ನಿಷೇಧದ ನಡುವೆಯೂ ಜಾತ್ರೆ Saaksha Tv
ಬಾಗಲಕೋಟೆ: ಉತ್ತರ ಕರ್ನಾಟಕ ಧಾರ್ಮಿಕ ಶಕ್ತಿ ಪೀಠಗಳಲ್ಲಿ ಒಂದಾದ ಬಾದಾಮಿ ಬನಶಂಕರಿ. ಈ ದೇವಾಲಯದ ಜಾತ್ರಾ ಮಹೋತ್ಸವವನ್ನು ಕೊರೊನಾ ಹಿನ್ನಲೆ ನಿಷೇಧದ ನಡುವೆಯು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿ ಅದ್ಧೂರಿಯಾಗಿ ಜಾತ್ರೆ ನಡೆಸಿದ್ದಾರೆ.
ಬದಾಮಿ ಬನಶಂಕರಿ ಜಾತ್ರೆಗೆ ಕೊರೊನಾ ಹಿನ್ನಲೇ ಜಾತ್ರೆಯನ್ನು ನಿಷೇಧಿಸಲಾಗಿತ್ತು. ಹಾಗಾಗಿ ಪೊಲೀಸರು ಜನ ಸೇರದಂತೆ ಬಿಗಿ ಭದ್ರತೆ ಏರ್ಪಡಿಸಿದ್ದರು. ರಥೋತ್ಸವ ನಡೆಯುವ ಒಂದು ಗಂಟೆ ಮೊದಲು ಆವರಣದಲ್ಲಿ ಜನ ಇರದೆ ಇಡೀ ಪ್ರದೇಶ ಬಿಕೋ ಎನ್ನುತ್ತಿತ್ತು. ಆದರೆ ದೇವಸ್ಥಾನದ ಆಡಳಿತ ಮಂಡಳಿ ಕೊನೆಗಳಿಗೆಯಲ್ಲಿ ರಥೋತ್ಸವ ನಡೆಸಲು ನಿರ್ಧಾರ ತೆಗೆದುಕೊಂಡಿದ್ದರಿಂದ ದೇವಸ್ಥಾನದ ಆವರಣಕ್ಕೆ, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ರಥ ಎಳೆಯುವ ಸಮಯದಲ್ಲಿ ನೆರೆದರು. ಭಕ್ತರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿದರು.
ಪ್ರತೀ ವರ್ಷ ಬಣದ ಹುಣ್ಣಿಮೆ ದಿನದಂದು ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಸೇರುತ್ತಿದ್ದರು. ಈ ಬಾರಿ ಜಾತ್ರೆ ರದ್ದು ಮಾಡಿದ ಹಿನ್ನೆಲೆ ದೇವಸ್ಥಾನದ ಆವರಣಕ್ಕೆ ಭಕ್ತರಿಗೆ ನಿರ್ಬಂಧ ಹಾಕಲಾಗಿತ್ತು. ಹೀಗಾಗಿ ದೇವಸ್ಥಾನದಿಂದ ಎರಡು ಕಿಲೋಮೀಟರ್ ದೂರದಲ್ಲಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಭಕ್ತರನ್ನ ಪೊಲೀಸರು ತಡೆ ಹಿಡಿದಿದ್ದರು. ಆದರೂ ಸರ್ಕಾರದ ಆದೇಶವನ್ನ ಉಲ್ಲಂಘನೆ ಮಾಡಿ ರಥೋತ್ಸವ ಮಾಡಿದ್ದಕ್ಕೆ ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ.








