ಥೇಟ್ ರಾಜಕೀಯ ನಾಯಕನಂತೆ ಶಿಕ್ಷಕನನ್ನು ಬೀಳ್ಕೊಟ್ಟ ವಿದ್ಯಾರ್ಥಿಗಳು
ಕಲಬುರಗಿ : ಸರಕಾರಿ ಶಾಲಾ ಶಿಕ್ಷಕರೊಬ್ಬರನ್ನು ರಾಜಕೀಯ ನಾಯಕರಂತೆ ಮೆರವಣಿಗೆ ಮಾಡಿ ವಿದ್ಯಾರ್ಥಿಗಳು ಬೀಳ್ಕೊಟ್ಟಿರುವ ಅಪರೂಪದ ಪ್ರಸಂಗ ಜಿಲ್ಲೆಯ ಸೇಡಂ ತಾಲೂಕಿನ ಯಡಗಾ ಗ್ರಾಮದಲ್ಲಿ ನಡೆದಿದೆ.
ಶಿಕ್ಷಕ ಉಮೇಶ್ ಕನ್ನಳ್ಳಿ ಗ್ರಾಮದ ಮಲ್ಕಪ್ಪ ಹಳ್ಳಿಖೇಡ ಸರ್ಕಾರಿ ಶಾಲೆಯಲ್ಲಿ 14 ವರ್ಷಗಳಿಂದ ಸೇವೆ ಸಲ್ಲಿಸಿ ಗುರುವಾರ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಹಿರೇಪಡಸಲಿ ಶಾಲೆಗೆ ವರ್ಗವಾಣೆಯಾಗಿದ್ದಾರೆ. ಹೀಗಾಗಿ ಮಕ್ಕಳ ಹಾಗೂ ಗ್ರಾಮಸ್ಥರು ಮೆರವಣಿಗೆ ಮಾಡಿ ಅವರನ್ನು ಥೇಟ್ ರಾಜಕೀಯ ನಾಯಕನಂತೆ ಬೀಳ್ಕೊಟ್ಟಿದ್ದಾರೆ.
ಉಮೇಶ್ ಕನ್ನಳ್ಳಿ ಅವರು ಮಕ್ಕಳ ಹಾಗೂ ಗ್ರಾಮಸ್ಥರ ಹೃದಯ ಗೆದ್ದ ಶಿಕ್ಷಕ. ಇವರು ಎಲ್ಲರಿಗೂ ಅಚ್ಚುಮೆಚ್ಚಿನ ಶಕಿಕ್ಷಕರಾಗಿದ್ದಾರೆ. ಇವರನ್ನು ತಾಲೂಕಿನ ಕಾಚೂರ ಗ್ರಾಮದ ಶ್ರೀ ಬಲಭೀಮೇಶ್ವರ ದೇವಾಲಯದಿಂದ ಯಡಗಾ ಗ್ರಾಮದವರೆಗೆ ಬೈಕ್ ರ್ಯಾಲಿ ಮೂಲಕ ಶಿಕ್ಷಕನನ್ನು ಮೆರವಣಿಗೆ ಮಾಡಲಾಗಿದೆ. ಅಲ್ಲದೆ ಯಡಗಾ ಗ್ರಾಮದ ಶ್ರೀ ಹನುಮಾನ್ ದೇವಾಲಯದಿಂದ ಡಿ.ಜೆ, ಡೊಳ್ಳುಗಳ ಮೂಲಕ ಮೆರವಣಿಗೆ ಮಾಡಿ, ತಮ್ಮ ನೆಚ್ಚಿನ ಶಿಕ್ಷಕನ ಜೊತೆ ಕುಣಿದು, ಖುಷಿಪಟ್ಟಿದ್ದಾರೆ.
ಮುಗನೂರ, ಕಾಚೂರ, ಯಡಗಾ, ಬಿಬ್ಬಳ್ಳಿಯ ನೂರಾರು ಜನ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಈ ವೇಳೆ ಪಾಲ್ಗೊಂಡು ಬೀಳ್ಕೊಟ್ಟಿದ್ದಾರೆ. ಈ ವೇಳೆ ಅನೇಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾವುಕರಾದ ಪ್ರಸಂಗವೂ ನಡೆದಿದೆ. ಶಿಕ್ಷಕ ಉಮೇಶ ಸಹ ಕಣ್ಣೀರಿಟ್ಟು ವಿದ್ಯಾರ್ಥಿಗಳ ಪ್ರೀತಿಗೆ ಋಣಿ ಎಂದಿದ್ದಾರೆ.








