ್ಗದ ಕೋಟೆ ಕ್ರಮವಾಗಿ 6.8 ಕಿಲೋಮೀಟರ್, 6.4 ಕಿಲೋಮೀಟರ್ ಮತ್ತು 12.81 ಕಿಲೋಮೀಟರ್ ದೂರದಲ್ಲಿ ಇರುತ್ತವೆ. ಅಂದಿನ ಕಾಲದಲ್ಲಿ ಕವಲೇದುರ್ಗದ ಕೋಟೆ ಇಂದ ಸಂಜೆಯ ವೇಳೆಯಲ್ಲಿ ಪಂಜಿನ ವಿಶೇಷ ಬೀಸುವ ಶೈಲಿಯ ಮೂಲಕ ಬರೆಕಲ್ ಬತ್ತೇರಿಯಲ್ಲಿ ನಿಯೋಜಿತ ಸೈನಿಕರಿಗೆ ಸುದ್ದಿ ಮುಟ್ಟಿಸಿ ಇವರ ಮೂಲಕ ಅದೇ ಮಾದರಿಯಲ್ಲಿ ಬಿದನೂರಿನ ಕೋಟೆ ಮತ್ತು ಅರಮನೆಗೆ ಸಂದೇಶವನ್ನು ರವಾನಿಸಲಾಗುತ್ತಿತ್ತು.

ಉತ್ತರ ದಕ್ಷಿಣವಾಗಿ ಇರುವ ಈ ಬಂಡೆ ದೂರದಿಂದ ನೋಡಲು ಗೂಳಿಯ ಬೆನ್ನಿನ ಮೇಲಿನ ಡುಬ್ಬದ ರೀತಿ ಕಾಣುತ್ತದೆ ಮತ್ತು ಇದರ ಮೇಲೆ ಅಲ್ಲಲ್ಲಿ ಬೆಳೆದ ದಟ್ಟವಾದ ಮರಗಳು ಈ ಪ್ರದೇಶವನ್ನು “ಹಿಳಲು ಕುಂಜ್” ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಶಿವಪ್ಪ ನಾಯಕರು ಈ ಬತ್ತೇರಿಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೆ ಎಂದರೆ ಈ ಬರೆಕಲ್ ಸುತ್ತಲೂ ಹಲವಾರು ದೇವಾಲಯಗಳನ್ನು ನಿರ್ಮಿಸಿ ಈ ಪ್ರದೇಶಕ್ಕೆ ಧಾರ್ಮಿಕ ಶಕ್ತಿಯನ್ನು ಸಹಾ ನೀಡುತ್ತಾರೆ. ಇಂದು ಹಿಳಲು ಕುಂಜ್ ಜನರ ಬಾಯಲ್ಲಿ ಹಿಲ್ಕುಂಜಿ ಆದರೆ ಬರೆಕಲ್ ಬತ್ತೇರಿ ಗುಡ್ಡ ಸುತ್ತಲೂ ಇರುವ ಕೆರೆಬಯಲು ಶ್ರೀ ರಾಮಲಿಂಗೇಶ್ವರ, ಶ್ರೀ ಕಿರಾತೇಶ್ವರ, ಶ್ರೀ ಕಲಾನಾಥೇಶ್ವರ, ಶ್ರೀ ದುರ್ಗಾದೇವಿ, ಶ್ರೀ ಲಕ್ಷ್ಮೀ ನಾರಾಯಣ, ಶ್ರೀ ವೀರಭದ್ರ ದೇವರ ದೇವಾಲಯಗಳು ಈ ಬತ್ತೇರಿಯ ಅದ್ಭುತ ಇತಿಹಾಸದ ಸಾಕ್ಷಿಯಾಗಿ ನಿಂತಿವೆ. ಈ ಹಿಲ್ಕುಂಜಿ ಬತ್ತೇರಿ ಇಂದ ಒಟ್ಟು ಮೂರು ಕೊರಕಲು ಹಳ್ಳಗಳು ಇಲಾವತಿ ನದಿಯನ್ನು ಸೇರುತ್ತದೆ.
ಲೇಖನ ಮತ್ತು ಚಿತ್ರಗಳು :-
ಅಜಯ್ ಕುಮಾರ್ ಶರ್ಮಾ
ಇತಿಹಾಸ ಅಧ್ಯಯನಕಾರರು ಮತ್ತು ಪರಿಸರ ಹೋರಾಟಗಾರ
ಶಿವಮೊಗ್ಗ
Saakshatv Naavu kelada charitre episode9
ಸಾಕ್ಷಾ ಟಿವಿಯ ‘ನಾವು ಕೇಳದ ಚರಿತ್ರೆ’ ಅಂಕಣಕಾರ ಅಜಯ್ ಕುಮಾರ್ ಶರ್ಮಾ ಅವರ ಕಿರು ಪರಿಚಯ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








